ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ವೇ ವಾಹನ ಸವಾರರಿಗೆ ಎನ್ಎಚ್ಎಐ ಗುಡ್ ನ್ಯೂಸ್, ಇವರಿಗಿಲ್ಲ ಟೋಲ್ ಶುಲ್ಕ
Bengaluru-Chennai Expressway: ಬೆಂಗಳೂರು-ಚೆನ್ನೈ ನಡುವಿನ ಪ್ರಯಾಣವನ್ನು ಸುಲಭಗೊಳಿಸುವ ಮಹತ್ವಾಕಾಂಕ್ಷೆಯ ಎಕ್ಸ್ಪ್ರೆಸ್ವೇ ಯೋಜನೆಯಲ್ಲಿ ಮತ್ತೊಂದು ಪ್ರಮುಖ ಮೈಲಿಗಲ್ಲು ದಾಖಲಾಗಿದೆ. ಆಂಧ್ರಪ್ರದೇಶದ ವ್ಯಾಪ್ತಿಗೆ ಒಳಪಡುವ ಬೇತಮಂಗಲದಿಂದ ಬೈರೆಡ್ಡಿಪಲ್ಲಿ ನಡುವಿನ 25 ಕಿಲೋ ಮೀಟರ್ ಉದ್ದದ ರಸ್ತೆಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಆಂಧ್ರಪ್ರದೇಶ ರಾಜ್ಯದಲ್ಲಿ ಸಾರ್ವಜನಿಕ ಬಳಕೆಗೆ ಮುಕ್ತವಾಗಿರುವ ಈ ಎಕ್ಸ್ಪ್ರೆಸ್ವೇನ ಮೊದಲ ಭಾಗ ಇದಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಆಂಧ್ರಪ್ರದೇಶದ ವ್ಯಾಪ್ತಿಯಲ್ಲಿ ಬರುವ ಈ ಎಕ್ಸ್ಪ್ರೆಸ್ವೇನ ಹೆಚ್ಚುವರಿ 25 ಕಿಲೋ ಮೀಟರ್ ರಸ್ತೆಯನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಿದೆ. ಜೊತೆಗೆ ಈ ಹೈವೇಯಲ್ಲಿ ಸದ್ಯ ಒಟ್ಟು ಸುಮಾರು 100 ಕಿಲೋ ಮೀಟರ್ ಉದ್ದದ ರಸ್ತೆ ಸವಾರರಿಗೆ ಲಭ್ಯ ಆದಂತಾಗಿದೆ.

ಈ ಮಾರ್ಗಗಳಲ್ಲಿ ಸಂಚಾರಕ್ಕೆ ಮುಕ್ತ
ಈ ಹಿಂದೆ 2025ರ ಆರಂಭದಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ)ವು ಕರ್ನಾಟಕದ ಹೊಸಕೋಟೆಯಿಂದ ಬೆಥಮಂಗಲ (ಕೆಜಿಎಫ್) ವರೆಗಿನ 71 ಕಿಲೋ ಮೀಟರ್ ಉದ್ದದ ಮೊದಲ ಹಂತದ ರಸ್ತೆಯನ್ನು ಮುಕ್ತಗೊಳಿಸಿತ್ತು. ಇದೀಗ ಸುಮಾರು ಒಂದೂವರೆ ವರ್ಷಗಳ ಬಿಡುವಿನ ನಂತರ ಆಂಧ್ರಪ್ರದೇಶದ ಗಡಿಯೊಳಗೆ ಬರುವ ಬೇತಮಂಗಲದಿಂದ ಬೈರೆಡ್ಡಿಪಲ್ಲಿ ನಡುವಿನ 25 ಕಿಲೋ ಮೀಟರ್ ಹೊಸ ರಸ್ತೆಯನ್ನು ಸಾರ್ವಜನಿಕ ಬಳಕೆಗೆ ನೀಡಲಾಗಿದೆ. ಇದು ಆಂಧ್ರಪ್ರದೇಶ ರಾಜ್ಯದಲ್ಲಿ ಸಂಚಾರಕ್ಕೆ ಮುಕ್ತವಾದ ಈ ಎಕ್ಸ್ಪ್ರೆಸ್ವೇಯ ಮೊದಲ ಭಾಗವಾಗಿದೆ.
ಆಂಧ್ರಪ್ರದೇಶದೊಳಗೆ ಒಟ್ಟು 85 ಕಿಲೋ ಮೀಟರ್ ಉದ್ದದ ಹೆದ್ದಾರಿಯನ್ನು ಮೂರು ಪ್ರತ್ಯೇಕ ಪ್ಯಾಕೇಜ್ಗಳಾಗಿ ನಿರ್ಮಿಸುತ್ತಿದೆ. ಇಲ್ಲಿನ ಮೂರು ಹಂತಗಳ ಪೈಕಿ ಎರಡು ಪೂರ್ಣಗೊಂಡಿವೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಆಂಧ್ರಪ್ರದೇಶದಲ್ಲಿ ಮೂರು ಹಂತದಲ್ಲಿ ನಿರ್ಮಾಣ
* ವೇತಮಂಗಲ - ಬೈರೆಡ್ಡಿಪಲ್ಲಿ (25 ಕಿಲೋ ಮೀಟರ್ - ಈಗ ಪೂರ್ಣಗೊಂಡು ಮುಕ್ತವಾಗಿದೆ)
* ಬೈರೆಡ್ಡಿಪಲ್ಲಿ - ಬಂಗಾರುಪಾಳ್ಯಂ (31 ಕಿಲೋ ಮೀಟರ್)
* ಬಂಗಾರುಪಾಳ್ಯಂ - ಗುಡಿಪಾಲ (29 ಕಿಲೋ ಮೀಟರ್)
ಎರಡನೇ ಪ್ಯಾಕೇಜ್ ಆದ ಬೈರೆಡ್ಡಿಪಲ್ಲಿ-ಬಂಗಾರುಪಾಳ್ಯಂ ರಸ್ತೆಯಲ್ಲಿ ಕೇವಲ 11 ಕಿಲೋ ಮೀಟರ್ ಕಾಮಗಾರಿ ಮಾತ್ರ ಬಾಕಿ ಉಳಿದಿದೆ. ವನ್ಯಜೀವಿಗಳ ಮುಕ್ತ ಸಂಚಾರಕ್ಕಾಗಿ ಅಂಡರ್ಪಾಸ್ ನಿರ್ಮಿಸುವ ಕಾರ್ಯಕ್ಕೆ ಅರಣ್ಯ ಇಲಾಖೆಯ ಅನುಮತಿ ಸಿಗಬೇಕಿದೆ. ಆದ್ದರಿಂದ ಈ ಭಾಗದಲ್ಲಿ ವಿಳಂಬವಾಗಿದೆ. ಮೂರನೇ ಪ್ಯಾಕೇಜ್ ಬಂಗಾರುಪಾಳ್ಯಂ-ಗುಡಿಪಾಲವರೆಗಿನ ರಸ್ತೆ ಒಂದು ವರ್ಷದ ಹಿಂದೆಯೇ ಸಿದ್ಧಗೊಂಡಿದೆ. ತಮಿಳುನಾಡು ವ್ಯಾಪ್ತಿಯನ್ನು ಒಳಗೊಂಡಂತೆ ಇಡೀ 262 ಕಿಲೋ ಮೀಟರ್ ಉದ್ದದ ಎಕ್ಸ್ಪ್ರೆಸ್ವೇ ಯೋಜನೆಯನ್ನು 2026ರ ಡಿಸೆಂಬರ್ ಅಂತ್ಯದ ವೇಳೆಗೆ ಸಂಪೂರ್ಣವಾಗಿ ಮುಗಿಸಿ ಲೋಕಾರ್ಪಣೆ ಮಾಡುವ ಗುರಿ ಹೊಂದಲಾಗಿದೆ.
ಯಾರಿಗೆಲ್ಲಾ ಅನುಕೂಲ?
ಕರ್ನಾಟಕದ ಎನ್.ಜಿ.ಹುಲ್ಕೂರ್ನಿಂದ ಆಂಧ್ರದ ಬೈರೆಡ್ಡಿಪಲ್ಲಿಯವರೆಗಿನ ರಸ್ತೆ ತೆರೆದಿರುವುದರಿಂದ ಚಿತ್ತೂರು, ತಿರುಪತಿ ಮತ್ತು ಚೆನ್ನೈ ಕಡೆಗೆ ಪ್ರಯಾಣಿಸುವ ವಾಹನ ಸವಾರರಿಗೆ ಭಾರಿ ಅನುಕೂಲ ಆಗುತ್ತಿದೆ. ಎಕ್ಸ್ಪ್ರೆಸ್ವೇಯಿಂದ ಹೊರಬಂದ ನಂತರ ಪ್ರಯಾಣಿಕರು ಜಿಲ್ಲಾ ಮುಖ್ಯ ರಸ್ತೆಗಳ ಮೂಲಕ ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸಬಹುದು. ಪ್ರಸ್ತುತ ಹೊಸದಾಗಿ ತೆರೆದಿರುವ ಬೈರೆಡ್ಡಿಪಲ್ಲಿ ಟೋಲ್ ಪ್ಲಾಜಾದಲ್ಲಿ ದಿನಕ್ಕೆ ಸರಾಸರಿ 2.2 ಲಕ್ಷ ರೂಪಾಯಿ ಟೋಲ್ ಸಂಗ್ರಹ ಆಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
ಟೋಲ್ ದರಗಳ ವಿವರ
ಜೂನ್ 25ರಿಂದ ಜಾರಿಗೆ ಬಂದಿರುವ ಎನ್ಎಚ್ಎಐನ ನೂತನ ಪ್ರಕಟಣೆ ಪ್ರಕಾರ, ಹೊಸಕೋಟೆಯಿಂದ ಬೈರೆಡ್ಡಿಪಲ್ಲಿಯವರೆಗೆ (ಹೆಡಿಗನಬೆಲೆ ಟೋಲ್ನಿಂದ ಬೈರೆಡ್ಡಿಪಲ್ಲಿ ಟೋಲ್ವರೆಗೆ) ಪ್ರಯಾಣಿಸುವ ವಾಹನಗಳಿಗೆ ಕೆಳಗಿನಂತೆ ಶುಲ್ಕ ನಿಗದಿಪಡಿಸಲಾಗಿದೆ.
ಹೊಸಕೋಟೆ-ಬೈರೆಡ್ಡಿಪಲ್ಲಿವರೆಗೆ ಟೋಲ್ ಶುಲ್ಕದ ವಿವರ
* ಕಾರು, ಜೀಪ್ ಮತ್ತು ವ್ಯಾನ್ಗಳು: ಏಕಮುಖ ಪ್ರಯಾಣ 195 ರೂಪಾಯಿ ಹಾಗೂ ದ್ವಿಮುಖ ಪ್ರಯಾಣಕ್ಕೆ 290 ರೂಪಾಯಿ ನಿಗದಿಪಡಿಸಲಾಗಿದೆ. ತಿಂಗಳಿಗೆ 50 ಏಕಮುಖ ಪ್ರಯಾಣದ ಮಾಸಿಕ ಪಾಸ್ ದರ 6,465 ರೂಪಾಯಿ ಆಗಿದೆ.
* ಲಘು ವಾಣಿಜ್ಯ ವಾಹನಗಳು (LCV/LGV) ಮತ್ತು ಮಿನಿ ಬಸ್ಸುಗಳು: ಏಕಮುಖ ಪ್ರಯಾಣಕ್ಕೆ 315 ರೂಪಾಯಿ ಮತ್ತು ದ್ವಿಮುಖ ಪ್ರಯಾಣಕ್ಕೆ 470 ರೂಪಾಯಿ ಆಗಲಿದೆ.
* ಟ್ರಕ್ ಮತ್ತು ಬಸ್ಸುಗಳು: ಏಕಮುಖ ಸಂಚಾರಕ್ಕೆ 655 ರೂಪಾಯಿ ಹಾಗೂ ದ್ವಿಮುಖ ಪ್ರಯಾಣಕ್ಕೆ ₹985 ನಿಗದಿ ಮಾಡಲಾಗಿದೆ.
ಯಾರಿಗೆ ಟೋಲ್ ಶುಲ್ಕ ಅನ್ವಯ?
ಈ ಪರಿಷ್ಕೃತ ಟೋಲ್ ದರಗಳು ಕೇವಲ ಎಕ್ಸ್ಪ್ರೆಸ್ವೇಯ ಮುಖ್ಯ ರಸ್ತೆಯನ್ನು ಬಳಸುವ ವಾಹನಗಳಿಗೆ ಮಾತ್ರ ಅನ್ವಯಿಸುತ್ತವೆ. ಹೆದ್ದಾರಿಯನ್ನು ಪ್ರವೇಶಿಸಲು ಅಥವಾ ನಿರ್ಗಮಿಸಲು ಇರುವ ಸರ್ವಿಸ್ ರಸ್ತೆಗಳನ್ನು ಬಳಸುವ ವಾಹನಗಳಿಗೆ ಸದ್ಯ ಯಾವುದೇ ಟೋಲ್ ವಿಧಿಸುತ್ತಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಕಾರಿಡಾರ್ನಲ್ಲಿ ಹೆಡಿಗನಬೆಲೆ, ಅಗ್ರಹಾರ, ಕೃಷ್ಣರಾಜಪುರ, ಸುಂದರಪಾಳ್ಯ ಮತ್ತು ಬೈರೆಡ್ಡಿಪಲ್ಲಿಯಲ್ಲಿ ಟೋಲ್ ಪ್ಲಾಜಾಗಳನ್ನು ಸ್ಥಾಪಿಸಲಾಗಿದೆ.
ಎಲ್ಲೆಲ್ಲಿ ಟೋಲ್ ಪ್ಲಾಜಾಗಳ ಸ್ಥಾಪನೆ?
* ಹೆಡಿಗನಬೆಲೆ
* ಅಗ್ರಹಾರ
* ಕೃಷ್ಣರಾಜಪುರ
* ಸುಂದರಪಾಳ್ಯ
* ಬೈರೆಡ್ಡಿಪಲ್ಲಿ












Click it and Unblock the Notifications