ಕಲಾಪ: ಅಸಹಾಯಕತೆ ತೋಡಿಕೊಂಡ ಶಾಸಕ, ಸಮಯ ನೀಡದ ಸ್ವೀಕರ್
ಬೆಂಗಳೂರು, ಸೆಪ್ಟೆಂಬರ್ 15: ಬೆಂಗಳೂರಿನಲ್ಲಿ ವಿಧಾನಸಭಾ ಕಲಾಪ ನಡೆಯುತ್ತಿದ್ದ ವೇಳೆ ತಮಗೆ ನೀಡಿದ್ದ ಅವಧಿಯಲ್ಲಿ ಕುಣಿಗಲ್ ಶಾಸಕ ಡಾ.ಎಚ್ಡಿ ರಂಗನಾಥ್ ಅವರು ತಮಗೆ ಪೂರ್ಣ ಸಮಯ ನೀಡದ್ದಕ್ಕೆ ಬೇಸರಗೊಂಡು ಅಸಹಾಯಕತೆ ತೋಡಿಕೊಂಡರು. ತಮ್ಮ ಕ್ಷೇತ್ರದಲ್ಲಿ ಆಗಿರುವ ಹಾನಿಗಳ ಬಗ್ಗೆ ಮಾತನಾಡುತ್ತಿದ್ದಾಗ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಮಯ ನೀಡದ್ದಕ್ಕೆ ಬೇಸರಗೊಂಡು ಅಸಾಯಕತೆ ತೋಡಿಕೊಂಡರು. ಕೊನೆಗೆ ಸರ್ ಒಂದು ನಿಮಿಷ ನೀಡಿ ಎಂದು ಅಂಗಲಾಚಿದರು.
ತಮ್ಮ ಅವಧಿಯಲ್ಲಿ ಮಾತನಾಡಿದ ಶಾಸಕ ರಂಗನಾಥ್ ಅವರು ನಮಗೆ ಬೆಂಗಳೂರಿನವರು ಕೇಳುವಂತೆ ಲಕ್ಸುರಿ ಜೀವನ ಬೇಕಾಗಿಲ್ಲ. ಬದಲಾಗಿ ಮೂಲಭೂತ ಸೌಕರ್ಯ ಇರುವ ಜೀವನ ಮಾಡಲು ಅನುವು ಮಾಡಿಕೊಡಿ ಎಂದು ಕುಣಿಗಲ್ ಶಾಸಕ ಡಾ. ಎಚ್ಡಿ ರಂಗನಾಥ್ ಮನವಿ ಮಾಡಿಕೊಂಡರು.
"ಕರ್ನಾಟಕ ವಿಧಾನಸಭೆ ಸದನ ನಡೆಯುತ್ತಿದ್ದು, ಈ ವೇಳೆ ಮಾತನಾಡಿದ ಕುಣಿಗಲ್ ಶಾಸಕ ಡಾ. ಎಚ್ ಡಿ ರಂಗನಾಥ್ ಅವರು, ನಮಗೆ ಬೆಂಗಳೂರಿನವರಂತೆ ವಿಲಾಸಿ ಜೀವನ ಬೇಕಾಗಿಲ್ಲ. ಬದಲಾಗಿ ಮೂಲಸೌಕರ್ಯ ಇರುವ ಜೀವನ ನಡೆಸಲು ಸೌಲಭ್ಯಗಳಾದರೂ ಬೇಕು. ನಮಲ್ಲಿ ಮಳೆಯಾದರೆ ಬೆಂಗಳೂರಿನ ಬಗ್ಗೆಯೇ ಮಾತನಾಡುತ್ತಾರೆ. ಆದರೆ ಕರ್ನಾಟಕದ ಇತರ ಜಿಲ್ಲೆಗಳ ಬಗ್ಗೆ ಗಮನವನ್ನು ಹರಿಸಬೇಕು" ಎಂದರು.

"ನಮ್ಮಲ್ಲಿ ಮಳೆಯಿಂದ ಅಪಾರ ಹಾನಿಯಾಗಿದೆ. ಹಾಕಿದ್ದ ಬೆಳೆಗಳು ನಾಶವಾಗಿವೆ. ರಾಗಿ ಬೆಳೆ ನೆಲಕಚ್ಚಿದೆ. ರೈತರಿಗೆ ರಾಗಿ ಒದಗಿಸಲು ರಾಗಿ ಕೇಂದ್ರ ತೆರೆಯಬೇಕು. ಆದರೆ ರಾಗಿನೇ ನಮ್ಮಲ್ಲಿ ಇಲ್ಲ. ಶಾಲೆಗಳು ಮಳೆಯಿಂದ ಅಪಾರ ಹಾನಿಗೆ ಒಳಗಾಗಿವೆ. ಕಟ್ಟಡಗಳು ಕುಣಿಗಲ್ ಕ್ಷೇತ್ರದಲ್ಲಿ ಕುಸಿದಿವೆ. ಇದರ ದುರಸ್ತಿ ಮಾಡಲು ಅನುದಾನ ಬೇಕಾಗಿದೆ" ಎಂದರು.
"ನಮ್ಮಲ್ಲಿ ಕೆರೆಗಳು ಇತ್ತೀಚೆಗೆ ಸುರಿಯುತ್ತಿರವ ಮಳೆಯಿಂದ ತುಂಬಿ ಕೊಡಿ ಹರಿದಿವೆ. ಒಮ್ಮೆ ನನಗೆ ಬೆಳಗ್ಗೆಯೇ ಆರು ಗಂಟೆಗೆ ದೂರವಾಣಿ ಕರೆ ಬಂದಿತು. ನಾನು ಅಲ್ಲಿ ನಮ್ಮ ಅಧಿಕಾರಿ ವರ್ಗವನ್ನು ಕರೆದುಕೊಂಡು ಹೋದರೆ ಹರಿಯುತ್ತಿರುವ ಕೆರೆ ನೀರು ತಡೆಯಲು ನಮ್ಮಿಂದ ಸಾಧ್ಯವಾಗಲಿಲ್ಲ. ಕೇವಲ ಒಂದು ಸಾವಿರ ಮರಳು ಮೂಟೆ ಹಾಕಿ ಕೊಡಿಯನ್ನು ನಿಲ್ಲಿಸಲಾಗಲಿಲ್ಲ. ನಮ್ಮ ಜಿಲ್ಲಾ ಪಂಚಾಯಿತಿಯವರು ನಮಗೆ ಸರಿಯಾಗಿ ಸ್ಪಂದಿಸಲಿಲ್ಲ" ಎಂದು ಶಾಸಕ ರಂಗನಾಥ್ ಅಸಹಾಯಕತೆ ತೋಡಿಕೊಂಡರು.

"ನಮ್ಮ ಕ್ಷೇತ್ರದ ಜಿಲ್ಲಾ, ತಾಲೂಕು ಹಾಗೂ ಹಳ್ಳಿ ರಸ್ತೆಗಳು ಅಪಾರ ಮಳೆಯಿಂದ ಹಾನಿಯಾಗಿವೆ. ಇದರ ದುರಸ್ತಿಗೆ ಅನುದಾನ ಬೇಕಾಗಿದೆ. ದಿನಬೆಳಗಾದರೆ ಕೆಲಸಕ್ಕೆ ಹೋಗುವವರು, ಶಾಲಾ ಮಕ್ಕಳು ಸಂಚರಿಸಲು ಆಗುತ್ತಿಲ್ಲ. ನೀವು ಯಾವಾಗಲೂ ಬೆಂಗಳೂರು ರಸ್ತೆ, ನೀರು ಇವುಗಳ ಬಗ್ಗೆ ಮಾತನಾಡುತ್ತೀರಿ. ಇಲ್ಲಿ ನಮಗೆ ಕನಿಷ್ಟ ಮೂಲಸೌಕರ್ಯವೂ ಇಲ್ಲ. ನಮಗೂ ಅನುದಾನ ಬೇಕಾಗಿದೆ. ನಮಗೂ ಆದ್ಯತೆ ನೀಡಿ" ಎಂದು ಮನವಿ ಮಾಡಿದರು.












Click it and Unblock the Notifications