ಸಿಎಸ್ಕೆ ವಿರುದ್ಧ ಗೆಲುವಿನ ಬಳಿಕ 'ವಿಸಿಲ್ ಪೋಡು' ಶೈಲಿಯಲ್ಲಿ ಸಂಭ್ರಮಿಸಿದ ಎಸ್ಆರ್ಎಚ್ ಸ್ಟಾರ್ ಇಶಾನ್ ಕಿಶನ್
SRH Ishan Kishan: ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಸೋಮವಾರ (ಮೇ 18) ನಡೆದ ರೋಚಕ ಐಪಿಎಲ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವು ಸಿಎಸ್ಕೆ ಮಣಿಸಿ ಪ್ಲೇಆಫ್ಗೆ ಎಂಟ್ರಿ ಕೊಟ್ಟಿತು. ಬಳಿಕ ಇಶಾನ್ ಕಿಶನ್ 'ವಿಸಿಲ್ ಪೋಡು' ಶೈಲಿಯಲ್ಲಿ ಸಂಭ್ರಮಿಸಿ ತಮಾಷೆಯಾಗಿ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳನ್ನು ಕಾಲೆಳೆದರು.
ಸನ್ ರೈಸರ್ಸ್ ಹೈದರಾಬಾದ್ ತಂಡದ ಇಶಾನ್ ಕಿಶನ್ ಆಕ್ರಮಣಕಾರಿ ಆಟದ ಮೂಲಕ ತಮ್ಮ ತಂಡವನ್ನು ಪ್ಲೇಆಫ್ ಪ್ರವೇಶಿಸುವಂತೆ ಮಾಡಿದರು. ಪಂದ್ಯದ ಬಳಿಕ ಅವರು ಸಿಎಸ್ಕೆಯ ಪ್ರಸಿದ್ಧ 'ವಿಸಿಲ್ ಪೋಡು' ಶೈಲಿಯಲ್ಲಿ ಸಂಭ್ರಮಿಸಿದರು. ಅಷ್ಟೇ ಅಲ್ಲದೆ ಚೆನ್ನೈ ಅಭಿಮಾನಿಗಳನ್ನು ತಮಾಷೆಯಾಗಿ ಕೆಣಕುವ ಮೂಲಕ ಗಮನ ಸೆಳೆದಿದ್ದು, ಈ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.

ಎಸ್ಆರ್ಎಚ್ಗೆ ಗೆಲುವು ತಂದುಕೊಟ್ಟ ಇಶಾನ್ ಕಿಶನ್
ಈ ಪಂದ್ಯದಲ್ಲಿ ಕೇವಲ 47 ಎಸೆತಗಳಲ್ಲಿ 70 ರನ್ ಚಚ್ಚಿದ ಕಿಶನ್ ಸಿಎಸ್ಕೆ ವಿರುದ್ಧ ಎಸ್ಆರ್ಎಚ್ಗೆ 5 ವಿಕೆಟ್ಗಳ ಅಮೋಘ ಜಯ ತಂದುಕೊಟ್ಟರು. ಮೊದಲು ಬ್ಯಾಟಿಂಗ್ ಮಾಡಿದ್ದ ಚೆನ್ನೈ ತಂಡವು ಹೈದರಾಬಾದ್ ತಂಡದ ಪ್ಯಾಟ್ ಕಮ್ಮಿನ್ಸ್ (3 ವಿಕೆಟ್) ಮತ್ತು ಸಾಕಿಬ್ ಹುಸೇನ್ (2 ವಿಕೆಟ್) ಅವರ ದಾಳಿಗೆ ಸಿಲುಕಿ 20 ಓವರ್ಗಳಲ್ಲಿ 180 ರನ್ಗಳಿಗೆ ಸುಸ್ತು ಹೊಡೆದಿತು. ಡೆವಾಲ್ಡ್ ಬ್ರೆವಿಸ್ 44 ರನ್ ಗಳಿಸಿ ಚೆನ್ನೈ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು.
ಸಿಎಸ್ಕೆ ಬೌಲರ್ಗಳ ಮೇಲೆ ಇಶಾನ್ ಕಿಶನ್ ಸವಾರಿ
181 ಗುರಿ ಬೆನ್ನಟ್ಟಿದ ಹೈದರಾಬಾದ್ ಪರ ಇಶಾನ್ ಕಿಶನ್ ಸಿಎಸ್ಕೆ ಬೌಲರ್ಗಳ ಮೇಲೆ ದಂಡಯಾತ್ರೆ ಮಾಡಿದರು. ಅವರಿಗೆ ಹೆನ್ರಿಚ್ ಕ್ಲಾಸನ್ (47 ರನ್) ಉತ್ತಮ ಸಾಥ್ ನೀಡಿದರು. ಗೆಲುವಿನ ಸಂಭ್ರಮದಲ್ಲಿದ್ದ ಕಿಶನ್ ಮೊದಲು ಸಿಎಸ್ಕೆಯ 'ವಿಸಿಲ್ ಪೋಡು' ಸನ್ನೆ ಮಾಡಿ, ನಂತರ ತಮ್ಮ ಸಹ ಆಟಗಾರರೊಂದಿಗೆ ಸಂಭ್ರಮಿಸುತ್ತಾ ಗ್ಯಾಲರಿಯಲ್ಲಿದ್ದ ಅಭಿಮಾನಿಗಳತ್ತ ತಮಾಷೆಯಾಗಿ ಸನ್ನೆ ಮಾಡಿದರು.
ಪ್ಲೇಆಫ್ ತಲುಪಿದ ಎಸ್ಆರ್ಎಚ್
ಈ ಗೆಲುವಿನೊಂದಿಗೆ ಹೈದರಾಬಾದ್ ಅಗ್ರ 4ರ ಪಟ್ಟಿಯಲ್ಲಿ ಸ್ಥಾನ ಖಚಿತಪಡಿಸಿಕೊಂಡಿದೆ. ಮತ್ತೊಂದೆಡೆ ತವರು ಮೈದಾನದಲ್ಲೇ ಸೋತ ಸಿಎಸ್ಕೆಗೆ ಪ್ಲೇಆಫ್ ಹಾದಿ ಈಗ ಮತ್ತಷ್ಟು ಕಠಿಣವಾಗಿದೆ. ಆದರೆ ಈ ಪಂದ್ಯದ ಬಳಿಕ ಗಮನ ಸೆಳೆದಿದ್ದು ಮಾತ್ರ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳ ಎದುರೇ ಕಿಶನ್ ಅವರ ಈ ತಮಾಷೆಯ ಸಂಭ್ರಮಾಚರಣೆ.
ಸೋತರೂ ಸಹ ಆಟಗಾರರ ಮನಗೆದ್ದ ಗಾಯಕ್ವಾಕ್
ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 5 ವಿಕೆಟ್ಗಳ ಸೋಲು ಕಂಡರೂ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಋತುರಾಜ್ ಗಾಯಕ್ವಾಡ್ ತಮ್ಮ ತಂಡದ ಹೋರಾಟದ ಮನೋಭಾವವನ್ನು ಶ್ಲಾಘಿಸಿದ್ದಾರೆ. ಪಂದ್ಯದ ನಂತರ ಮಾತನಾಡಿದ ಅವರು, ಚೇಸಿಂಗ್ ಸಮಯದಲ್ಲಿ ಸಿಎಸ್ಕೆ ತುಂಬಾ ಸಮಯದವರೆಗೆ ಪೈಪೋಟಿಯಲ್ಲಿತ್ತು. ಈ ಸೀಸನ್ನಲ್ಲಿ ತಂಡದ ಪ್ರಮುಖ ಆಟಗಾರರ ಅನುಪಸ್ಥಿತಿಯ ನಡುವೆಯೂ ಅದ್ಭುತ ಪ್ರದರ್ಶನ ನೀಡಿದ ಸಹ ಆಟಗಾರರ ಪ್ರದರ್ಶನಕ್ಕೆ ಅವರು ಮೆಚ್ಚುಗೆ ಸೂಚಿಸಿದರು.
"ಇದು ಉತ್ತಮ ಕ್ರಿಕೆಟ್ ಪಂದ್ಯವಾಗಿತ್ತು. ಪಂದ್ಯದ ಕೊನೆಯ ಓವರ್ವರೆಗೂ ನಾವು ಪೈಪೋಟಿಯಲ್ಲಿದ್ದೆವು. ಇದೊಂದು ಉತ್ತಮ ಟಿ20 ಪಿಚ್ ಆಗಿತ್ತು. ಕೆಲವು ಸಣ್ಣ ತಪ್ಪುಗಳಿಂದ ನಾವು ಗೆಲುವಿನ ಅವಕಾಶವನ್ನು ಕಳೆದುಕೊಂಡೆವು," ಎಂದು ಗಾಯಕ್ವಾಡ್ ತಿಳಿಸಿದರು. ಇದೇ ವೇಳೆ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಅವರ ಸರಣಿಯುದ್ದಕ್ಕೂ ನೀಡಿದ ಪ್ರದರ್ಶನವನ್ನು ಹೊಗಳಿದರು.
"ಸಂಜು ನಮಗಾಗಿ ನಿಜವಾಗಿಯೂ ಅದ್ಭುತವಾಗಿ ಆಡುತ್ತಿದ್ದಾರೆ. ನಾವು ಕೆಲವು ಪ್ರಮುಖ ಆಟಗಾರರನ್ನು ಕಳೆದುಕೊಂಡೆವು, ಇದು ತಂಡದ ಮೇಲೆ ಪ್ರಭಾವ ಬೀರಿದೆ. ಆದರೆ ಈ ಪಂದ್ಯದಲ್ಲಿ ಪ್ರತಿಯೊಬ್ಬ ಆಟಗಾರನೂ ಉತ್ತಮವಾಗಿ ಆಟ ಆಡಿದ್ದಾರೆ. ನಮ್ಮ ಅಭಿಮಾನಿಗಳು ಕಷ್ಟದ ಸಮಯದಲ್ಲಿಯೂ ನಮಗೆ ಬೆಂಬಲ ನೀಡುತ್ತಾ ಬಂದಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ನಾವು ಉತ್ತಮ ಪ್ರದರ್ಶನ ನೀಡಿದ್ದೇವೆ," ಎಂದು ಗಾಯಕ್ವಾಡ್ ಹೇಳಿದರು.












Click it and Unblock the Notifications