ಎಸ್ಪಿ ಶಾಸಕ ಪುಷ್ಪರಾಜ್ ಜೈನ್ ಮೇಲೆ ತೆರಿಗೆ ವಂಚನೆ ಆರೋಪ
ಲಕ್ನೋ ಡಿಸೆಂಬರ್ 31: ಉತ್ತರಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಬೆನ್ನಲ್ಲೆ ಸುಗಂಧ ದ್ರವ್ಯ ತಯಾರಿಕಾ ಕಾರ್ಖಾನೆಗಳ ಮಾಲೀಕರ ಮನೆ ಮೇಲೆ ಐಟಿ ದಾಳಿ ಮುಂದುವರೆದಿದೆ. ಕನೌಜ್ನ ಪಿಯೂಷ್ ಜೈನ್ ಮನೆಯ ಮೇಲೆ ದಾಳಿ ಮಾಡಿ ಕೊಟ್ಯಂತರ ರೂಪಾಯಿ ವಶಪಡಿಸಿಕೊಂಡ ನಂತರ ತೆರಿಗೆ ಇಲಾಖೆ ಮತ್ತೊಂದು ಸುಗಂಧ ದ್ರವ್ಯ ಉದ್ಯಮಿ ಮನೆ ಮೇಲೆ ದಾಳಿ ಮಾಡಿದೆ. ಉತ್ತರ ಪ್ರದೇಶದ ಕನೌಜ್ನಲ್ಲಿರುವ ಸುಗಂಧ ದ್ರವ್ಯ ಉದ್ಯಮಿ ಮತ್ತು ಸಮಾಜವಾದಿ ಪಕ್ಷದ ಶಾಸಕ ಪುಷ್ಪರಾಜ್ ಜೈನ್ ಅವರ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆ ಶುಕ್ರವಾರ ದಾಳಿ ನಡೆಸಿದೆ. ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್ಸಿಆರ್), ಮುಂಬೈ ಮತ್ತು ಇತರ ಸ್ಥಳಗಳಲ್ಲಿ ಸುಮಾರು 50 ಸ್ಥಳಗಳಲ್ಲಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಸುಗಂಧ ದ್ರವ್ಯದ ವ್ಯವಹಾರದಲ್ಲಿ ತೊಡಗಿರುವವರ ಮೇಲೆ ಹೆಚ್ಚಾಗಿ ಹುಡುಕಾಟಗಳು ನಡೆಯುತ್ತಿವೆ.

ಸಮಾಜವಾದಿ ಪಕ್ಷದ ಶಾಸಕ ಪುಷ್ಪರಾಜ್ ಜೈನ್
ಪುಷ್ಪರಾಜ್ ಜೈನ್ ಪಂಪಿ ಯುಪಿಯಲ್ಲಿ ಸಮಾಜವಾದಿ ಪಕ್ಷದಿಂದ ವಿಧಾನ ಪರಿಷತ್ತಿನ ಸದಸ್ಯರಾಗಿದ್ದಾರೆ. 2022 ರ ಯುಪಿ ವಿಧಾನಸಭಾ ಚುನಾವಣೆಗೆ ಮುನ್ನ ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಸಮ್ಮುಖದಲ್ಲಿ ಅವರು ಕಳೆದ ತಿಂಗಳು 'ಸಮಾಜವಾದಿ ಇತ್ರಾ' ಅಥವಾ ಸುಗಂಧ ದ್ರವ್ಯ ಉದ್ಯಮವನ್ನು ಪ್ರಾರಂಭಿಸಿದ್ದರು. ಕನ್ನೌಜ್ ಮೂಲದ ಮೊಹಮ್ಮದ್ ಯಾಕೂಬ್ ಪರ್ಫ್ಯೂಮ್ನಲ್ಲಿಯೂ ಮುಂಜಾನೆ ದಾಳಿ ನಡೆಸಲಾಯಿತು.

ಬಿಜೆಪಿಯಿಂದ ಅಧಿಕಾರ ದುರ್ಬಳಕೆ ಆರೋಪ
ತೆರಿಗೆ ದಾಳಿಗಳ ಸುದ್ದಿ ಹೊರಹೊಮ್ಮುತ್ತಿದ್ದಂತೆ, ಸಮಾಜವಾದಿ ಪಕ್ಷವು ಬಿಜೆಪಿಯ ವಿರುದ್ಧ ವಾಗ್ದಾಳಿಗೆ ಮುಂದಾಗಿದೆ. ಜೊತೆಗೆ ವಿಧಾನಸಭೆ ಚುನಾವಣೆಯ ಪೂರ್ವದಲ್ಲಿ ಆಡಳಿತ ಪಕ್ಷವು ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಿದೆ.
"ಕಳೆದ ಬಾರಿಯ ಭಾರೀ ವೈಫಲ್ಯದ ನಂತರ, ಈ ಬಾರಿ ಬಿಜೆಪಿಯ ಅಂತಿಮವಾಗಿ ಮಿತ್ರ ಪಕ್ಷ ಐಟಿಯನ್ನು ಬಳಕೆ ಮಾಡಿಕೊಂಡು ಎಸ್ಪಿ ಎಂಎಲ್ಸಿ ಪುಷ್ಪರಾಜ್ ಜೈನ್ ಮತ್ತು ಕನೌಜ್ನ ಇತರ ಸುಗಂಧ ದ್ರವ್ಯ ವ್ಯಾಪಾರಿಗಳ ಮೇಲೆ ದಾಳಿ ಮಾಡಿದೆ. ಯುಪಿ ವಿಧಾನಸಭೆ ಚುನಾವಣೆಗೆ ಹೆದರಿದ ಬಿಜೆಪಿಯಿಂದ ಕೇಂದ್ರೀಯ ಸಂಸ್ಥೆಗಳ ಬಹಿರಂಗ ದುರ್ಬಳಕೆಯಾಗುತ್ತಿದೆ. ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಅವರು ತಮ್ಮ ಮತದ ಮೂಲಕ ಉತ್ತರಿಸುತ್ತಾರೆ" ಎಂದು ಎಸ್ಪಿಯ ಅಧಿಕೃತ ಟ್ವಿಟರ್ ಹ್ಯಾಂಡಲ್ ಪೋಸ್ಟ್ ಮಾಡಿದೆ.

ಪುಷ್ಪರಾಜ್ ಜೈನ್ ಮತ್ತು ಪಿಯೂಷ್ ಜೈನ್ ನೆರೆಹೊರೆಯವರು
ಈ ತಿಂಗಳ ಆರಂಭದಲ್ಲಿ, ಜಿಎಸ್ಟಿ ಗುಪ್ತಚರ ನಿರ್ದೇಶನಾಲಯ (ಡಿಜಿಜಿಐ) ಕಾನ್ಪುರ ಮೂಲದ ಸುಗಂಧ ದ್ರವ್ಯ ವ್ಯಾಪಾರಿ ಪಿಯೂಷ್ ಜೈನ್ ಮನೆ ಮೇಲೆ ದಾಳಿ ನಡೆಸಿ 197 ಕೋಟಿಗೂ ಹೆಚ್ಚು ನಗದು, 23 ಕೆಜಿ ಚಿನ್ನ ಮತ್ತು 6 ಕೋಟಿ ರೂಪಾಯಿ ಮೌಲ್ಯದ ಸರಕುಗಳನ್ನು ಕಾನ್ಪುರ ಮತ್ತು ಕನೌಜ್ನಲ್ಲಿ ವಶಪಡಿಸಿಕೊಂಡಿತ್ತು.
ಗೃಹ ಸಚಿವ ಅಮಿತ್ ಶಾ ಮತ್ತು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಬಿಜೆಪಿ ನಾಯಕರು ತಮ್ಮ ರ್ಯಾಲಿಗಳಲ್ಲಿ ಪಿಯೂಷ್ ಜೈನ್ ಸಮಾಜವಾದಿ ಪಕ್ಷದೊಂದಿಗೆ ನಂಟು ಹೊಂದಿದ್ದಾರೆಂದು ಆರೋಪಿಸಿದ್ದಾರೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಖಿಲೇಶ್ ಅಧಿಕಾರದಲ್ಲಿದ್ದಾಗ ಉತ್ತರ ಪ್ರದೇಶದಾದ್ಯಂತ "ಭ್ರಷ್ಟಾಚಾರದ ಸುಗಂಧವನ್ನು" ಎರಚಿತ್ತು ಎಂದು ಹೇಳಿದ್ದಾರೆ. ಕುತೂಹಲ ಅಂದರೆ ಪುಷ್ಪರಾಜ್ ಜೈನ್ ಮತ್ತು ಪಿಯೂಷ್ ಜೈನ್ ಒಂದೇ ವ್ಯವಹಾರದಲ್ಲಿದ್ದಾರೆ ಮತ್ತು ಒಂದೇ ನೆರೆಹೊರೆಯಲ್ಲಿ ವಾಸಿಸುತ್ತಿದ್ದಾರೆ.

ಹಲವಾರು ಕಂಪನಿಗಳ ಪಾಲುದಾರರು
ಪುಷ್ಪರಾಜ್ ಜೈನ್ ಸುಮಾರು 18 ಸಂಸ್ಥೆಗಳು ಮತ್ತು ಕಂಪನಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ. ಅವರು ಪ್ರಗತಿ ಅರೋಮಾ ಆಯಿಲ್ ಡಿಸ್ಟಿಲ್ಲರ್ಸ್ ಪ್ರೈವೇಟ್ ಲಿಮಿಟೆಡ್ನ ಮಂಡಳಿಯಲ್ಲಿ ನಿರ್ದೇಶಕರಾಗಿದ್ದಾರೆ. ಈ ಸಂಸ್ಥೆಯನ್ನು 1989 ರಲ್ಲಿ ಅತುಲ್ಕುಮಾರ್ ಸವೈಲಾಲ್ ಜೈನ್, ಪ್ರಭಾತ್ಚಂದ್ರ ಸವೈಲಾಲ್ ಜೈನ್ ಮತ್ತು ಪಂಕಜ್ ಸವೈಲಾಲ್ ಜೈನ್ ಮತ್ತು ಪುಷ್ಪ್ರಜ್ ಸವೈಲಾಲ್ ಜೈನ್ ಅವರು ನಿರ್ದೇಶಕರಾಗಿ ಸಂಘಟಿಸಲಾಯಿತು. ಕಂಪನಿಯ ನೋಂದಾಯಿತ ಕಚೇರಿ ಮುಂಬೈನ ವೈಲ್ ಪಾರ್ಲೆ ಪೂರ್ವದಲ್ಲಿದೆ. ಇದಲ್ಲದೆ ಅವರು 12 ಇತರ ಕಂಪನಿಗಳ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಐದು ಹೆಚ್ಚುವರಿ ಸಂಸ್ಥೆಗಳಲ್ಲಿ ಪಾಲುದಾರರಾಗಿದ್ದಾರೆ.












Click it and Unblock the Notifications