ದಲಿತರು ಮುಟ್ಟಿ ಸ್ವಾಮೀಜಿಗಳು ಅಪವಿತ್ರ: ಬಿಜೆಪಿ ಗ್ರೂಪ್ನಲ್ಲಿ ಚರ್ಚೆ
ಮೂಡಿಗೆರೆ, ಫೆಬ್ರವರಿ 24: 'ದಲಿತ ಮುಟ್ಟಿದ್ದರಿಂದ ನಿರ್ಮಲಾನಂದ ಸ್ವಾಮಿಗಳು ಅಪವಿತ್ರ ಆಗಿದ್ದಾರೆ' ಹೀಗೊಂದು ಚರ್ಚೆ 'BJP ಮೂಡಿಗೆರೆ ಮಂಡಲ' ಎಂಬ ವಾಟ್ಸಾಪ್ ಗ್ರೂಪ್ನಲ್ಲಿ ನಡೆದಿದೆ.
ದಲಿತ ಮುಖಂಡ ಮೂಡಿಗೆರೆ ಮಾಜಿ ಶಾಸಕ ಕುಮಾರಸ್ವಾಮಿ ಅವರು ಮೊನ್ನೆ ನಡೆದ ಪಕ್ಷದ ಕಾರ್ಯಕ್ರಮ ಸಂದರ್ಭ ವೇದಿಕೆ ಮೇಲೆ ನಿರ್ಮಲಾನಂದ ಸ್ವಾಮಿ ಅವರ ಪಾದ ಮುಟ್ಟಿದ ಕಾರಣ ಅವರು ಅಪವಿತ್ರ ಆಗಿದ್ದಾರೆ ಎಂಬರ್ಥ ಹೊಮ್ಮುವಂತೆ ಮೂಡಿಗೆರೆ ಬಿಜೆಪಿ ವಾಟ್ಸಾಪ್ ಗ್ರೂಪ್ನಲ್ಲಿ ಸಂದೇಶ ಹರಿದಾಡಿದೆ ಇದಕ್ಕೆ ಅದೇ ಗ್ರೂಪ್ನಲ್ಲಿ ವಿರೋಧವೂ ವ್ಯಕ್ತವಾಗಿದೆ.
ಮೂಡಿಗೆರೆಯಲ್ಲಿ ಈ ಬಾರಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಿದ್ದು, ಅದರಲ್ಲಿ ದಲಿತರಾಗಿರುವ ಕುಮಾರಸ್ವಾಮಿ ಅವರೂ ಕೂಡ ಒಬ್ಬರಾಗಿದ್ದಾರೆ. ಇತ್ತೀಚೆಗೆ ಮೂಡಿಗೆರೆಯಲ್ಲಿ ಬಿಜೆಪಿ ರ್ಯಾಲಿ ನಂತರ ಮೂಡಿಗೆರೆ ಬಿಜೆಪಿಯಲ್ಲಿ ಭಿನ್ನಮತ ಹೆಚ್ಚಾಗಿದ್ದು, ಕುಮಾರಸ್ವಾಮಿ ಅವರ ವಿರೋಧಿ ಬಣದ ಸದಸ್ಯರು ಈ ರೀತಿಯ ಮೆಸೆಜ್ ಒಂದನ್ನು ಗ್ರೂಪ್ನಲ್ಲಿ ಹಾಕಿದ್ದಾರೆ.
ಕುಮಾರಸ್ವಾಮಿ ವಿರೋಧಿ ಬಣದ ಸದಸ್ಯ ಸುಂದ್ರೇಶ್ ಕೆ.ಪಿ ಎಂಬುವರು ಕುಮಾರಸ್ವಾಮಿ ಅವರ ಕುರಿತು 'ಅಯೋಗ್ಯ'ರು ಸ್ವಾಮಿಯನ್ನು ಮುಟ್ಟಿರುವುದರಿಂದ ನಿರ್ಮಲಾನಂದ ಸ್ವಾಮಿಗಳು ಅಪವಿತ್ರರಾಗಿದ್ದಾರೆ ಎಂದು ವಾಟ್ಸಾಪ್ ಗ್ರೂಪ್ನಲ್ಲಿ ಸಂದೇಶ ಹಾಕಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರಘುಪತಿ ಬಾಳೂರು ಎಂಬುವರು ದಲಿತರು ಮುಟ್ಟಿದರೆ ಸ್ವಾಮಿಗಳು ಅಪವಿತ್ರ ಆಗುತ್ತಾರೆಯೇ? ಎಂದು ಪ್ರಶ್ನಿಸಿದ್ದರು.
ಆ ನಂತರ ಸ್ಪಷ್ಟೀಕರಣ ನೀಡಲು ಪ್ರಯತ್ನಿಸಿದ ಸುಂದ್ರೇಶ್ 'ನಾನು ದಲಿತ ಎಂಬ ಪದ ಬಳಸಿಲ್ಲ, ಅಯೋಗ್ಯ ಎಂದಿದ್ದೇನೆ ಅಷ್ಟೆ' ಎಂದು ಮೆಸೆಜ್ ಮಾಡಿದ್ದಾರೆ. ಈ ಚರ್ಚೆ ಹೀಗೆ ಮುಂದುವರೆದಿದೆ.
ಆದರೆ ಈ ಚರ್ಚೆಯಿಂದ ಬಿಜೆಪಿಯಲ್ಲಿಯೇ ದಲಿತ ವಿರೋಧಿ ಮನಸ್ಥಿತಿ ಇನ್ನೂ ಜಾಗೃತವಾಗಿದೆ ಎಂಬುದು ಮೇಲ್ನೋಟಕ್ಕೆ ಕಾಣುತ್ತದೆ, ಮೂಡಿಗೆರೆಯ ಬಿಜೆಪಿಯೇತರ ಪಕ್ಷದ ಸದಸ್ಯರು ಮೆಸೆಜ್ಗಳ ಸ್ಕ್ರೀನ್ ಶಾಟ್ ಇಟ್ಟುಕೊಂಡು ಬಿಜೆಪಿ ದಲಿತ ವಿರೋಧಿ ಎಂಬುದರ ಸಾಕ್ಷಿ ಇದು ಎನ್ನುತ್ತಿವೆ.
ಘಟನೆ ಬಗ್ಗೆ ಮಾಜಿ ಶಾಸಕ ಕುಮಾರಸ್ವಾಮಿ ಅವರು ಬಿಜೆಪಿ ಜಿಲ್ಲಾ ಅಧ್ಯಕ್ಷರಿಗೆ ದೂರು ನೀಡಿದ್ದು, ಅವರು ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.