Get Updates
Get notified of breaking news, exclusive insights, and must-see stories!

ವರ್ಷಾಂತ್ಯ ವಿಶೇಷ : ನವೆಂಬರ್ ತಿಂಗಳ ರಾಜ್ಯದ ವಿದ್ಯಮಾನಗಳು

ಮಂಗಳೂರು ಜೈಲಲ್ಲಿ ಮಾರಾಮಾರಿ : ನವೆಂಬರ್ 02 : ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ನಡುವೆ ಮಾರಾಮಾರಿ ನಡೆದು, ಗಣೇಶ್ ಶೆಟ್ಟಿ ಹಾಗೂ ಮಾಡೂರು ಯೂಸುಫ್ ಎಂಬ ಕೈದಿಗಳು ಕೊಲೆಯಾದರು. ಮಾರಾಮಾರಿಯಲ್ಲಿ 5ಕ್ಕೂ ಹೆಚ್ಚು ಕೈದಿಗಳು ಗಾಯಗೊಂಡರು.

ಮೈತ್ರಿ ಮುರಿಯುವ ಮಾತನಾಡಿದ ಎಚ್ಡಿಕೆ : ನವೆಂಬರ್ 04 : 'ಎಲ್ಲಿ ಹೋದರು ಗುಂಡಿ, ಕಸದ ರಾಶಿ. ಯಾವ ಪುರುಷಾರ್ಥಕ್ಕೆ ಆಡಳಿತ ಮಾಡುತ್ತಿದ್ದೀರಿ. ಇಂತಹ ಆಡಳಿತ ನೋಡಿ ಸಾಕಾಗಿದೆ. ಇದು ಹಿಗೇಯೇ ಮುಂದುವರೆದರೆ ಬಿಬಿಎಂಪಿಯಲ್ಲಿ ನೀಡಿರುವ ಬೆಂಬಲ ವಾಪಸ್ ಪಡೆಯಬೇಕಾಗುತ್ತದೆ' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಕೆ ನೀಡಿದರು. [ಕುಮಾರಸ್ವಾಮಿ ಅವರು ಹೇಳಿದ್ದೇನು?]

november

ಸಚಿವರ ಮನೆಯಲ್ಲಿ ರಹಸ್ಯ ಕಾರ್ಯಾಚರಣೆ : ನವೆಂಬರ್ 05 : ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಮನೆಯಲ್ಲಿ ಡೀಲಿಂಗ್ ನಡೆಯುತ್ತಿದೆ ಎಂಬುದು ಖಾಸಗಿ ವಾಹಿನಿಯ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಯಿತು. ಹಾಸ್ಟೆಲ್‌ಗಳಿಗೆ ಆಹಾರ ಧಾನ್ಯ ಪೂರೈಸುವ ಟೆಂಡರ್ ನೀಡಲು ಲಂಚ ಪಡೆಯಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತು. ಈ ಆರೋಪ ನನ್ನನ್ನು ರಾಜಕೀಯವಾಗಿ ಮುಗಿಸಲು ನಡೆಸಿರುವ ಪಿತೂರಿ ಎಂದು ಆಂಜನೇಯ ಅವರು ಹೇಳಿದರು. ಸರ್ಕಾರ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ನೀಡಿದೆ.

ಸಂಸದೀಯ ಕಾರ್ಯದರ್ಶಿಗಳ ನೇಮಕ : ನವೆಂಬರ್ 06 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 10 ಮಂದಿ ಸಂಸದೀಯ ಕಾರ್ಯದರ್ಶಿಗಳನ್ನು ನೇಮಕ ಮಾಡಿದರು. ಸಚಿವ ಸಂಪುಟ ವಿಸ್ತರಣೆ ಸಮಯದಲ್ಲಿಯೇ ಶಾಸಕರನ್ನು ಸಂಪುಟ ಕಾರ್ಯದರ್ಶಿಗಳಾಗಿ ನೇಮಕ ಮಾಡಿಕೊಳ್ಳುವ ಕುರಿತು ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದರು. ಅದರಂತೆ ಸಚಿವ ಸ್ಥಾನ ವಂಚಿತರಾದವರನ್ನು ಕಾರ್ಯದರ್ಶಿಗಳಾಗಿ ನೇಮಿಸಿದರು.

ಸುಪ್ರೀಂಕೋರ್ಟ್‌ಗೆ ಹೋದ ಸರ್ಕಾರ : ನವೆಂಬರ್ 06 : ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ವಿರುದ್ಧದ ಡಿನೋಟಿಫಿಕೇಷನ್‌ ಹಗರಣಗಳ ತನಿಖೆಗೆ ಕರ್ನಾಟಕ ಹೈಕೋರ್ಟ್ ನೀಡಿರುವ ತಡೆಯಾಜ್ಞೆಯನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತು. ದೂರುಗಳ ತನಿಖೆಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿರುವುದು ಸರಿಯಲ್ಲ. ತನಿಖೆ ಸಂಪೂರ್ಣ ಸ್ಥಗಿತಗೊಂಡಿದ್ದು, ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ಅರ್ಜಿ ಸಲ್ಲಿಸಿತು.

ಮಡಿಕೇರಿಯಲ್ಲಿ ಗಲಭೆ : ನವೆಂಬರ್ 10 : ಟಿಪ್ಪು ಜಯಂತಿ ಆಚರಣೆ ವೇಳೆ ಮಡಿಕೇರಿಯಲ್ಲಿ ಗಲಭೆ ನಡೆಯಿತು. ವಿಶ್ವಹಿಂದೂಪರಿಷತ್ ಮುಖಂಡ ಕುಟ್ಟಪ್ಪ ಅವರು ಗಲಭೆಯಲ್ಲಿ ಮೃತಪಟ್ಟರು. ಶಾಹುಲ್ ಎಂಬ ಯುವಕನ ಮೇಲೆ ಗುಂಡಿನ ದಾಳಿ ನಡೆಯಿತು. ಗಲಭೆ ಬಳಿಕ ಶಾಂತಿ ಕಾಪಾಡಲು ಮಡಿಕೇರಿಯಲ್ಲಿ 15 ದಿನಕ್ಕೂ ಹೆಚ್ಚು ಕಾಲ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.

madikeri

ವಿವಾದ ಹುಟ್ಟು ಹಾಕಿದ ಗಿರೀಶ್ ಕಾರ್ನಡ್ : ನವೆಂಬರ್ 10 : ಕರ್ನಾಟಕ ಸರ್ಕಾರದ ವತಿಯಿಂದ ವಿಧಾನಸೌಧದಲ್ಲಿ ಆಯೋಜಿಸಿದ್ದ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಗಿರೀಶ್ ಕಾರ್ನಾಡ್ ಅವರು, 'ಟಿಪ್ಪು ಸುಲ್ತಾನ್ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ಕನ್ನಡ ನಾಡನ್ನು ಒಗ್ಗೂಡಿಸಿದ ಆತನಿಗೆ ಸರಿಸಾಟಿಯಾದ ಕನ್ನಡಿಗ ಮತ್ತೊಬ್ಬನಿಲ್ಲ, ಆತನ ಹೆಸರನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಟ್ಟು ಗೌರವ ಸೂಚಿಸಬೇಕಿದೆ' ಎಂದು ಹೇಳಿದರು. [ಕ್ಷಮೆ ಕೇಳಿದ ಕಾರ್ನಾಡ್]

ಗುಂಡೇಟು ತಿಂದಿದ್ದ ಶಾಹುಲ್ ಸಾವು : ನವೆಂಬರ್ 12 : ಮಡಿಕೇರಿಯಲ್ಲಿ ಟಿಪ್ಪು ಜಯಂತಿ ಆಚರಣೆ ವೇಳೆ ನಡೆದ ಘರ್ಷಣೆಯಲ್ಲಿ ಗುಂಡೇಟೆನಿಂದ ಗಾಯಗೊಂಡಿದ್ದ ಶಾಹುಲ್ ಎಂಬ ಯುವಕ ಸಾವನ್ನಪ್ಪಿದ. ನವೆಂಬರ್ 10ರಂದು ಟಿಪ್ಪು ಜಯಂತಿ ಆಚರಣೆಯ ವೇಳೆ ಮಡಿಕೇರಿಯಲ್ಲಿ ಘರ್ಷಣೆ ನಡೆದಿತ್ತು. ಅಂದು ಮಡಿಕೇರಿಯ ಹೊರವಲಯದಲ್ಲಿ ಹೋಗುತ್ತಿದ್ದ ವೇಳೆ, ಶಾಹುಲ್ ಮೇಲೆ, ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿದ್ದರು.

ಕುಟ್ಟಪ್ಪ ಕುಟುಂಬಕ್ಕೆ 5 ಲಕ್ಷ ಪರಿಹಾರ : ನವೆಂಬರ್ 12 : ಮಡಿಕೇರಿಯಲ್ಲಿ ಟಿಪ್ಪು ಜಯಂತಿ ಆಚರಣೆ ಸಂದರ್ಭದಲ್ಲಿ ನಡೆದ ಗಲಭೆಯಲ್ಲಿ ಮೃತಪಟ್ಟ ವಿಶ್ವ ಹಿಂದೂ ಪರಿಷತ್ ಸಂಘಟನಾ ಕಾರ್ಯದರ್ಶಿ ಕುಟ್ಟಪ್ಪ ಅವರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ಗಲಭೆ ಕುರಿತು ಮೈಸೂರು ಪ್ರಾದೇಶಿಕ ಆಯುಕ್ತರಿಂದ ತನಿಖೆ ನಡೆಸಲಾಗುವುದು ಎಂದು ಹೇಳಿದರು.

ಚಳಿಗಾಲದ ಅಧಿವೇಶನ ಆರಂಭ : ನವೆಂಬರ್ 16 : ಬೆಂಗಳೂರಿನ ವಿಧಾನಸೌಧದಲ್ಲಿ ಹತ್ತು ದಿನಗಳ ಕಾಲದ ಚಳಿಗಾಲದ ವಿಧಾನಸಭೆ ಅಧಿವೇಶನ ಆರಂಭವಾಯಿತು. ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿ ಮೊದಲ ದಿನದ ಕಲಾಪವನ್ನು ಮುಂದೂಡಲಾಯಿತು.

ನಾಗಮಾರಪಲ್ಲಿ ವಿಧಿವಶ : ನವೆಂಬರ್ 17 : ಬೀದರ್ ಕ್ಷೇತ್ರದ ಕೆಜೆಪಿ ಶಾಸಕ ಮತ್ತು ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಲ್ಲಿ ಅವರು ವಿಧಿವಶರಾದರು. ಚಳಿಗಾಲದ ವಿಧಾನಸಭೆ ಅಧಿವೇಶನದಲ್ಲಿ ಪಾಲ್ಗೊಳ್ಳಲು ನಾಗಮಾರಪಲ್ಲಿ ಅವರು ಬೆಂಗಳೂರಿಗೆ ಆಗಮಿಸಿದ್ದರು. ಅನಾರೋಗ್ಯದ ಹಿನ್ನಲೆಯಲ್ಲಿ ಮೊದಲ ದಿನದ ಕಲಾಪದಿಂದ ದೂರ ಉಳಿದಿದ್ದರು. [ನಾಗಮಾರಪಲ್ಲಿ ಪರಿಚಯ ಓದಿ]

ನಮ್ಮ ಮೆಟ್ರೋ ಸಂಚಾರ ಆರಂಭ : ನವೆಂಬರ್ 18 : ಮಾಗಡಿ ರಸ್ತೆ-ಮೈಸೂರು ರಸ್ತೆ ನಡುವಿನ ನಮ್ಮ ಮೆಟ್ರೋ ರೈಲು ಸಂಚಾರ ಆರಂಭವಾಯಿತು. 6.4 ಕಿ.ಮೀ. ಉದ್ದದ ರೀಚ್ -2 ನೇರಳೆ ಮಾರ್ಗವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವೆಂಬರ್ 16ರಂದು ಉದ್ಘಾಟಿಸಿದ್ದರು.

ಜೈಲು ಪಾಲಾದ ಹುಚ್ಚಾ ವೆಂಕಟ್ : ನವೆಂಬರ್ 19 : ನಟ, ನಿರ್ದೇಶಕ ಹುಚ್ಚ ವೆಂಕಟ್‌ನನ್ನು ಡಿಸೆಂಬರ್ 4ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಬೆಂಗಳೂರಿನ ಜ್ಞಾನಭಾರತಿ ಠಾಣೆ ಪೊಲೀಸರು ವೆಂಕಟ್‌ನನ್ನು ನವೆಂಬರ್ 18ರಂದು ಬಂಧಿಸಿದ್ದರು. ಡಾ.ಬಿ.ಆರ್.ಅಂಬೇಡ್ಕರ್ ಅವರ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಕ್ಕಾಗಿ ವೆಂಕಟ್ ಬಂಧಿಸಲಾಯಿತು.

ಬೆಳಗಾವಿಯಿಂದ ಮಂಗಳೂರಿಗೆ ವಿಮಾನ : ನವೆಂಬರ್ 19 : ಸ್ಪೈಸ್ ಜೆಟ್ ಮಂಗಳೂರು-ಬೆಂಗಳೂರು-ಬೆಳಗಾವಿ ನಡುವೆ ವಿಮಾನ ಸೇವೆಯನ್ನು ಆರಂಭಿಸಿತು. ಸ್ಪೈಸ್‌ ಜೆಟ್‌ನ ಎಸ್‌ಜಿ 1027, ಎಸ್‌ಜಿ 1028 ವಿಮಾನ ಪ್ರತಿದಿನ ಮಂಗಳೂರು-ಬೆಳಗಾವಿ-ಬೆಂಗಳೂರು ನಡುವೆ ಸಂಚಾರ ನಡೆಸಲಿದೆ ಎಂದು ಬೆಳಗಾವಿ ವಿಮಾನ ನಿಲ್ದಾಣ ನಿರ್ದೇಶಕ ಜೆ.ಟಿ. ರಾಧಾಕೃಷ್ಣ ತಿಳಿಸಿದರು.

ಜನಾರ್ದನ ರೆಡ್ಡಿ ಬಂಧನ : ನವೆಂಬರ್ 20 : ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಿದ್ದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರನ್ನು ಲೋಕಾಯುಕ್ತ ಎಸ್‌ಐಟಿ ಬಂಧಿಸಿತು. ಲೋಕಾಯುಕ್ತ ವಿಶೇಷ ನ್ಯಾಯಲಯ ನವೆಂಬರ್ 23ರ ತನಕ ಅವರನ್ನು ಎಸ್‌ಐಟಿ ವಶಕ್ಕೆ ನೀಡಿತು. ಸುಮಾರು ಎರಡು ವರ್ಷಕ್ಕೂ ಅಧಿಕ ಕಾಲ ಜೈಲಿನಲ್ಲೇ ಕಾಲದೂಡಿದ್ದ ಜನಾರ್ದನ ರೆಡ್ಡಿ ಅವರು ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ 13 ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ.

ಹೆಬ್ಬಾಳ ಶಾಸಕ ಜಗದೀಶ್ ಕುಮಾರ್ ಇನ್ನಿಲ್ಲ : ನವೆಂಬರ್ 23 : ಬೆಂಗಳೂರಿನ ಹೆಬ್ಬಾಳ ಕ್ಷೇತ್ರದ ಬಿಜೆಪಿ ಶಾಸಕ ಆರ್.ಜಗದೀಶ್ ಕುಮಾರ್ (58) ವಿಧಿವಶರಾದರು. ನವೆಂಬರ್ 23 ರಂದು ಬಿಜೆಪಿ ಸರ್ಕಾರದ ವಿರುದ್ಧ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಬಳಿಕ ಜಗದೀಶ್ ಕುಮಾರ್ ಅವರು, ವಿಧಾನಸಭೆ ಕಲಾಪಕ್ಕೆ ಆಗಮಿಸಿದ್ದರು. ನಂತರ ಎದೆ ನೋವು ಕಾಣಿಸಿಕೊಂಡ ಕಾರಣ ವಿಕ್ರಂ ಆಸ್ಪತ್ರೆ ತೆರಳಿದ್ದರು. ಹೃದಯಾಘಾತದಿಂದಾಗಿ ಆಸ್ಪತ್ರೆಯಲ್ಲಿ ಮೃತಪಟ್ಟರು.

jagadeesh kumar

ಕುವೆಂಪು ಮನೆಯಲ್ಲಿ ಕಳ್ಳತನ : ನವೆಂಬರ್ 24 : ರಾಷ್ಟ್ರಕವಿ ಕುವೆಂಪು ಅವರ ಬಾಲ್ಯದ ಮನೆ ಹಾಗೂ ಮ್ಯೂಸಿಯಂ ಆಗಿರುವ ಕುಪ್ಪಳ್ಳಿಯ ಮನೆಯಲ್ಲಿ ಕಳ್ಳತನವಾಯಿತು. ಜ್ಞಾನಪೀಠ ಪ್ರಶಸ್ತಿ ಸೇರಿದಂತೆ ಪ್ರಮುಖ ಪ್ರಶಸ್ತಿಗಳು ಕಾಣೆಯಾದವು. ಸಿಸಿಟಿವಿ ಕ್ಯಾಮೆರಾಗಳನ್ನು ನಿಷ್ಕ್ರಿಯಗೊಳಿಸಿ ಕಳ್ಳರು ತಮ್ಮ ಕೈಚಳಕ ತೋರಿಸಿದರು.

ವೆಂಕಟಣ್ಣನಿಗೆ ಜಾಮೀನು : ನವೆಂಬರ್ 25 : ನಟ, ನಿರ್ದೇಶಕ ಹುಚ್ಚ ವೆಂಕಟ್‌ಗೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿತು. ಡಾ.ಬಿ.ಆರ್.ಅಂಬೇಡ್ಕರ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಞಾನಭಾರತಿ ಠಾಣೆ ಪೊಲೀಸರು ವೆಂಕಟ್‌ನನ್ನು ಬಂಧಿಸಿದ್ದರು.

ಪರಿಷತ್ ಚುನಾವಣೆ ವೇಳಾಪಟ್ಟಿ ಪ್ರಕಟ : ನವೆಂಬರ್ 25 : ಶಿಕ್ಷಕರ, ಪದವೀಧರರ ಕ್ಷೇತ್ರಗಳು ಹಾಗೂ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ಸದಸ್ಯರ ಆಯ್ಕೆಗೆ ನಡೆಯುವ ಚುನಾವಣೆಯ ವೇಳಾಪಟ್ಟಿ ಪ್ರಕಟಗೊಂಡಿತು. ಡಿಸೆಂಬರ್ 27ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 30ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. 2016ರ ಜನವರಿ 6ರಂದು 25 ಸದಸ್ಯರ ಅವಧಿ ಮುಕ್ತಾಯಗೊಳ್ಳಲಿದ್ದು, ಅಷ್ಟರೊಳಗೆ ನೂತನ ಸದಸ್ಯರ ಆಯ್ಕೆ ನಡೆಯಬೇಕಾಗಿದೆ.

ಜೆಡಿಎಸ್ ಭಿನ್ನಮತ ಸ್ಫೋಟ : ನವೆಂಬರ್ 26 : ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿಮಾಡಿಕೊಳ್ಳುವ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಬರುವಂತೆ ಶಾಸಕ ಜಮೀರ್ ಅಹಮದ್ ಖಾನ್ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿದರು. ವಿಧಾನಪರಿಷತ್ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವ ಕುರಿತು ಜಮೀರ್ ಅಹಮದ್ ಖಾನ್ ಅವರು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರ ಜೊತೆ ಮಾತುಕತೆ ನಡೆಸಿದ್ದು, ಕುಮಾರಸ್ವಾಮಿ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು.

ಕುವೆಂಪು ಮನೆಯಲ್ಲಿ ಕದ್ದವ ಸಿಕ್ಕಿ ಬಿದ್ದ : ನವೆಂಬರ್ 27 : ರಾಷ್ಟ್ರಕವಿ ಕುವೆಂಪು ಅವರ ಕುಪ್ಪಳ್ಳಿ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸಲಾಯಿತು. ಬಂಧಿತ ಆರೋಪಿ ದಾವಣಗೆರೆ ತಾಲೂಕು ತುರ್ಚಘಟ್ಟದ ರೇವಣಸಿದ್ಧಪ್ಪ ಅಲಿಯಾಸ್ ಕಾಯಕದ ರೇವಣ್ಣ (45) ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದ.

ಜನಾರ್ದನ ರೆಡ್ಡಿಗೆ ಜಾಮೀನು : ನವೆಂಬರ್ 30 : ಅಕ್ರಮ ಗಣಿಗಾರಿಕೆ ಆರೋಪ ಹೊತ್ತು ಎಸ್ ಐಟಿಯಿಂದ ಬಂಧನಕ್ಕೊಳಗಾಗಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರಿಗೆ ಷರತ್ತುಬದ್ಧ ಜಾಮೀನು ಸಿಕ್ಕಿತು. 5 ಲಕ್ಷ ರೂ. ಬಾಂಡ್, ಇಬ್ಬರ ಶ್ಯೂರಿಟಿ, ಬಳ್ಳಾರಿ ಅಥವಾ ದೇಶದ ಯಾವುದೇ ನಗರಕ್ಕೆ ತೆರಳುವಂತಿಲ್ಲ ಎಂಬ ಷರತ್ತಿನ ಅನ್ವಯ ಜಾಮೀನು ನೀಡಲಾಯಿತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+