ಉತ್ತರಕನ್ನಡ ಎಸ್ಪಿ ವರ್ಗಾವಣೆಗೆ ತೆರೆಮರೆಯ ಪ್ರಯತ್ನ?
ಕಾರವಾರ, ಜುಲೈ 04; ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿರಿ ವರ್ಗಾವಣೆಗೆ ತೆರೆಮರೆಯ ಪ್ರಯತ್ನ ನಡೆಯುತ್ತಿದೆ ಎಂಬ ಸುದ್ದಿಗಳು ಹಬ್ಬಿವೆ. ಕಳೆದ ಒಂದೂವರೆ ವರ್ಷದಿಂದ ಶಿವಪ್ರಕಾಶ್ ದೇವರಾಜು ಎಸ್ಪಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.
ಈ ಹಿಂದೆ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ವಿನಾಯಕ ಪಾಟೀಲ್ 2019ರ ಆಗಸ್ಟ್ನಲ್ಲಿ ವರ್ಗಾವಣೆಯಾದ ಬಳಿಕ ಶಿವಪ್ರಕಾಶ್ ದೇವರಾಜು ಜಿಲ್ಲೆಗೆ ನಿಯೋಜನೆಗೊಂಡಿದ್ದರು. ಎರಡು ವರ್ಷಗಳ ಕಾಲ ಅವರನ್ನು ವರ್ಗಾವಣೆ ಮಾಡಲಾಗುವುದಿಲ್ಲ ಎನ್ನಲಾಗಿತ್ತು.
ಆದರೆ ಕಳೆದ ಒಂದು ತಿಂಗಳಿನಿಂದ ಎಸ್ಪಿ ವರ್ಗಾವಣೆಗಾಗಿ ಪ್ರಕ್ರಿಯೆಗಳು ಜೋರಾಗಿಯೇ ನಡೆಯುತ್ತಿದೆ ಎಂಬ ಸುದ್ದಿ ಹಬ್ಬಿದೆ. ಕಳೆದ ತಿಂಗಳು ಹಲವು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು. ಆ ಪಟ್ಟಿಯಲ್ಲಿ ಉತ್ತರ ಕನ್ನಡ ಜಿಲ್ಲೆಗೆ ನೂತನ ಪೊಲೀಸ್ ವರಿಷ್ಠಾಧಿಕಾರಿ ಬರಲಿದ್ದಾರೆ ಎನ್ನಲಾಗಿತ್ತು.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಎಎಸ್ಪಿಯಾಗಿದ್ದ ಐಪಿಎಸ್ ಅಧಿಕಾರಿಯೊಬ್ಬರು ಜಿಲ್ಲೆಗೆ ಬರಲು ಪ್ರಯತ್ನ ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಅಂತಿಮವಾಗಿ ಶಿವಪ್ರಕಾಶ್ ದೇವರಾಜು ವರ್ಗಾವಣೆ ಮಾಡಿರಲಿಲ್ಲ. ಪ್ರಸ್ತುತ ಶಿವಪ್ರಕಾಶ್ ದೇವರಾಜು ಜಿಲ್ಲೆಗೆ ಬಂದು ಎರಡು ವರ್ಷ ಪೂರ್ಣಗೊಳ್ಳಲು ಇನ್ನು ಕೆಲವು ತಿಂಗಳುಗಳಿದ್ದು, ಇದಾದ ನಂತರ ವರ್ಗಾವಣೆ ಮಾಡಲಿದ್ದಾರೆ ಎಂದೂ ಕೂಡ ಹೇಳಲಾಗಿತ್ತು.
ಆದರೆ, ಅಷ್ಟರೊಳಗೇ ಅವರನ್ನು ವರ್ಗಾಯಿಸಿ ಜಿಲ್ಲೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ದೇವರಾಜ್ರನ್ನು ಎಸ್ಪಿಯಾಗಿ ನಿಯೋಜಿಸಲಾಗುತ್ತದೆ ಎಂಬ ಗುಮಾನಿ ಕೆಲ ದಿನಗಳಿಂದ ಮತ್ತೆ ಸುದ್ದಿಯಲ್ಲಿದೆ.
ಹಾವೇರಿ ಜಿಲ್ಲೆಯಲ್ಲಿ ಎಸ್ಪಿಯಾಗಿದ್ದ ದೇವರಾಜ್ ಕಳೆದ ತಿಂಗಳು ವರ್ಗಾವಣೆಯಾಗಿದ್ದರು. ಸದ್ಯ ಜಿಲ್ಲಾ ಉಸ್ತುವಾರಿ ಸಚಿವರು ದೇವರಾಜ್ಗೆ ಜಿಲ್ಲೆಗೆ ಬರಲು ಹಸಿರು ನಿಶಾನೆ ತೋರಿದ್ದಾರೆ ಎಂಬ ಮಾತುಗಳು ಇವೆ. ಇನ್ನು ಒಂದು ವಾರದಲ್ಲಿ ಈ ಬಗ್ಗೆ ಸ್ಪಷ್ಟ ಚಿತ್ರಣ ಹೊರಬೀಳುವ ಸಾಧ್ಯತೆ ಇದೆ.
ಜನಸ್ನೇಹಿ ಅಧಿಕಾರಿ; ಶಿವಪ್ರಕಾಶ್ ದೇವರಾಜು ಜಿಲ್ಲೆಗೆ ಎಸ್ಪಿಯಾಗಿ ಬಂದ ನಂತರ ಹತ್ತು ಹಲವು ಸಮಸ್ಯೆಗಳು ಎದುರಾಗಿತ್ತು. ಅದರಲ್ಲೂ ಕೋವಿಡ್ ಮೊದಲ ಹಾಗೂ ಎರಡನೇ ಅಲೆ ವೇಳೆಯಲ್ಲಿ ಜನರನ್ನು ಮನೆಯಿಂದ ಹೊರಗೆ ಬರದಂತೆ ತಡೆದು ಕೋವಿಡ್ ಕಡಿವಾಣಕ್ಕೆ ಶ್ರಮವಹಿಸುವಲ್ಲಿ ಶಿವಪ್ರಕಾಶ್ ದೇವರಾಜು ಕಾರ್ಯ ಪ್ರಮುಖವಾಗಿತ್ತು.
ರಾಜ್ಯದಲ್ಲಿಯೇ ಮೊದಲ ಬಾರಿಗೆ ಎನ್ನುವಂತೆ ಸುಮಾರು 30 ವರ್ಷಗಳವರೆಗಿನ ಹಿಂದಿನ ಪ್ರಕರಣಗಳಲ್ಲೂ ತಲೆಮರೆಸಿಕೊಂಡಿದ್ದ ಆರೋಪಿಗಳ ಬಂಧನಕ್ಕೆ ಜಿಲ್ಲಾ ಪೊಲೀಸ್ ಇಲಾಖೆ ಪ್ರಯತ್ನಕ್ಕೆ ಇಳಿದಿದ್ದು, ಸುಮಾರು 25ಕ್ಕೂ ಅಧಿಕ ಆರೋಪಿಗಳನ್ನ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸುವಲ್ಲಿ ಯಶಸ್ವಿಯಾಗಿದ್ದರು.
ಈ ವಿಚಾರ ರಾಜ್ಯದ ಗಮನ ಸೆಳೆದಿತ್ತು. ಅಲ್ಲದೇ ಜಿಲ್ಲೆಯಲ್ಲಿ ಓಸಿ, ಮಟ್ಕಾ ಮಟ್ಟಾ ಹಾಕಲು, ಡ್ರಗ್ಸ್ ಪ್ರಕರಣಗಳನ್ನು ಭೇದಿಸಲು, ಅಕ್ರಮ ಜಾನುವಾರು ಸಾಗಾಟ ತಡೆಯಲು ಶಿವಪ್ರಕಾಶ್ ದೇವರಾಜು ಉತ್ತಮವಾಗಿ ತಂಡವನ್ನು ಸಜ್ಜುಗೊಳಿಸಿದ್ದರು.
ಇತ್ತೀಚಿಗೆ ದೇಶದ ಪೌರತ್ವ ಇಲ್ಲದೇ ನೆಲೆಸಿದ್ದ ಪಾಕಿಸ್ತಾನಿ ಮಹಿಳೆಯನ್ನು ಭಟ್ಕಳದಲ್ಲಿ ವಶಕ್ಕೆ ಪಡೆಯುವ ಮೂಲಕ ದೇಶದ ಗಮನವನ್ನು ಕೂಡ ಸೆಳೆದಿದ್ದರು.












Click it and Unblock the Notifications