ಬಂಗಾಳ ಹಿಂಸಾಚಾರ: ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ
ಕೋಲ್ಕತ್ತಾ, ಜೂ.19: ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣಾ ಹಿಂಸಾಚಾರದಲ್ಲಿ ಹತ್ಯೆಗೀಡಾದ ಇಬ್ಬರು ಬಿಜೆಪಿ ಕಾರ್ಯಕರ್ತರ ಕುಟುಂಬಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯಿಂದ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಶುಕ್ರವಾರ ಹಿಂದಕ್ಕೆ ಸರಿದಿದ್ದಾರೆ.
ನ್ಯಾಯಮೂರ್ತಿ ಬ್ಯಾನರ್ಜಿ ರಜಾ ನ್ಯಾಯಪೀಠದ ಮುಖ್ಯಸ್ಥರಾಗಿದ್ದರು, ಈ ಪೀಠದಲ್ಲಿ ನ್ಯಾಯಮೂರ್ತಿ ಎಂ.ಆರ್. ಶಾ ಕೂಡಾ ಇದ್ದಾರೆ. ''ಈ ಪ್ರಕರಣವನ್ನು ಮಂಗಳವಾರ ವಿಚಾರಣೆಗೆ ಮತ್ತೊಂದು ನ್ಯಾಯಪೀಠದ ಮುಂದಿರಿದಬಹುದೇ,'' ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಿನಂತಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಶಾ, "ನೋಂದಾವಣೆ ನಿರ್ಧರಿಸುತ್ತದೆ," ಎಂದು ತಿಳಿಸಿದ್ದಾರೆ.
ಈ ಪ್ರಕರಣವನ್ನು ನ್ಯಾಯಮೂರ್ತಿಗಳಾದ ವಿನೀತ್ ಸರನ್ ಮತ್ತು ಬಿ.ಆರ್. ಗವಾಯಿಯನ್ನು ಒಳಗೊಂಡ ಪೀಠ, ಬೇಸಿಗೆ ರಜಾದಿನಗಳ ಮೊದಲಾರ್ಧದಲ್ಲಿ ಮೇ ತಿಂಗಳಲ್ಲಿ ಆಲಿಸಿದೆ. ಬಳಿಕ ನ್ಯಾಯಮೂರ್ತಿ ಬ್ಯಾನರ್ಜಿ ನ್ಯಾಯಪೀಠದ ಮುಂದೆ ವಿಚಾರಣೆಗೆ ಈ ಅರ್ಜಿ ಬಂದಿದೆ.

ಬಿಸ್ವಜಿತ್ ಸರ್ಕಾರ್ ಎಂಬುವವರು ಸಲ್ಲಿಸಿದ ಈ ಅರ್ಜಿಯನ್ನು ಮೇ 18 ರಂದು ಊರ್ಜಿತಗೊಳಿಸಿದ್ದ ನ್ಯಾಯಾಲಯ ವಿಚಾರಣೆಗೆ ಸಮ್ಮತಿಸಿತ್ತು. ಈ ವಿಚಾರವಾಗಿ ಕೇಂದ್ರ ಮತ್ತು ಪಶ್ಚಿಮ ಬಂಗಾಳ ಸರ್ಕಾರದಿಂದ ಪ್ರತಿಕ್ರಿಯೆ ಕೋರಲಾಗಿತ್ತು.
ಬಿಸ್ವಜಿತ್ ಅವರ ಅಣ್ಣ ಚುನಾವಣೋತ್ತರ ಗಲಭೆಯಲ್ಲಿ ಕೊಲೆಯಾಗಿದ್ದರು. ಬಿಸ್ವಜಿತ್ ಅವರ ಜೊತೆಗೆ ಸ್ವರ್ಣಲತಾ ಅಧಿಕಾರಿ ಎಂಬುವವರೂ ಅರ್ಜಿ ಸಲ್ಲಿಸಿದ್ದಾರೆ. ಅವರ ಪತಿಯೂ ಮತದಾನ ಸಂಬಂಧಿತ ಹಿಂಸಾಚಾರದಲ್ಲಿ ಕೊಲ್ಲಲ್ಪಟ್ಟಿದ್ದರು ಎನ್ನಲಾಗಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications