ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಉತ್ಸವ: ಸಮುದ್ರದಾಳಕ್ಕಿಳಿದ ದೇಶಪಾಂಡೆ
ಕಾರವಾರ, ಜನವರಿ 06: ಭಟ್ಕಳದ ಮುರುಡೇಶ್ವರ ಸಮೀಪದ ನೇತ್ರಾಣಿ ದ್ವೀಪದ ಬಳಿ ಆಯೋಜಿಸಿರುವ ಎರಡು ದಿನಗಳ ಅಂತರಾಷ್ಟ್ರೀಯ ಸ್ಕೂಬಾ ಉತ್ಸವಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಆರ್.ವಿ.ದೇಶಪಾಂಡೆ ನಿನ್ನೆ (ಜ.06) ಚಾಲನೆ ನೀಡಿದರು.
ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಹಾಗೂ ಸಂಘ- ಸಂಸ್ಥೆಗಳ ಆಶ್ರಯದಲ್ಲಿ ಈ ಸುಂದರ ಸ್ಕೂಬಾ ಡೈವಿಂಗ್ ಉತ್ಸವನ್ನು ಆಯೋಜಿಸಲಾಗಿದೆ.
ಇದರ ಜತೆಗೆ ಸ್ಥಳೀಯ ಸಮುದಾಯ, ಮೀನುಗಾರರು, ಆಳ ಸಮುದ್ರ, ಕಡಲತೀರದ ಕುರಿತ ಕಿರು ಚಿತ್ರ ಪ್ರದರ್ಶನ, ಛಾಯಾಚಿತ್ರ ಪ್ರದರ್ಶನ, ಸ್ನೋರ್ಕಲಿಂಗ್ ಹಾಗೂ ಜಲ ಕ್ರೀಡೆಗಳನ್ನೂ ಆಯೋಜಿಸಲಾಗಿದೆ.
ಆಳ ಸಮುದ್ರದ ಜೀವ ರಾಶಿಗಳ ಕಣ್ತುಂಬಿಕೊಳ್ಳಲು ಬನ್ನಿ ಸ್ಕೂಬಾ ಉತ್ಸವಕ್ಕೆ
ಸಮುದ್ರದ ಆಳಕ್ಕಿಳಿದು ಅಪರೂಪದ ಜೀವಿಗಳನ್ನು ಕಣ್ತುಂಬಿಕೊಳ್ಳುವ ಈ ಸ್ಕೂಬಾ ಡೈವಿಂಗ್ ಉತ್ಸವಕ್ಕೆ ಜನರು ಮನಸೋತಿದ್ದು ಸಾವಿರಾರು ಜನರು ನೇತ್ರಾಣಿ ದ್ವೀಪದತ್ತ ಹರಿದು ಬರುತ್ತಿದ್ದಾರೆ.
ಅಂತರಾಷ್ಟ್ರೀಯ ಪ್ರವಾಸಿಗರ ಆಗಮನ
ಈ ಉತ್ಸವ ಸಂಪೂರ್ಣ ಜವಾಬ್ದಾರಿಯನ್ನು ಪುಣೆಯ ಫಿನ್ಕಿಕ್ ಅಡ್ವೆಂಚರ್ಸ್ ಸಂಸ್ಥೆ ವಹಿಸಿಕೊಂಡಿದೆ. ಬೆಂಗಳೂರು, ಪುಣೆ, ಮುಂಬೈ, ದೆಹಲಿ, ಯುರೋಪ್, ಅಮೆರಿಕಾ, ಜರ್ಮನಿ ಹಾಗೂ ನೆದರ್ಲ್ಯಾಂಡ್ ಮೂಲದ ಸುಮಾರು 150 ಮಂದಿ ಉತ್ಸವದಲ್ಲಿ ಪಾಲ್ಗೊಂಡಿದ್ದಾರೆ.
ಡೈವ್ ಗೋವಾ, ಮುಂಬೈನ ವೆಸ್ಟ್ ಕೋಸ್ಟ್ ಮತ್ತು ಮುರ್ಡೇಶ್ವರದ ನೇತ್ರಾಣಿ ಅಡ್ವೆಂಚರ್ ಸಂಸ್ಥೆಯ ಸ್ಕೂಬಾ ಇನ್ಸ್ಟ್ರಕ್ಟರ್ಗಳು ಅವರನ್ನು ಕರೆದೊಯ್ದು, ಸಮುದ್ರದಾಳದ ಜೀವಿ ಪ್ರಪಂಚವನ್ನು ಪರಿಚಯಿಸಿದರು.
ಸ್ಕೂಬಾ ಡೈವಿಂಗ್ ಮಾಡಿದ ದೇಶಪಾಂಡೆ
ಮುರುಡೇಶ್ವರದ ಕಡಲತೀರದಿಂದ ಬೋಟಿನಲ್ಲಿ ನೇತ್ರಾಣಿ ದ್ವಿಪಕ್ಕೆ ತೆರಳಿದ ಸಚಿವ ಆರ್.ವಿ.ದೇಶಪಾಂಡೆ ಸುಮಾರು ಹತ್ತು ನಿಮಿಷ ಸಮುದ್ರದಲ್ಲಿದ್ದು ಸ್ಕೂಬಾ ಸೊಬಗನ್ನು ಸವಿದರು.
ಜತೆಗೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪ್ರಸನ್ನ, ಜಿಲ್ಲಾ ಪಂಚಾಯಿತಿ ಸಿಇಒ ಎಲ್.ಚಂದ್ರಶೇಖರ ನಾಯಕ ಸೇರಿದಂತೆ ವಿವಿಧ ಅಧಿಕಾರಿಗಳು ಅಲ್ಲಿ ಸ್ಕೂಬಾ ಡೈವಿಂಗ್ ಮಾಡುವ ಮೂಲಕ ಸಮುದ್ರದಾಳದ ಅಪರೂಪದ ಜೀವಿ ಪ್ರಪಂಚಗಳನ್ನು ಕಣ್ತುಂಬಿಕೊಂಡರು.
ಬೃಹತ್ ಕೈಗಾರಿಕೆಗಳು ಉತ್ತರಕನ್ನಡಕ್ಕೆ ಮಾರಕ
'ಬೃಹತ್ ಕೈಗಾರಿಕೆಗಳಿಂದಾಗಿ ಉತ್ತರಕನ್ನಡದ ಪರಿಸರಕ್ಕೆ ಹಾನಿಯುಂಟಾಗಿ ಮಾಲಿನ್ಯದ ಸಮಸ್ಯೆ ತಲೆದೋರಬಹುದು. ಹೀಗಾಗಿ ಇರುವ ನೈಸರ್ಗಿಕ ಸಂಪನ್ಮೂಲವನ್ನೇ ಬಳಿಸಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಮೂಲಕ ಜಿಲ್ಲೆಯಲ್ಲಿ ಉದ್ಯೋಗವಾಕಾಶ ಸೃಷ್ಟಿಸುತ್ತಿದ್ದೇವೆ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಉತ್ಸವಕ್ಕೆ ಚಾಲನೆ ನೀಡಿ ಹೇಳಿದರು.
ಕನಿಷ್ಟ ವಿದ್ಯಾರ್ಹತೆ ಹೊಂದಿರುವವರಿಗೂ ಉದ್ಯೋಗ
'ದೇಶದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಅದು ದೊಡ್ಡ ಸಮಸ್ಯೆಯಾಗಿ ತಲೆದೂರಿದೆ. ಕನಿಷ್ಠ ವಿದ್ಯಾರ್ಹತೆ ಹೊಂದಿರುವವರಿಗೂ ಪ್ರವಾಸೋದ್ಯಮದಲ್ಲಿ ಉದ್ಯೋಗವಾಕಾಶ ನೀಡಬಹುದಾಗಿದ್ದು, ಈ ಬಗ್ಗೆ ಚಿಂತನೆ ನಡೆಸಬೇಕಿದೆ' ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಪ್ರತೀ ವರ್ಷ ಸ್ಕೂಬಾ ಉತ್ಸವ
'ನೇತ್ರಾಣಿಯಲ್ಲಿ ಅಂತರಾಷ್ಟ್ರೀಯ ಸ್ಕೂಬಾ ಉತ್ಸವವನ್ನು ಆಯೋಜಿಸಬೇಕು ಎಂಬ ಆಸೆ ಬಹಳ ವರ್ಷದಿಂದ ಇತ್ತು. ಅದನ್ನು ಈಗಿನ ಜಿಲ್ಲಾಧಿಕಾರಿ ಆಸಕ್ತಿ ವಹಿಸಿ, ಎಲ್ಲರ ಸಹಕಾರದೊಂದಿಗೆ ನೆರವೇರಿಸಿದ್ದಾರೆ. ಇಲ್ಲಿನ ಸ್ಕೂಬಾ ಉತ್ಸವ ಪ್ರತೀ ವರ್ಷ ನಡೆಯಬೇಕು. ಅದಕ್ಕಾಗಿ ಒಂದು ದಿನವನ್ನು ನಿಗದಿಪಡಿಸಿ, ಪ್ರತೀ ವರ್ಷ ಅದನ್ನು ಆಚರಿಸಬೇಕು' ಎಂದು ತಿಳಿಸಿದರು.
ಕೇಂದ್ರ ಸಚಿವರ ಜತೆ ಸಿಆರ್ ಝೆಡ್ ಸಂಬಂಧ ಚರ್ಚೆ
'ವಿಶ್ವವನ್ನೇ ಆಕರ್ಷಿಸುವ ಶಕ್ತಿ ಉತ್ತರಕನ್ನಡ ಜಿಲ್ಲೆಗಿದೆ. ಸಿಆರ್ಝೆಡ್ ನಿಯಮ ಸಡಿಲಿಕೆಯಾದರೆ ಜಿಲ್ಲೆ ಇನ್ನಷ್ಟು ಅಭಿವೃದ್ಧಿ ಕಾಣಲಿದೆ. ಅದಕ್ಕಾಗಿ ದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭಾನುವಾರ ಭೇಟಿ ಮಾಡಿ ಚರ್ಚಿಸಲಿದ್ದೇನೆ' ಎಂದರು.
ಹೊನ್ನಾವರ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ವಿ ವಸಂತರೆಡ್ಡಿ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗೇರ, ಕುಮಟಾ ಶಾಸಕಿ ಶಾರದಾ ಶೆಟ್ಟಿ ಕಾರ್ಯಕ್ರಮದ ಉದ್ಘಾಟನೆ ವೇಳೆ ಹಾಜರಿದ್ದರು.