''Bengaluru Short Tunnel: 1139 ಕೋಟಿ ರೂ ಸುರಂಗ ಮಾರ್ಗ ಟ್ರಾಫಿಕ್ಗೆ ಪರಿಹಾರವಲ್ಲ, ಹೆಚ್ಚಲಿದೆ ಟ್ರಾಫಿಕ್ ಕಿರಿಕಿರಿ''
ಬೆಂಗಳೂರು: ರಾಜ್ಯ ಸರ್ಕಾರದ ಅವರ ಮಹತ್ವಾಕಾಂಕ್ಷೆಯ ಬೆಂಗಳೂರಿನ 3 ಪಥಗಳ ಅವಳಿ ಸುರಂಗ ಮಾರ್ಗದ ರಸ್ತೆ (Bengauru Tunnel Road) ಯೋಜನೆಗೆ ನೀವು ಶಂಕುಸ್ಥಾಪನೆ ಮಾಡಿಲ್ಲ. ಬೆಂಗಳೂರಿನ ವೈಜ್ಞಾನಿಕ ನಗರ ಯೋಜನೆಗೆ ಸಮಾಧಿ ಶಿಲೆ ಹಾಕಿದ್ದೀರಿ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕಿಡಿ ಕಾರಿದ್ದಾರೆ. ಯೋಜನೆಯಿಂದ ಗುತ್ತಿಗೆದಾರರಿಗೆ, ಸದಾಶಿವನಗರದ ಪ್ರಭಾವಿಗಳು, ವಿವಿಐಟಿಗಳಿಗೆ ಮಾತ್ರವೇ ಅನುಕೂಲ. ಇದರಿಂದ ಸಂಚಾರ ದಟ್ಟಣೆಯ ಕಿರಿ ಕಿರಿ ಹೆಚ್ಚಾಗಲಿದೆ ಎಂದು ಅವರು ದೂರಿದ್ದಾರೆ.
ಭಾನುವಾರ ಬೆಂಗಳೂರಿನ ಹೆಬ್ಬಾಳ ಫ್ಲೈಓವರ್ನಿಂದ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದ ಮೂಲಕ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಿಬ್ಬಂದಿ ವಸತಿಗೃಹದವರೆಗೆ ಟನಲ್ ರಸ್ತೆ ನಿರ್ಮಿಸಲಾಗುತ್ತದೆ. ಯೋಜನೆಗೆ ಸಿಎಂ ಡಿಕೆ ಶಿವಕುಮಾರ್ ಅವರು ಶಂಕುಸ್ಥಾಪನೆ ನೆರವೇರಿಸಿದರು. ಅದರ ಬೆನ್ನಲ್ಲೆ ಎಕ್ಸ್ ಪೊಸ್ಟ್ ಮೂಲಕ ತೇಜಸ್ವಿ ಸೂರ್ಯ ಅವರು ಪ್ರತಿಕ್ರಿಯಿಸಿ ಯೋಜನೆ ಕುರಿತು ಕಿಡಿ ಕಾರಿದ್ದಾರೆ.

ಟನಲ್ ಮಾರ್ಗ ಟ್ರಾಫಿಕ್ಗೆ ಪರಿಹಾರ ಅಲ್ಲ!
ಅಂದಾಜು 1,139 ಕೋಟಿ ರೂಪಾಯಿ ವೆಚ್ಚದ ಈ 2 ಕಿಲೋ ಮೀಟರ್ ಸುರಂಗ ಮಾರ್ಗವು ಸಂಚಾರ ದಟ್ಟಣೆಗೆ ಯಾವುದೇ ಪರಿಹಾರವಲ್ಲ. ಸರ್ಕಾರದ ಸಲಹೆಗಾರರು ಸಿದ್ಧಪಡಿಸಿರುವ ವಿಸ್ತೃತ ಯೋಜನಾ ವರದಿಯಲ್ಲೇ (ಡಿಪಿಆರ್) ಈ ಸುರಂಗ ಮಾರ್ಗವು ಉದ್ಘಾಟನೆಯ ಮೊದಲ ದಿನದಿಂದಲೇ ವಾಹನಗಳಿಂದ ತುಂಬಿ ತುಳುಕಲಿದೆ ಎಂದು ಹೇಳಿದ್ದಾರೆ. ಐದು ವರ್ಷಗಳ ನಂತರವಲ್ಲ. ಹತ್ತು ವರ್ಷಗಳ ನಂತರವಲ್ಲ ಎಂದು ಅವರು ಮುಖ್ಯಮಂತ್ರಿಗಳಿಗೆ ಜ್ಞಾಪಿಸಿದರು.
ಸದಾಶಿವನಗರದ ಪ್ರಭಾವಿಗಳಿಗೆ, ವಿಐಪಿಗಳಿಗೆ ಅನುಕೂಲ
ಆರಂಭದ ದಿನದಿಂದಲೇ ಟ್ರಾಫಿಕ್ ಜಾಮ್ ಆಗಲಿದೆ ಎಂದು ಯೋಜನೆಯ ವರದಿಯೇ ಹೇಳುತ್ತಿರುವಾಗ, ಈ ಯೋಜನೆ ಯಾರಿಗಾಗಿ?. ಖಂಡಿತವಾಗಿಯೂ ಬೆಂಗಳೂರಿನ ಜನರಿಗಾಗಿ ಅಲ್ಲ. ಬೆಂಗಳೂರು ಜನರಲ್ಲಿರುವ ಅಭಿಪ್ರಾಯ ಸ್ಪಷ್ಟವಾಗಿದೆ. ಈ ಯೋಜನೆ ಸಾಮಾನ್ಯ ನಾಗರಿಕರ ಅನುಕೂಲಕ್ಕಾಗಿ ಅಲ್ಲ. ಸದಾಶಿವನಗರದ ಕೆಲವು ಪ್ರಭಾವಿ ವಿಐಪಿಗಳು, ಮುಖ್ಯಮಂತ್ರಿಗಳು ಹಾಗೂ ವಿಮಾನ ನಿಲ್ದಾಣಕ್ಕೆ ಈ ಮಾರ್ಗ ಬಳಸುವ ನಗರದ ಶ್ರೀಮಂತ ವರ್ಗದ ಅನುಕೂಲಕ್ಕಾಗಿ ರೂಪಿಸಲಾಗಿದೆ ಎನ್ನುವ ಭಾವನೆ ಜನರಲ್ಲಿ ಮೂಡಿದೆ. ಆದರೆ ಇದರ ವೆಚ್ಚವನ್ನು ಭರಿಸುವುದು ಮಾತ್ರ ಬೆಂಗಳೂರಿನ ತೆರಿಗೆದಾರರು ಎಂದು ಅವರು ವಿಷಾದ ವ್ಯಕ್ತಪಡಿಸಿದರು
ಗುತ್ತಿಗೆದಾರರಿಗೆ ಲಾಭ, ಸರ್ಕಾರಕ್ಕೆ ಕಿಕ್ಬ್ಯಾಕ್
ನಿಸ್ಸಂಶಯವಾಗಿ ಬೆಂಗಳೂರು ಟನಲ್ ರಸ್ತೆ ಯೋಜನೆಯ ಪ್ರಮುಖ ಲಾಭ ಪಡೆಯುವವರು ಗುತ್ತಿಗೆದಾರರು. ಅವರು ಕಾಂಗ್ರೆಸ್ ಪಕ್ಷದ ನಿಧಿಗೆ ಭಾರೀ ಕಿಕ್ಬ್ಯಾಕ್ಗಳನ್ನು ತಲುಪಿಸುತ್ತಾರೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ಇತ್ತೀಚೆಗೆ ಕಸದ ಟೆಂಡರ್ನಲ್ಲಿ ಹತ್ತು ಸಾವಿರ ಕೋಟಿ ರೂ. ಕಿಕ್ ಬ್ಯಾಕ್ ಆರೋಪ ವ್ಯಕ್ತವಾಗಿತ್ತು. ಇದೀಗ ಟನಲ್ ರಸ್ತೆ ಯೋಜನೆ ಅಡಿಗಲ್ಲು ಹಾಕಿದ ದಿನವೇ ಭ್ರಷ್ಟಾಚಾರ ಆರೋಪ ಕೇಳಿ ಬಂದಿದೆ.

ಸರ್ಕಾರಕ್ಕೆ ನಿಜವಾಗಿಯೂ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶ ಇದ್ದಿದ್ದರೆ, ರೆಡ್ ಲೈನ್ ಮೆಟ್ರೋ ಕಾಮಗಾರಿಯನ್ನು ವೇಗಗೊಳಿಸಬೇಕಿತ್ತು. ಬೆಂಗಳೂರಿನ ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರ ಸಾರ್ವಜನಿಕ ಸಾರಿಗೆ ಮಾತ್ರ. ಫ್ಲೈಓವರ್ಗಳು ವಿಫಲವಾಗಿವೆ. ಸುರಂಗ ಮಾರ್ಗಗಳೂ ವಿಫಲವಾಗಲಿವೆ.
ಸಣ್ಣ ಫ್ಲೈಓವರ್ಗಳಿಂದ ಪ್ರಯೋಜನವಿಲ್ಲ: ಸಂಸದ ಟಾಂಗ್
ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರೇ ಸ್ವತಃ ಸಣ್ಣ ಫ್ಲೈಓವರ್ಗಳು ಟ್ರಾಫಿಕ್ ಸಮಸ್ಯೆಗೆ ಪರಿಹಾರವಲ್ಲ ಎಂದು ಹಲವು ಬಾರಿ ಹೇಳಿದ್ದಾರೆ. ಹಾಗಾದರೆ ಸಣ್ಣ ಸುರಂಗ ಮಾರ್ಗ ಹೇಗೆ ಪರಿಹಾರವಾಗುತ್ತದೆ? ಬೆಂಗಳೂರಿನ ಜನರಿಗೆ ಉತ್ತರ ನೀಡುವಂತೆ ಸರ್ಕಾರವನ್ನು ಅವರು ಪ್ರಶ್ನೆ ಮಾಡಿದ್ದಾರೆ. ಸುರಂಗ ಮಾರ್ಗದಂತಹ ಅವೈಜ್ಞಾನಿಕ ಯೋಜನೆಗಳನ್ನು ವಿರೋಧಿಸುವ ಧೈರ್ಯವೇ ಸಚಿವರಿಗೆ ಇಲ್ಲದಿದ್ದರೆ, ಬೆಂಗಳೂರಿನ ಅಭಿವೃದ್ಧಿ ದೃಷ್ಟಿಕೋನದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂಬುದೇ ಸತ್ಯ ಎಂದರು.
ಸುರಂಗ ನಿರ್ಮಾಣಕ್ಕೆ ಬಿಡಲ್ಲ: ತೇಜಸ್ವಿ ಸೂರ್ಯ
ನನ್ನ ನಿಲುವು ಸ್ಪಷ್ಟವಾಗಿದೆ. ಈ ಸಣ್ಣ ಸುರಂಗ ಮಾರ್ಗವನ್ನು ನೆಪವನ್ನಾಗಿ ಮಾಡಿಕೊಂಡು ಮುಂದೆ ದೊಡ್ಡ ಸುರಂಗ ಮಾರ್ಗವನ್ನು ನಿರ್ಮಿಸಲು ನಾವು ಅವಕಾಶ ನೀಡುವುದಿಲ್ಲ. ವಿಶೇಷವಾಗಿ ಬೆಂಗಳೂರು ದಕ್ಷಿಣದಲ್ಲಿ ಉದ್ದೇಶಿಸಿರುವ ದೀರ್ಘ ಸುರಂಗ ಮಾರ್ಗವನ್ನು ಯಾವುದೇ ಕಾರಣಕ್ಕೂ ನಿರ್ಮಿಸಲು ನಾವು ಬಿಡುವುದಿಲ್ಲ ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿಗೆ, ಇಲ್ಲಿನ ಟ್ರಾಫಿಕ್ ದಟ್ಟಣೆ ನಿವಾರಣೆಗೆ ಬೇಕಾಗಿರುವುದು ಇನ್ನಷ್ಟು ನಮ್ಮ ಮೆಟ್ರೋಗಳು, ಇನ್ನಷ್ಟು ಬಸ್ಗಳು, ಉತ್ತಮ ಉಪನಗರ ರೈಲು ವ್ಯವಸ್ಥೆ ಮತ್ತು ವೈಜ್ಞಾನಿಕ ನಗರ ಯೋಜನೆ. ವಿಫಲ ಚಿಂತನೆಗೆ ಸಾವಿರಾರು ಕೋಟಿ ರೂಪಾಯಿಗಳ ಸ್ಮಾರಕಗಳು ಅಲ್ಲ ಎಂದು ಅವರು ರಾಜ್ಯ ಸರ್ಕಾರ ಮೇಲೆ ವಾಗ್ದಾಳಿ ನಡೆಸಿದ್ದಾರೆ.














Click it and Unblock the Notifications