ವಿದೇಶ ಪ್ರವಾಸದಿಂದ ಬಂದ ಬಿಎಸ್ವೈ ಮೌನಕ್ಕೆ ಶರಣು: ನಾನಾ ವ್ಯಾಖ್ಯಾನ
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯ ಬಿಜೆಪಿ ಘಟಕಕ್ಕೆ ಭಾರವಾಗುತ್ತಿದ್ದಾರೆಯೇ? ಬಿಜೆಪಿ ಸಮನ್ವಯ ಬೈಠಕ್ ಬೆಂಗಳೂರಿನಲ್ಲಿ ಆರಂಭವಾಗಲಿದ್ದು ಈ ವೇಳೆ ಯಡಿಯೂರಪ್ಪನವರ ಮೌನ ಹಲವು ವ್ಯಾಖ್ಯಾನಕ್ಕೆ ಕಾರಣವಾಗಿದೆ.
ನಾಲ್ಕು ದಶಕಗಳ ಸುದೀರ್ಘ ರಾಜಕೀಯ ಅನುಭವವನ್ನು ಹೊಂದಿರುವ ಯಡಿಯೂರಪ್ಪನವರು ನಿಸ್ಸಂಶಯವಾಗಿ ಬಿಜೆಪಿ ಪಾಲಿಗೆ ಮಾಸ್ ಲೀಡರ್. ಅಧಿಕಾರದಲ್ಲಿ ಇರಲಿ, ಬಿಡಲಿ ಜನರ ಮಧ್ಯೆ ಇರುವ ನಾಯಕ ಎಂದೇ ಗುರುತಿಸಿಕೊಂಡಿರುವ ಯಡಿಯೂರಪ್ಪ ತಮ್ಮ ಎಂದಿನ ಲವಲವಿಕೆ ರಾಜಕೀಯದಿಂದ ಹಿಂದಕ್ಕೆ ಸರಿಯುತ್ತಿದ್ದಾರಾ? ಅಥವಾ ಹಿಂದೆ ಸರಿಯುವಂತೆ ಮಾಡಲಾಗುತ್ತಿದೆಯೇ ಎನ್ನುವ ಪ್ರಶ್ನೆ ಬಿಎಸ್ವೈ ಆಪ್ತ ವಲಯದಲ್ಲಿ ಕಾಡಲಾರಂಭಿಸಿದೆ.
ಪಕ್ಷಕ್ಕಾಗಿ ಇನ್ನೂ 10 ವರ್ಷ 24 ಗಂಟೆ ದುಡಿಯಲು ಸಿದ್ದ; ಯಡಿಯೂರಪ್ಪ
ಈ ರೀತಿಯ ಪ್ರಶ್ನೆ ಉದ್ಭವವಾಗಲು ಹಲವು ಕಾರಣಗಳಿವೆ. ರಾಜ್ಯ ಬಿಟ್ಟು ವಿಶ್ರಾಂತಿ, ಮನರಂಜನೆಯ ಹೆಸರಿನಲ್ಲಿ ಯಡಿಯೂರಪ್ಪ ಹೊರ ರಾಜ್ಯ/ದೇಶಗಳಿಗೆ ಹೋದ ಉದಾಹರಣೆಗಳು ಕಮ್ಮಿ. ಆದರೆ, ಅವರ ವಿದೇಶ ಪ್ರವಾಸ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ.
ಯಡಿಯೂರಪ್ಪನವರು ಸಕ್ರಿಯ ರಾಜಕಾರಣದಲ್ಲಿ ಇರಬೇಕು, ಅವರಿಗೆ ಸಿಗಬೇಕಾದ ಮರ್ಯಾದೆ ಸಿಗಬೇಕು ಎಂದು ದೆಹಲಿಯಲ್ಲಿ ಕೂತು ವರಿಷ್ಠರು ಹೇಳುತ್ತಿದ್ದರೂ, ಅದನ್ನು ತಡೆಯಲು ಇನ್ನೊಂದು ಗುಂಪು ಸಕ್ರಿಯವಾಗಿದೆ ಎನ್ನುವುದು ಗೊತ್ತಿರುವ ವಿಚಾರ.
ಮೋದಿಯವರನ್ನು ಸ್ವಾಗತಿಸಲು ಯಡಿಯೂರಪ್ಪ ವಿಮಾನ ನಿಲ್ದಾಣಕ್ಕೆ
ಯೋಗದಿನದ ಮುನ್ನಾದಿನ ಪ್ರಧಾನಿ ಮೋದಿಯವರನ್ನು ಸ್ವಾಗತಿಸಲು ಯಡಿಯೂರಪ್ಪ ವಿಮಾನ ನಿಲ್ದಾಣಕ್ಕೆ ಹೋಗಿದ್ದರು. ಅದರ ಮರುದಿನವೇ ಅಂದರೆ, ಮೋದಿಯವರು ರಾಜ್ಯ ಪ್ರವಾಸದಲ್ಲಿದ್ದಾಗಲೇ ಬಿಎಸ್ವೈ ಲಂಡನ್ ಪ್ರವಾಸಕ್ಕೆ ತೆರಳಿದರು. ಎರಡು ವಾರದ ನಂತರ ಬೆಂಗಳೂರಿಗೆ ವಾಪಸ್ ಆದರು. ಅವರನ್ನು ಸಿಎಂ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕಟೀಲ್ ಭೇಟಿಯಾಗಿದ್ದರು. ಇದಾದ ನಂತರ ಯಾವುದೇ ಹೇಳಿಕೆಗಳನ್ನು ನೀಡದೇ ಯಡಿಯೂರಪ್ಪ ಮೌನಕ್ಕೆ ಶರಣಾಗಿದ್ದಾರೆ.
ಯಡಿಯೂರಪ್ಪನವರ ಪ್ರಭಾವಳಿಯಿಂದ ಹೊರ ತರಲು ಹಲವು ಕಸರತ್ತು
ರಾಜ್ಯ ಬಿಜೆಪಿ ಘಟಕವನ್ನು ಯಡಿಯೂರಪ್ಪನವರ ಪ್ರಭಾವಳಿಯಿಂದ ಹೊರ ತರಲು ಹಲವು ಕಸರತ್ತುಗಳು ನಡೆಯುತ್ತಲೇ ಇದೆ. ಚುನಾವಣಾ ವರ್ಷವಾಗಿರುವುದರಿಂದ ಅವರನ್ನು ದೂರವಿಡುವ ಕೆಲಸ ನಡೆಯುತ್ತಿದೆ. ಆದರೆ, ಇನ್ನೊಂದು ಕಡೆ ಬಿಜೆಪಿ ಅಧಿಕಾರಕ್ಕೆ ಮತ್ತೆ ಬರಲು ಯಡಿಯೂರಪ್ಪನವರ ಅವಶ್ಯಕತೆಯನ್ನು ಅರಿತಿರುವ ಬಿಜೆಪಿ ವರಿಷ್ಠರು, ಪಕ್ಷದ ಕಾರ್ಯಗಳನ್ನು ಜನರಿಗೆ ಮುಟ್ಟಿಸಲು ಬಿಎಸೈ ಅವರನ್ನು ಹೆಚ್ಚು ಬಳಸಿಕೊಳ್ಳಲು ಸೂಚಿಸುವ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ.
ಅಮಿತ್ ಶಾ ಅವರು ಬಸವ ಜಯಂತಿಯ ಸಂದರ್ಭದಲ್ಲಿ ರಾಜ್ಯಕ್ಕೆ ಭೇಟಿ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಸವ ಜಯಂತಿಯ ಸಂದರ್ಭದಲ್ಲಿ ರಾಜ್ಯಕ್ಕೆ ಭೇಟಿ ನೀಡಿದ್ದರು. ಇದಾದ ನಂತರ, ಪಕ್ಷದ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಚಿತ್ರದುರ್ಗದ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ಎರಡೂ ಕಾರ್ಯಕ್ರಮಗಳಿಗೆ ಯಡಿಯೂರಪ್ಪನವರಿಗೆ ಆಹ್ವಾನವಿರಲಿಲ್ಲ ಎಂದು ಹೇಳಲಾಗುತ್ತಿದೆ. ವರಿಷ್ಠರು ರಾಜ್ಯಕ್ಕೆ ಬಂದಾಗ ಎಲ್ಲರಿಗಿಂತ ಮುಂದೆ ಅವರನ್ನು ಸ್ವಾಗತಿಸಲು ಹೋಗುವ ಯಡಿಯೂರಪ್ಪನವರ ಗೈರು ಪಕ್ಷದೊಳಗೆ ಹಲವು ಚರ್ಚೆಗೆ ಕಾರಣವಾಗಿತ್ತು.
ಒಲ್ಲದ ಮನಸ್ಸಿನಿಂದ ಯಡಿಯೂರಪ್ಪ ರಾಜೀನಾಮೆ ನೀಡಿದ ಸಂದರ್ಭ
ಒಲ್ಲದ ಮನಸ್ಸಿನಿಂದ ಯಡಿಯೂರಪ್ಪ ರಾಜೀನಾಮೆ ನೀಡಿದ ಸಂದರ್ಭದಲ್ಲಿ ಅವರಿಗೆ ರಾಜ್ಯಪಾಲ ಹುದ್ದೆಯ ಆಫರ್ ಅನ್ನು ನೀಡಲಾಗಿತ್ತು ಎನ್ನುವ ಸುದ್ದಿ ಹರಿದಾಡುತ್ತಿತ್ತು. ಪಕ್ಷದ ಚಟುವಟಿಕೆಯಲ್ಲಿ ಭಾಗವಹಿಸುವುದನ್ನು ಆಯ್ಕೆ ಮಾಡಿಕೊಂಡ ಯಡಿಯೂರಪ್ಪನವರ ವಿರುದ್ದ ಕತ್ತಿ ಮಸೆಯುವ ಕೆಲಸ ನಡೆಯುತ್ತಿದೆ. ಈ ಕಾರಣದಿಂದಲೇ ಬಿಎಸ್ವೈ ಮೌನಕ್ಕೆ ಶರಣಾಗಿದ್ದಾರೆ ಎನ್ನುವ ಮಾತು ಹರಿದಾಡುತ್ತಿದೆ. ಆದರೆ, ಯಡಿಯೂರಪ್ಪ ಇಲ್ಲದೇ ಬಿಜೆಪಿ ಮೂರಂಕಿ ದಾಟಲು ಸಾಧ್ಯವೇ ಎನ್ನುವುದಿಲ್ಲಿ ಪ್ರಶ್ನೆ.