ಮೃತ ಪರೇಶ್ ಮೇಸ್ತಾ ಮನೆಗೆ ಭೇಟಿ ನೀಡಿದ ಅಮಿತ್ ಶಾ
ಕಾರವಾರ, ಫೆ. 22: "ಯಾವ ತಪ್ಪು ಮಾಡದ ಪರೇಶ್ ಮೇಸ್ತಾನನ್ನು ಹಿಂಸಾತ್ಮಕ ರೀತಿಯಲ್ಲಿ ಕೊಲೆ ಮಾಡಲಾಗಿದೆ. ಹತ್ಯೆ ನಡೆದು 70 ದಿನ ಕಳೆದರೂ ಈ ಬಗ್ಗೆ ಸೂಕ್ತ ತನಿಖೆ ನಡೆದಿಲ್ಲ. ಹೀಗಾಗಿ ರಾಜ್ಯ ಸರ್ಕಾರದ ಮೇಲೆ ತಮಗೆ ವಿಶ್ವಾಸವಿಲ್ಲ," ಎಂದು ಪರೇಶ್ ಮೇಸ್ತಾ ತಂದೆ ಕಮಲಾಕರ ಮೇಸ್ತಾ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬಳಿ ಅಳಲು ತೋಡಿಕೊಂಡರು.
ಕರಾವಳಿ ಪ್ರವಾಸದಲ್ಲಿರುವ ಅಮಿತ್ ಶಾ ಬುಧವಾರ ಅನುಮಾನಾಸ್ಪದವಾಗಿ ಸಾವಿಗೀಡಾದ ಪರೇಶ್ ಮೇಸ್ತಾನ ಮನೆಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಅವರು ಘಟನೆಯ ಕುರಿತು ಕೂಲಂಕಷವಾಗಿ ಚರ್ಚೆ ನಡೆಸಿದರು. ಇದೇ ವೇಳೆ ಪರೇಶ್ ಪ್ರಕರಣವನ್ನು ಎನ್.ಐ.ಎಗೆ ವಹಿಸಬೇಕು ಎಂದು ತಂದೆ ಕಮಲಾಕರ್ ಮೇಸ್ತಾ ಒತ್ತಾಯಿಸಿದರು.

ಸಿಬಿಐ ಮೇಲೆ ನಂಬಿಕೆಯಿಲ್ಲ
ರಾಜ್ಯ ಸರ್ಕಾರ ತನಿಖೆಯನ್ನು ಸಿಬಿಐ ಗೆ ವಹಿಸಿದೆಯಾದರೂ ತಮಗೆ ನ್ಯಾಯ ದೊರೆಯುವ ನಂಬಿಕೆಯಿಲ್ಲ. ಈವರೆಗೆ ಯಾವ ಸಿಬಿಐ ಅಧಿಕಾರಿ ಕೂಡ ನಮ್ಮ ಮನೆಯತ್ತ ಸುಳಿದಿಲ್ಲ. ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಸಲಾಗುತ್ತಿದೆ. ಹೀಗಾಗಿ ಉನ್ನತ ಮಟ್ಟದಲ್ಲಿ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.

ಉದ್ಯೋಗಕ್ಕಾಗಿ ಮನವಿ
ಕುಟುಂಬದ ಆಧಾರವಾಗಿದ್ದ ಪರೇಶ್ ಮೇಸ್ತ ಸಾವಿನ ನಂತರ ಕುಟುಂಬ ಅತಂತ್ರ ಸ್ಥಿತಿಗೆ ತಲುಪಿದೆ. ಹೀಗಾಗಿ ಕುಟುಂಬದಲ್ಲಿ ಒಬ್ಬರಿಗೆ ಉದ್ಯೋಗ ಒದಗಿಸಬೇಕು ಎಂದು ಕಮಲಾಕರ ಮೇಸ್ತಾ ಮನವಿ ಮಾಡಿದರು. ಮಗಳು ವಿದ್ಯಾವಂತಳಾಗಿದ್ದು, ಉದ್ಯೋಗ ದೊರೆತಲ್ಲಿ ಕುಟುಂಬಕ್ಕೆ ಆಧಾರ ಸಿಗುತ್ತದೆ ಎಂದು ಕೇಳಿಕೊಂಡರು.
In Pics: ಕರಾವಳಿ ಜಿಲ್ಲೆಗಳಲ್ಲಿ ಅಮಿತ್ ಶಾ ಮಿಂಚಿನ ಸಂಚಾರ

ಪೊಲೀಸರಿಂದ ದಬ್ಬಾಳಿಕೆ
ಬಡ ಮೀನುಗಾರರ ಮೇಲೆ ಪೊಲೀಸರು ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಕಮಲಾಕರ್ ಮೇಸ್ತಾ ಮಾಧ್ಯಮದವರ ಬಳಿ ತಿಳಿಸಿದರು. ಹೊನ್ನಾವರದ ಉದ್ಯಮ ನಗರದಲ್ಲಿ ಅಮಾಯಕರನ್ನು ಬಂಧಿಸಿ ಹಿಂಸಿಸಿದ್ದಾರೆ. ಇದರಿಂದ ಅವರ ಕುಟುಂಬದವರೂ ಆಘಾತಕ್ಕೊಳಗಾಗಿದ್ದಾರೆ. ಪೊಲೀಸರು ನಡೆಸುವ ದಬ್ಬಾಳಿಕೆ ಕುರಿತು ಅಮಿತ್ ಶಾಗೆ ದೂರು ನೀಡಿರುವುದಾಗಿಯೂ ಅವರು ತಿಳಿಸಿದರು.

ಮಾಹಿತಿ ನೀಡದ ಶಾ
ಮೇಸ್ತ ಮನೆಗೆ ಶಾ ಭೇಟಿ ನೀಡಿದ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ಪ್ರಮುಖರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಮೀನುಗಾರ ಮುಖಂಡ ಉಮೇಶ ಮೇಸ್ತಾ, ಲೋಕೇಶ ಮೇಸ್ತಾ ಹೊರತುಪಡಿಸಿ ಬೇರೆಯವರಿಗೆ ಅವಕಾಶವಿರಲಿಲ್ಲ.
ಮಾಧ್ಯಮದವರು ಅಮಿತ್ ಶಾ ಅವರ ಪ್ರತಿಕ್ರಿಯೆಯನ್ನು ಕೇಳಲು ಬಂದಾಗಲೂ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ಮೃತ ಪರೇಶನ ಮನೆಗೆ ಶಾ ಭೇಟಿ ನೀಡುವ ಸುದ್ದಿ ತಿಳಿದು ಹೊನ್ನಾವರದ ತುಳಸೀ ನಗರದಲ್ಲಿರುವ ಮೇಸ್ತಾ ಮನೆ ಬಳಿ ಸಾರ್ವಜನಿಕರು ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಶಾ ಪರೇಶನ ಮನೆಗೆ ಬರುತ್ತಿದ್ದಂತೆ ಜನರು ಜೈಕಾರದೊಂದಿಗೆ ಸ್ವಾಗತಿಸಿ ಅವರನ್ನು ಬರಮಾಡಿಕೊಂಡರು.












Click it and Unblock the Notifications