ಜೆಡಿಎಸ್ ಬಂಡಾಯ ಶಾಸಕರ ಕಾಂಗ್ರೆಸ್ ಸೇರ್ಪಡೆ ಕುತೂಹಲಕ್ಕೆ ತೆರೆಬಿತ್ತು!
ಬೆಂಗಳೂರು, ಫೆ 25: ದೇವೇಗೌಡರ ಮೇಲೆ ಅಭಿಮಾನ ಇಟ್ಟುಕೊಂಡು, ಕುಮಾರಸ್ವಾಮಿ ಜೊತೆ ಮುನಿಸಿಕೊಂಡು, ಪಕ್ಷದಿಂದ ಎರಡೂ ಕಾಲು ಹೊರಗಿಟ್ಟಿದ್ದ ಜೆಡಿಎಸ್ ಪಕ್ಷದ ಏಳು ಬಂಡಾಯ ಶಾಸಕರ ಕಾಂಗ್ರೆಸ್ ಅಧಿಕೃತ ಪ್ರವೇಶದ ಕುರಿತಾದ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ.
ಜೆಡಿಎಸ್ ಬಂಡಾಯ ಶಾಸಕರಲ್ಲೊಬ್ಬರಾದ ಚೆಲುವರಾಯಸ್ವಾಮಿಯವರ, ಬೆಂಗಳೂರಿನ ಜೆಪಿ ನಗರದ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದ ವೇಳೆ, ಭಿನ್ನಮತೀಯ ಶಾಸಕರು ಕಾಂಗ್ರೆಸ್ ಸೇರುವ ಗಳಿಗೆಗೆ ಮಹೂರ್ತ ನಿಗದಿಯಾಗಿದೆ.
ರಾಜ್ಯಸಭಾ ಚುನಾವಣೆ ಮಾರ್ಚ್ 23ರಂದು ನಡೆಯಲಿರುವುದರಿಂದ, ಮಾರ್ಚ್ 24ರಂದು ಎಲ್ಲಾ ಏಳು ಜೆಡಿಎಸ್ ಶಾಸಕರು, ಕಾಂಗ್ರೆಸ್ ಸೇರಲು ದಿನ ನಿಗದಿಯಾಗಿದೆ. ಇದನ್ನು ಖುದ್ದು ಮುಖ್ಯಮಂತ್ರಿಗಳೇ ಏಳು ಭಿನ್ನಮತೀಯ ಶಾಸಕರಿಗೆ ಖಚಿತ ಪಡಿಸಿದ್ದಾರೆಂದು ವರದಿಯಾಗಿದೆ.

ಈ ಬಗ್ಗೆ ಮಾತನಾಡುತ್ತಿದ್ದ ಶಾಸಕ ಎಚ್ ಸಿ ಬಾಲಕೃಷ್ಣ, ನಾವು ಈಗಾಗಲೇ ಕಾಂಗ್ರೆಸ್ ನಲ್ಲೇ ಇದ್ದೇವೆ, ರಾಜ್ಯಸಭಾ ಚುನಾವಣೆ ಇರುವುದರಿಂದ ಪಕ್ಷ ಸೇರುವ ವಿಚಾರ ಕೊಂಚ ವಿಳಂಬವಾಗಿದೆ. ಈಗ ಎಲ್ಲಾ ಗೊಂದಲಗಳು ನಿವಾರಣೆಯಾಗಿದ್ದು, ಅಧಿಕೃತವಾಗಿ ಕಾಂಗ್ರೆಸ್ ಸೇರಲು ಮಾರ್ಚ್ 24ರ ದಿನ ನಿಗದಿಯಾಗಿದೆ ಎಂದು ಹೇಳಿದ್ದಾರೆ.
ಚೆಲುವರಾಯಸ್ವಾಮಿಯವರ ಆಹ್ವಾನದ ಮೇರೆಗೆ ಅವರ ನಿವಾಸಕ್ಕೆ ಡಿನ್ನರ್ ಪಾರ್ಟಿಗೆ ಹೋಗಿದ್ದ ಮುಖ್ಯಮಂತ್ರಿಗಳು, ಲೋಕಾಭಿರಾಮವಾಗಿ ಬಂಡಾಯ ಶಾಸಕರ ಜೊತೆ ಮಾತುಕತೆ ನಡೆಸಿ, ಕಾಂಗ್ರೆಸ್ ಸೇರುವ ದಿನಾಂಕವನ್ನು ಅಂತಿಮಗೊಳಿಸಿದ್ದಾರೆ.
ಜೆಡಿಎಸ್ ಪಕ್ಷದ ಏಳು ಬಂಡಾಯ ಶಾಸಕರು: ಚೆಲುವರಾಯಸ್ವಾಮಿ (ನಾಗಮಂಗಲ), ಎಚ್ ಸಿ ಬಾಲಕೃಷ್ಣ (ಮಾಗಡಿ), ಅಖಂಡ ಶ್ರೀನಿವಾಸಮೂರ್ತಿ (ಪುಲಿಕೇಶಿನಗರ), ಭೀಮಾ ನಾಯಕ (ಹಗರಿಬೊಮ್ಮನಹಳ್ಳಿ), ರಮೇಶ್ ಬಂಡೆಸಿದ್ದೇಗೌಡ (ಶ್ರೀರಂಗಪಟ್ಟಣ), ಇಕ್ಬಾಲ್ ಅನ್ಸಾರಿ (ಗಂಗಾವತಿ) ಜಮೀರ್ ಅಹಮದ್ (ಚಾಮರಾಜಪೇಟೆ)












Click it and Unblock the Notifications