ವಕೀಲ ಜಗದೀಶ್ ಬಂಧನಕ್ಕೆ ರಾಜ್ಯದಲ್ಲೆಡೆ ವ್ಯಾಪಕ ಟೀಕೆ
ಬೆಂಗಳೂರು, ಫೆ. 16: ಸಾಮಾಜಿಕ ಜಾಲ ತಾಣದ ಸ್ಟಾರ್ ಆಗಿ ರೂಪಾಂತರಗೊಂಡಿದ್ದ ವಕೀಲ ಜಗದೀಶ್ ಬಂಧನಕ್ಕೆ ಸಾಮಾಜಿಕ ಜಾಲ ತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಭ್ರಷ್ಟರ ವಿರುದ್ಧ ಹೋರಾಟ ಮಾಡಿದವರನ್ನೇ ಜೈಲಿಗೆ ಹಾಕಿದ ಭ್ರಷ್ಟ ವ್ಯವಸ್ಥೆ ಎಂದು ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಹೊರ ಹಾಕಿದ್ದಾರೆ.
ವಕೀಲ ಜಗದೀಶ್ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿದ ಬಗ್ಗೆ ಸಾರ್ವಜನಿಕರು ಕಿಡಿ ಕಾರಿದ್ದಾರೆ. ವಕೀಲ ಜಗದೀಶ್ ಅವರ ಮಗ ಸೇರಿದಂತೆ ಬೆಂಬಲಿಗರ ಮೇಲೆ ಹಲ್ಲೆ ಮಾಡಲಾಗಿದೆ. ಅವರು ನೀಡಿದ ದೂರುಗಳಿಗೆ ಯಾರ ವಿರುದ್ಧವೂ ಕ್ರಮ ಜರುಗಿಸಿಲ್ಲ. ಅವರು ವಕೀಲಿಗಾರಿಕೆ ಮಾಡಬಾರದು ಎಂದು ಬಾರ್ ಕೌನ್ಸಿಲ್ ಕೈಗೊಂಡಿರುವ ತೀರ್ಮಾನ ಎಷ್ಟರ ಮಟ್ಟಿಗೆ ಸರಿ? ನ್ಯಾಯ ವ್ಯವಸ್ಥೆ ಹೀಗಾದರೆ ಹೇಗೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಇನ್ನು ವಕೀಲ ಜಗದೀಶ್ ಅವರ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಿಸಿ ವಕೀಲರಾಗಿ ಜಗದೀಶ್ ಕರ್ನಾಟಕದಲ್ಲಿ ವಕಾಲತು ಹಾಕದಂತೆ ವಕೀಲರ ಸಂಘ ಕೈಗೊಂಡಿರುವ ತೀರ್ಮಾನದ ಬಗ್ಗೆ ವಕೀಲ ಎ.ಪಿ. ರಂಗನಾಥ್ ಕೂಡ ಕಿಡಿ ಕಾರಿದ್ದಾರೆ.

ವಕೀಲ ಜಗದೀಶ್ ಹೋರಾಟಕ್ಕೆ ನನ್ನ ಬೆಂಬಲವಿದೆ. ವಕೀಲರ ಬಗ್ಗೆಯಾಗಲೀ, ಜನರ ಬಗ್ಗೆಯಾಗಲಿ ಅವಹೇಳನ ಮಾಡಿ ಕೆಟ್ಟ ಮಾತಿನಲ್ಲಿ ನಿಂದನೆ ಮಾಡದಂತೆ ಕಿವಿ ಮಾತು ಹೇಳಿದ್ದೇನೆ. ವಕೀಲ ಜಗದೀಶ್ ಕೋರ್ಟ್ಗೆ ಹೋಗುವ ವೇಳೆ ಆತಂಕದ ವಾತಾವರಣ ನಿರ್ಮಾಣವಾಗಲಿದೆ ಎಂಬುದು ಪೊಲೀಸರಿಗೆ ಗೊತ್ತಿತ್ತು. ಈ ಕುರಿತು ಸಭೆ ನಡೆದಿದೆ. ರೌಡಿಗಳು ಕೋರ್ಟ್ಗೆ ಬಂದಿದ್ದಾರೆ ಎನ್ನುವ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರ ಬಂದೋಬಸ್ತ್ ಏರ್ಪಡಿಸಲಾಗಿತ್ತು? ಯಾಕೆ ರೌಡಿಗಳನ್ನು ಈವರೆಗೂ ಬಂಧಿಸಿಲ್ಲ? ಘಟನೆ ಯಾಗಲಿ ಎಂದು ಪೊಲೀಸರು ಸಂಚು ರೂಪಿಸಿ ಸುಮ್ಮನಾದರೇ? ಕೋರ್ಟ್ನಲ್ಲಿ ಜಗಳ ಆದಾಗ ವಕೀಲರ ಸಂಘದ ಅಧ್ಯಕ್ಷರು ಯಾಕೆ ಕೋರ್ಟ್ಗೆ ಬರಲಿಲ್ಲ ? ವಕೀಲ ಜಗದೀಶ್ ಬಯ್ಯೋದ್ರಲ್ಲಿ ಎಕ್ಸ್ಪರ್ಟ್ ಇರಬಹುದು. ಆದರೆ ಹೊಡೆಯೋದ್ರಲ್ಲಿ ಅಲ್ಲ, ಆತ ನೀಡಿದ ದೂರಿನ ಮೇಲೆ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ ರಂಗನಾಥ್ ಖಾಸಗಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಪ್ರಶ್ನೆ ಮಾಡಿದ್ದಾರೆ. ಬೆಂಗಳೂರು ವಕೀಲರ ಸಂಘದ ಹಾಲಿ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಅವರ ನಡೆಯನ್ನು ಪ್ರಶ್ನೆ ಮಾಡಿದ್ದಾರೆ.
ಸಂಭ್ರಮಾಚರಣೆಗೆ ಸಿದ್ಧತೆ: ವಕೀಲ ಜಗದೀಶ್ ಅವರ ಬಂಧನದ ಬಳಿಕ ಅವರ ಫೇಸ್ ಬುಕ್ ಪೇಜ್ನಲ್ಲಿದ್ದ ಕೆಲವು ಪೋಸ್ಟ್ ಹಾಗೂ ವಿಡಿಯೋಗಳು ಡಿಲೀಟ್ ಆಗಿವೆ. ಇದಕ್ಕೆ ವಕೀಲ ಜಗದೀಶ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಕೀಲ ಜಗದೀಶ್ ಬಿಡುಗಡೆಯಾದ ಬಳಿಕ ಅವರು ಅಭಿಮಾನಿಗಳು ಒಂದೆಡೆ ಸೇರಿ ಸಂಭ್ರಮಾಚರಣೆ ಮಾಡಲು ತಯಾರಿ ನಡೆಸಿದ್ದಾರೆ.

ಕಾನೂನು ವಿಚಾರಗಳ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಲೈವ್ ಮಾಡುವ ಮೂಲಕ ರಾಜ್ಯಕ್ಕೆ ಪರಿಚಿತರಾಗಿದ್ದ ವಕೀಲ ಜಗದೀಶ್ ಜಾರಕಿಹೊಳಿ ಸಿಡಿ ಪ್ರಕರಣದ ವೇಳೆ ಸಂತ್ರಸ್ತ ಯುವತಿ ಪರ ಧ್ವನಿಯೆತ್ತಿದ್ದರು. ಇದಾದ ಬಳಿಕ ಭ್ರಷ್ಟ ವ್ಯವಸ್ಥೆ ಹಾಗೂ ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿದ್ದರು. ಹೀಗಾಗಿ ರಾಜ್ಯದೆಲ್ಲೆಡೆ ಮನೆ ಮಾತಾಗಿದ್ದರು.

ಐಪಿಎಸ್ ಅಧಿಕಾರಿ ಭ್ರಷ್ಟಾಚಾರ ವಿರುದ್ಧ ಸಮರ: ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಅವರ ಮೇಲೆ ಕೇಳಿ ಬಂದ ಜಲ್ಲಿ ಕ್ರಷರ್ ಮಾಲೀಕನಿಂದ ಹಣ ಪಡೆದ ಆರೋಪ ಪ್ರಕರಣಕ್ಕೆ ವಕೀಲ ಜಗದೀಶ್ ಎಂಟ್ರಿ ಕೊಟ್ಟಿದದರು. ರವಿ ಡಿ. ಚನ್ನಣ್ಣನವರ್ ಅವರ ಮೇಲಿನ ಪ್ರಕರಣ ಸಂಬಂಧ ಸಿವಿಲ್ ಕೋರ್ಟ್ ಆವರಣದಲ್ಲಿ ನಡೆದಿದ್ದ ಗಲಾಟೆ ಪ್ರಕರಣದಲ್ಲಿ ವಕೀಲ ಜಗದೀಶ್ ರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನದ ಬೆನ್ನಲ್ಲೇ ಕರ್ನಾಟಕದಲ್ಲಿ ವಕೀಲಿಕೆ ಮಾಡದಂತೆ ಬೆಂಗಳೂರು ವಕೀಲರ ಸಂಘ ನಿರ್ಬಂಧ ವಿಧಿಸಿದ್ದು, ಇದರ ಬೆನ್ನಲ್ಲೇ ನನ್ನ ಹೋರಾಟವನ್ನು ಇಲ್ಲಿಗೆ ಮುಕ್ತಾಯ ಮಾಡ್ತೀನಿ ಎಂದು ಜಗದೀಶ್ ಹೇಳಿಕೆ ನೀಡಿದ್ದರು. ಇದೀಗ ಜೈಲಿನಲ್ಲಿರುವ ಜಗದೀಶ್ ಬಿಡುಗಡೆ ಬಳಿಕ ಯಾವ ಸ್ವರೂಪ ಪಡೆಯಲಿದೆ ಎಂಬುದನ್ನು ಕಾದು ನೋಡಬೇಕು.












Click it and Unblock the Notifications