ಕೊಪ್ಪಳ: ಅಂಜನಾದ್ರಿ ಪರ್ವತಕ್ಕೆ ಥಾವರ್ ಚಂದ್ ಗೆಹ್ಲೋಟ್ ಭೇಟಿ
ಕೊಪ್ಪಳ, ಡಿಸೆಂಬರ್, 09: ಇತ್ತೀಚಿನ ದಿನಗಳಲ್ಲಿ ಆಂಜನೇಯ ಜನ್ಮಸ್ಥಳವಾದ ಅಂಜನಾದ್ರಿ ಪರ್ವತ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಹಾಗೆಯೇ ಇದೀಗ ಅಂಜನಾದ್ರಿಗೆ ಇಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಭೇಟಿ ನೀಡಿದ್ದರು. ಇದಕ್ಕೂ ಮುನ್ನಾ ಅಂಜನಾದ್ರಿಯ ಪ್ರಧಾನ ಅರ್ಚಕ ಮಾಡಿದ ಹೈಡ್ರಾಮವು ನೆರೆದಿದ್ದ ಪೊಲೀಸರನ್ನು ಗಲಿಬಿಲಿಗೊಳಿತು. ಇನ್ನು ಮುಸ್ಲಿಂ ಮಹಿಳೆಯರು ಅಂಜನಾದ್ರಿ ದರ್ಶನ ಪಡೆದು ಭಾವೈಕ್ಯತೆಯ ಸಂದೇಶ ಸಾರಿದರು.
ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಶುಕ್ರವಾರ (ಡಿಸೆಂಬರ್ 09) ಅಂಜನಾದ್ರಿಗೆ ಭೇಟಿ ನೀಡಿದರು. ಅಂಜನಾದ್ರಿ ಬೆಟ್ಟ ಏರಲು ಸಾಧ್ಯವಾಗದ ಕಾರಣ ಜಿಲ್ಲಾ ಆಡಳಿತ ಅಂಜನಾದ್ರಿ ಬೆಟ್ಟದ ಕೆಳಗಡೆ ಪೂಜೆಗೆ ವ್ಯವಸ್ಥೆ ಮಾಡಲಾಗಿತ್ತು. ಮೊದಲು ಪೂರ್ಣ ಕುಂಭದ ಮೂಲಕ ಅರ್ಚಕರು ರಾಜ್ಯಪಾಲ ಗೆಹ್ಲೋಟ್ ಅವರನ್ನು ಸ್ವಾಗತಿಸಿದರು. ಬಳಿಕ ಅಂಜನಾದ್ರಿ ಬೆಟ್ಟದ ಕೆಳಭಾಗದಲ್ಲಿನ ಆಂಜನೇಯನ ಮೂರ್ತಿಗೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ವಿಶೇಷ ಪೂಜೆ ಸಲ್ಲಿಸಿದರು.

ಅಂಜನಾದ್ರಿಗೆ ಭೇಟಿ ನೀಡಿದ್ದ ರಾಜ್ಯಪಾಲರು
ಇನ್ನು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರ ಅಂಜನಾದ್ರಿ ಭೇಟಿ ಬೆಳಗ್ಗೆ 7:40 ಕ್ಕೆ ನಿಗದಿಯಾಗಿತ್ತು. ಇದಕ್ಕೂ ಅರ್ಧಗಂಟೆ ಪೂರ್ವದಲ್ಲಿ ಈ ಮುಂಚೆ ಅಂಜನಾದ್ರಿಯ ಪ್ರಧಾನ ಅರ್ಚಕರಾಗಿದ್ದ ವಿದ್ಯಾದಾಸ್ ಬಾಬಾ ಹಾಗೂ ಜಿಲ್ಲಾ ಆಡಳಿತ, ಪೊಲೀಸ್ ಇಲಾಖೆ ನಡುವೆ ಹೈಡ್ರಾಮಾ ನಡೆಯಿತು. ವಿದ್ಯಾದಾಸ್ ಬಾಬಾಗೆ ಜಿಲ್ಲಾ ಆಡಳಿತ ಅಂಜನಾದ್ರಿಯಲ್ಲಿನ ಆಂಜನೇಯನಿಗೆ ಬೆಳಗ್ಗೆ 6ರಿಂದ ರಾತ್ರಿ 8 ಗಂಟೆವರೆಗೂ ಪೂಜೆ ಮಾಡಲು ಅವಕಾಶ ನೀಡಿದೆ. ಇದನ್ನೇ ಕಾರಣವಾಗಿಟ್ಟುಕೊಂಡು ವಿದ್ಯಾದಾಸ್ ಬಾಬಾ ರಾಜ್ಯಪಾಲರು ಪೂಜೆ ಸಲ್ಲಿಸುವ ವೇಳೆ ಕಿರಿಕಿರಿ ಉಂಟುಮಾಡಿದ್ದಾರೆ. ನಾನು ಪೂಜೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಆದರೆ ಇದಕ್ಕೆ ಜಿಲ್ಲಾ ಆಡಳಿತ ಒಪ್ಪಿಲ್ಲ. ಹೀಗಾಗಿ ವಿದ್ಯಾದಾಸ್ ಬಾಬಾ ಗಲಾಟೆ ಮಾಡಲು ಆರಂಭ ಮಾಡಿದ್ದಾರೆ. ಈ ವೇಳೆ ಪೊಲೀಸರು ವಿದ್ಯಾದಾಸ್ ಬಾಬಾನನ್ನು ವಶಕ್ಕೆ ಪಡೆಯಲು ಮುಂದಾದರು.
ವಿದ್ಯಾದಾಸ ಬಾಬ, ಪೊಲೀಸರ ಜಟಾಪಟಿ
ಪೊಲೀಸರು ಆಕ್ರೋಶಗೊಳ್ಳುತ್ತಿದ್ದಂತೆ ವಿದ್ಯಾದಾಸ ಬಾಬ ಅನಿವಾರ್ಯವಾಗಿ ಬೆಟ್ಟ ಏರಿದರು. ಇನ್ನು ಜಿಲ್ಲಾಡಳಿತ ಕ್ರಮದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರುವುದಾಗಿ ತಿಳಿಸಿದ್ದಾರೆ. ಇತ್ತೀಚೆಗಷ್ಟೆ ಅಂಜನಾದ್ರಿಯಲ್ಲಿ ಧರ್ಮ ದಂಗಲ್ ಆರಂಭವಾಗಿತ್ತು. ಹಿಂದೂ ಧರ್ಮಿಯರನ್ನು ಹೊರತುಪಡಿಸಿ ಅನ್ಯಧರ್ಮೀಯರಿಗೆ ವ್ಯಾಪಾರ ಮಾಡಲು ಅವಕಾಶ ನೀಡಬಾರದೆಂದು ಹಿಂದೂ ಜಾಗರಣೆ ವೇದಿಕೆಯವರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರು. ಇದಾದ ಒಂದು ವಾರ ಆಗುವಷ್ಟರಲ್ಲೇ ಇದೀಗ ಮುಸ್ಲಿಂ ಧರ್ಮದ ಮಹಿಳೆಯರು ಅಂಜನಾದ್ರಿಗೆ ಭೇಟಿ ನೀಡಿದ್ದರು. ರಾಯಚೂರು ಜಿಲ್ಲೆಯ ಸಿಂಧನೂರಿನ ಮಹಿಳೆಯರ ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು 575 ಮೆಟ್ಟಿಲುಗಳನ್ನು ಹತ್ತುವ ಮೂಲಕ ಆಂಜನೇಯನ ದರ್ಶನ ಮಾಡಿದರು. ಈ ಮೂಲಕ ಮುಸ್ಲಿಂ ಮಹಿಳೆಯರು ಭಾವೈಕ್ಯತೆ ಸಾರುವ ಕಾರ್ಯ ಮಾಡಿದ್ದಾರೆ.

ಈ ಹಿಂದಿನ ರಾಜ್ಯಪಾಲರಾದ ವಜುಭಾಯ್ ವಾಲಾ ಅವರು ಸಹ ಅಂಜನಾದ್ರಿಗೆ ಭೇಟಿ ನೀಡಿದ್ದರು. ಇದೀಗ ಪ್ರಸ್ತುತ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಸಹ ಭೇಟಿ ನೀಡಿರುವುದು ವಿಶೇಷವಾಗಿದೆ.











Click it and Unblock the Notifications