ಗಂಗಾವತಿ: ಪಿಯು ಪರೀಕ್ಷೆಗೂ ಜಗಳಕ್ಕೂ ಸಂಬಂಧವಿಲ್ಲ
ಕೊಪ್ಪಳ, ಮಾರ್ಚ್ 02: ಗಂಗಾವತಿಯ ವೈ. ಜೆ ಪದವಿಪೂರ್ವ ಕಾಲೇಜಿನಲ್ಲಿ ಮಾ. 01 ರಂದು ನಡೆದಿದೆ ಎನ್ನಲಾದ ಅಹಿತಕರ ಘಟನೆಗೂ, ಇದೇ ಪರೀಕ್ಷಾ ಕೇಂದ್ರದಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಗೂ ಯಾವುದೇ ಸಂಬಂಧವಿಲ್ಲ ಎಂದು ಕೊಪ್ಪಳ ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ. ಈ ವಿಷಯವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಫೇಸ್ಬುಕ್ನಲ್ಲಿ ಶೇರ್ ಮಾಡಿದ್ದಾರೆ.
ವೈ.ಜೆ. ಪಿಯು ಕಾಲೇಜಿನಲ್ಲಿ ಅದೇ ಕಾಲೇಜಿನ ನಿರ್ದೇಶಕನ ಮೇಲೆ ಗಂಗಾವತಿಯ ವಿದ್ಯಾನಿಕೇತನ ಕಾಲೇಜಿನ ಪ್ರಾಂಶುಪಾಲ ಮತ್ತು ಸಿಬ್ಬಂದಿ ಹಲ್ಲೆ ನಡೆಸಿದ್ದರು, ತಮ್ಮ ಕಾಲೇಜು ವಿದ್ಯಾರ್ಥಿಗಳಿಗೆ ನಕಲು ಮಾಡಲು ಅವಕಾಶ ಕೊಡಲಿಲ್ಲವೆಂದು ಹಲ್ಲೆ ನಡೆಸಲಾಗಿದೆ ಎಂದು ಸುದ್ದಿಯಾಗಿತ್ತು, ಆದರೆ ಇದನ್ನು ಜಿಲ್ಲಾಡಳಿತ ಅಲ್ಲಗಳೆದಿದೆ.
ದ್ವಿತೀಯ ಪಿಯುಸಿ ಪರೀಕ್ಷಾ ಕೇಂದ್ರವಾಗಿರುವ ಗಂಗಾವತಿಯ ವೈ. ಜನತಾರಾಣಿ ಪದವಿಪೂರ್ವ ಕಾಲೇಜಿನಲ್ಲಿ ಕಳೆದ ಮಾ. 01 ರಂದು ಸಂಜೆ 6-30 ಗಂಟೆಯ ನಂತರ ನಡೆದಿರುವ ಅಹಿತಕರ ಘಟನೆಗೂ, ದ್ವಿತೀಯ ಪರೀಕ್ಷೆಗೂ ಯಾವುದೇ ಸಂಬಂಧವಿರುವುದಿಲ್ಲ. ಈ ಕುರಿತಂತೆ ಪೊಲೀಸ್ ಇಲಾಖೆ, ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರಿಂದ ಮಾಹಿತಿ ಪಡೆಯಲಾಗಿದೆ. ಪರೀಕ್ಷೆಯ ಪ್ರಾರಂಭದಿಂದ ಮುಕ್ತಾಯದವರೆಗೂ ಪರೀಕ್ಷಾ ಕೇಂದ್ರದಲ್ಲಿ ಯಾವುದೇ ಅಹಿತಕರ ಘಟನೆಯಾಗಲಿ, ದುರ್ನಡತೆಯಾಗಲಿ ಅಥವಾ ಕಾನೂನು ಬಾಹಿರ ಚಟುವಟಿಕೆಗಳಾಗಲಿ ಕೇಂದ್ರದ ಸಿಬ್ಬಂದಿ ಅಥವಾ ವಿದ್ಯಾರ್ಥಿಗಳಿಂದ ನಡೆದಿಲ್ಲ. ಪರೀಕ್ಷೆ ಜರುಗುವ ಎಲ್ಲ ಕೊಠಡಿಗಳಲ್ಲಿ ಸಿ.ಸಿ. ಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು, ಪರೀಕ್ಷೆ ಮುಗಿದ ಬಳಿಕ, ಉತ್ತರ ಪತ್ರಿಕೆಗಳನ್ನು ನಿಯಮಾನುಸಾರವಾಗಿ ಸಮರ್ಪಕವಾಗಿ ಅಂಚೆ ಮೂಲಕ ಕಳುಹಿಸಿಕೊಡಲಾಗಿದೆ ಎಂದು ಪಿಯು ಇಲಾಖೆ ಸ್ಪಷ್ಟೀಕರಣ ನೀಡಿದೆ.
ಕೊಪ್ಪಳ: ಕಾಪಿ ಮಾಡಲು ಬಿಡಲಿಲ್ಲವೆಂದು ಸುತ್ತಿಗೆಯಿಂದ ಹಲ್ಲೆ
ಘಟನೆ ಕುರಿತಂತೆ ವಿಚಾರಣೆಯ ಸಂದರ್ಭದಲ್ಲಿ ಬಂದ ಮಾಹಿತಿಯ ಪ್ರಕಾರ, ಅಹಿತಕರ ಘಟನೆಯು ಅಂದು ಸಂಜೆ 6-30 ರಿಂದ 7-30 ರ ಅವಧಿಯಲ್ಲಿ ಜರುಗಿರುವುದಾಗಿ ತಿಳಿದುಬಂದಿದೆ. ಗಂಗಾವತಿಯ ವಿದ್ಯಾನಿಕೇತನ ಪ.ಪೂ. ಕಾಲೇಜು ಹಾಗೂ ವೈ. ಜನತಾರಾಣಿ ಪ.ಪೂ. ಕಾಲೇಜುಗಳ ಆಡಳಿತ ಮಂಡಳಿ ಸದಸ್ಯರ ನಡುವೆ ಹಿಂದಿನಿಂದಲೂ ವೈಯಕ್ತಿಕ ದ್ವೇಷವಿರುವುದಾಗಿ ತಿಳಿದುಬಂದಿದ್ದು, ಪರಸ್ಪರ ಹೊಡೆದಾಟ ನಡೆದ ಪ್ರಕರಣ ಕೂಡ ಜರುಗಿತ್ತು ಎಂಬುದಾಗಿ ಪೊಲೀಸ್ ಇಲಾಖೆ ಮೂಲಗಳಿಂದ ತಿಳಿದುಬಂದಿದೆ.
ಹೀಗಾಗಿ ಪರೀಕ್ಷೆಗೂ, ಕಾಲೇಜಿನಲ್ಲಿ ಅಂದು ಸಂಜೆ ನಡೆದ ಘಟನೆಗೂ ಯಾವುದೇ ಸಂಬಂಧ ಇರುವುದಿಲ್ಲ. ಅಲ್ಲದೆ ಪರೀಕ್ಷಾ ಕಾರ್ಯದಲ್ಲಿ ಭಾಗವಹಿಸಿದ ಇಲಾಖಾ ಸಿಬ್ಬಂದಿಯ ಮೇಲೆ ಯಾವುದೇ ಹಲ್ಲೆ ನಡೆದಿಲ್ಲ. ಗಂಗಾವತಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್ಐಆರ್ ವರದಿಯನ್ವಯ ಎರಡು ಗುಂಪುಗಳ ವೈಯಕ್ತಿಕ ದ್ವೇಷ ಹಾಗೂ ಇನ್ನಿತರ ಕಾರಣಗಳಿಂದ ಹೊಡೆದಾಡಿಕೊಂಡು, ಪರೀಕ್ಷೆಯ ನೆಪ ಹೇಳುತ್ತಿರುವುದು ಕಂಡುಬಂದಿರುತ್ತದೆ.
ಮುಂದಿನ ಪರೀಕ್ಷಾ ದಿನಗಳಿಗೆ ಮುಂಜಾಗ್ರತಾ ಕ್ರಮವಾಗಿ ವೈ. ಜನತಾರಾಣಿ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳ ಕಚೇರಿಯಿಂದ ಸ್ಪಷ್ಟನೆ ನೀಡಲಾಗಿದೆ.