ಲಖೀಂಪುರ ಘಟನೆ: ಪತ್ರಕರ್ತನ ಜೊತೆ ಅಸಭ್ಯವಾಗಿ ಮಾತನಾಡಿದ ಅಜಯ್ ಮಿಶ್ರಾ
ಲಖಿಂಪುರ ಖೇರಿ, ಡಿಸೆಂಬರ್ 15: ಲಖಿಂಪುರ ಖೇರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆಯ ಬಗ್ಗೆ ಕೇಳಿದಾಗ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಕೋಪಗೊಂಡಿದ್ದಾರೆ. ಸುದ್ದಿ ವಾಹಿನಿಯೊಂದರ ವರದಿಗಾರರೊಂದಿಗೆ ಅಸಭ್ಯವಾಗಿ ವರ್ತಿಸಿ ಮೊಬೈಲ್ ಸ್ವಿಚ್ ಆಫ್ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಮಿಶ್ರಾ ಮಾಧ್ಯಮದವರ ವಿರುದ್ಧ ಅಸಭ್ಯವಾಗಿ ಮಾತನಾಡಿದ್ದಾರೆ. ಅಜಯ್ ಮಿಶ್ರಾ ಅವರ ಈ ನಡುವಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಲಖಿಂಪುರ ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವರು ಸೇರಿದಂತೆ ಅವರ ಬಂಧಿತ ಪುತ್ರನ ಸಮಸ್ಯೆಗಳು ಹೆಚ್ಚಾಗಬಹುದು ಎಂಬ ಕಾರಣಕ್ಕೆ ಪಕ್ಷವು ಅಜಯ್ ಮಿಶ್ರಾ ಅವರನ್ನು ದೆಹಲಿಗೆ ಕರೆಸಿಕೊಂಡಿದೆ. ಒಂದೆಡೆ ಚಾರ್ಜ್ಶೀಟ್ಗೂ ಮೊದಲು ಎಸ್ಐಟಿ ಅಪರಾಧಿ ನರಹತ್ಯೆಯ ಸೆಕ್ಷನ್ ಅನ್ನು ತೆಗೆದುಹಾಕಲು ಮತ್ತು ಕೊಲೆಯ ಆಕ್ರಮಣದ ಸೆಕ್ಷನ್ ಅನ್ನು ವಿಧಿಸಲು ನ್ಯಾಯಾಲಯದ ಅನುಮತಿ ಕೇಳಿದೆ. ಮತ್ತೊಂದೆಡೆ, ಪ್ರತಿಪಕ್ಷಗಳು ರಾಜ್ಯ ಗೃಹ ಸಚಿವರನ್ನು ವಜಾಗೊಳಿಸುವಂತೆ ಒತ್ತಾಯಿಸುತ್ತಿವೆ. ಇವೆರಡರ ಮಧ್ಯೆ ಅಜಯ್ ಮಿಶ್ರಾ ಮತ್ತೊಂದು ಸಮಸ್ಯೆಯನ್ನ ತಲೆಯ ಮೇಲೆ ಎಳೆದುಕೊಂಡಂತಾಗಿದೆ.
ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಟೆನಿ ಬುಧವಾರ ತಮ್ಮ ಸಂಸದೀಯ ಕ್ಷೇತ್ರಕ್ಕೆ ಆಮ್ಲಜನಕ ಘಟಕವನ್ನು ಉದ್ಘಾಟಿಸಲು ಆಗಮಿಸಿದ್ದರು. ಕಾರ್ಯಕ್ರಮದ ನಂತರ ಪತ್ರಕರ್ತರು ಲಖೀಂಪುರ ಖೇರಿ ಪ್ರಕರಣದ ಎಸ್ಐಟಿ ತನಿಖೆಯ ಕುರಿತು ಪ್ರಶ್ನೆಗಳನ್ನು ಕೇಳಿದಾಗ, ಅಜಯ್ ಮಿಶ್ರಾ ಕೋಪಗೊಂಡರು. ಪತ್ರಕರ್ತರೊಂದಿಗೆ ಅನುಚಿತವಾಗಿ ವರ್ತಿಸಿದ್ದಲ್ಲದೆ ನಿಂದಿಸಿದ್ದಾರೆ. ಪ್ರಶ್ನೆ ಕೇಳಿದ ಪತ್ರಕರ್ತನನ್ನೂ ಸಚಿವರು ತಳ್ಳಿದ್ದಾರೆ. ಕೇಂದ್ರ ಗೃಹ ಖಾತೆ ರಾಜ್ಯ ಸಚಿವರ ಈ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪತ್ರಕರ್ತರಿಗೆ ಸಚಿವರು ನಿಂದಿಸಿರುವ ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ವಿಡಿಯೋದಲ್ಲಿ ಸುದ್ದಿ ವಾಹಿನಿಯ ವರದಿಗಾರರೊಬ್ಬರು ಎಸ್ಐಟಿ ತನಿಖೆಯ ಬಗ್ಗೆ ಕೇಳಿದಾಗ, 'ನಿಮ್ಮ ತಲೆ ಕೆಟ್ಟಿದಿಯೇ, ನಿಮ್ಮ ತಲೆಯಲ್ಲಿ ಏನಿದೆ..? ಕೆಲಸದಿಂದ ಬರುವರೊಂದಿಗೆ ಇದರ ಬಗ್ಗೆ ಮಾತನಾಡೋದಾ' ಎಂದು ಟೆನಿ ವರದಿಗಾರನಿಗೆ ಬೆದರಿಕೆ ಹಾಕುತ್ತಾರೆ. ಜೊತೆಗೆ ಫೋನ್ ಆಫ್ ಮಾಡಲು ಕೇಳುತ್ತಾರೆ. ಅಲ್ಲದೇ ಪತ್ರಕರ್ತರ ಕುತ್ತಿಗೆಗೆ ಕೈ ಹಾಕಲು ಸಹ ಪ್ರಯತ್ನಿಸುತ್ತಾರೆ. ವೀಡಿಯೊ ಕಾಣಿಸಿಕೊಂಡ ನಂತರ, ಪಕ್ಷವು ಅಜಯ್ ಮಿಶ್ರಾ ಟೆನಿಯನ್ನು ದೆಹಲಿಗೆ ಕರೆಸಿದೆ. ಶೀಘ್ರದಲ್ಲೇ ಅಜಯ್ ಮಿಶ್ರಾ ವಿರುದ್ಧ ಪಕ್ಷ ಕ್ರಮ ಕೈಗೊಳ್ಳಬಹುದು ಎಂದು ನಂಬಲಾಗಿದೆ.
ಲಖಿಂಪುರ ಖೇರಿ ಪ್ರಕರಣದ ಪ್ರಮುಖ ಆರೋಪಿ ಆಶಿಶ್ ಮಿಶ್ರಾ 'ಮೋನು' ಸೇರಿದಂತೆ ಎಲ್ಲಾ 13 ಆರೋಪಿಗಳ ಮೇಲಿನ ಅಪಘಾತದ ಸೆಕ್ಷನ್ಗಳನ್ನು ತೆಗೆದುಹಾಕುವ ಮೂಲಕ ಕೊಲೆ ಯತ್ನ ಮತ್ತು ವಿರೂಪಗೊಳಿಸುವ ಸೆಕ್ಷನ್ಗಳನ್ನು ಹೆಚ್ಚಿಸಲಾಗಿದೆ. ಮಂಗಳವಾರ ಸಿಜೆಎಂ ನ್ಯಾಯಾಲಯಕ್ಕೆ ಹಾಜರಾದ ಎಲ್ಲಾ 13 ಆರೋಪಿಗಳ ಮೇಲೆ, ನ್ಯಾಯಾಲಯವು ಕೊಲೆ ಯತ್ನದ ಸೆಕ್ಷನ್ 307, ವಿರೂಪಗೊಳಿಸುವಿಕೆ 326, ಸೆಕ್ಷನ್ 3/25 (30) ಶಸ್ತ್ರಾಸ್ತ್ರಗಳ ದುರ್ಬಳಕೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 35 ಅನ್ನು ಹಾಕಲು ಸೂಚಿವ ಮೂಲಕ ಸೆಕ್ಷನ್ ಹೆಚ್ಚಿಸಿದೆ. ಎಲ್ಲಾ ಆರೋಪಿಗಳ ಮೇಲಿನ ಅಪಘಾತದ ಸೆಕ್ಷನ್ಗಳನ್ನು ತೆಗೆದುಹಾಕಲು ಮತ್ತು ಕೊಲೆ ಯತ್ನ ಮತ್ತು ಪಿತೂರಿಯ ಸೆಕ್ಷನ್ಗಳನ್ನು ಹೆಚ್ಚಿಸಲು ತನಿಖಾ ತಂಡ ಸೋಮವಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಅದರಂತೆ ಮಂಗಳವಾರ ಎಲ್ಲಾ 13 ಆರೋಪಿಗಳಿಗೆ ನ್ಯಾಯಾಲಯ ಸಮನ್ಸ್ ನೀಡಿತ್ತು.
ಈ ವಿಚಾರವಾಗಿ ಇಂದು ಸಂಸತ್ತಿನಲ್ಲಿ ಭಾರೀ ಕೋಲಾಹಲ ಏರ್ಪಟ್ಟಿತ್ತು. ಎಸ್ಐಟಿ ವರದಿ ಬಳಿಕ ಸದನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲು ಬಯಸುತ್ತೇವೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ. 'ಕನಿಷ್ಠ ಪಕ್ಷ ಈ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯಾಗಲಿ ಎಂದು ಹೇಳಿದ್ದೇವೆ, ಆದರೆ ಚರ್ಚೆಗೆ ಅನುಮತಿ ನೀಡುತ್ತಿಲ್ಲ. ಸಚಿವ ಅಜಯ್ ಮಿಶ್ರಾ ಟೆನಿ ರಾಜೀನಾಮೆ ನೀಡಬೇಕು' ಎಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ. ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಮಾತನಾಡಿ, ಲಖೀಂಪುರ ಖೇರಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ರಾಹುಲ್ ಗಾಂಧಿ ಸೇರಿದಂತೆ ಎಲ್ಲಾ ಕಾಂಗ್ರೆಸ್ ನಾಯಕರು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರನ್ನು ಸರ್ಕಾರ ವಜಾಗೊಳಿಸಬೇಕು ಎಂದು ಒತ್ತಾಯಿಸುತ್ತೇವೆ ಎಂದಿದ್ದಾರೆ.
#WATCH | MoS Home Ajay Kumar Mishra 'Teni' hurls abuses at a journalist who asked a question related to charges against his son Ashish in the Lakhimpur Kheri violence case. pic.twitter.com/qaBPwZRqSK
— ANI UP (@ANINewsUP) December 15, 2021
Recommended Video