ತಾಲಿಬಾನ್ ಭಯೋತ್ಪಾದಕರಿಗೆ ಪ್ರೇರಣೆಯಾಗಲಿದೆ ಎಂದ ಬ್ರಿಟನ್ ಗುಪ್ತಚರ ಇಲಾಖೆ ಮುಖ್ಯಸ್ಥ
ಲಂಡನ್, ಸೆಪ್ಟೆಂಬರ್ 11: ತಾಲಿಬಾನ್ ಉಗ್ರರಿಗೆ ಪ್ರೇರಣೆಯಾಗಲಿದೆ ಎಂದು ಬ್ರಿಟನ್ ಗುಪ್ತಚರ ಇಲಾಖೆ ಮುಖ್ಯಸ್ಥರು ಹೇಳಿದ್ದಾರೆ.
ಈ ಕುರಿತು ಬ್ರಿಟನ್ನ ಭದ್ರತಾ ಸೇವೆ-ಎಂ15ನ ಮಹಾನಿರ್ದೇಶಕ ಕೆನ್ ಮೆಕಲಮ್, ಅಮೆರಿಕ ನೇತೃತ್ವದ ನ್ಯಾಟೊ ಪಡೆಗಳು ಕಳೆದ ತಿಂಗಳು ಅಫ್ಘಾನಿಸ್ತಾನದಿಂದ ಹೊರ ಬಂದ ನಂತರ, ಅಫ್ಘಾನಿಸ್ತಾನದಲ್ಲಿ ನಡೆದ ಕೆಲವು ಬೆಳವಣಿಗೆಗಳು ಬೇರೆ ಉಗ್ರರಿಗೆ ಮನೋಸ್ಥೈರ್ಯ ಹೆಚ್ಚಿಸುವ ಸಾಧ್ಯತೆಗಳಿವೆ. ಹೀಗಾಗಿ ಹೆಚ್ಚಿನ ಜಾಗರೂಕತೆ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ಅಫ್ಘಾನಿಸ್ತಾನವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಂಡ ಬಳಿಕ ಬೆಳವಣಿಗೆಯು ವಿಶ್ವದಲ್ಲಿ ಭಯೋತ್ಪಾದಕರಿಗೆ ಧೈರ್ಯ ತುಂಬುವ ಸಾಧ್ಯತೆ ಇದೆ. ಅಮೆರಿಕದ ಮೇಲೆ ನಡೆದ 9/11 ಮಾದರಿಯ ಭಯೋತ್ಪಾದಕ ದಾಳಿಯ ಆತಂಕ ಜೀವಂತವಾಗಿದೆ ಎಂದಿದ್ದಾರೆ.
ಕಳೆದ ನಾಲ್ಕು ವರ್ಷಗಳಲ್ಲಿ ಬ್ರಿಟನ್ನ ಪೊಲೀಸರು ಮತ್ತು ಗುಪ್ತಚರ ಸೇವೆಗಳು ದೇಶದಲ್ಲಿ ನಡೆಯಲಿದ್ದ 31 ಅಂತಿಮ ಹಂತದ ಭಯೋತ್ಪಾದಕ ದಾಳಿಯನ್ನು ವಿಫಲಗೊಳಿಸಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಅಫ್ಘಾನಿಸ್ತಾನದಿಂದ ಸದ್ಯ ನಮಗೆ ಕಾಣುತ್ತಿರುವ ದೊಡ್ಡ ಆತಂಕವೆಂದರೆ, ಭಯೋತ್ಪಾದಕರು ಮತ್ತೆ ಒಂದೆಡೆ ಸೇರಬಹುದು, ಅವರ ಕೆಲಸದಲ್ಲಿ ಸಾಕಷ್ಟು ಅಭಿವೃದ್ಧಿಯಾಗಬಹುದು. ಅತ್ಯಾಧುನಿಕ ಮಾದರಿಯಲ್ಲಿ ಅವರು ನಮ್ಮನ್ನು ಎದುರಾಗಬಹುದು, ಈ ಮೂಲಕ ಮುಂದಿನ ದಿನಗಳಲ್ಲಿ 9/11 ಮಾದರಿಯ ದಾಳಿಯ ಆತಂಕವನ್ನು ಅವರು ನಮ್ಮಲ್ಲಿ ಮೂಡಿಸಲಿದ್ದಾರೆ ಎಂದು ಹೇಳಿದ್ದಾರೆ.
ಭಯೋತ್ಪಾದನೆ ಇಲ್ಲ ಎಂದು ಶಾಂತಿ ಮಂತ್ರದ ಭರವಸೆ ನೀಡಿದ ತಾಲಿಬಾನ್: ಅಫ್ಘಾನಿಸ್ತಾನ ಇದೀಗ ಸಂಪೂರ್ಣ ತಾಲಿಬಾನ್ ಕೈವಶವಾಗಿದೆ. ಅಮೆರಿಕ ಮಿಲಿಟರಿ ಸೈನ್ಯ ಕಾಲ್ಕಿತ್ತ ಬೆನ್ನಲ್ಲೇ ಕಾಬೂಲ್ ವಿಮಾನ ನಿಲ್ದಾಣ ಕೂಡ ತಾಲಿಬಾನ್ ಹಿಡಿತದಲ್ಲಿದೆ. ಈ ಘಟನೆ ಬೆನ್ನಲ್ಲೇ ತಾಲಿಬಾನ್ ಮನವಿ ಮೇರೆಗೆ ಭಾರತ ತಾಲಿಬಾನ್ ಪ್ರತಿನಿಧಿಗಳನ್ನು ಭೇಟಿ ಮಾಡಿ ಮಹತ್ವದ ಸಭೆ ನಡೆಸಿದ್ದಾರೆ. ಈ ವೇಳೆ ತಾಲಿಬಾನ್ ಉಗ್ರವಾದ, ಭಾರತ ವಿರೋಧಿ ಚಟುವಟಿಕೆ ನಡೆಸುವುದಿಲ್ಲ ಎಂದು ಭರವಸೆ ನೀಡಿದೆ.
ಖತಾರ್ನ ದೋಹಾದಲ್ಲಿರುವ ತಾಲಿಬಾನ್ ರಾಜಕೀಯ ಕಚೇರಿಯ ಮನವಿ ಮೇರೆಗೆ ಭಾರತದ ಖತಾರ್ ರಾಯಭಾರಿ ದೀಪಕ್ ಮಿತ್ತಲ್ ತಾಲಿಬಾನ್ ಪ್ರತಿನಿಧಿಗಳನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ. ದೀಪಕ್ ಮಿತ್ತಲ್ ಹಲವು ಪ್ರಶ್ನೆಗಳನ್ನು ಎತ್ತಿ ಚರ್ಚೆ ನಡೆಸಿದ್ದಾರೆ. ಭಾರತದ ಎಲ್ಲಾ ಕಾಳಜಿಯನ್ನು ಸೂಕ್ತವಾಗಿ ಪರಿಹರಿಸುವ ಭರವಸೆಯನ್ನು ತಾಲಿಬಾನ್ ಪ್ರತಿನಿಧಿಗಳು ನೀಡಿದ್ದಾರೆ.
ಭಾರತದ ರಾಯಭಾರಿ ದೀಪಕ್ ಮಿತ್ತಲ್ ಎತ್ತಿದ ಹಲವು ಕಾಳಜಿ ಹಾಗೂ ಸೂಚನೆಗಳನ್ನು ಸೂಕ್ತವಾಗಿ ಪರಿಹರಿಸುವುದಾಗಿ ತಾಲಿಬಾನ್ ಪ್ರತಿನಿಧಿಗಳು ಭರವಸೆ ನೀಡಿದ್ದಾರೆ. ಭಾರತದ ಜೊತೆ ಸೌಹಾರ್ಧಯುತ ವಾತಾವರಣ ನಿರ್ಮಿಸುವುದಾಗಿ ಭರವಸೆ ನೀಡಿದ್ದಾರೆ.
ಆಗಸ್ಟ್ 30ರೊಳಗೆ ಅಮೆರಿಕ ಮಿಲಿಟರಿ ಸೇನೆ ಆಫ್ಘಾನಿಸ್ತಾನದಿಂದ ಹಿಂತಿರುಗಬೇಕು ಎಂದು ತಾಲಿಬಾನ್ ಗಡುವು ನೀಡಿತ್ತು. ಇದರಂತೆ ಅಮೆರಿಕ ಸಂಪೂರ್ಣವಾಗಿ ಆಫ್ಘಾನಿಸ್ತಾನದಿಂದ ಸೇನೆ ಹಿಂತೆಗೆದುಕೊಂಡಿದೆ. ಆಗಸ್ಟ್ 31ಕ್ಕೆ ಕಾಬೂಲ್ ವಿಮಾನ ನಿಲ್ದಾಣವೂ ತಾಲಿಬಾನ್ ಕೈವಶವಾಗಿದೆ.
ತಾಲಿಬಾನ್ನಲ್ಲಿ ಸಿಲುಕಿರುವ ಭಾರತೀಯರ ಸುರಕ್ಷತೆ, ಭದ್ರತೆ ಹಾಗೂ ಭಾರತಕ್ಕೆ ಆಗಮಿಸಲು ಇಚ್ಚಿಸುವ ಅಲ್ಪಸಂಖ್ಯಾತ ಸಮುದಾಯಗಳ ಸ್ಥಳಾಂತರ ಕುರಿತು ದೋಹಾ ಕಚೇರಿಯಲ್ಲಿ ಚರ್ಚಿಸಲಾಯಿತು.
ಈ ಮಾತುಕತೆಯಲ್ಲಿ ಆಫ್ಘಾನಿಸ್ತಾನ ನೆಲವನ್ನು ಯಾವುದೇ ಕಾರಣಕ್ಕೂ ಭಾರತ ವಿರೋಧಿ ಚಟುವಟಿಕೆ, ಭಾರತ ವಿರುದ್ದ ಭಯೋತ್ಪಾದನೆಗೆ ಬಳಸಿಕೊಳ್ಳಬಾರದು ಎಂದು ದೀಪಕ್ ಮಿತ್ತಲ್ ತಾಲಿಬಾನ್ಗಳಿಗೆ ಸೂಚನೆ ನೀಡಿದ್ದಾರೆ.ಅಫ್ಘಾನಿಸ್ತಾನ ಕೈವಶ ಮಾಡಿ ಚೆಂಡಾಡುತ್ತಿರುವ ತಾಲಿಬಾನ್ ಉಗ್ರರು ಕ್ರೌರ್ಯ ಮೆರೆಯುತ್ತಿದ್ದಾರೆ. ಅಮಾಯಕರನ್ನು ಬಲಿತೆಗೆದುಕೊಳ್ಳುತ್ತಿದ್ದಾರೆ. ಈ ಬೆಳವಣಿಗೆ ನಡುವೆ ತಾಲಿಬಾನ್ ಉಗ್ರರು ಜೈಲಿನಲ್ಲಿ ಬಂಧಿಯಾಗಿರುವ ಪಾಕಿಸ್ತಾನದ ಉಗ್ರರನ್ನು ಬಿಡುಗಡೆ ಮಾಡುತ್ತಲೇ ಇದೆ. ಇದೀಗ ತೆಹ್ರಿಕ್ ಇ ತಾಲಿಬಾನ್ ಪಾಕಿಸ್ತಾನ(ಟಿಟಿಪಿ), ಆಲ್ ಖೈದಾ ಹಾಗೂ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ 100 ಉಗ್ರರನ್ನು ಜೈಲಿನಿಂದ ಬಿಡುಗಡೆ ಮಾಡಿದೆ.
ತಾಲಿಬಾನ್ ಉಗ್ರರ ಈ ನಿರ್ಧಾರದ ಹಿಂದೆ ಪಾಕಿಸ್ತಾನ ಐಎಸ್ಐ ಹಾಗೂ ಉಗ್ರ ಸಂಘಟನೆಗಳ ಕೈವಾಡವಿದೆ ಅನ್ನೋ ಮಾತುಗಳು ಬಲವಾಗಿ ಕೇಳಿಬರುತ್ತಿದೆ. ಆಫ್ಘಾನಿಸ್ತಾನ ಸರ್ಕಾರ ಬಂಧಿಸಿ ಜೈಲಿನಲ್ಲಿಟ್ಟದ್ದ ಪಾಕಿಸ್ತಾನದ ಉಗ್ರರನ್ನು ತಾಲಿಬಾನ್ ಉಗ್ರರು ಬಿಡುಗಡೆ ಮಾಡಿದ್ದಾರೆ.
ಇದೀಗ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಜೊತೆಗೆ ಇತರ ಉಗ್ರ ಸಂಘಟನೆ ಉಗ್ರರು ತುಂಬಿ ತುಳುಕುತ್ತಿದ್ದಾರೆ. ಬಂಧಿಯಾಗಿದ್ದ ಉಗ್ರರ ಬಿಡುಗಡೆಯಾಗಿರುವುದು ಪಾಕಿಸ್ತಾನ ಉಗ್ರರ ಕೈ ಬಲಪಡಿಸಿದೆ. ತಾಲಿಬಾನ್ ಬಿಡುಗಡೆಗೊಳಿಸಿದ ಉಗ್ರರ ಪೈಕಿ ಟಿಟಿಪಿ ಮುಖ್ಯಸ್ಥ ಮೌಲ್ವಿ ಫಾಕಿರ್ ಮೊಹಮ್ಮದ್ ಕೂಡ ಸೇರಿದ್ದಾರೆ.