Get Updates
Get notified of breaking news, exclusive insights, and must-see stories!

ವಿಜಯಾನಂದ ಕಾಶಪ್ಪನವರ್‌ ಅವಿವೇಕಿ: ರಮೇಶ್‌ಕುಮಾರ್

ಬೆಂಗಳೂರು, ಜು.4: ರೌಡಿ ಶೀಟರ್‌ ಸೋಮೇಗೌಡ ಜತೆ ಸೇರಿ ಹುನಗುಂದ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್‌ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾದ ಪ್ರಕರಣ ಶುಕ್ರವಾರ ವಿಧಾನಸಭೆ ಮತ್ತು ವಿಧಾನ ಪರಿಷತ್‌ ಕಲಾಪವನ್ನೇ ನುಂಗಿ ಹಾಕಿತು.

ಘಟನೆ ಬಗ್ಗೆ ಆಡಳಿತ ಪಕ್ಷದ ಸದಸ್ಯ ರಮೇಶ್‌ ಕುಮಾರ್‍ ಮಾತನಾಡಿ " ವಿಜಯಾನಂದ ಕಾಶಪ್ಪನವರ್ ಬುದ್ಧಿವಂತಿಕೆ ಪ್ರದರ್ಶನ ಮಾಡಬೇಕಿತ್ತು. ಸಿಕ್ಕಿಹಾಕಿಕೊಳ್ಳಬಾರದಿತ್ತು, ದಡ್ಡ, ಅವಿವೇಕಿ, ನುಣುಚಿಕೊಳ್ಳುವ ವಿಧಾನ ಗೊತ್ತಿಲ್ಲ" ಎಂದು ತಮ್ಮ ಪಕ್ಷದ ಸದಸ್ಯರನ್ನು ಹೀಯಾಳಿಸಿದಾಗ ಸಭೆಯಲ್ಲಿ ನಗೆಯ ಅಲೆ ತೇಲಾಡಿತು.

ಎರಡನೇ ದಿನವಾದ ಇಂದು ಕೂಡ ವಿಧಾನಸಭೆಯಲ್ಲಿ ಹಲ್ಲೆ ಪ್ರಕರಣ ಪ್ರತಿಧ್ವನಿಸಿ ಆಡಳಿತ ಮತ್ತು ವಿರೋಧಿ ಸದಸ್ಯರ ನಡುವೆ ಮಾತಿನ ಚಕಮಕಿ, ಆರೋಪ ಪ್ರತ್ಯಾರೋಪಕ್ಕೆ ಸಾಕ್ಷಿಯಾಗಿ ಬಿಜೆಪಿ ಸದಸ್ಯರು ಎರಡು ಬಾರಿ ಧರಣಿ ನಡೆಸಿ ಸೋಮವಾರಕ್ಕೆ ಕಲಾಪ ಮುಂದೂಡಲಾಯಿತು.

ವಿಪಕ್ಷ ನಾಯಕ ಜಗದೀಶ್‌ ಶೆಟ್ಟರ್ ಮಾತನಾಡಿ, ಇದೊಂದು ತಲೆ ತಗ್ಗಿಸುವ ವಿಚಾರವಾಗಿದೆ. ಶಾಸಕರು ತಪ್ಪು ಮಾಡಿಲ್ಲ ಎನ್ನುವುದಾದರೆ ಶಾಸಕರು ಅವಿತಿರುವುದು ಏಕೆ ಬಹಿರಂಗವಾಗಿ ಓಡಾಡಬಹುದಿತ್ತಲ್ಲ ಎಂದು ಅವರು ಸರ್ಕಾರವನ್ನು ಪ್ರಶ್ನಿಸಿದರು.

ನಮಗೆ ರಕ್ಷಣೆ ನೀಡುವ ಪೊಲೀಸರ ಮೇಲೆಯೇ ಹಲ್ಲೆ ನಡೆಸಿರುವುದು ಸರಿಯಲ್ಲ. ಇದೆಲ್ಲವನ್ನೂ ನೋಡಿದರೆ ರಾಜ್ಯದಲ್ಲಿ ಪೊಲೀಸ್ ಇಲಾಖೆಯೇ ಬೇಡ ಎನಿಸುತ್ತದೆ. ಸರ್ಕಾರ ನಿನ್ನೆ ಸದನದಲ್ಲಿ ಉತ್ತರ ನೀಡುವುದಾಗಿ ಹೇಳಿಕೆ ನೀಡಿತ್ತು. ಶಾಸಕರು ಬಂಧನದ ಭೀತಿ ಎದುರಿಸುತ್ತಿದ್ದಾರೆ ಎಂದು ಪತ್ರಿಕೆಗಳಲ್ಲಿ ಬಂದಿದೆ. ಶಾಸಕರು ಕದ್ದುಮುಚ್ಚಿ ಆಟವಾಡುತ್ತಿರುವುದನ್ನು ನೋಡಿದರೆ ಅವರು ತಪ್ಪು ಮಾಡಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ. ಸರ್ಕಾರ ಈ ಪ್ರಕರಣದಲ್ಲಿ ಉತ್ತರ ಕೊಡಲು ಏನು ಸಮಸ್ಯೆ ಇದೆ. ಇದೆಲ್ಲವನ್ನೂ ನೋಡಿದರೆ ಸರ್ಕಾರ ಏನೋ ಮುಚ್ಚಿಡಲು ಪ್ರಯತ್ನ ಮಾಡುತ್ತಿದೆ ಎಂದು ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.[ಪೊಲೀಸರ ಮೇಲೆ ಹಲ್ಲೆ: ಶಾಸಕ ಕಾಶಪ್ಪನವರ್ ಪರಾರಿ]

ಆಡಳಿತ ಪಕ್ಷದ ಸದಸ್ಯರ ಗಲಾಟೆ ಜೋರಾದಾಗ ಕಾಂಗ್ರೆಸ್‌ ಸದಸ್ಯರು ನೀವು ಆಡಳಿತದಲ್ಲಿದ್ದಾಗ ಬ್ಲೂ ಫಿಲಂ ಪ್ರಕರಣ ಏನಾಯಿತು? ಶಾಸಕರ ಮೇಲೆ ಯಾವ ಕ್ರಮ ಕೈಗೊಂಡಿದ್ದಿರಿ ಎಂದಾಗ ಪ್ರತಿಪಕ್ಷ ಮತ್ತು ಆಡಳಿತ ಸದಸ್ಯರ ಮೇಲೆ ಮಾತಿನ ಚಕಮಕಿ ನಡೆದು ಸಭೆಯಲ್ಲಿ ಯಾರು ಏನು ಹೇಳುತ್ತಾರೆ ಎನ್ನುವುದು ಕೇಳಿಸದಂತಹ ಪರಿಸ್ಥಿತಿ ನಿರ್ಮಾಣವಾಯಿತು.

ವಿಪಕ್ಷಗಳ ಆರೋಪ ರಾಜಕೀಯ ಪ್ರೇರಿತ:
ವಿಪಕ್ಷಗಳಿಗೆ ಉತ್ತರ ನೀಡಲು ಮೂರು ದಿನಗಳ ಕಾಲ ಅವಕಾಶವಿದೆ. ಯಾವುದೇ ವಿಚಾರ ಇಲ್ಲದೇ ವಿಪಕ್ಷ ಸದಸ್ಯರು ಗದ್ದಲ ಎಬ್ಬಿಸುತ್ತಿದ್ದಾರೆ. ಯಾರೇ ತಪ್ಪು ಮಾಡಿದರೂ ಶಿಕ್ಷೆಯಾಗುತ್ತದೆ. ತನಿಖೆ ಪ್ರಗತಿಯಲ್ಲಿದೆ ಎಂದು ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

MLA Vijayanand Kashappanavar
ಉತ್ತರ ಪ್ರತಿ ಹಾರಿದ ಹಾಕಿದ ಈಶ್ವರಪ್ಪ:
ವಿಜಯಾನಂದ ಕಾಶಪ್ಪನವರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಿಯಾದ ಉತ್ತರ ನೀಡಲು ವಿಫಲವಾದ ಸರ್ಕಾರದ ವಿರುದ್ಧ ವಿಧಾನ ಪರಿಷತ್‌ನಲ್ಲಿ ಉತ್ತರ ಪ್ರತಿಯನ್ನು ವಿರೋಧ ಪಕ್ಷದ ನಾಯಕ ಈಶ್ವರಪ್ಪ ಹಾರಿದು ಹಾಕಿ ಪ್ರತಿಭಟಿಸಿದರು.

ಸ್ಕೈಬಾರ್‌ಗೆ ಶೋಕಾಸ್ ನೋಟಿಸ್:
ಶಾಸಕ ವಿಜಯಾನಂದ ಕಾಶನಪ್ಪವರ್ ಹಾಗೂ ಬೆಂಬಲಿಗರಿಗೆ ಅವಧಿ ಮೀರಿ ಮದ್ಯ ಸರಬರಾಜು ಮಾಡಿರುವುದು ಹಾಗೂ ತಡ ರಾತ್ರಿವರೆಗೆ ಬಾರ್ ತೆರೆದಿದ್ದುದನ್ನು ಪ್ರಶ್ನಿಸಿ ಅಬಕಾರಿ ಇಲಾಖೆ ಯುಬಿ ಸಿಟಿಯ ಸ್ಕೈಬಾರ್‌ನವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ನೋಟಿಸ್‌ಗೆ ಉತ್ತರಿಸಲು ಏಳು ದಿನಗಳ ಗಡುವು ನೀಡಿದೆ. ಅಷ್ಟರೊಳಗೆ ಉತ್ತರ ನೀಡದಿದ್ದರೆ ಸ್ಕೈಬಾರ್ ಲೈಸನ್ಸ್ ರದ್ದು ಪಡಿಸುವುದಾಗಿ ನೋಟಿಸ್‌ನಲ್ಲಿ ಎಚ್ಚರಿಕೆ ನೀಡಲಾಗಿದೆ.

ಆರೋಪಿಗಳ ಬಂಧನಕ್ಕೆ ಪೊಲೀಸರ ಶೋಧ:
ಪ್ರಕರಣದ ಮೊದಲ ಆರೋಪಿ ಸೋಮಶೇಖರ ಗೌಡ, ಶಾಸಕ ವಿಜಯಾನಂದ ಕಾಶನಪ್ಪವರ್ ಮತ್ತು ಬೆಂಬಲಿಗರ ಪತ್ತೆ ಕಾರ್ಯಕ್ಕೆ ಪೊಲೀಸರು ವಿಶೇಷ ತಂಡ ರಚಿಸಿ ಶೋಧ ಕಾರ್ಯ ಆರಂಭಿಸಿದ್ದಾರೆ.

ಸಿಸಿ ಕ್ಯಾಮೆರಾದ ದೃಶ್ಯ ನೀಡದಂತೆ ಸರ್ಕಾರದಿಂದ ಆದೇಶ!
ಪೊಲೀಸರ ಮೇಲೆ ಶಾಸಕರು ಮತ್ತು ಬೆಂಬಲಿಗರು ನಡೆಸಿದ್ದಾರೆ ಎನ್ನಲಾದ ಹಲ್ಲೆ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದರೂ, ಯಾವುದೇ ಕಾರಣಕ್ಕೂ ಮಾಧ್ಯಮಗಳಿಗೆ ವಿಡಿಯೋವನ್ನು ನೀಡದಂತೆ ಪೊಲೀಸ್‌ ಇಲಾಖೆಗೆ ರಾಜ್ಯ ಸರ್ಕಾರ ಆದೇಶ ನೀಡಿದೆ ಎಂದು ಹೇಳಲಾಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+