ಸಾ.ರಾ ಮಹೇಶ್ ಅವರಿಗೆ ನಾನು ಕರೆ ಮಾಡಿದ್ದು ನಿಜ: ಡಿ.ಕೆ ಶಿವಕುಮಾರ್
ಕೋಲಾರ, ಮಾರ್ಚ್ 1: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಸೋಮವಾರ ಕೋಲಾರಕ್ಕೆ ಆಗಮಿಸಿದ್ದು, ಕೋಲಾರ ಗಡಿ ರಾಮಸಂದ್ರ ಬಳಿ ಡಿಕೆ ಶಿವಕುಮಾರ ಅವರಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಸೇರಿದಂತೆ ನೂರಾರು ಕಾರ್ಯಕರ್ತರಿಂದ ಅದ್ಧೂರಿ ಸ್ವಾಗತ ಕೋರಲಾಯಿತು.
ಬೃಹತ್ ಹಾರ ಹಾಕಿ, ಬೆಳ್ಳಿ ಗದೆ ನೀಡಿ ಡಿಕೆಶಿಯನ್ನು ಸ್ವಾಗತಿಸಿ, ತೆರೆದ ವಾಹದಲ್ಲಿ ಕೋಲಾರದವರೆಗೆ ಮೆರವಣಿಗೆ ಮಾಡಿದರು. ನಂತರ ಮುಳಬಾಗಿಲು ತಾಲೂಕಿನ ಕುರುಡುಮಲೆ ವಿನಾಯಕ ದೇವಾಲಯಕ್ಕೆ ಭೇಟಿ ನೀಡಿದರು. ಡಿ.ಕೆ ಶಿವಕುಮಾರ್ ಅವರಿಗೆ ಕೋಲಾರ ಕಾಂಗ್ರೆಸ್ ಉಸ್ತುವಾರಿ ರಾಮಲಿಂಗಾರೆಡ್ಡಿ ಸಾಥ್ ನೀಡಿದರು.
13 ಕೋಟಿ ಜನರಿಗೆ ಉದ್ಯೋಗ ಸೃಷ್ಟಿ ಮಾಡಬೇಕಿತ್ತು
ಈ ವೇಳೆ ಕೋಲಾರದಲ್ಲಿ ಮಾತನಾಡಿದ ಮಾಜಿ ಸಚಿವ ರಾಮಲಿಂಗರೆಡ್ಡಿ, "ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಜನ ಇವರ ಆಡಳಿತವನ್ನು ನೋಡಿದ್ದಾರೆ. ಕಳೆದ ಆರೂವರೆ ವರ್ಷದಿಂದ ಅಧಿಕಾರ ನಡೆಸಿದ ಬಿಜೆಪಿ, ಈವರೆಗೆ 13 ಕೋಟಿ ಜನರಿಗೆ ಉದ್ಯೋಗ ಸೃಷ್ಟಿ ಮಾಡಬೇಕಿತ್ತು, ಆದರೆ ಅದ್ಯಾವುದು ಅಗಿಲ್ಲವೆಂದು'' ಕಿಡಿಕಾರಿದರು.
ಅಂದು ಎಸ್.ಎಂ.ಕೃಷ್ಣ, ಇಂದು ಡಿಕೆಶಿ: ರಾಜಕೀಯ ಗುರು ಸಾಗಿದ ದಾರಿಯಲ್ಲೇ ಹೊರಟ ಕೆಪಿಸಿಸಿ ಅಧ್ಯಕ್ಷರು
ದಿನಸಿ ವಸ್ತುಗಳ ಬೆಲೆ ಗಗನಕ್ಕೇರಿದೆ
"ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ದಿನಸಿ ವಸ್ತುಗಳ ಬೆಲೆ ಗಗನಕ್ಕೇರಿದೆ. ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ'' ಎಂದು ಕೋಲಾರದ ರಾಮಸಂದ್ರ ಗಡಿಯಲ್ಲಿ ರಾಮಲಿಂಗರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.
ನಂತರ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿ, "ಪಕ್ಷ ಸಂಘಟನೆ ಮಾಡುವ ನಿಟ್ಟಿನಲ್ಲಿ ಇಂದು ಕುರುಡುಮಲೆ ವಿನಾಯಕನಿಗೆ ಪೂಜೆ ಸಲ್ಲಿಸಲಾಗಿದೆ. 1999 ರಲ್ಲಿ ಎಸ್.ಎಂ ಕೃಷ್ಣ ಮಾದರಿಯಲ್ಲಿ ನಾನು ಪಾಂಚಜನ್ಯ ಮೊಳಗಿಸಲಿದ್ದೇನೆ. ಇನ್ನು ಮೈಸೂರು ಕಾಂಗ್ರೆಸ್ ಭಿನ್ನಮತದ ಕುರಿತು ಶಾಸಕ ತನ್ವೀರ್ ಸೇಠ್ ಅವರನ್ನು ಭೇಟಿ ಮಾಡಿ ಚರ್ಚೆ ಮಾಡುತ್ತೇನೆ'' ಎಂದರು.
ಸಿಎಂ ಸ್ಥಾನಕ್ಕೆ ಪೈಪೋಟಿ ಇಲ್ಲ
"ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಸ್ಥಾನಕ್ಕೆ ಪೈಪೋಟಿ ಇಲ್ಲ, ಮೊದಲು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಬಿಜೆಪಿಯವರಿಗೆ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಅಂತ ಅರ್ಥವಾಗಿದೆ, ಬಹಳ ಸಂತೋಷ. ಈ ನಾಡಿನ ಜನತೆ ಮತ್ತೆ ಅಧಿಕಾರ ಹಿಡಿಯುತ್ತಾರೆ'' ಎಂದು ತಿಳಿಸಿದರು.
"ಎಲ್ಲಿ ಸೊತ್ತಿದೇವೋ ಅಲ್ಲಿ ಪಕ್ಷ ಸಂಘಟನೆ ಮಾಡುತ್ತೇವೆ. ಸಾ.ರಾ ಮಹೇಶ್ ಅವರಿಗೆ ನಾನು ಕರೆ ಮಾಡಿದ್ದು ನಿಜ. ನಮಗೆ ಅವರು ಹಿಂದೆ ಮಾತು ಕೊಟ್ಟಿದ್ದರು. ಈ ವರ್ಷ ಮೈತ್ರಿ ಮುಂದುವರೆಯಬೇಕಾಗಿತ್ತು, ಅಧಿಕಾರ ನಮಗೆ ಬಿಟ್ಟು ಕೊಡಬೇಕಾಗಿತ್ತು. ಅದನ್ನು ನಡೆಸಿಕೊಡುತ್ತಾರೆ ಅಂತ ನಂಬಿದ್ದೆ'' ಎಂದು ಮೈಸೂರು ಮೇಯರ್ ಚುನಾವಣೆ ಕುರಿತು ನಡೆದ ಮಾತುಕತೆಯನ್ನು ಬಿಚ್ಚಿಟ್ಟರು.
Recommended Video
ತನ್ವೀರ್ ಸೇಠ್ ಅವರಿಗೆ ಬುಲಾವ್
"ಮೈಸೂರು ಮೇಯರ್ ಹಾಗೂ ಉಪ ಮೇಯರ್ ಗೊಂದಲದ ಬಗ್ಗೆ ಮಾತನಾಡಲು ತನ್ವೀರ್ ಸೇಠ್ ಅವರಿಗೆ ಬುಲಾವ್ ಕೊಟ್ಟಿದ್ದೇನೆ. ಇದು ಸಣ್ಣ ವಿಚಾರ, ನಾವು ಅದನ್ನು ಬಗೆಹರಿಸಿಕೊಳ್ಳುತ್ತೇವೆ. ಸ್ಥಳೀಯ ರಾಜಕೀಯದಲ್ಲಿ ಈ ರೀತಿ ಇದ್ದೇ ಇರುತ್ತದೆ. ಮಾಜಿ ಸಿಎಂ ಸಿದ್ದರಾಮಯ್ಯನವರು ದೆಹಲಿಗೆ ಮದುವೆಗೆಂದು ಹೋಗಿದ್ದಾರೆ ಅಷ್ಟೇ. ನಾನು ಹೋಗಬೇಕಾಗಿತ್ತು, ನಮ್ಮ ಮನೆ ಕಾರ್ಯಕ್ರಮ ಇದ್ದಿದ್ದರಿಂದ ಹೋಗಲು ಆಗಲಿಲ್ಲ'' ಎಂದು ಡಿ.ಕೆ ಶಿವಕುಮಾರ್ ಸ್ಪಷ್ಟಪಡಿಸಿದರು.