ಬೇಕಾಬಿಟ್ಟಿ ಆ್ಯಂಟಿಬಯೋಟಿಕ್ ಬಳಕೆ ತಡೆಯಲು, ಸಮರ್ಪಕ ವಿಲೇವಾರಿಗೆ ಹೊಸ ನೀತಿ
ಬೆಂಗಳೂರು: ಆಸ್ಪತ್ರೆಗೂ ಹೋಗುವುದಿಲ್ಲ, ವೈದ್ಯರನ್ನು ಸಂಪರ್ಕಿಸುವುದಿಲ್ಲ. ಜ್ವರ ಬಂದರೆ, ಗಾಯವಾದರೆ ಅಥವಾ ದೇಹದ ಯಾವುದೇ ಭಾಗದಲ್ಲಿ ನೋವು ಕಾಣಿಸಿಕೊಂಡರೆ ಜನರು ಸ್ವಯಂ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಕೆಲವೇ ಕೆಲವು ಔಷಧಿಗಳನ್ನು ತಮ್ಮಿಚ್ಛೆಯಂತೆ ಬಳಸುತ್ತಿದ್ದು, ಇದರಿಂದಾಗುವ ಅಡ್ಡ ಪರಿಣಾಮಗಳ ಬಗ್ಗೆಯೂ ಚಿಂತಿಸದೇ ತಮ್ಮ ಆರೋಗ್ಯವನ್ನು ಮತ್ತಷ್ಟು ಹದಗೆಡಿಸಿಕೊಳ್ಳುತ್ತಿದ್ದಾರೆ. ಕೊರೋನಾ ನಂತರವಂತೂ ಕೆಲವು ಔಷಧಗಳ ಬಳಕೆ ಹೆಚ್ಚಾಗುತ್ತಿದ್ದು, ಇದರ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಇನ್ನು ಮುಂದೆ ವೈದ್ಯರ ಚೀಟಿ ಇಲ್ಲದೇ ಮೆಡಿಕಲ್ ಶಾಪ್ಗಳಲ್ಲಿ ಔಷಧಿ ಕೊಳ್ಳಲು ಬ್ರೇಕ್ ಬೀಳಲಿದ್ದು, ಆ್ಯಂಟಿಬಯೋಟಿಕ್ ಔಷಧಗಳ ಮಿತಿ ಮೀರಿದ ಬಳಕೆ ತಡೆಯಲು ಪ್ರತ್ಯೇಕ ನೀತಿಯೊಂದನ್ನು ಜಾರಿಗೊಳಿಸುತ್ತಿದೆ.
ಔಷಧಗಳಿಗೆ ಹೊಂದಿಕೊಂಡಿವೆ ರೋಗಾಣುಗಳು:
ಕೆಲವು ಅನಾರೋಗ್ಯಕ್ಕೆ ಬಳಸುತ್ತಿದ್ದ ಆ್ಯಂಟಿಬಯೋಟಿಕ್ಸ್ ಇದೀಗ ರೋಗಾಣುಗಳಿಗೆ ಹೊಂದಿಕೊಂಡು, ಯಾವುದೇ ಪರಿಣಾಮವನ್ನೂ ಬೀರತ್ತಿಲ್ಲ. ಔಷಧಗಳು ರೋಗ ತರುವ ಬ್ಯಾಕ್ಟಿರೀಯಾಗಳು, ವೈರಸ್ ಹಾಗೂ ಶಿಲೀಂಧ್ರಗಳನ್ನು ಕೊಲ್ಲಬೇಕು. ಆದರೆ, ಈ ರೋಗಕಾರಗಳು ಯಾವುದೇ ಔಷಧಿಗಳಿಗೆ ಬಗ್ಗದಂತೆ ತಮ್ಮ ರೂಪವನ್ನು ಬದಲಿಸಿಕೊಂಡಿದ್ದು, ಸಣ್ಣ ಪುಟ್ಟ ಸೋಂಕೂ ಸಹ ದೊಡ್ಡದಾಗುತ್ತಿದೆ. ಉಗುರಿನಲ್ಲಿ ತೆಗೆಯಬಹುದಾದ ಸಮಸ್ಯೆಗೆ ಇದೀಗ ಕೊಡಲಿ ಏಟು ಬೇಕಾಗಿದ್ದು, ರೋಗ ಉಲ್ಬಣಿಸಿ, ದೊಡ್ಡದಾಗುತ್ತಿದೆ. ಇವೆಲ್ಲವನ್ನೂ ಗಮದಲ್ಲಿಟ್ಟುಕೊಂಡು ಕರ್ನಾಟಕ ಆರೋಗ್ಯ ಇಲಾಖೆ, ಆ್ಯಂಟಿಬಯೋಟಿಕ್ ಅಸಮರ್ಪಕ ಬಳಕೆ ಹಾಗೂ ಅದರ ದುಷ್ಪರಿಣಾಮಗಳನ್ನು ತಡೆಯಲು ಕ್ರಮ ಕೈಗೊಳ್ಳುತ್ತಿದೆ. ಈ ಸಂಬಂಧ ಈಗಾಗಲೇ ತಜ್ಞರ ಸಮಿತಿಯೊಂದನ್ನು ರಚಿಸಿದ್ದು, ಆ್ಯಂಟಿಬಯೋಟಿಕ್ಸ್ ಸಮರ್ಪಕ ಬಳಕೆ ಹಾಗೂ ಬಳಕೆಯಾಗದ ಅಥವಾ ಎಕ್ಸ್ಪೈರಿ ಆಗಿರುವ ಔಷಧಗಳ ಸೂಕ್ತ ವಿಲೇವಾರಿಗೂ ಕ್ರಮ ಕೈಗೊಳ್ಳಲು ಚಿಂತಿಸಲಾಗುತ್ತಿದೆ. ಅಕಸ್ಮಾತ್ ಇಂಥ ಅವಧಿ ಮುಗಿದ ಅಥವಾ ಬಳಕೆಯಾಗದ ಔಷಧಿಗಳನ್ನು ಎಲ್ಲೆಂದರಲ್ಲಿ ಎಸೆದರೆ, ಮಣ್ಣು ಅಥವಾ ನೀರಲ್ಲಿ ಸೇರಿ ಪರಿಸರವೂ ಕಲುಷಿತಗೊಳ್ಳಲಿದೆ. ಅಲ್ಲದೇ ಬ್ಯಾಕ್ಟಿರೀಯಾಗಳು ಇಂಥ ಔಷಧಿಗಳಿಗೆ ಮುಂಚಿತವಾಗಿಯೇ ಮತ್ತಷ್ಟು ಶಕ್ತಿಶಾಲಿಯಾಗುತ್ತಿದೆ. ಔಷಧಿ ಬೆರೆತ ನೀರು ಹಾಗೂ ಮಣ್ಣಿನಲ್ಲಿ ಬೆಳೆದ ತರಕಾರಿ ಬಳಸುವ ಮನುಷ್ಯನ ದೇಹದ ಮೇಲೂ ದುಷ್ಪರಿಣಾಮ ಬೀರುವುದು ಖಂಡಿತ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಮಿತಿ ವರದಿ ನೀಡಿದ್ದು, ಅದನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ.

ಈಗಾಗಲೇ ಪ್ರತಿಯೊಂದೂ ಜಿಲ್ಲೆಯಲ್ಲಿಯೂ ರೂಪಾಂತರಗೊಂಡ ಬ್ಯಾಕ್ಟಿರಿಯಾ ಹಾಗೂ ಸೂಕ್ಷ್ಮಜೀವಿಗಳು, ರೋಗಾಣು ನಿರೋಧಕ ಸಾಮರ್ಥ್ಯದ ಮಾದರಿಗಳನ್ನು ಕಲೆ ಹಾಕಲು ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ. ಬೇರೆ ಬೇರೆ ಪ್ರದೇಶಗಳಲ್ಲಿ ಆಯಾ ಪರಿಸರ ಹಾಗೂ ಹವಾಮಾನಕ್ಕೆ ತಕ್ಕಂತೆ ಪರಿಸ್ಥಿತಿ ವಿಭಿನ್ನವಾಗಿರುವುದರಿಂದ ಅದಕ್ಕೆ ತಕ್ಕಂತೆ ಅಧ್ಯಯನ ಕೈಗೊಳ್ಳಲಾಗುವುದು. ಕಲೆ ಹಾಕಿದ ಮಾದರಿಗಳನ್ನು ಪರೀಕ್ಷಿಸಿ, ಅದಕ್ಕೆ ಸರಿಯಾಗುವಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಸ್ವಯಂ ವೈದ್ಯರಾಗೋದನ್ನು ತಡೆಯಲು ಕ್ರಮ:
ಸ್ವಯಂ ವೈದ್ಯರಾಗುವ ರೋಗಿಗಳು ಸಣ್ಣ ಪುಟ್ಟ ರೋಗಗಳಿಗೆ ಹೈ ಡೋಸ್ ಆ್ಯಂಟಿಬಯೋಟಿಕ್ ಬಳಸುತ್ತಿದ್ದಾರೆ. ಇದರಿಂದ ಹೊಸ ಹೊಸ ಆರೋಗ್ಯ ಸಮಸ್ಯೆಗಳು ಸೃಷ್ಟಿಯಾಗುತ್ತಿದೆ. ಅಷ್ಟೇ ಅಲ್ಲ ಪಶು, ಪಕ್ಷಿಗಳಿಗೂ ಇಂಥ ಔಷಧಗಳನ್ನು ನೀಡಿ, ಅವುಗಳ ಮಾಂಸ ಸೇವಿಸುವ ಮನುಷ್ಯನಿಗೆ ಮತ್ತೊಂದಿಷ್ಟು ಹೊಸ ಹೊಸ ರೋಗಗಳು ಕಾಡುವ ಭೀತಿಯೂ ಇದ್ದು, ಇವೆಲ್ಲವಕ್ಕೂ ಪರಿಹಾರ ಎಂಬಂತೆ ಆರೋಗ್ಯ ಇಲಾಖೆ ಹೊಸ ನೀತಿ ರೂಪಿಸಲು ಮುಂದಾಗಿರುವುದು ಸ್ವಾಗತಾರ್ಹ.

ಇಂಥ ಅನೇಕ ಕಾರಣಗಳಿಂದ ಇಂದು ಹೊಸ ಹೊಸ ಚಿತ್ರ ವಿಚಿತ್ರ ಕಾಯಿಲೆಗಳು ಸೃಷ್ಟಿಯಾಗುತ್ತಿದ್ದು, ಜನರು ಆದಷ್ಟು ಔಷಧಿ ಇಲ್ಲದೇ ನೈಸರ್ಗಿಕ ಕ್ರಮಗಳಿಂದ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಬೇಕು. ಇಲ್ಲವೇ ಮನೆಯಲ್ಲಿ ಅಜ್ಜಿ ಹೇಳುವ ಔಷಧಿಯನ್ನು ಬಳಸಿದರೆ ಅಡ್ಡ ಪರಿಣಾಮಗಳು ಬೀರುವ ಸಾಧ್ಯತೆ ಕಡಿಮೆ. ಅದು ಬಿಟ್ಟು ಅಲೋಪಥಿ ಔಷಧ ಬಳಸುವಾಗ ಸ್ವಯಂ ಚಿಕಿತ್ಸೆ ಪಡೆಯೋದು ಅತ್ಯಂತ ಅಪಾಯಕಾರಿಯಾಗಿದ್ದು, ಇದಕ್ಕೊಂದೂ ಸೂಕ್ತ ಕ್ರಮ ಕೈಗೊಳ್ಳಬೇಕಾಗಿರುವದು ಇಂದಿನ ತುರ್ತಾಗಿದೆ.













Click it and Unblock the Notifications