ರೆಸಾರ್ಟ್ ರಾಜಕೀಯ ನಾಡಿನ ಸಂಸ್ಕೃತಿ ಎಂದ ಸಚಿವ ಹೆಬ್ಬಾರ್
ಕಾರವಾರ, ನವೆಂಬರ್ 1: ರೆಸಾರ್ಟ್ ರಾಜಕೀಯ ಎನ್ನುವುದು ಕಾಂಗ್ರೆಸ್, ಬಿಜೆಪಿಯ ಸಂಸ್ಕೃತಿಯಾಗಿ ಉಳಿದಿಲ್ಲ. ಈಗ ಅದು ನಾಡಿನ ಸಂಸ್ಕೃತಿಯೇ ಆಗಿದೆ ಎಂದು ಕಾರ್ಮಿಕ ಹಾಗೂ ಸಕ್ಕರೆ ಖಾತೆ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಹೇಳಿದ್ದಾರೆ.
ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣದ ಬಳಿಕ ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರ ಹತಾಶೆಯ ಸ್ಥಿತಿಗೆ ಅನುಗುಣವಾಗಿ ಬಿಜೆಪಿ ತನ್ನ ಸದಸ್ಯರನ್ನು ತನ್ನ ಬಳಿ ಇಟ್ಟುಕೊಳ್ಳುವುದು ಅನಿವಾರ್ಯವಾಗಿದೆ. ಹಾಗಾಗಿ ರೆಸಾರ್ಟ್ ನಲ್ಲಿ ಇಟ್ಟುಕೊಂಡಿದ್ದೇವೆ. ಹಾಗಂತ ಸೋತ ರಾಜಕಾರಣ ಹಿಂದೆಯೂ ಆಗಿದೆ, ಮುಂದೆಯೂ ಆಗಲಿದೆ ಎಂದಿದ್ದಾರೆ.
ಯಾವ ಪಕ್ಷದಲ್ಲಿ ರೆಸಾರ್ಟ್ ರಾಜಕಾರಣ ಆಗಿಲ್ಲ? ಈ ಹಿಂದೆ ನಾನೇ ಕಾಂಗ್ರೆಸ್ ನಲ್ಲಿದ್ದಾಗ, ಬಿ.ಎಸ್ ಯಡಿಯೂರಪ್ಪ ಅವರು ಪರಾಭವಗೊಂಡಾಗ, ಬಹುಮತ ಸಾಬೀತುಪಡಿಸಲು ಕಾಂಗ್ರೆಸ್ ನವರು ನಮ್ಮನ್ನೂ ಹೈದರಾಬಾದ್ ರೆಸಾರ್ಟ್ ನಲ್ಲಿಟ್ಟುಕೊಂಡಿದ್ದರು. ರೆಸಾರ್ಟ್ ರಾಜಕಾರಣ ಎನ್ನುವುದು ಕಾಂಗ್ರೆಸ್ ಸಂಸ್ಕೃತಿ, ಬಿಜೆಪಿ ಸಂಸ್ಕೃತಿಯಲ್ಲ. ಈಗ ಅದು ನಾಡಿನ ಸಂಸ್ಕೃತಿಯಾಗಿಬಿಟ್ಟಿದೆ ಎಂದು ಹೇಳಿದರು.

ಕಾರವಾರ ಶಾಸಕಿ ರೂಪಾಲಿ ನಾಯ್ಕ ನೇತೃತ್ವದಲ್ಲಿ ಅಂಕೋಲಾ ಹಾಗೂ ಕಾರವಾರದ ನಗರಸಭೆ ಸದಸ್ಯರನ್ನು ಗೋವಾದ ಕಾನಕೋಣ ರೆಸಾರ್ಟ್ ನಲ್ಲಿ ಇಡಲಾಗಿದೆ. ನವೆಂಬರ್ ಒಂದರಂದು ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆಯುವ ಕಾರಣ ಈ ಕ್ರಮಕ್ಕೆ ಶಾಸಕಿ ಮುಂದಾಗಿದ್ದರು. ಇದಕ್ಕೆ ಸಂಬಂಧಿಸಿದಂತೆ ಸಚಿವ ಹೆಬ್ಬಾರ್ ಪ್ರತಿಕ್ರಿಯೆ ನೀಡಿದ್ದಾರೆ.












Click it and Unblock the Notifications