ನನ್ನ ಮಗ ಪೊಲೀಸರಿಗೆ ಶರಣಾಗದಿದ್ದರೆ ಕೊಂದು ಬಿಡಿ: ವಿಕಾಸ್ ದುಬೆ ತಾಯಿ
ಲಕ್ನೋ, ಜುಲೈ 4: 'ನನ್ನ ಮಗ ಪೊಲೀಸರಿಗೆ ಶರಣಾಗಲಿ, ಇಲ್ಲವಾದಲ್ಲಿ ಕಂಡಲ್ಲಿ ಕೊಂದು ಬಿಡಿ' ಇದು 8 ಮಂದಿ ಪೊಲೀಸರನ್ನು ಹತ್ಯೆಗೈದ ರೌಡಿ ವಿಕಾಸ್ ದುಬೆ ತಾಯಿಯ ಮಾತು.
ಕಾನ್ಪುರದಲ್ಲಿ ಜುಲೈ 4 ರಂದು ರೌಡಿ ಶೀಟರ್ಗಳನ್ನ ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ರೌಡಿ ಶೀಟರ್ ವಿಕಾಸ್ ದುಬೆ ಹಾಗೂ ಆತನ ಸಹಚರರು ಸೇರಿ ಗುಂಡಿನ ದಾಳಿ ನಡೆಸಿದ್ದರು. ದಾಳಿಯಲ್ಲಿ 8 ಮಂದಿ ಪೊಲೀಸರು ಮೃತಪಟ್ಟಿದ್ದರು.
ಈ ಕುರಿತು ದುಬೆ ಅವರ ತಾಯಿಯನ್ನು ಪ್ರಶ್ನಿಸಿದಾಗ ಅಂತಹ ಮಗ ನನಗೆ ಬೇಡ ಆತ ನಿಮ್ಮ ಕೈಗೆ ಸಿಕ್ಕರೆ ಆತನನ್ನು ಕೊಂದು ಬಿಡಿ ಎಂದು ಪೊಲೀಸರನ್ನು ಕೇಳಿಕೊಂಡಿದ್ದಾರೆ.
ರೌಡಿ ವಿಕಾಸ್ ದುಬೆ ವಿರುದ್ಧ ಬೆದರಿಕೆ, ಅಪಹರಣ, ಕೊಲೆ ಸೇರಿದಂತೆ 60ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ.
2000ದಲ್ಲಿ ನಡೆದ ಥಾರಾಚಂದ್ ಕಾಲೇಜು ಪ್ರಿನ್ಸಿಪಾಲ್ ಮತ್ತು ಸಹಾಯಕ ಮ್ಯಾನೇಜರ್ ಹತ್ಯೆ ಪ್ರಕರಣದಲ್ಲಿಯೂ ಈತನ ಹೆಸರು ಕೇಳಿ ಬಂದಿತ್ತು.
2000ದಲ್ಲಿ ನಡೆದ ರಾಮ್ ಬಾಬು ಯಾದವ್ ಹತ್ಯೆ ಪ್ರಕರಣ, 2004ರಲ್ಲಿ ನಡೆದ ದಿನೇಶ್ ದುಬೆ ಹತ್ಯೆ ಪ್ರಕರಣದಲ್ಲಿಯೂ ವಿಕಾಸ್ ದುಬೆ ಹೆಸರು ಕೇಳಿ ಬಂದಿದೆ. ಈ ಹತ್ಯೆಗಳು ನಡೆಯವಾಗ ಜೈಲಿನಲ್ಲಿದ್ದ ವಿಕಾಸ್ ದುಬೆ ಅಲ್ಲಿಂದಲೇ ಸಹಚರರ ಮೂಲಕ ಸಂಚು ರೂಪಿಸಿದ್ದ.

ಪೊಲೀಸರಿಗೆ ಶರಣಾಗತಿಯಾಗಬೇಕು
ನನ್ನ ಮಗ ಪೊಲೀಸರಿಗೆ ಶರಣಾಗಬೇಕು, ಒಂದೊಮ್ಮೆ ಶರಣಾಗದಿದ್ದರೆ ಕೊಂದು ಬಿಡಿ ಎಂದು ಕಣ್ಣೀರು ಕಣ್ತುಂಬಿಕೊಂಡೇ ಪ್ರತಿಕ್ರಿಯೆ ನೀಡಿದ್ದಾರೆ. ಒಟ್ಟಿನಲ್ಲಿ ಆತನಿಗೆ ಕಠಿಣ ಶಿಕ್ಷೆಯಾಗಲೇ ಬೇಕು. ಪೊಲೀಸರನ್ನು ಕೊಲೆ ಮಾಡಿ ದುಷ್ಟ ಕೆಲಸ ಮಾಡಿದ್ದಾನೆ. ಆತನೇ ಬಂದು ಪೊಲೀಸರಿಗೆ ಶರಣಾದರೆ ತೊಂದರೆಯಿಲ್ಲ ಒಂದೊಮ್ಮೆ ತಲೆ ಮರೆಸಿಕೊಂಡಿದ್ದರೆ ಕಂಡಲ್ಲೇ ಕೊಂದುಬಿಡಿ ಎಂದು ತಾಯಿ ಹೇಳಿದ್ದಾರೆ.

ಅಪರಾಧಗಳಲ್ಲಿ ತೊಡಗಿಸಿಕೊಂಡಿದ್ದು ಯಾವಾಗ?
ವಿಕಾಸ್ ದುಬೆ ರಾಜಕಾರಣಿಗಳ ಸಂಪರ್ಕಕ್ಕೆ ಬಂದ ಬಳಿಕ ಅಪರಾಧ ಕೃತ್ಯಗಳನ್ನು ಎಸಗಲು ಆರಂಭಿಸಿದ್ದ. ಆತ ಶಾಸಕನಾಗಬೇಕು ಎಂದು ಬಯಸಿದ್ದ, ಆತನ ಕುಟುಂಬದವರಿಗೆ ಮುಜುಗರ ಉಂಟು ಮಾಡಿದ್ದಾನೆ. ವಿಕಾಸ್ ದುಬೆ ಓರ್ವ ಡಿವೈಎಸ್ಪಿ ಸೇರಿ ಎಂಟು ಮಂದಿ ಪೊಲೀಸರನ್ನು ಹತ್ಯೆ ಮಾಡಿದ್ದ.

ನಾಲ್ಕು ತಿಂಗಳ ಹಿಂದೆ ಮಗನನ್ನು ನೋಡಿದ್ದೆ
ನಾಲ್ಕು ತಿಂಗಳ ಹಿಂದೆ ಆತನನ್ನು ನೋಡಿದ್ದೆ, ನಾನು ನನ್ನ ಕಿರಿಯ ಮಗನ ಜೊತೆಗೆ ವಾಸಿಸುತ್ತಿದ್ದೇನೆ. ಆತನಿಂದ ಸಾಕಷ್ಟು ತೊಂದರೆಯನ್ನು ಅನುಭವಿಸಿದ್ದೇನೆ ಎಂದರು. ವಿಕಾಸ್ ದುಬೆಯ ಸುಳಿವು ನೀಡಿದವರಿಗೆ 50 ಸಾವಿರ ರೂ ಬಹುಮಾನ ನೀಡುವುದಾಗಿ ಕಾನ್ಪುರ ಐಜಿ ಮೋಹಿತ್ ಅಗರ್ವಾಲ್ ಘೋಷಿಸಿದ್ದಾರೆ.

ವಿಕಾಸ್ ದುಬೆ ಯಾರು
ಸುಮಾರು 60 ಕ್ರಿಮಿನಲ್ ಪ್ರಕರಣಗಳಲ್ಲಿ ವಿಕಾಸ್ ದುಬೆ ಪೊಲೀಸರಿಗೆ ಬೇಕಾಗಿದ್ದ. ಜೈಲಿನಲ್ಲಿದ್ದಾಗಲೇ ಶಿವರಾಜ್ಪುರ ಪಂಚಾಯತ್ ಚುನಾವಣೆಗೆ ನಿಂತು, ಗೆದ್ದು ಬಂದಿದ್ದ ಈತ ಪ್ರಭಾವಶಾಲಿ ರೌಡಿ. ದರೋಡೆ, ಅಪಹರಣ, ಕೊಲೆ ಸೇರಿದಂತೆ ವಿವಿಧ ಪ್ರಕರಣಗಳು ಈತನ ವಿರುದ್ಧ ದಾಖಲಾಗಿವೆ.
2001ರಲ್ಲಿ ವಿಕಾಸ್ ದುಬೆ ಹೆಸರು ದೇಶದಲ್ಲಿ ಎಲ್ಲರಿಗೂ ಪರಿಚಿತವಾಯಿತು. ಉತ್ತರ ಪ್ರದೇಶದ ಬಿಜೆಪಿ ನಾಯಕ ಸಂತೋಷ್ ಶುಕ್ಲಾರನ್ನು ದುಬೆ ಹತ್ಯೆ ಮಾಡಿದ್ದ. ಹತ್ಯೆಯಾಗುವ ಸಮಯದಲ್ಲಿ ಸಂತೋಷ್ ಶುಕ್ಲಾ ಉತ್ತರ ಪ್ರದೇಶದ ಸರ್ಕಾರದಲ್ಲಿ ಸಚಿವರಾಗಿದ್ದರು. ಆದರೆ, ದುಬೆ ವಿರುದ್ಧ ಯಾವುದೇ ಸಾಕ್ಷ್ಯ ಸಿಗದ ಕಾರಣ ಸೆಷನ್ಸ್ ನ್ಯಾಯಾಲಯ ಆತನನ್ನು ಆರೋಪ ಮುಕ್ತ ಎಂದು ಆದೇಶ ನೀಡಿತ್ತು.











Click it and Unblock the Notifications