ಕಾಶಿ ವಿಶ್ವನಾಥ ಮಂದಿರಕ್ಕೆ ಜಮೀನು ನೀಡಿದ ಜ್ಞಾನವ್ಯಾಪಿ ಮಸೀದಿ
ಲಕ್ನೋ, ಜುಲೈ 24: ಸೌಹಾರ್ದತೆಯ ಬೆಳವಣಿಗೆಯೊಂದರಲ್ಲಿ ವಾರಣಾಸಿಯ ಜ್ಞಾನವ್ಯಾಪಿ ಮಸೀದಿ ಮಂಡಳಿ, ಕಾಶಿ ವಿಶ್ವನಾಥ ದೇವಾಲಯಕ್ಕೆ ಸುಮಾರು ಒಂದು ಸಾವಿರ ಚದರ ಅಡಿ ಭೂಮಿಯನ್ನು ಬಿಟ್ಟುಕೊಡಲು ನಿರ್ಧರಿಸಿದೆ.
ಜ್ಞಾನವ್ಯಾಪಿ ಮಸೀದಿಯ ಆವರಣದಲ್ಲಿ ಉತ್ಖನನ ನಡೆಸಲು ಪ್ರಾಚ್ಯವಸ್ತು ಇಲಾಖೆಗೆ ವಾರಣಾಸಿ ಸಿವಿಲ್ ಕೋರ್ಟ್ ಆದೇಶ ನೀಡಿತ್ತು. ಈ ಆದೇಶ ಹೊರಬಿದ್ದ ಮೂರು ತಿಂಗಳ ನಂತರ, ಮಸೀದಿಯ ಮಂಡಳಿ, ದೇವಾಲಯಕ್ಕೆ ಜಮೀನು ನೀಡುವ ನಿರ್ಧಾರಕ್ಕೆ ಬಂದಿದೆ.
ಜಮೀನು ನೀಡುವ ಸಂಬಂಧ ದೇವಾಲಯ ಮತ್ತು ಮಸೀದಿ ಆಡಳಿತ ಮಂಡಳಿಗಳ ನಡುವೆ ಒಪ್ಪಂದ ಏರ್ಪಟ್ಟಿದೆ. ಅದರಂತೇ, ಸುಮಾರು ಒಂದು ಸಾವಿರ ಚದರ ಅಡಿ ಭೂಮಿಯನ್ನು ಬೇರೆಯೊಂದು ಕಡೆ ಮಸೀದಿಗೆ ನೀಡಬೇಕಾಗಿದೆ.

ಸುದೀರ್ಘ ಕಾನೂನು ಹೋರಾಟಕ್ಕೆ ಈ ಒಪ್ಪಂದದಿಂದ ತೆರೆಬೀಳಲಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಮಸೀದಿ ಜಾಗದಲ್ಲಿ ಮಂದಿರ ಇತ್ತೇ ಎನ್ನುವುದನ್ನು ತಿಳಿಯಲು ಉತ್ಖನನ ಅನಿವಾರ್ಯ ಎಂದು ಸಿವಿಲ್ ಕೋರ್ಟ್ ಅಭಿಪ್ರಾಯ ಪಟ್ಟಿತ್ತು.
ಮೊಘಲ್ ಚಕ್ರವರ್ತಿಯಾಗಿದ್ದ ಔರಂಗಜೇಜ್, ವಿಶ್ವನಾಥ ಮಂದಿರಕ್ಕೆ ಸೇರಿದ ಜಾಗವನ್ನು ಕಬಳಿಸಿ, ಅತಿಕ್ರಮಣವಾಗಿ ಜ್ಞಾನವ್ಯಾಪಿ ಮಸೀದಿ ನಿರ್ಮಿಸಿದ್ದ. ಹೀಗಾಗಿ, ಆ ಜಾಗವನ್ನು ಮಂದಿರಕ್ಕೆ ಬಿಟ್ಟು ಕೊಡಬೇಕೆಂದು ಹಿಂದೂ ಸಂಘಟನೆಗಳು ಕೋರ್ಟ್ ಮೆಟ್ಟಲೇರಿದ್ದವು.
ವಾರಣಾಸಿ ಸಿವಿಲ್ ಕೋರ್ಟಿನ ಉತ್ಖನನ ಆದೇಶದ ವಿರುದ್ದ ಸುನ್ನಿ ವಕ್ಫ್ ಬೋರ್ಡ್ ಹೈಕೋರ್ಟ್ ಮೆಟ್ಟಲೇರಿತ್ತು. "ವಾರಣಾಸಿಯಲ್ಲಿನ ದೇವಾಲಯ ಕಾರಿಡಾರ್ ಯೋಜನೆಗಾಗಿ ದೇವಾಲಯದ ಟ್ರಸ್ಟ್ ಹಲವಾರು ವರ್ಷಗಳ ಹಿಂದೆ ಇದನ್ನು ಕೋರಿತ್ತು" ಎಂದು ಮಸೀದಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.












Click it and Unblock the Notifications