Lawyer Jagadeesh: ಅಣ್ಣಾಮಲೈ ರೀತಿ ಶರ್ಟ್ ಬಿಚ್ಕೊಂಡು ಲಾಯರ್ ಜಗದೀಶ್ ಗೇಲಿ
ಅಣ್ಣಾ ವಿಶ್ವವಿದ್ಯಾಲಯದಲ್ಲಿ ಅತ್ಯಾಚಾರ ಖಂಡಿಸಿ ಡಿಎಂಕೆ ಸರ್ಕಾರದ ವಿರುದ್ಧ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಅವರು ಚಾಟಿಯಿಂದ ಬಾರಿಸಿಕೊಂಡು ವಿನೂತನ ಪ್ರತಿಭಟನೆ ಮಾಡುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ಇದನ್ನು ಕೆಲವರು ಬೆಂಬಲಿಸಿದರೆ, ಹಲವರು ಟೀಕಿಸಿದ್ದಾರೆ. ಬಿಗ್ಬಾಸ್ ಸ್ಪರ್ಧಿಯಾಗಿದ್ದ ಲಾಯರ್ ಜಗದೀಶ್ ಕೂಡ ಅಣ್ಣಾಮಲೈ ಅವರ ಪ್ರತಿಭಟನೆಯನ್ನು ಅಣಕಿಸಿದ್ದಾರೆ.
ಜಿಎಸ್ಟಿ ವಿರುದ್ಧವಾಗಿ ನಾನು ಪ್ರತಿಭಟನೆ ನಡೆಸುತ್ತಿದ್ದೇನೆ ಎಂದು ಲಾಯರ್ ಜಗದೀಶ್ ಹೇಳಿದ್ದಾರೆ. ಪೆನ್ನು, ಪೆನ್ಸಿಲ್, ರಬ್ಬರ್ ಮೇಲೂ ಜಿಎಸ್ಟಿ ಹಾಕಿದ್ದಾರೆ. ಹಾಗಾಗಿ ಚಡಿ ಏಟಿನ ಮೂಲಕ ಪ್ರತಿಭಟನೆ ಮಾಡುತ್ತಿದ್ದೇನೆ ಎಂದು ಕೈಯಲ್ಲಿ ಪಂಚೆ ಹಿಡಿದು ವ್ಯಂಗ್ಯವಾಗಿ ಪ್ರತಿಭಟನೆ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ನನ್ನ ಹೆಸರು ಸ್ವರ್ಣಾಮಲೈ ಎಂದು ಅಣ್ಣಾಮಲೈ ಅವರಿಗೆ ವ್ಯಂಗ್ಯ ಮಾಡಿದ್ದಾರೆ. ಅಲ್ಲದೆ ಟೀ ಮಾರುವವರು ಎಲ್ಲದರ ಮೇಲೂ ಜಿಎಸ್ಟಿ ಹಾಕಿದ್ದಾರೆ. ಮುಂದೆ ನಮ್ಮ ಅಂಗಾಂಗಳಿಗೂ ಜಿಎಸ್ಟಿ ಹಾಕಬಹುದು. ಆ ಮಟ್ಟಕ್ಕೆ ಸೀತಾರಾಮನ್ ಅವರು ಬಂದಿದ್ದಾರೆ. ಹಾಗಾಗಿ ಜಿಎಸ್ಟಿ ವಿರುದ್ಧ ನನ್ನ ಪ್ರತಿಭಟನೆ ಎಂದು ಪಂಚೆಯಲ್ಲಿ ಸುತ್ತಿ ಹೊಡೆದುಕೊಂಡಂತೆ ವಿಡಿಯೋ ಮಾಡಿದ್ದಾರೆ.
ತಮಿಳುನಾಡು ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ ಅವರು ತಮ್ಮ ನಿವಾಸದ ಮುಂದೆ ವಿಭಿನ್ನವಾಗಿ ಪ್ರತಿಭಟನೆ ಮಾಡುವ ಮೂಲಕ ಎಲ್ಲರಿಗೂ ಶಾಕ್ ಕೊಟ್ಟಿದ್ದರು. ಸಾರ್ವಜನಿಕವಾಗಿ ತಮ್ಮ ಅಂಗಿ ಬಿಚ್ಚಿ, ಚಾಟಿಯಿಂದ ಬಾರಿಸಿಕೊಂಡು ಅಣ್ಣಾಮಲೈ ಪ್ರತಿಭಟನೆ ಮಾಡಿರುವ ವಿಡಿಯೋ ವೈರಲ್ ಆಗಿತ್ತು.

ತಮಿಳುನಾಡಿನ ಅಣ್ಣಾ ಯೂನಿವರ್ಸಿಟಿಯಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣ ಖಂಡಿಸಿ, ಡಿಎಂಕೆ ಸರ್ಕಾರದ ವಿರುದ್ಧ ಅಣ್ಣಾಮಲೈ ಈ ರೀತಿ ಆಕ್ರೋಶ ಹೊರಹಾಕಿದ್ದರು. ಚೆನ್ನೈನ ಅಣ್ಣಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳನ್ನು ರಕ್ಷಿಸುವಲ್ಲಿ ಡಿಎಂಕೆ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಅವರು ಹಲವು ಬಾರಿ ಚಾಟಿಯೇಟು ಬಾರಿಸಿಕೊಂಡಿದ್ದರು. ಈ ಫೋಟೋ ಹಾಗೂ ವಿಡಿಯೋ ವೈರಲ್ ಆಗಿತ್ತು.
ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವವರೆಗೆ ನಾನು ಪಾದರಕ್ಷೆಗಳನ್ನು ಕಾಲಿಗೆ ಧರಿಸುವುದಿಲ್ಲ ಎಂದು ಅಣ್ಣಾಮಲೈ ಶಪಥ ಮಾಡಿದ್ದರು. ಅಣ್ಣಾ ಯೂನಿವರ್ಸಿಟಿಯಲ್ಲಿ ಸಿಸಿಟಿವಿ ಕ್ಯಾಮರಾಗಳ ಕೊರತೆ ಇದ್ದು, ಮಹಿಳೆಯರ ಸುರಕ್ಷತೆಗಾಗಿ ಉದ್ದೇಶಿಸಿರುವ ನಿರ್ಭಯಾ ನಿಧಿಯನ್ನು ಎಷ್ಟರಮಟ್ಟಿಗೆ ಬಳಸಿದೆ ಎಂದು ಕಿಡಿಕಾರಿದ್ದರು.
15 ಲೈಂಗಿಕ ಅಪರಾಧ ಕೇಸ್ಗಳಲ್ಲಿ ಭಾಗಿಯಾಗಿರುವ ವ್ಯಕ್ತಿಯನ್ನು ಇಷ್ಟು ದಿನವಾದರೂ ಯಾವುದೇ ಕ್ರಮ ಕೈಗೊಳ್ಳದೆ ಬಿಟ್ಟಿದ್ದಕ್ಕೆ ಇಂದು ಅಮಾಯಕ ವಿದ್ಯಾರ್ಥಿನಿ ಮೇಲೆ ಕ್ರೌರ್ಯ ನಡೆದಿದೆ. ಇದಕ್ಕೆ ಡಿಎಂಕೆ ಸರ್ಕಾರವೇ ಹೊಣೆ, ಇದನ್ನು ತಮಿಳುನಾಡಿನ ಜನರು ಇನ್ನೆಷ್ಟು ದಿನ ಸಹಿಸಿಕೊಳ್ಳಬೇಕು? ಆಡಳಿತ ಪಕ್ಷದ ಅಪರಾಧಿಗಳ ಮೇಲೆ ಕ್ರಮ ಕೈಗೊಳ್ಳಬಾರದು ಎಂಬ ಕಾನೂನು ತಮಿಳುನಾಡಿನಲ್ಲಿದೆಯೇ? ಎಂದು ಅಣ್ಣಾಮಲೈ ಹರಿಹಾಯ್ದಿದ್ದರು. ಅಣ್ಣಾಮಲೈ ಅವರ ಪ್ರತಿಭಟನೆಯ ಬಗ್ಗೆ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ. ಕೆಲವರು ಅಣ್ಣಾಮಲೈ ಅವರನ್ನು ಭವಿಷ್ಯದ ನಾಯಕ ಎಂದು ಕರೆದರೆ, ಇದು ಹುಚ್ಚಾಟ ಎನ್ನುತ್ತಿದ್ದಾರೆ. ಜಗದೀಶ್ ಅವರೂ ಈ ವಿಡಿಯೋ ಮೂಲಕ ವ್ಯಂಗ್ಯವಾಡಿದ್ದಾರೆ.












Click it and Unblock the Notifications