ಖರ್ಚು ಮಾಡೋಕೆ ಭಯನಾ? ಬೆಂಗಳೂರು ಯುವತಿಯ ಈ ವಿಡಿಯೋ ನೋಡಿದ್ರೆ ನಿಮ್ಮ ಯೋಚನೆ ಬದಲಾಗೋದು ಗ್ಯಾರಂಟಿ!
ಹಣ ಸಂಪಾದನೆ ಮಾಡುವುದು ಎಷ್ಟು ಕಷ್ಟವೋ, ಅದನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುವುದು ಕೂಡ ಅಷ್ಟೇ ಸವಾಲಿನ ಕೆಲಸ. ಅದರಲ್ಲೂ ಹೆಚ್ಚಿನವರಿಗೆ ನಾವು ದುಡಿದಿರುವ ಹಣ ಖರ್ಚು ಮಾಡುವಾಗ ಮನಸ್ಸಿನ ಮೂಲೆಯಲ್ಲಿ ಸಣ್ಣದೊಂದು ಅಪರಾಧಿ ಮನೋಭಾವ ಕಾಡುವುದು ಸಾಮಾನ್ಯ.
ದುಡಿದಿರುವ ದುಡ್ಡನ್ನು ಇವಾಗಲೇ ಖರ್ಚು ಮಾಡಿದರೇ ಮುಂದೆ ಭವಿಷ್ಯದಲ್ಲಿ ತೊಂದರೆಯಾಗಬಹುದು ಎನ್ನುವುದೇ ಈ ಆತಂಕವೇ ಪ್ರಮುಖ ಕಾರಣ. ಆದರೆ, ನಮ್ಮ ಈ ಯೋಚನೆಯನ್ನ ಬದಲಾಯಿಸುವ ಸಮಯ ಈಗ ಬಂದಿದೆ.
ಹೌದು, ಬೆಂಗಳೂರಿನ ಮಹಿಳೆಯೊಬ್ಬರು ಹಣದ ಬಗ್ಗೆ ನಿಮಗಿರುವ ಈ ದೃಷ್ಟಿಕೋನವನ್ನೇ ಸಂಪೂರ್ಣವಾಗಿ ಬದಲಾಯಿಸುವಂತಹ, ಅತ್ಯಂತ ಸರಳ ಹಾಗೂ ಅದ್ಭುತವಾದ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಉಪಾಸನಾ ಡೋಗ್ರಾ ಎಂಬುವವರು ಹಂಚಿಕೊಂಡಿರುವ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಸಾವಿರಾರು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.
ಉಪಾಸನಾ ಡೋಗ್ರಾ ಅವರ ಪ್ರಕಾರ, ನಾವು ಮಾಡುವ ಪ್ರತಿಯೊಂದು ಖರ್ಚನ್ನೂ 'ಹಣ ವ್ಯರ್ಥವಾಗುತ್ತಿದೆ' ಅಥವಾ 'ಹಣ ಕಳೆದುಕೊಳ್ಳುತ್ತಿದ್ದೇವೆ' ಎಂಬ ದೃಷ್ಟಿಯಿಂದ ನೋಡುವುದನ್ನು ನಿಲ್ಲಿಸಬೇಕು. ಬದಲಾಗಿ, ಆ ಹಣ ನಮ್ಮನ್ನು ಹೇಗೆ ನೋಡಿಕೊಳ್ಳುತ್ತಿದೆ, ನಮ್ಮ ದೈನಂದಿನ ಜೀವನವನ್ನು ಹೇಗೆ ಸುಗಮಗೊಳಿಸುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.
ಮಧ್ಯಮ ವರ್ಗದ ಮನಸ್ಥಿತಿ
ನಮ್ಮ ದೇಶದಲ್ಲಿ ಬಹುತೇಕ ಮಧ್ಯಮ ವರ್ಗದ ಕುಟುಂಬದವರು ಬೆಳೆಯುವ ವಾತಾವರಣವೇ ಭಿನ್ನವಾಗಿರುತ್ತದೆ. ಚಿಕ್ಕಂದಿನಿಂದಲೂ 'ಹಣ ಉಳಿಸಬೇಕು', 'ಅನಗತ್ಯವಾಗಿ ಖರ್ಚು ಮಾಡಬಾರದು' ಎಂಬ ಹಿರಿಯರ ಕಿವಿಮಾತುಗಳನ್ನು ಕೇಳುತ್ತಲೇ ಬೆಳೆದಿರುತ್ತೇವೆ.
ಈ ಕಾರಣದಿಂದಾಗಿ, ನಮ್ಮ ದೈನಂದಿನ ಹಾಗೂ ಅಗತ್ಯಗಳಿಗೆ ಹಣ ವ್ಯಯಿಸುವಾಗಲೂ ನಮಗೆ ಅರಿವಿಲ್ಲದಂತೆ ಒಂದು ರೀತಿಯ ಆತಂಕ ಕಾಡಲು ಶುರುವಾಗುತ್ತದೆ. ಆದರೆ ಹಣದ ಮೇಲಿನ ಈ ನಕಾರಾತ್ಮಕ ಯೋಚನೆಯನ್ನು ಬದಲಾಯಿಸುವ ತುರ್ತು ಅಗತ್ಯವಿದೆ ಎನ್ನುತ್ತಾರೆ ಉಪಾಸನಾ. ಖರ್ಚು ಮಾಡುವುದೇ ತಪ್ಪು ಎಂಬ ಕಲ್ಪನೆಯಿಂದ ನಾವು ಹೊರಬರಬೇಕಿದೆ.
ಬಾಡಿಗೆ ಮತ್ತು ದಿನಸಿ ಖರ್ಚು: ದೃಷ್ಟಿಕೋನ ಬದಲಾಯಿಸಿದ ಲೆಕ್ಕಾಚಾರ
ತಮ್ಮದೇ ಜೀವನದ ಒಂದು ಉದಾಹರಣೆಯನ್ನೇ ನೀಡುವ ಅವರು, ತಿಂಗಳಿಗೆ 20,000 ರೂಪಾಯಿ ಮನೆ ಬಾಡಿಗೆ ಕಟ್ಟುವುದು ಆರಂಭದಲ್ಲಿ ತಮಗೆ ಬಹಳ ದೊಡ್ಡ ಹೊರೆ ಎನಿಸುತ್ತಿತ್ತು. ಆದರೆ, ಆ ಮೊತ್ತವನ್ನು ಪ್ರತಿದಿನದ ಲೆಕ್ಕಕ್ಕೆ ಇಳಿಸಿ ನೋಡಿದಾಗ, ದಿನಕ್ಕೆ ಕೇವಲ 650 ರೂಪಾಯಿ ಪಾವತಿಸುತ್ತಿರುವುದು ಅವರ ಅರಿವಿಗೆ ಬಂತು. ದಿನವಿಡೀ ಆಫೀಸ್ನಲ್ಲಿ ಕೆಲಸ ಮಾಡಿ ದಣಿದು ಮರಳಿದಾಗ, ನಮಗೆ ಆಶ್ರಯ ನೀಡುವ, ಭದ್ರತೆ ಮತ್ತು ನೆಮ್ಮದಿ ಕೊಡುವ ಒಂದು ಸುರಕ್ಷಿತ ತಾಣಕ್ಕಾಗಿ ನಾವು ನೀಡುತ್ತಿರುವ ಮೌಲ್ಯವದು ಎಂಬುದನ್ನು ಅವರು ಬಹಳ ಸುಂದರವಾಗಿ ವಿವರಿಸಿದ್ದಾರೆ.
ಅದೇ ರೀತಿ ತಿಂಗಳ ದಿನಸಿಗಾಗಿ ಮಾಡುವ 6,000 ರೂಪಾಯಿ ಖರ್ಚು ಕೂಡ. ಇದು ನಮ್ಮ ದೇಹಕ್ಕೆ ಅಗತ್ಯವಿರುವ ಪೌಷ್ಟಿಕಾಂಶ ಒದಗಿಸಲು ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ದಿನಕ್ಕೆ ಕೇವಲ 200 ರೂಪಾಯಿ ಹೂಡಿಕೆ ಮಾಡಿದಂತೆ ಎಂದು ಅವರು ಲೆಕ್ಕಾಚಾರ ಹಾಕಿದ್ದಾರೆ.
ನೆಟ್ಟಿಗರ ಪ್ರತಿಕ್ರಿಯೆ
ಹಣಕಾಸಿನ ಅರಿವು ಎಂದರೆ ಕೇವಲ ಹಣ ಎಲ್ಲಿಂದ ಬಂತು, ಎಲ್ಲಿಗೆ ಹೋಗುತ್ತಿದೆ ಎಂದು ಲೆಕ್ಕ ಇಡುವುದಲ್ಲ. ಆ ಹಣ ನಮ್ಮ ಜೀವನದ ಗುಣಮಟ್ಟವನ್ನು ಮತ್ತು ನಮ್ಮ ಆರೋಗ್ಯವನ್ನು ಹೇಗೆ ಕಾಪಾಡುತ್ತಿದೆ ಎಂಬುದನ್ನು ಅರಿಯುವುದು ನಿಜವಾದ ಫೈನಾನ್ಷಿಯಲ್ ಅವೇರ್ನೆಸ್ ಆಗಿದೆ. "ಇದು ಕೇವಲ ನಮ್ಮ ದೃಷ್ಟಿಕೋನದ ಮೇಲಿದೆ" ಎಂಬ ಶೀರ್ಷಿಕೆಯೊಂದಿಗೆ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋಗೆ ಭಾರಿ ಬೆಂಬಲ ವ್ಯಕ್ತವಾಗಿದೆ. "ಹಣಕಾಸಿನ ಬಗ್ಗೆ ನಮಗಿದ್ದ ತಪ್ಪು ಕಲ್ಪನೆಯನ್ನು ಈ ವಿಡಿಯೋ ದೂರ ಮಾಡಿದೆ" ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ಹಣವನ್ನು ಕೇವಲ ಬ್ಯಾಂಕ್ ಖಾತೆಯಿಂದ ಕಡಿತಗೊಳ್ಳುವ ಸಂಖ್ಯೆಯಾಗಿ ನೋಡುವ ಬದಲು, ಅದರಿಂದ ನಮಗೆ ಸಿಗುತ್ತಿರುವ ಮೌಲ್ಯವನ್ನು ಪ್ರಶಂಸಿಸಬೇಕು ಎನ್ನುವ ಪಾಠವನ್ನು ಈ ವಿಡಿಯೋ ಕಲಿಸಿದೆ.

ಉಪಾಸನಾ ಅವರ ಈ ಸ್ಪಷ್ಟವಾದ ವಿವರಣೆಗೆ ಧನ್ಯವಾದ ತಿಳಿಸಿರುವ ನೆಟ್ಟಿಗರು, ವೈಯಕ್ತಿಕ ಹಣಕಾಸನ್ನು ಹೆಚ್ಚು ಆರೋಗ್ಯಕರವಾಗಿ ಹಾಗೂ ಸಮತೋಲನದಿಂದ ನೋಡಲು ಇದು ಸಹಾಯ ಮಾಡಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ನಮ್ಮ ಖರ್ಚುಗಳನ್ನು 'ವೆಚ್ಚ' ಎಂದು ನೋಡುವ ಬದಲು, ನಮ್ಮದೇ ನೆಮ್ಮದಿ ಮತ್ತು ಆರೋಗ್ಯದ ಮೇಲಿನ 'ಹೂಡಿಕೆ' ಎಂದು ಭಾವಿಸಿದಾಗ ಬಜೆಟ್ ಮಾಡುವುದು ಕೂಡ ಒತ್ತಡರಹಿತವಾಗಿರುತ್ತದೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications