ಪಾರಂಪರಿಕ ಪಟ್ಟಿಗೆ ಸೇರುವುದೇ ಕುಮಟಾದಲ್ಲಿ ತಯಾರಾದ ಉಪ್ಪು?
ಕಾರವಾರ, ನವೆಂಬರ್ 27: ಜಿಲ್ಲೆಯ ಕುಮಟಾ ತಾಲೂಕಿನ ಸಾಣಿಕಟ್ಟಾ ಪ್ರದೇಶದಲ್ಲಿ ಉತ್ಪಾದಿಸಲಾಗುವ ಉಪ್ಪನ್ನು ಪಾರಂಪರಿಕ ಪಟ್ಟಿಗೆ ಸೇರ್ಪಡೆಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಜೀವವೈವಿಧ್ಯ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಆಶೀಸರ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಂಭಾಂಗಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, "ಸ್ವಾತಂತ್ರ್ಯ ಪೂರ್ವದಿಂದಲೂ ಇಲ್ಲಿ ತಯಾರಿಸಲಾಗುವ ಉಪ್ಪು ತನ್ನದೇ ವೈಶಿಷ್ಟ್ಯ ಹೊಂದಿದೆ. ಇದನ್ನು ಜಿಲ್ಲೆಯ ಆಸ್ತಿಯೆಂದು ಹೇಳಬಹುದು. ಇದು ನೇರವಾದ ಕೃಷಿ ಕಾರ್ಯವಲ್ಲದಿದ್ದರೂ ಈ ಭಾಗದ ಗ್ರಾಮೀಣ ಜನರಿಗೆ ಉದ್ಯೋಗ ನೀಡುವಂತಹ ಉದ್ಯಮವಾಗಿದೆ. ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಪಾರಂಪರಿಕ ಪಟ್ಟಿಗೆ ಸೇರಿಸಿ ಮಾನ್ಯತೆ ನೀಡಬೇಕಾಗಿದೆ" ಎಂದರು.
ಅರಣ್ಯ ಕಾಯಿದೆಯಂತೆ ಜೀವವೈವಿಧ್ಯವೂ ಒಂದು ಕಾಯಿದೆ ಆಗಿದ್ದು, ಈ ಕಾಯಿದೆ ಅನ್ವಯ ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ತಳಿಗಳನ್ನು ರಕ್ಷಣೆ ಮಾಡಬೇಕಾಗುತ್ತದೆ. ಇದರನ್ವಯ ಜಿಲ್ಲೆಯಲ್ಲಿ ವಿಶೇಷವಾಗಿ ಬೆಳೆಯುವ ಕರಿ ಇಷಾಡು ಮಾವನ್ನು ಪರಿಗಣಿಸಿ ತೋಟಗಾರಿಕೆ ಇಲಾಖೆಯ ಸಹಭಾಗಿತ್ವದಲ್ಲಿ 1 ಸಾವಿರ ಮರ ಬೆಳೆಸಲು ಕ್ರಮ ಕೈಗೊಳ್ಳಲಾಗುವುದು.

ಅಭಿವೃದ್ಧಿಗಾಗಿ ಯೋಜನೆಗಳು ಜಿಲ್ಲೆಗೆ ಬರುವುದು ಅನಿವಾರ್ಯ. ಜಿಲ್ಲೆಯಲ್ಲಿ ಈಗಾಗಲೇ ಕೆಲವು ಅಭಿವೃದ್ಧಿ ಯೋಜನೆಗಳಾಗಿ ವನೀಕರಣ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಉಳಿದಿರುವ ಪ್ರದೇಶವನ್ನು ಉಳಿಸಿಕೊಳ್ಳುವುದು ಅತ್ಯಗತ್ಯ. ಆದ್ದರಿಂದ ಕಾರವಾರವನ್ನು ಗ್ರೀನ್ ಬೆಲ್ಟಾಗಿ ಪರಿವರ್ತನೆಗೊಳಿಸಲು ಕಾರವಾರ ಅಂಕೋಲಾ ಮಧ್ಯೆ ವನೀಕರಣ ಯೋಜನೆ ರೂಪಿಸಲಾಗುವುದು ಎಂದು ಮಾಹಿತಿ ನೀಡಿದರು.
ಜೀವವೈವಿಧ್ಯ ಮಂಡಳಿ ಸದಸ್ಯ ಡಾ.ಪ್ರಕಾಶ ಮೇಸ್ತಾ ಹಾಗೂ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿಎಚ್.ಕೆ. ಸೇರಿದಂತೆ ಹಲವರು ಹಾಜರಿದ್ದರು.












Click it and Unblock the Notifications