'ಉಪಚುನಾವಣೆ ಮುಗಿದ ಬೆನ್ನಲ್ಲೇ ರೈತರ ಭೂಮಿ ಕಿತ್ತುಕೊಳ್ಳಲು ಕಾಂಗ್ರೆಸ್ ಸೂಚಿಸಿರುವ ಶಂಕೆ'
ಬೆಂಗಳೂರು, ನವೆಂಬರ್ 16: ವಕ್ಫ್ ಆಸ್ತಿ ವಿವಾದದ ಕಾವು ರಾಜ್ಯಾದ್ಯಂತ ಹೆಚ್ಚುತ್ತಿದೆ. ರೈತರ ಜಮೀನುಗಳ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದು ಆಗಿದ್ದು, ತಮ್ಮ ಜಮೀನಿನಲ್ಲಿ ರೈತರು ಉಳುಮೆ ಮಾಡಲು ಹೋದಾಗ ಪೊಲೀಸರು ಲಾಠಿ ಚಾರ್ಜ್ ಮಾಡಿರುವ ಘಟನೆ ಚಿಕ್ಕಬಳ್ಳಾಪುರದ ತಿಮ್ಮಸಂದ್ರದಲ್ಲಿ ನಡೆದಿದೆ. ವಕ್ಸ್ ಆಸ್ತಿ ವಿವಾದ ಹಾಗೂ ರೈತರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಬಿ.ವೈ ವಿಜಯೇಂದ್ರ, ವಕ್ಫ್ ಆಸ್ತಿ ಕಿಚ್ಚು ದಿನದಿಂದ ದಿನಕ್ಕೆ ರೈತರ ನೆಮ್ಮದಿಗೆ ದಕ್ಕೆ ತರುವ ಹಂತಕ್ಕೆ ತಲುಪುತ್ತಿರುವುದನ್ನು ಗಮನಿಸಿದರೆ ಉಪಚುನಾವಣೆ ಮುಗಿದ ಬೆನ್ನಲ್ಲೇ ರೈತರ ಭೂಮಿ ಕಿತ್ತುಕೊಳ್ಳಲು ಕಾಂಗ್ರೆಸ್ ಸರ್ಕಾರವೇ ಅಧಿಕಾರಿಗಳಿಗೆ ಸೂಚಿಸಿರುವ ಶಂಕೆ ವ್ಯಕ್ತವಾಗುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ತಿಮ್ಮಸಂದ್ರ ಗ್ರಾಮದಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವ ಜಮೀನಿನಲ್ಲಿ ಉಳುಮೆ ಮಾಡಲು ಮುಂದಾಗಿದ್ದ ರೈತರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿರುವ ಘಟನೆ ಅತ್ಯಂತ ಖಂಡನೀಯ. ಅಲ್ಲದೇ ರೈತರ ಟ್ರ್ಯಾಕ್ಟರ್ ಅನ್ನು ವಶಕ್ಕೆ ಪಡೆದು ದೂರು ದಾಖಲಿಸಿಕೊಂಡಿರುವ ನಡೆ ತುಘಲಕ್ ದರ್ಬಾರ್ ನೆನಪಿಸುವಂತಿದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಪೊಲೀಸರ ನಡೆಯ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಉಳುಮೆ ಮಾಡುವ ರೈತರಿಗೆ ಅಧಿಕಾರಿಗಳು ಕಿರುಕುಳ ಅಥವಾ ತೊಂದರೆ ಕೊಟ್ಟರೆ ರಾಜ್ಯ ಬಿಜೆಪಿ ರೈತರ ಪರವಾಗಿ ಬೀದಿಗಿಳಿಯಲಿದೆ. ಅನ್ನದಾತರ ಮೇಲೆ ಲಾಠಿ ಪ್ರಯೋಗಿಸಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ರಾಜ್ಯ ಸರ್ಕಾರ ಈ ಕೂಡಲೇ ಕ್ರಮ ಜರುಗಿಸಲಿ. ಈ ಘಟನೆಯ ಕುರಿತು ರಾಜ್ಯದ ರೈತ ಸಮುದಾಯಕ್ಕೆ ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಿ ಈ ಕುರಿತು ಕ್ಷಮೆ ಯಾಚಿಸಬೇಕು ಎಂದು ಬಿ.ವೈ ವಿಜಯೇಂದ್ರ ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಗ್ರಹಿಸಿದ್ದಾರೆ.
ಚಿಂತಾಮಣಿಗೂ ಹಬ್ಬಿದ ವಕ್ಫ್ ವಿವಾದ
ಚಿಕ್ಕಬಳ್ಳಾಪುರ: ರಾಜ್ಯದಾದ್ಯಂತ ಹಬ್ಬಿರುವ ವಕ್ಫ್ ವಿವಾದ ಚಿಂತಾಮಣಿಯಲ್ಲಿ ಕಿಚ್ಚು ಹಚ್ಚಿದೆ. ಜಮೀನಿನ ಹಕ್ಕು ಸಂಬಂಧ ರೈತರು ಮತ್ತು ಜಾಮೀಯ ಮಸೀದಿ ಗುಂಪಿನ ನಡುವೆ ಮಾತಿನ ಚಕಮಕಿ ನಡೆದು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ನಗರದ 31ನೇ ವಾರ್ಡ್ ನ ತಿಮ್ಮಸಂದ್ರದ ಸರ್ವೆ ನಂಬರ್ 13 ರ 2.19 ಎಕರೆ ಮತ್ತು ಸರ್ವೆ ನಂಬರ್ 20 2 ಎಕರೆ ಜಮೀನು ವಿವಾದದ ಕೇಂದ್ರವಾಗಿದೆ. ಜಮೀನು ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಜಾಮಿಯಾ ಮಸೀದಿ ಪದಾಧಿಕಾರಿಗಳು ಜಮೀನಿನಲ್ಲಿ ನಾಮಫಲಕ ಅಳವಡಿಸಿದರೆ, ರೈತರ ಗುಂಪು ನಾಮಫಲಕ ಕಿತ್ತು ಹಾಕಿ ಉಳುವಿಗೆ ಮುಂದಾಗಿದೆ. ಈ ವೇಳೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಗಲಾಟೆ ಹಂತಕ್ಕೆ ತಲುಪಿತ್ತು. ಹೆಸರು ಮಧ್ಯಪ್ರವೇಶಿಸಿ ಜಾಗದಲ್ಲಿ ಯಥಾ ಸ್ಥಿತಿ ಕಾಪಾಡಿಕೊಳ್ಳುವಂತೆ ಸೂಚಿಸಿದ್ದಾರೆ. ಹಾಗೆಯೇ ಉಳುಮೆಗೆ ಬಳಸಿದ್ದ ಟ್ರ್ಯಾಕ್ಟರ್ ಅನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.












Click it and Unblock the Notifications