Get Updates
Get notified of breaking news, exclusive insights, and must-see stories!

ವರ್ಷಾಂತ್ಯ ವಿಶೇಷ : ಡಿಸೆಂಬರ್‌ನಲ್ಲಿ ಸದ್ದು ಮಾಡಿದ 10 ವಿದ್ಯಮಾನ

ಡಿಸೆಂಬರ್ ತಿಂಗಳು ಬಂದರೆ ಸಾಕು ಈ ವರ್ಷ ನಾವು ಏನು ಸಾಧನೆ ಮಾಡಿದ್ದೇವೆ? ಎಂಬ ಲೆಕ್ಕಾಚಾರದಲ್ಲಿ ತೊಡಗಬೇಕು. ಮುಂದಿನ ವರ್ಷದ ಆರಂಭದಿಂದಲೇ ಈ ಕೆಲಸ ಮಾಡಬೇಕು ಎಂದು ಯೋಜನೆಗಳನ್ನು ಹಾಕಬೇಕು. ಇಂತಹ ಲೆಕ್ಕಾಚಾರಗಳ ನಡುವೆಯೇ ಹಲವು ಘಟನೆಗಳು ನಡೆದಿರುತ್ತವೆ. ಕರ್ನಾಟಕದಲ್ಲಿ ಡಿಸೆಂಬರ್ ತಿಂಗಳಿನಲ್ಲಿ ನಡೆದ ಪ್ರಮುಖ ಘಟನೆಗಳನ್ನು ನಾವು ನಿಮ್ಮ ಮುಂದಿಡುತ್ತಿದ್ದೇವೆ.

ಜೆಡಿಎಸ್ ಪಕ್ಷದಲ್ಲಿನ ಅಸಮಾಧಾನದ ಹೊಗೆ ಡಿಸೆಂಬರ್‌ನಲ್ಲಿ ತಿಳಿಯಾಯಿತು. ವಿಧಾನಪರಿಷತ್ ಮೈತ್ರಿ ವಿಚಾರದಲ್ಲಿ ಉಂಟಾಗಿದ್ದ ಅಸಮಾಧಾನಗಳ ನಂತರ ಜೆಡಿಎಸ್ ನಾಯಕರು ಒಗ್ಗಟ್ಟು ಪ್ರದರ್ಶಿಸಿದರು. ಕುಮಾರಸ್ವಾಮಿ, ಜಮೀರ್ ಅಹಮದ್, ಬಾಲಕೃಷ್ಣ, ಚೆಲುವರಾಯಸ್ವಾಮಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಮಾಗಡಿ ಕ್ಷೇತ್ರದ ಶಾಸಕ ಎಚ್.ಸಿ.ಬಾಲಕೃಷ್ಣ ಅವರು ಆಯೋಜಿಸಿದ್ದ ಸಮಾವೇಶದಲ್ಲಿ ಎಲ್ಲರೂ ಒಂದಾದದರು. [2015ರಲ್ಲಿ ದೇಶದಲ್ಲಿ ಸುದ್ದಿ ಮಾಡಿದ ರಾಜ್ಯದ 8 ವಿದ್ಯಮಾನ]

ಹಿರಿಯ ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ಹತ್ಯೆ ಪ್ರಕರಣದ ಬಗ್ಗೆ ಲೋಕಸಭೆಯಲ್ಲಿ ಚರ್ಚೆ ನಡೆಯಿತು. ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಅವರು ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು. ರಾಜ್ಯ ಸರ್ಕಾರ ಒಪ್ಪಿದರೆ ಕೇಂದ್ರ ತನಿಖೆಯನ್ನು ಸಿಬಿಐಗೆ ಒಪ್ಪಿಸಲಿದೆ ಎಂದು ರಾಜನಾಥ್ ಸಿಂಗ್ ಹೇಳಿದರು. ಸಿಬಿಐ ತನಿಖೆಗೆ ಒಪ್ಪಿಸಲು ನಾವು ಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ರಾಜ್ಯದಲ್ಲಿ ಡಿಸೆಂಬರ್‌ನಲ್ಲಿ ನಡೆದ ಪ್ರಮುಖ ವಿದ್ಯಮಾನಗಳು ಇಲ್ಲಿವೆ..... [2015ರ ಜನವರಿಯಲ್ಲಿ ರಾಜ್ಯದಲ್ಲಿ ಏನಾಯ್ತ?]

december 2015

ಬಿಎಸ್‌ವೈ ವಿದೇಶ ಪ್ರವಾಸಕ್ಕೆ ಅನುಮತಿ : ಮಾಜಿ ಮುಖ್ಯಮಂತ್ರಿ, ಶಿವಮೊಗ್ಗ ಸಂಸದ ಬಿ.ಎಸ್.ಯಡಿಯೂರಪ್ಪ ಅವರು ವಿದೇಶ ಪ್ರವಾಸ ಕೈಗೊಳ್ಳಲು ಕೋರ್ಟ್ ಅವಕಾಶ ನೀಡಿತು. ಲೋಕಾಯುಕ್ತ ವಿಶೇಷ ನ್ಯಾಯಾಲಯ ಯಡಿಯೂರಪ್ಪ ಅವರ ಪಾಸ್‌ಪೋರ್ಟ್‌ಅನ್ನು ಮರಳಿಸಿತು. 2012ರಿಂದ ಯಡಿಯೂರಪ್ಪ ಅವರ ಪಾಸ್‌ಪೋರ್ಟ್ ಕೋರ್ಟ್ ವಶದಲ್ಲಿತ್ತು. ಕರ್ನಾಟಕ ಹೈಕೋರ್ಟ್ ಆದೇಶದ ನಂತರ ಯಡಿಯೂರಪ್ಪ ವಿರುದ್ಧದ 4 ದೂರನ್ನೂ ಲೋಕಾಯುಕ್ತ ಕೋರ್ಟ್ ರದ್ದು ಮಾಡಿತು.

5 ಕೋಟಿ ಪರಿಹಾರ ಕೊಟ್ಟ ಕರ್ನಾಟಕ : ಭಾರೀ ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ತಮಿಳುನಾಡು ರಾಜ್ಯಕ್ಕೆ ಕರ್ನಾಟಕ ಸರ್ಕಾರ 5 ಕೋಟಿ ರೂ.ಗಳ ನೆರವು ಘೋಷಣೆ ಮಾಡಿತು. ಔಷಧಿ ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಪೂರೈಕೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿದರು. ತಮಿಳುನಾಡಿನ ಅಧಿಕಾರಿಗಳ ಜೊತೆ ಚರ್ಚಿಸಲು ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಹುಚ್ಚಾ ವೆಂಕಟ್‌ಗೆ ಬಿಡುಗಡೆ ಭಾಗ್ಯ : ಡಾ.ಬಿ.ಆರ್.ಅಂಬೇಡ್ಕರ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಜೈಲು ಪಾಲಾಗಿದ್ದ ನಟ, ನಿರ್ದೇಶಕ ಹುಚ್ಚ ವೆಂಕಟ್ ಜೈಲಿನಿಂದ ಬಿಡುಗಡೆಗೊಂಡರು. 'ನಾನು ಹುಚ್ಚ ಅಲ್ಲ, ಒಂದು ಪದ ಬಳಕೆಯಿಂದಾಗಿ ನನಗೆ ಈ ಗತಿ ಬಂದಿದೆ. ಇನ್ನು ಮುಂದೆ ಜೀವನ ಪೂರ್ತಿ ಆ ಪದ ಬಳಕೆ ಮಾಡುವುದಿಲ್ಲ' ಎಂದು ಅವರು ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದರು. ಒಕ್ಕಲಿಗರ ಹಿತಕರಕ್ಷಣಾ ಸೇನೆಯ ಅಧ್ಯಕ್ಷರಾದ ಹಾಸನ ಮೂಲದ ಮಂಜೇಗೌಡ ಅವರು, ವೆಂಕಟ್‌ಗೆ ಶ್ಯೂರಿಟಿ ನೀಡಿ, ಜೈಲಿನಿಂದ ಬಿಡುಗಡೆ ಮಾಡಿಸಿದರು.

huchha venkat

ಧಾರವಾಡದಲ್ಲಿ ಐಐಟಿ ಸಂಪುಟದ ಒಪ್ಪಿಗೆ : ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯನ್ನು ಧಾರವಾಡದಲ್ಲಿ ಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿತು. ಮೊದಲ ವರ್ಷದಲ್ಲಿ 180 ವಿದ್ಯಾರ್ಥಿಗಳನ್ನು ಸೇರ್ಪಡೆ ಮಾಡಿಕೊಳ್ಳಲು ಸರ್ಕಾರ ಒಪ್ಪಿತು. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದೇಶದಲ್ಲಿ ನೂತನವಾಗಿ 6 ಐಐಟಿಗಳನ್ನು ಆರಂಭಿಸಲು ಒಪ್ಪಿಗೆ ನೀಡಲಾಯಿತು. [2015ರ ಜೂನ್‌ ವಿದ್ಯಮಾನಗಳು ನೆನಪಿವೆಯೇ?]

ಜ್ಯೋತಿಷ್ಯ ಕಾರ್ಯಕ್ರಮಗಳಿಗೆ ನಿರ್ಬಂಧ? : 'ಎಲ್ಲಾ ಟಿವಿ ವಾಹಿನಿಗಳಲ್ಲಿ ಜ್ಯೋತಿಷ್ಯ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ಈ ಕಾರ್ಯಕ್ರಮ ಜನರಲ್ಲಿ ಮೌಢ್ಯವನ್ನು ಬಿತ್ತುತ್ತಿವೆ. ಆದ್ದರಿಂದ, ಇಂತಹ ಜ್ಯೋತಿಷ್ಯ ಕಾರ್ಯಕ್ರಮವನ್ನು ನಿರ್ಬಂಧಿಸುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 'ಪ್ರತಿದಿನ ಎಲ್ಲಾ ಟಿವಿಗಳಲ್ಲಿ ಜ್ಯೋತಿಷ್ಯ ಕಾರ್ಯಕ್ರಮಗಳು ಪ್ರಸಾರವಾಗುತ್ತಿದೆ. ಈ ಕಾರ್ಯಕ್ರಮಗಳು ಮೌಢ್ಯವನ್ನು ಬಿತ್ತುತ್ತಿವೆ' ಎಂದು ಸಿದ್ದರಾಮಯ್ಯ ಅವರು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಹೇಳಿದರು. [ಸೆಪ್ಟೆಂಬರ್ : ಕಾಂಗ್ರೆಸ್-ಜೆಡಿಎಸ್ ದೋಸ್ತಿ]

ಕೊನೆಗೂ ಖುರ್ಚಿ ತೊರೆದ ಭಾಸ್ಕರರಾವ್ : ಪ್ರತಿಪಕ್ಷಗಳು, ಹಲವಾರು ಸಂಘಟನೆಗಳ ಒತ್ತಾಯಕ್ಕೆ ಮಣಿದ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರರಾವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ರಾಜ್ಯಪಾಲ ವಜುಭಾಯಿ ವಾಲಾ ಅವರು ಲೋಕಾಯುಕ್ತರ ರಾಜೀನಾಮೆಯನ್ನು ಅಂಗೀಕರಿಸಿದರು. ಲೋಕಾಯುಕ್ತದಲ್ಲಿ ನಡೆದ ಹಗರಣ ಬೆಳಕಿಗೆ ಬಂದು, ಹಗರಣದ ತನಿಖೆಗೆ ಸರ್ಕಾರ ಎಸ್‌ಐಟಿ ರಚನೆ ಮಾಡಿದ ನಂತರ ಭಾಸ್ಕರರಾವ್ ಅವರು ಸುಮಾರು 135 ದಿನಗಳ ಸರಣಿ ರಜೆ ಪಡೆದಿದ್ದರು.

ಯಡಿಯೂರಪ್ಪಗೆ ಬಿಗ್ ರಿಲೀಫ್ : ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧದ ಡಿ-ನೋಟಿಫಿಕೇಷನ್‌ ಪ್ರಕರಣಗಳ ತನಿಖೆಗೆ ತಮ್ಮ ಅನುಮತಿ ಅಗತ್ಯವಿಲ್ಲ ಎಂದು ರಾಜ್ಯಪಾಲ ವಜುಭಾಯಿ ವಾಲಾ ಹೇಳಿದರು. 2015ರ ನವೆಂಬರ್‌ನಲ್ಲಿ ಕರ್ನಾಟಕ ಹೈಕೋರ್ಟ್ ಯಡಿಯೂರಪ್ಪ ಅವರ ವಿರುದ್ಧದ 5 ಅಕ್ರಮ ಡಿ-ನೋಟಿಫಿಕೇಷನ್‌ ಪ್ರಕರಣಗಳಲ್ಲಿ ಹಿಂದಿನ ರಾಜ್ಯಪಾಲ ಎಚ್‌.ಆರ್‌. ಭಾರದ್ವಾಜ್‌ ಅವರು ನೀಡಿದ್ದ ಪೂರ್ವಾನುಮತಿಯನ್ನು ರದ್ದುಪಡಿಸಿತ್ತು. ಇದರಿಂದಾಗಿ ಬಿಎಸ್‌ವೈ ವಿರುದ್ಧ ಸಿರಾಜಿನ್ ಬಾಷಾ ಅವರು ಲೋಕಾಯುಕ್ತಕ್ಕೆ ನೀಡಿದ್ದ 5 ಪ್ರತ್ಯೇಕ ಖಾಸಗಿ ದೂರುಗಳು ರದ್ದಾಗಿದ್ದವು. ಹೈಕೋರ್ಟ್ ವಿಚಾರಣೆಗೆ ಅನುಮತಿ ನೀಡುವ ಕುರಿತು ರಾಜ್ಯಪಾಲರು ಪುನರ್ ಪರಿಶೀಲನೆ ನಡೆಸಬಹುದು ಎಂದು ತನ್ನ ಆದೇಶದಲ್ಲಿ ಹೇಳಿತ್ತು.

'ಹೊಸ ಬೆಳಕು' ಯೋಜನೆಗೆ ಚಾಲನೆ ಸಿಕ್ಕಿತ್ತು : ಇಂಧನ ಇಲಾಖೆಯ ಮಹತ್ವದ 'ಹೊಸ ಬೆಳಕು' ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಚಾಲನೆ ನೀಡಿದರು. ವಿದ್ಯುತ್ ಕೊರತೆ ನೀಗಿಸಲು ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಸಹಯೋಗದಲ್ಲಿ ವಿದ್ಯುತ್ ಉಳಿಸಲು ಎಲ್‌ಇಡಿ ಬಲ್ಬ್‌ ನೀಡುವ ಹೊಸಬೆಳಕು ಯೋಜನೆಯನ್ನು ಆರಂಭಿಸಿದೆ. ಮೊದಲ ಹಂತದಲ್ಲಿ ರಾಜ್ಯದಲ್ಲಿ ಗೃಹ ಬಳಕೆಗಾಗಿ 6 ಕೋಟಿ ಬಲ್ಪ್‌ಗಳನ್ನು ಹಂಚಲು ಇಲಾಖೆ ಯೋಜನೆ ರೂಪಿಸಿದೆ.

siddaramaiah

ಎನ್.ಆನಂದ ನೂತನ ಉಪ ಲೋಕಾಯುಕ್ತ : ಉಪ ಲೋಕಾಯುಕ್ತ ಹುದ್ದೆಗೆ ನ್ಯಾಯಮೂರ್ತಿ ಎನ್.ಆನಂದ ಅವರನ್ನು ನೇಮಿಸುವ ಶಿಫಾರಸಿಗೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಒಪ್ಪಿಗೆ ನೀಡಿದರು. ಉಪ ಲೋಕಾಯುಕ್ತ ನ್ಯಾ.ಎಸ್.ಬಿ. ಮಜಗೆ ಅವರ ನಿವೃತ್ತಿಯಿಂದ ತೆರವಾಗಿದ್ದ ಒಂದನೆಯ ಉಪ ಲೋಕಾಯುಕ್ತ ಹುದ್ದೆಗೆ ಆನಂದ ಅವರ ಹೆಸರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಮಿತಿ ಶಿಫಾರಸು ಮಾಡಿ, ರಾಜ್ಯಪಾಲರಿಗೆ ಕಳುಹಿಸಿಕೊಟ್ಟಿತ್ತು. ಕೋಲಾರ ಮೂಲದ ಆನಂದ ಅವರು ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ್ದಾರೆ.

ಯಡಿಯೂರಪ್ಪ, ಡಿಕೆಶಿಗೆ ಶುಭ ಶುಕ್ರವಾರ : ಕರ್ನಾಟಕ ಹೈಕೋರ್ಟ್ ಶುಕ್ರವಾರ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಶುಭ ಸುದ್ದಿ ನೀಡಿತು. ಉಭಯ ನಾಯಕರ ವಿರುದ್ಧ ದಾಖಲಾಗಿದ್ದ ಬೆನ್ನಿಗಾನಹಳ್ಳಿ ಡಿನೋಟಿಫಿಕೇಷನ್ ಪ್ರಕರಣವನ್ನು ರದ್ದುಗೊಳಿಸಿ ಆದೇಶ ಹೊರಡಿಸಿತು. ಬೆನ್ನಿಗಾನಹಳ್ಳಿ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಲೋಕಾಯುಕ್ತ ನ್ಯಾಯಾಲಯದಲ್ಲಿ ತಮ್ಮ ವಿರುದ್ಧ ನಡೆಯುತ್ತಿರುವ ವಿಚಾರಣೆಯನ್ನು ರದ್ದುಗೊಳಿಸಬೇಕು ಎಂದು ಕೋರಿ ಯಡಿಯೂರಪ್ಪ ಮತ್ತು ಡಿ.ಕೆ.ಶಿವಕುಮಾರ್ ಅವರು ಕರ್ನಾಟಕ ಹೈಕೋರ್ಟ್‌ಗೆ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು.

dk shivakumar
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+