ಬಿಎಸ್ವೈ ಆಡಿಯೋ ಹಿಡಿದುಕೊಂಡು ಸುಪ್ರೀಂಗೆ ಹೋಗಿದ್ದ ಕಾಂಗ್ರೆಸ್ಸಿಗೆ ಮುಖಭಂಗ
ಬಹುನಿರೀಕ್ಷಿತ ಅನರ್ಹ ಶಾಸಕರ ಸರ್ವೋಚ್ಚ ನ್ಯಾಯಾಲಯದ ತೀರ್ಪಿನಲ್ಲಿ ರಾಜಕಾರಣಿಗಳು ಕಲಿಯಬೇಕಾದ ಪಾಠವೇನು ಎಂದರೆ, ಅದಕ್ಕೆ ಸೂಕ್ತ ಉತ್ತರ ಸಿಗುವುದು ಕಷ್ಟ.
ಕರ್ನಾಟಕ ಸ್ಪೀಕರ್ ಅವರ ಅನರ್ಹತೆಯನ್ನು ಎತ್ತಿ ಹಿಡಿದ ಸುಪ್ರೀಂಕೋರ್ಟ್, ಅನರ್ಹ ಶಾಸಕರಿಗೆ ಮರುಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿದೆ. ಒಂದು ವೇಳೆ, ಅನರ್ಹ ಶಾಸಕರು ಇಂತಿಷ್ಟು ವರ್ಷ ಚುನಾವಣಾ ಕಣದಿಂದ ಸ್ಪರ್ಧಿಸುವಂತಿಲ್ಲ ಎನ್ನುವ ತೀರ್ಪನ್ನು ನೀಡಿದ್ದರೆ, ಸುಪ್ರೀಂ ತೀರ್ಪು ಪಾಠವಾಗುತ್ತಿತ್ತೋ ಏನೋ?
ಅನರ್ಹ ಶಾಸಕರ ವಿಚಾರಣೆಯೆಲ್ಲಾ ಮುಗಿದ ಮೇಲೆ, ಹೊರಬಂದಿದ್ದು, ಮುಖ್ಯಮಂತ್ರಿ ಯಡಿಯೂರಪ್ಪನವರ ಆಡಿಯೋ. ಹುಬ್ಬಳ್ಳಿಯಲ್ಲಿ ಸಿಎಂ ಮಾತಡಿದ್ದಾರೆ ಎನ್ನಲಾದ ಈ ಆಡಿಯೋ ಹಿಡಿದುಕೊಂಡು, ಕಾಂಗ್ರೆಸ್, ಸರ್ವೋಚ್ಚ ನ್ಯಾಯಪೀಠಕ್ಕೆ ಹೋಗಿತ್ತು.
ವಿಚಾರಣೆಯೆಲ್ಲಾ ಮುಗಿದಿದೆ, ಈಗ ಅದನ್ನು ಪರಿಗಣಿಸಲು ಸಾಧ್ಯವಿಲ್ಲ. ಆದರೆ, ತೀರ್ಪು ನೀಡುವ ವೇಳೆ, ಇದನ್ನು ಸಾಕ್ಷಿಯೆಂದು ಪರಿಗಣಿಸುವುದಾಗಿ ಸುಪ್ರೀಂಕೋರ್ಟ್ ಹೇಳಿತ್ತು. ಅಲ್ಲಿಗೆ, ಅನರ್ಹ ಶಾಸಕರಿಗೆ ಮತ್ತು ಯಡಿಯೂರಪ್ಪನವರಿಗೆ ಆತಂಕ ಆರಂಭವಾಗಿತ್ತು.

ಸಿಎಂ ಬಿಎಸ್ವೈ ಮಾತನಾಡಿರುವ ಆಡಿಯೋ ಸೋರಿಕೆ
ಅನರ್ಹ ಶಾಸಕರ ಕುರಿತು ಸಿಎಂ ಯಡಿಯೂರಪ್ಪ ಮಾತನಾಡಿರುವ ಆಡಿಯೋ ಸೋರಿಕೆಯಿಂದ ರಾಷ್ಟ್ರಮಟ್ಟದಲ್ಲಿ ತೀವ್ರ ಮುಜುಗರಕ್ಕೆ ಬಿಜೆಪಿ ಒಳಗಾಗಿತ್ತು. ಈ ಬಗ್ಗೆ ವರದಿ ನೀಡುವಂತೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗೆ ಪಕ್ಷದ ವರಿಷ್ಠರು ಸೂಚನೆಯನ್ನು ನೀಡಿದ್ದರು. ಆದರೆ, ಈ ವರದಿಯನ್ನು, ಯಡಿಯೂರಪ್ಪ ಮತ್ತು ಕಟೀಲ್ ನಿರಾಕರಿಸಿದ್ದರು.

ಸುಪ್ರೀಂಕೋರ್ಟ್ ಇಂದಿನ ತೀರ್ಪು
ಸುಪ್ರೀಂಕೋರ್ಟ್ ಇಂದಿನ ತೀರ್ಪಿನಲ್ಲಿ ಪ್ರತ್ಯೇಕವಾಗಿ ಯಡಿಯೂರಪ್ಪನವರ ಆಡಿಯೋದ ಬಗ್ಗೆ ಉಲ್ಲೇಖಮಾಡಿಲ್ಲ. ಹದಿನೇಳು ಶಾಸಕರು ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದು ಹೌದು ಎಂದು ಸುಪ್ರೀಂ ಹೇಳಿದೆ. ಆದರೆ, ಅವರಿಗೆಲ್ಲಾ ಚುನಾವಣೆಗೆ ಸ್ಪರ್ಧಿಸಲು ಗ್ರೀನ್ ಸಿಗ್ನಲ್ ನೀಡಿದೆ.

ಸ್ಪೀಕರ್, ಜನಾದೇಶದ ವಿರುದ್ದ ನಡೆದುಕೊಳ್ಳಬಾರದು
ಕುದುರೆ ವ್ಯಾಪಾರ ನಡಿದಿದ್ದೇ ಆದಲ್ಲಿ, ಅವರ ರಾಜೀನಾಮೆಯನ್ನು ಆಂಗೀಕರಿಸುವುದು ಸ್ಪೀಕರ್ ವಿವೇಚನೆಗೆ ಬಿಟ್ಟ ವಿಚಾರ. ಆದರೆ, ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರ ಬಂದಾಗ, ಚುನಾವಣಾ ಫಲಿತಾಂಶ ಏನಿದ್ದರೂ ಜನಾದೇಶವಾಗಿರುತ್ತದೆ. ಸ್ಪೀಕರ್, ಜನಾದೇಶದ ವಿರುದ್ದ ನಡೆದುಕೊಳ್ಳಬಾರದು ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.

ಆತಂಕಗೊಂಡಿದ್ದ ಅನರ್ಹ ಶಾಸಕರು
ಶಾಸಕರು ಚುನಾವಣಾ ಕಣಕ್ಕಿಳಿಯಲು ಅವಕಾಶ ನೀಡಿದರೂ ಅವರು ಸದ್ಯಕ್ಕೆ ಸಚಿವರಾಗಲು ನ್ಯಾಯಾಲಯ ಒಪ್ಪಿಗೆ ಕೊಟ್ಟಿಲ್ಲ. ಉಪ ಚುನಾವಣೆಯಲ್ಲಿ ಅವರು ಗೆದ್ದರೆ ಮಾತ್ರ ಸಚಿವರಾಗಬಹುದು ಎಂದು ಸುಪ್ರೀಂ ಅತ್ಯಂತ ಸ್ಪಷ್ಟವಾಗಿ ಹೇಳಿದೆ. ಒಟ್ಟಾರೆಯಾಗಿ, ಯಡಿಯೂರಪ್ಪ ಆಡಿಯೋ ಲೀಕ್ ಪ್ರಕರಣ, ತಮ್ಮ ರಾಜಕೀಯ ಜೀವನಕ್ಕೆ ಮುಳುವಾಗಬಹುದು ಎಂದು ಆತಂಕಗೊಂಡಿದ್ದ ಅನರ್ಹ ಶಾಸಕರು ಆ ಮಟ್ಟಿಗೆ ನಿರಾಳರಾಗಿದ್ದಾರೆ.

ಆಡಿಯೋ ಹಿಡಿದುಕೊಂಡು ಸುಪ್ರೀಂ ಬಾಗಿಲಿಗೆ ಹೋಗಿದ್ದ ಕಾಂಗ್ರೆಸ್ಸಿಗೂ ಹಿನ್ನಡೆ
ಸುಪ್ರೀಂಕೋರ್ಟ್ ತೀರ್ಪು, ಒಂದು ರೀತಿಯಲ್ಲಿ, ಸ್ಪೀಕರ್ ವಿರುದ್ದ ಅನರ್ಹ ಶಾಸಕರ ಗೆಲುವೆಂದೇ ವ್ಯಾಖ್ಯಾನಿಸಬಹುದು. 2023ರ ತನಕ ಚುನಾವಣೆ ಕಣಕ್ಕಿಳಿಯಬಾರದು ಎಂದು ಸ್ಪೀಕರ್ ನಿರ್ಬಂಧ ಹೇರಿದ್ದರು. ಜೊತೆಗೆ, ಬಿಎಸ್ವೈ ಆಡಿಯೋವನ್ನು ಸಾಕ್ಷಿಯಾಗಿ ಪರಿಗಣಿಸುವುದಾಗಿ, ಸರ್ವೋಚ್ಚ ನ್ಯಾಯಾಲಯ ಹೇಳಿತ್ತು. ಈಗ, ಸುಪ್ರೀಂ ತೀರ್ಪಿನ ನಂತರ, ಆಡಿಯೋ ಹಿಡಿದುಕೊಂಡು ಸುಪ್ರೀಂ ಬಾಗಿಲಿಗೆ ಹೋಗಿದ್ದ ಕಾಂಗ್ರೆಸ್ಸಿಗೂ ಹಿನ್ನಡೆಯಾಗಿದೆ. ಯಾಕೆಂದರೆ, ಸುಪ್ರೀಂ ಇದರ ಬಗ್ಗೆ ತಲೆಕೆಡಿಸಿಕೊಂಡಂತಿಲ್ಲ.












Click it and Unblock the Notifications