ರಾಜ್ಯಗಳ ಚುನಾವಣೆ ಬಳಿಕ ಮತ್ತೆ ಇಂಧನ ದರ ಏರಲಿದೆ: ಮಾಯಾವತಿ
ಲಕ್ನೋ, ನವೆಂಬರ್ 09: ಏಳು ರಾಜ್ಯಗಳ ವಿಧಾನಸಭೆ ಚುನಾವಣೆ ಮುಗಿದ ಬಳಿಕ ಮತ್ತೆ ಇಂಧನ ದರ ಏರಿಕೆಯಾಗಲಿದೆ ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.
ಹಲವು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡಿವೆ. ಚುನಾವಣೆಗಳು ಮುಗಿಯುತ್ತಿದ್ದಂತೆ ಈ ಪಕ್ಷವು ಬೆಲೆ ಇಳಿಕೆ ನಿರ್ಧಾರವನ್ನು ಹಿಂಪಡೆಯಲಿದೆ. ಜನರು ಇದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದ್ದಾರೆ.
ಮಾಯಾವತಿಗೆ ಪರ್ಯಾಯವಾಗಿ ದಲಿತ ನಾಯಕಿಯನ್ನು ಹುಡುಕಿದ ಬಿಜೆಪಿ
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯು ಕಳೆದ ಕೆಲವು ದಿನಗಳಿಂದ ದಾಖಲೆ ಮಟ್ಟಕ್ಕೆ ಏರಿಕೆಯಾದ ರೀತಿ ಹಾಗೂ ದೇಶದಲ್ಲಿ ಹಣದುಬ್ಬರ ಹೆಚ್ಚಾಗುತ್ತಿರುವ ಬಗೆಯನ್ನು ಜನರು ಅಷ್ಟು ಸುಲಭವಾಗಿ ಮರೆಯುವುದಿಲ್ಲ ಎಂದರು.
2022ರಲ್ಲಿ ಮಣಿಪುರ, ಗೋವಾ, ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲಪ್ರದೇಶ ಹಾಗೂ ಗುಜರಾತ್ ವಿಧಾನಸಭೆ ಚುನಾವಣೆ ನಡೆಯಲಿದೆ.
403 ಸದಸ್ಯ ಬಲದ ಉತ್ತರ ಪ್ರದೇಶ ವಿಧಾನಸಭೆಗೆ 2017ರಲ್ಲಿ ನಡೆದ ಚುನಾವಣೆಯಲ್ಲಿ ಶೇ.39.67ರಷ್ಟು ಮತಗಳನ್ನು ಪಡೆದುಕೊಂಡಿದ್ದ ಬಿಜೆಪಿ, ಬರೋಬ್ಬರಿ 312 ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿತ್ತು.
ಸದ್ಯ ಯಾವೆಲ್ಲಾ ಉತ್ಪನ್ನಗಳ ಬೆಲೆ ಇಳಿಕೆ ಮಾಡಲಾಗಿದೆಯೋ ಅವು, ವಿವಿಧ ರಾಜ್ಯಗಳಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗಳು ಮುಗಿಯುತ್ತಿದ್ದಂತೆಯೇ ಮತ್ತೆ ಏರಿಕೆಯಾಗಲಿವೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಸಿದ ಬೆನ್ನಲ್ಲೇ, 8 ಬಿಜೆಪಿ ಆಡಳಿತಾರೂಢ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮೌಲ್ಯ ವರ್ಧಿತ ತೆರಿಗೆಗಳನ್ನು ಇಳಿಕೆ ಮಾಡಲಾಗಿದೆ.
ಈ ಪ್ರಕಾರ ತ್ರಿಪುರ, ಮಣಿಪುರ, ಅಸ್ಸಾಂ, ಗೋವಾ, ಉತ್ತರಾಖಂಡ, ಕರ್ನಾಟಕ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು 7 ರು.ನಷ್ಟುಕಡಿತ ಮಾಡಿವೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆ ಇಳಿಕ ಕುರಿತ ಅಧಿಸೂಚನೆಯನ್ನು ಶೀಘ್ರವೇ ಹೊರಡಿಸಲಾಗುತ್ತದೆ ಎಂದಿದ್ದಾರೆ.
ಮತ್ತೊಂದೆಡೆ ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ಸಂಸದ ಸುಶಿಲ್ ಕುಮಾರ್ ಮೋದಿ, ಬಿಹಾರದಲ್ಲೂ ಪೆಟ್ರೋಲ್ ದರ 1.50 ರು. ಮತ್ತು ಡೀಸೆಲ್ ದರವನ್ನು 1.90 ರು.ನಷ್ಟು ಇಳಿಸಲಾಗಿದೆ ಎಂದು ತಿಳಿಸಿದ್ದರು.
ಈ ಬಗ್ಗೆ ಟ್ವೀಟ್ ಮಾಡಿದ ಕಾಂಗ್ರೆಸ್ ಪ್ರಧಾನ ವಕ್ತಾರ ರಣದೀಪ್ ಸುರ್ಜೇವಾಲ, 'ಮೋದಿ ಸರ್ಕಾರದ ತೆರಿಗೆ ಪರಾವಲಂಬನೆ ಕುರಿತ ಸತ್ಯದ ಕನ್ನಡಿಯನ್ನು ಹಿಡಿದ ದೇಶದ ಜನತೆಗೆ ಧನ್ಯವಾದಗಳು.
ಆದರೆ 2014ರಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರೆಲ್ ಕಚ್ಚಾತೈಲ ಬೆಲೆ 105.71 ಡಾಲರ್ ಇದ್ದಾಗ ದೇಶದಲ್ಲಿ ಪೆಟ್ರೋಲ್ ಬೆಲೆ 71.41 ರು. ಹಾಗೂ ಡೀಸೆಲ್ ದರ 55.49 ರು ಇತ್ತು. ಇದೀಗ ಕಚ್ಚಾತೈಲ ಬೆಲೆ 82 ಡಾಲರ್ಗೆ ಲಭ್ಯವಾಗುತ್ತಿದೆ' ಎಂದು ಹೇಳಿದ್ದರು.