ನನ್ನ ನೋವಿಗಿಂತ ಜನರ ನೋವೇ ಹೆಚ್ಚು; ವ್ಹೀಲ್ ಚೇರ್ ಮೇಲೆ ಮಮತಾ ಮಾತು
ಕೋಲ್ಕತ್ತಾ, ಮಾರ್ಚ್ 15: ಪಶ್ಚಿಮ ಬಂಗಾಳದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಚುನಾವಣೆ ಆರಂಭಗೊಳ್ಳಲಿದ್ದು, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವ್ಹೀಲ್ ಚೇರ್ ಮೇಲೆ ಕುಳಿತೇ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ.
ಈಚೆಗೆ ನಂದಿಗ್ರಾಮದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಅವರು ಭಾನುವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಸೋಮವಾರ ಪುರುಲಿಯಾದಲ್ಲಿ ಚುನಾವಣಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ.
ವ್ಹೀಲ್ ಚೇರ್ನಲ್ಲಿ ಕುಳಿತೇ ಪ್ರಚಾರಕ್ಕೆ ತೆರಳಲಿರುವ ಮಮತಾ ಬ್ಯಾನರ್ಜಿ
ಈ ಸಂದರ್ಭ ಮಾತನಾಡಿದ ಅವರು, "ನನ್ನ ನೋವಿಗಿಂತ ಜನರ ನೋವೇ ಹೆಚ್ಚು. ಹೀಗಾಗಿ ಇಲ್ಲಿಗೆ ಬಂದಿದ್ದೇನೆ" ಎಂದು ಹೇಳಿದ್ದು, "ನಂದಿಗ್ರಾಮದಲ್ಲಿ ನಡೆದ ಘಟನೆಯಲ್ಲಿ ನನಗೆ ಗಾಯವಾಯಿತು. ಆದರೆ ಅದೃಷ್ಟವಶಾತ್ ನಾನು ಬದುಕಿದ್ದೇನೆ. ನನಗೆ ನಡೆಯಲು ಆಗುತ್ತಿಲ್ಲ. ಈ ಮುರಿದ ಕಾಲನ್ನಿಟ್ಟುಕೊಂಡು ನಾನು ಹೊರಗೆ ಹೋಗಲು ಸಾಧ್ಯವಾಗುವುದಿಲ್ಲ ಎಂದು ಕೆಲವರು ತಿಳಿದುಕೊಂಡಿದ್ದರು. ಆದರೆ ಅವರ ಊಹೆ ತಪ್ಪಾಯಿತು" ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
2019ರ ಲೊಕಸಭಾ ಚುನಾವಣೆಯಲ್ಲಿ ಪುರುಲಿಯಾದಲ್ಲಿ ಬಿಜೆಪಿ ಗೆಲುವು ಪಡೆದುಕೊಂಡಿದ್ದನ್ನು ಉಲ್ಲೇಖಿಸಿ ಮಾತನಾಡಿದ ಅವರು, "ತನ್ನ ಸುಳ್ಳುಗಳಿಂದ ಬಿಜೆಪಿ ಇಲ್ಲಿ ಗೆದ್ದಿದೆ. ಅವರು ಎಲ್ಲವನ್ನೂ ಮಾರುತ್ತಿದ್ದಾರೆ. ನಾವು ಅಭಿವೃದ್ಧಿ ಕೆಲಸಗಳಲ್ಲಿ ತೊಡಗಿಕೊಂಡಿದ್ದರೆ, ಇಲ್ಲಿ ಬಿಜೆಪಿ ತೈಲ ಹಾಗೂ ಅಡುಗೆ ಅನಿಲದ ಬೆಲೆ ಹೆಚ್ಚಿಸುತ್ತಿದೆ" ಎಂದು ದೂರಿದರು.
294 ಪಶ್ಚಿಮ ಬಂಗಾಳ ವಿಧಾನಸಭೆಗೆ ಮಾರ್ಚ್ 27ರಿಂದ ಆರಂಭಗೊಂಡು 8 ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ 2 ರಂದು ಫಲಿತಾಂಶ ಹೊರಬರಲಿದೆ. ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ ನಡುವೆ ಜಟಾಪಟಿಯೂ ಬಿರುಸಾಗಿದೆ.