New Vande Bharat: ಕರಾವಳಿ ಮಾರ್ಗದಲ್ಲಿ ಟ್ರಯಲ್ ರನ್ ಮುಂದೂಡಿಕೆ, ಹೊಸ ದಿನಾಂಕದಂದು ಸಂಚಾರ ನಿರೀಕ್ಷೆ
ಬೆಂಗಳೂರು: ರಾಜಧಾನಿ ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ಹೊಸ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರಕ್ಕೆ ಮಹೂರ್ತ ಫಿಕ್ಸ್ ಆಗಿದೆ. ಆದರೆ ಜೂನ್ 3ರಂದು ಎನ್ನಲಾಗಿದ್ದ ಟ್ರಯಲ್ ರನ್ ರದ್ದಾಗಿದ್ದು, ಇದೇ ತಿಂಗಳಲ್ಲಿ ಯಾವುದಾದರು ಒಂದು ದಿನ ಪ್ರಾಯೋಗಿಕ ರೈಲು ಸಂಚಾರ ನಡೆಸಲು ಅಧಿಕಾರಿಗಳು ತೀರ್ಮಾನಿಸುವ ಎಂಬ ಮಾಹಿತಿ ಲಭ್ಯವಾಗಿದೆ.
ಜೂನ್ ತಿಂಗಳಲ್ಲಿ ಈ ಸ್ವಯಂ ಚಾಲಿತ ರೈಲಿನ ಪ್ರಾಯೋಗಿಕ ಸಂಚಾರ ನಡೆಸಲು ನೈಋತ್ಯ ರೈಲ್ವೆ ತಾತ್ಕಾಲಿಕವಾಗಿ ಪ್ರಸ್ತಾಪಿಸಿದೆ ಎಂದು ಬೆಂಳೂರು ವಿಭಾಗೀಯ ಅಧಿಕಾರಿಗಳು ಈಗಾಗಲೇ ಮಾಹಿತಿ ನೀಡಿದ್ದಾರೆ. ನಾಲ್ಕು ನಿಲ್ದಾಣಗಳಲ್ಲಿ ನಿಲುಗಡೆ ನೀಡಲಾಗುತ್ತದೆ ಎಂದು ಮೊದಲು ಹೇಳಲಾಗಿತ್ತು. ಆದರೆ ಈಗ ನಿಲುಗಡೆ ಸ್ಥಳಗಳು ಇನ್ನು ಅಂತಿಮಗೊಂಡಿಲ್ಲ ಎಂದು ಹೇಳಲಾಗಿದೆ.

ಘಾಟಿ ಪ್ರದೇಶದಲ್ಲಿ ಸಂಚಾರ ಸವಾರು, ಆಟೋ ಬ್ರೇಕ್ ವ್ಯವಸ್ಥೆ
ಟ್ರಯಲ್ ರನ್ ವೇಳೆ ರೈಲು ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಿಂದ ಬೆಳಗ್ಗೆ 6.10ಕ್ಕೆ ಹೊರಡಲಿದೆ. ಆಟೋ ಎಮರ್ಜೆನ್ಸಿ ಬ್ರೇಕ್ (AEB) ಅಳವಡಿಸಲಾದ ಎಂಟು ಬೋಗಿಗಳ ವಂದೇ ಭಾರತ್ ರೈಲನ್ನು ಈ ಪರೀಕ್ಷೆಗಳಿಗಾಗಿ ನಿಯೋಜಿಸಲಾಗಿದೆ. ಒಂದು ಬದಿಯ ಸಂಚಾರಕ್ಕೆ ಸುಮಾರು ಸುಮಾರು 8.5 ಗಂಟೆ ಹಿಡಿಯುತ್ತದೆ. ರೈಲು ಹಾಸನ, ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆ ಸೇರಿದಂತೆ ತನ್ನ ನಿಗದಿಪಡಿಸಿದ ನಿಲ್ದಾಣಗಳಲ್ಲಿ ನಿಲುಗಡೆ ನೀಡಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ.
ರೈಲಿನ ಕಾರ್ಯಕ್ಷಮತೆ, ತಲುಪುವ ಸಮಯ, ಸಿಬ್ಬಂದಿ ಬದಲಾವಣೆ, ನಿಲುಗಡೆಯ ಸಮಯ, ವೇಗ ನಿಯಂತ್ರಣಕ್ಕೆ ಸಂಬಂಧಿಸಿದಂತೆ ತಪಾಸಣೆ ನಡೆಯಲಿದೆ. ಇದೆಲ್ಲ ಗಮನಿಸಿ ವರದಿ ಸಲ್ಲಿಸಲಾಗುತ್ತದೆ. ಬಳಿಕ ಅಂತಿಮ ವೇಳಾಪಟ್ಟಿಯನ್ನು ರೈಲ್ವೆ ಇಲಾಖೆ ಪ್ರಕಟಿಸಲಿದೆ.
ಮಾರ್ಗದಲ್ಲಿವೆ 57 ಸುರಂಗ, 226 ಸೇತುವೆ, 108 ತಿರುವು
ಸಕೇಶಪುರದಿಂದ ಮುಮದೆ ಬೆಟ್ಟ ಗುಡ್ಡಗಳ ಸಾಲಿನಲ್ಲಿ (ಘಾಟಿ ವಿಭಾಗ) ರೈಲು ಸಂಚರಿಸಬೇಕಿದೆ. ಇಲ್ಲಿ ರೈಲು ವಿದ್ಯುದೀಕರಣ ಸವಾಲಾಗಿತ್ತು, ಅದನ್ನು ಪೂರ್ಣಗೊಳಿಸಲು ಎರಡು ವರ್ಷ ಬೇಕಾಯಿತು. ಮಾರ್ಗದಲ್ಲಿ ಒಟ್ಟಾರೆ 57 ಸುರಂಗಗಳು, 226 ಸೇತುವೆಗಳು ಮತ್ತು 108 ತಿರುವುಗಳು ಬರುತ್ತವೆ. ಸಕಲೇಶಪುರ ಮತ್ತು ಸುಬ್ರಹ್ಮಣ್ಯ ನಡುವೆ ವಿದ್ಯುದೀಕರಣ ಕಳೆದ ಫೆಬ್ರವರಿಯಲ್ಲಿ ಪೂರ್ಣಗೊಂಡಿದ್ದು, ಎಲ್ಲ ವಿಧದ ರೈಲುಗಳು ಸಂಚರಿಸಬಹುದೆಂದು ಇಲಾಖೆ ಅನುಮೋದನೆ ನೀಡಿತು. ಇದರ ಬೆನ್ನಲ್ಲೆ ಕರಾವಳಿಗೆ ಬೆಂಗಳೂರಿನಿಂದ ವಂದೇ ಭಾರತ್ ರೈಲು ಕಾರ್ಯಾಚರಣೆಗೆ ಒಪ್ಪಿಗೆ ನೀಡಿತಾದರೂ ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆಯು (RDSO) ಒಂದಷ್ಟು ತಪಾಸಣೆ ನಡೆಸಿತ್ತು.
ಘಾಟಿಯಲ್ಲಿ ಗಂಟೆಗೆ 30 ಕಿಮೀ ವೇಗದಲ್ಲಿ ಸಂಚಾರ
ಇಳಿಜಾರು ಇರುವ ಘಾಟಿ ಪ್ರದೇಶದ ಮಾರ್ಗವು ಸುಮಾರು 55 ಕಿ.ಮೀ. ಉದ್ದವಿದೆ. ಇಲ್ಲಿ ಸಂಚರಿಸಬೇಕಾದರೆ ಎಇಬಿ ಬ್ರೇಕ್ ವ್ಯವಸ್ಥೆ ಕಡ್ಡಾಯವಾಗಿರಬೇಕು. ಇದು ರೈಲಿನ ವೇಗವನ್ನು ಗಂಟೆಗೆ 30 ಕಿ.ಮೀ.ಗೆ ಮಿತಿಗೊಳಿಸುತ್ತದೆ. ಒಂದು ವೇಳೆ ವೇಗ ಹೆಚ್ಚಾದರೆ ಬ್ರೇಕ್ಗಳು ಸ್ವಯಂಚಾಲಿತವಾಗಿ ಅನ್ವಯವಾಗಿ, ರೈಲು ನಿಯಂತ್ರಣಕ್ಕೆ ಬರುತ್ತದೆ. ಈ ವ್ಯವಸ್ಥೆ ಜಾರಿಗೆ ಎಇಬಿ ಬ್ರೇಕಿಂಗ್ ವ್ಯವಸ್ಥೆಯನ್ನು ಮರು-ಅಳವಡಿಸಲು ರೈಲ್ವೇ ಇಲಾಖೆ ನಿರ್ಧರಿಸಿದೆ. ಹೀಗಾಗಿ ಪ್ರಾಯೋಗಿಕ ರೈಲು ಸಂಚಾರ ಕೊಂಚ ತಡವಾಗಿದೆ ಎಂದು ಹೇಳಲಾಗುತ್ತಿದೆ.
ಕರಾವಳಿಗೆ ಸಂಪರ್ಕ ಸುಧಾರಿಸುವುದಲ್ಲದೇ ಪ್ರವಾಸೋದ್ಯಮ, ವ್ಯಾಪಾರ, ದೈನಂದಿನ ಸಂಚಾರಕ್ಕೆ ವಂದೇ ಭಾರತ್ ಹೆಚ್ಚು ಅನುಕೂಲಕಾರಿಯಾಗಿದೆ. ಇತ್ತೀಚೆಗೆ ಜೂನ್ 3ರಂದು ಬೆಳಗ್ಗೆ ಟ್ರಯಲ್ ರನ್ ನಡೆಯಲಿದೆ ಎಂದು ಹೇಳಲಾಗಿತ್ತು. ಆದರೆ ಕಾರಣಾಂತರಗಳಿಂದ ಆ ದಿನ ಪ್ರಾಯೋಗಿಕ ಸಂಚಾರ ರದ್ದಾಗಿದೆ ಎಂದು "ಮಂಗಳೂರು ಟುಡೆ' ವರದಿ ಆಗಿದೆ.













Click it and Unblock the Notifications