ಅಮಿತ್ ಶಾ ಸೂಚನೆ ಮೀರಿ, ಅಭ್ಯರ್ಥಿ ಘೋಷಿಸಿದ ಯಡಿಯೂರಪ್ಪ!
ಬಳ್ಳಾರಿ, ಜನವರಿ 05 : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚನೆಯನ್ನು ಮೀರಿ ಬಿ.ಎಸ್.ಯಡಿಯೂರಪ್ಪ ಅಭ್ಯರ್ಥಿ ಘೋಷಣೆ ಮಾಡಿದ್ದಾರೆ. ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಕ್ಷೇತ್ರಕ್ಕೆ ನೇಮಿರಾಜ ನಾಯ್ಕ್ 2018ರ ಚುನಾವಣೆ ಅಭ್ಯರ್ಥಿಯಾಗಿದ್ದಾರೆ.
ಅಭ್ಯರ್ಥಿಗಳ ಘೋಷಣೆಗೆ ತಡೆ, ಏನಿದು ಅಮಿತ್ ಶಾ ಲೆಕ್ಕಾಚಾರ?
ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಗುರುವಾರ ಬಿಜೆಪಿಯ ಪರಿವರ್ತನಾ ಯಾತ್ರೆ ನಡೆಯಿತು. ಸಮಾವೇಶದಲ್ಲಿ ಮಾತನಾಡಿದ ಕರ್ನಾಟಕ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಅಭ್ಯರ್ಥಿ ಘೋಷಣೆ ಮಾಡಿದರು.
ಬೀದರ್ ರಾಜಕೀಯ : 3 ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಘೋಷಣೆ!
ಕಳೆದ ಭಾನುವಾರ ಬೆಂಗಳೂರಿಗೆ ಆಗಮಿಸಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪರಿವರ್ತನಾ ಯಾತ್ರೆಯಲ್ಲಿ ಯಾವ ನಾಯಕರು ಅಭ್ಯರ್ಥಿ ಘೋಷಣೆ ಮಾಡಬಾರದು ಎಂದು ಸೂಚಿಸಿದ್ದರು. ಆದರೆ, ಯಡಿಯೂರಪ್ಪ ಈ ಸೂಚನೆ ಮೀರಿ ಅಭ್ಯರ್ಥಿ ಘೋಷಣೆ ಮಾಡಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಹಗರಿಬೊಮ್ಮನಹಳ್ಳಿಯಲ್ಲಿ ಯಡಿಯೂರಪ್ಪ ಹೇಳಿದ್ದೇನು?
ಹಗರಿಬೊಮ್ಮನಹಳ್ಳಿ ಕ್ಷೇತ್ರ ಸದ್ಯ ಜೆಡಿಎಸ್ ವಶದಲ್ಲಿದೆ. ಶಾಸಕ ಭೀಮಾ ನಾಯಕ್ ಅವರು ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಿ ಪಕ್ಷದಿಂದ ಅಮಾನತುಗೊಂಡಿದ್ದಾರೆ. ಅವರು ಕಾಂಗ್ರೆಸ್ ಸೇರಲಿದ್ದು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.
ಯಡಿಯೂರಪ್ಪ ಹೇಳಿದ್ದೇನು?
ಸಮಾವೇಶದಲ್ಲಿ ಮತನಾಡಿದ ಯಡಿಯೂರಪ್ಪ, 'ಕಳೆದ ಚುನಾವಣೆಯಲ್ಲಿ ನಮಗೆ 125 ಮತಗಳ ಅಂತರದಿಂದ ಸೋಲಾಗಿತ್ತು. ಈ ಬಾರಿ ನೇಮಿರಾಜ ನಾಯ್ಕ್ ಅವರನ್ನು 20 ಸಾವಿರ ಮತಗಳ ಅಂತರದಿಂದ ಗೆಲ್ಲಿಸಬೇಕು' ಎಂದು ಮನವಿ ಮಾಡಿದರು.
ಕಳೆದ ಚುನಾವಣೆಯಲ್ಲಿ ಸೋಲು
2013ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆ.ನೇಮಿರಾಜ ನಾಯಕ್ 51,847 ಮತಗಳನ್ನು ಪಡೆದು ಸೋತಿದ್ದರು. ಜೆಡಿಎಸ್ನಿಂದ ಭೀಮಾ ನಾಯಕ್ 51,972 ಮತಗಳನ್ನು ಪಡೆದು ಗೆದಿದ್ದರು.
ಪಕ್ಷದಿಂದ ಅಮಾನತುಗೊಂಡಿದ್ದಾರೆ
ಜೆಡಿಎಸ್ ಪಕ್ಷದಿಂದ ಅಮಾನತುಗೊಂಡಿರುವ ಭೀಮಾ ನಾಯಕ್ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯವು ಸಾಧ್ಯತೆ ಇದೆ. ಏಳು ಜೆಡಿಎಸ್ ಶಾಸಕರು ರಾಹುಲ್ ಗಾಂಧಿ ಸಮ್ಮುಖದಲ್ಲಿ ಶೀಘ್ರವೇ ಪಕ್ಷಕ್ಕೆ ಸೇರಲಿದ್ದಾರೆ.
ಹಲವು ಕಡೆ ಅಭ್ಯರ್ಥಿ ಘೋಷಣೆ ಮಾಡಿದ್ದಾರೆ
ಬಿ.ಎಸ್.ಯಡಿಯೂರಪ್ಪ ತುಮಕೂರು ಜಿಲ್ಲೆಯ ತುರುವೇಕರೆ, ತಿಪಟೂರಿನಲ್ಲಿ ಮತ್ತು ಬೀದರ್ ಜಿಲ್ಲೆಯ ಭಾಲ್ಕಿ, ಬೀದರ್, ಔರಾದ್ ಹಾಗೂ ದಾವಣಗೆರೆಯ ಹೊನ್ನಾಳಿಯಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದಾರೆ.
ಅಭ್ಯರ್ಥಿ ಘೋಷಣೆ ಮಾಡಬಾರದು
ಕಳೆದ ಭಾನುವಾರ ಬೆಂಗಳೂರಿನಲ್ಲಿ ಪಕ್ಷದ ನಾಯಕರ ಜೊತೆ ಸಭೆ ನಡೆಸಿದ್ದ ಅಮಿತ್ ಶಾ, 'ಪರಿವರ್ತನಾ ಯಾತ್ರೆಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಎಲ್ಲಾ ನಾಯಕರು ಇದರಲ್ಲಿ ಪಾಲ್ಗೊಳ್ಳಬೇಕು. ಆದರೆ, ಯಾತ್ರೆಯಲ್ಲಿ ಅಭ್ಯರ್ಥಿ ಘೋಷಿಸಬಾರದು' ಎಂದು ಸೂಚಿಸಿದ್ದರು.
ಹೈಕಮಾಂಡ್ ಘೋಷಿಸಲಿದೆ
ಅಭ್ಯರ್ಥಿಗಳ ಘೋಷಣೆ ಬಗ್ಗೆ ಬಿ.ಎಸ್.ಯಡಿಯೂರಪ್ಪ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. 'ಎಲ್ಲಿ ಗೊಂದಲವಿಲ್ಲವೋ ಅಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಆದರೆ, ಎರಡು ಸಮೀಕ್ಷೆ ನಡೆದ ಬಳಿಕ ರಾಷ್ಟ್ರೀಯ ನಾಯಕರು ಘೋಷಿಸುವ ಅಭ್ಯರ್ಥಿಗಳು ಅಂತಿಮ' ಎಂದು ಯಡಿಯೂರಪ್ಪ ಹೇಳಿದ್ದದಾರೆ.