ವಿವಾದಾತ್ಮಕ ಭಾಷಣ: ಕೋಲ್ಕತಾ ಪೊಲೀಸರಿಂದ ಮಿಥುನ್ ಚಕ್ರವರ್ತಿ ವಿಚಾರಣೆ
ಕೋಲ್ಕತ್ತಾ, ಜೂ.16: ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿಯ ಸ್ಟಾರ್ ಪ್ರಚಾರಕರಾಗಿದ್ದ ನಟ ಮತ್ತು ಬಿಜೆಪಿ ನಾಯಕ ಮಿಥುನ್ ಚಕ್ರವರ್ತಿಯನ್ನು ಕೋಲ್ಕತಾ ಪೊಲೀಸರು ಬುಧವಾರ ಪ್ರಚಾರ ಸಂದರ್ಭದ ವಿವಾದಾತ್ಮಕ ಭಾಷಣದ ಕುರಿತು ಪ್ರಶ್ನಿಸಿದ್ದಾರೆ.
ಪೊಲೀಸರ ಪ್ರಕಾರ, ಚಕ್ರವರ್ತಿಯ ಭಾಷಣದಲ್ಲಿ "ಮಾರ್ಬೊ ಎಖಾನೆ ಲ್ಯಾಶ್ ಪೋರ್ಬೆ ಶೋಶೇನ್" ಅಂದರೆ, "ನಿಮಗೆ ನಾನು ಇಲ್ಲಿ ಹೊಡೆದರೆ ನಿಮ್ಮ ದೇಹವು ಶವಾಗಾರದಲ್ಲಿ ಇರುತ್ತದೆ" ಎಂದು ಹೇಳಿದ್ದರು. ಇದು ಬಂಗಾಳದಲ್ಲಿ ಚುನಾವಣೆ ಬಳಿಕದ ಹಿಂಸಾಚಾರಕ್ಕೆ ಕಾರಣವಾಗಿದೆ ಎಂದು ದೂರಲಾಗಿದೆ.
ಆದರೆ ಮಿಥುನ್ ಚಕ್ರವರ್ತಿ, "ಇದು ಬರೀ ಡೈಲಾಗ್ ಇದನ್ನು ಮನರಂಜನೆಯ ದೃಷ್ಟಿಕೋನದಿಂದ ನೋಡಬೇಕು," ಎಂದು ಮನವಿ ಮಾಡಿದ್ದಾರೆ.

ಚಕ್ರವರ್ತಿ ತನ್ನ ವಿರುದ್ಧದ ಎಫ್ಐಆರ್ ರದ್ದುಗೊಳಿಸಲು ಕೋಲ್ಕತ್ತಾ ಹೈಕೋರ್ಟ್ ಕದ ತಟ್ಟಿದ್ದಾರೆ. ಆದರೆ ವಿಡಿಯೋ-ಕಾನ್ಫರೆನ್ಸ್ ಮೂಲಕ ತನಿಖೆಗೆ ಸಹಕರಿಸುವಂತೆ ಚಕ್ರವರ್ತಿಗೆ ನಿರ್ದೇಶನ ಮಾಡಲಾಗಿದೆ.
ಮಾರ್ಚ್ನಲ್ಲಿ ಕೋಲ್ಕತ್ತಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ ರ್ಯಾಲಿಯಲ್ಲಿ ತಾನು ಬಿಜೆಪಿಗೆ ಸೇರಿದಾಗ ನಟ ಈ ಹೇಳಿಕೆ ನೀಡಿದ್ದರು. ನಟ-ರಾಜಕಾರಣಿಗೆ ವಿಧಾನ ಸಭೆ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ದೊರೆತಿಲ್ಲ, ಆದರೆ ಚಕ್ರವರ್ತಿ ಪಕ್ಷಕ್ಕಾಗಿ ಪಶ್ಚಿಮ ಬಂಗಾಳದಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಿದರು. ಬಿಜೆಪಿಯ ಹೈ-ವೋಲ್ಟೇಜ್ ಅಭಿಯಾನದ ಹೊರತಾಗಿಯೂ, 10 ವರ್ಷಗಳ ಕಾಲ ರಾಜ್ಯವನ್ನು ಆಳಿದ ತೃಣಮೂಲ ಕಾಂಗ್ರೆಸ್ನಿಂದ ಪಶ್ಚಿಮ ಬಂಗಾಳವನ್ನು ತನ್ನ ತೆಕ್ಕೆಗೆ ಪಡೆಯಲು ಬಿಜೆಪಿ ವಿಫಲವಾಗಿದೆ.
ಆದರೆ ತೃಣಮೂಲದ ಅದ್ಭುತ ಗೆಲುವಿನ ಬಳಿಕ ಪಶ್ಚಿಮ ಬಂಗಾಳದ ಅನೇಕ ಭಾಗಗಳಲ್ಲಿ ಘರ್ಷಣೆ ಉಂಟಾಗಿದೆ. ಘರ್ಷಣೆಯಲ್ಲಿ ತನ್ನ ಹಲವಾರು ಕಾರ್ಯಕರ್ತರು ಸಾವನ್ನಪ್ಪಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಇತ್ತ ಟಿಎಂಸಿ ಕಾರ್ಯಕರ್ತರೂ ಕೂಡಾ ಮೃತಪಟ್ಟಿದ್ದಾರೆ ಎಂದು ಟಿಎಂಸಿ ಹೇಳಿಕೊಂಡಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications