ಬೊಮ್ಮಾಯಿ ಸರ್ಕಾರದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದ ವಿರೂಪಾಕ್ಷಪ್ಪ ಅಗಡಿ ನಿಧನ
ಕೊಪ್ಪಳ, ಅಕ್ಟೋಬರ್ 12: ಮಾಜಿ ಮುಖ್ಯಮಂತ್ರಿ ಎಸ್. ಆರ್. ಬೊಮ್ಮಾಯಿ ಸಚಿವ ಸಂಪುಟದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದ ವಿರೂಪಾಕ್ಷಪ್ಪ ಅಗಡಿಯವರು ಕೊಪ್ಪಳದ ಕಲ್ಯಾಣ ನಗರದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ವಿರೂಪಾಕ್ಷಪ್ಪ ಅಗಡಿಗೆ 81 ವರ್ಷ ವಯಸ್ಸಾಗಿತ್ತು. 1940ರ ಡಿಸೆಂಬರ್ 19ರಂದು ಜನಿಸಿದ್ದ ಅಗಡಿಯವರು, ತಮ್ಮ 81ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.
1985- 1989ರವರೆಗೆ ಜನತಾ ಪಕ್ಷದಿಂದ ವಿರೂಪಾಕ್ಷಪ್ಪನವರು ಶಾಸಕರಾಗಿದ್ದರು. ಎಸ್.ಆರ್. ಬೊಮ್ಮಾಯಿ ಸಂಪುಟದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾಗಿ ಒಂದು ವಾರಗಳ ಕಾಲ ಅವರು ಕಾರ್ಯ ನಿರ್ವಹಿಸಿದ್ದರು.

ಆದರೆ ನಂತರದಲ್ಲಿ ಎಸ್.ಆರ್. ಬೊಮ್ಮಾಯಿ ಸರ್ಕಾರ ಪತನವಾಗಿದ್ದರಿಂದ ಸಚಿವರಾಗಿ ಮುಂದುವರೆಯಲು ವಿರೂಪಾಕ್ಷಪ್ಪ ಅಗಡಿಗೆ ಸಾಧ್ಯವಾಗಿರಲಿಲ್ಲ.
ನಂತರ 1989ರಲ್ಲಿ ನಡೆದ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿ ಸೋತಿದ್ದರು. 1998ರಲ್ಲಿ ಲೋಕಶಕ್ತಿ ಪಕ್ಷದಿಂದ ಸ್ಪರ್ಧಿಸಿ ಗೆದ್ದಿದ್ದರು. 2004ರಲ್ಲಿ ಜೆಡಿಎಸ್ನಿಂದ ಲೋಕಸಭೆಗೆ ವಿರೂಪಾಕ್ಷಪ್ಪ ಅಗಡಿ ಸ್ಪರ್ಧಿಸಿದ್ದರೂ, ಅವರಿಗೆ ಜಯ ಲಭಿಸಿರಲಿಲ್ಲ.
ಗೃಹ ಮಂಡಳಿ ಅಧ್ಯಕ್ಷರಾಗಿ, ಒಂದು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಬಳಿಕ ಬಿಜೆಪಿ ಸೇರಿದ ನಂತರ ಒಂದು ದಶಕಗಳ ಕಾಲ ಪಕ್ಷ ಸಂಘಟನೆಯಲ್ಲಿ ತೊಡಗಿದ್ದರು.
ವಿರೂಪಾಕ್ಷಪ್ಪ ಅಗಡಿಯವರ ತಂದೆ ಕೂಡ ಸಾರ್ವಜನಿಕ ಕ್ಷೇತ್ರದಲ್ಲಿದ್ದು, ಬಹಳಷ್ಟು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಅಂತಹ ಹಿನ್ನೆಲೆಯಿಂದ ಬಂದ ವಿರೂಪಾಕ್ಷಪ್ಪನವರೂ ಕೂಡ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು.
ಮಂಗಳವಾರ ಸಂಜೆ 4 ಗಂಟೆಗೆ ಕೊಪ್ಪಳದ ವೀರಶೈವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಸಿಎಂ ಬೊಮ್ಮಾಯಿ ಸಂತಾಪ
"ಕೊಪ್ಪಳದ ಮಾಜಿ ಶಾಸಕರು ಹಾಗೂ ಮಾಜಿ ಆರೋಗ್ಯ ಶಿಕ್ಷಣ ಸಚಿವರಾಗಿದ್ದ ವಿರೂಪಾಕ್ಷಪ್ಪ ಅಗಡಿ ತಮ್ಮ 81ನೇ ವಯಸ್ಸಿನಲ್ಲಿ ಮಂಗಳವಾರ ನಿಧನರಾದ ವಿಷಯ ತಿಳಿದು ದುಃಖಿತನಾಗಿದ್ದೇನೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಈ ನೋವನ್ನು ಭರಿಸುವ ಶಕ್ತಿ ಅವರ ಕುಟುಂಬಕ್ಕೆ ಸಿಗಲಿಯೆಂದು ಪ್ರಾರ್ಥಿಸುತ್ತೇನೆ," ಎಂದು ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.












Click it and Unblock the Notifications