Konkan Railway Journey: ಮುಂಬೈನಿಂದ ಮಂಗಳೂರಿಗೆ ಪ್ರಕೃತಿಯ ಮಡಿಲಲ್ಲಿ ಸಾಗುವ ಕೊಂಕಣ ರೈಲ್ವೆ ಪ್ರಯಾಣ
ರೈಲು ಪ್ರಯಾಣ ಎಂದರೆ ಕೇವಲ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವ ದಾರಿಯಷ್ಟೇ ಅಲ್ಲ. ಕೆಲವೊಮ್ಮೆ ಆ ಇಡೀ ಪ್ರಯಾಣವೇ ಜೀವನ ಪೂರ್ತಿ ನೆನಪಿನಲ್ಲಿ ಉಳಿಯುವ ಅನುಭ ನೀಡುತ್ತದೆ. ಇಂತಹ ಅನುಭವ ನೀಡುವ ಭಾರತದ ಅತ್ಯಂತ ಸುಂದರ ರೈಲು ಮಾರ್ಗಗಳಲ್ಲಿ ಕೊಂಕಣ ರೈಲ್ವೆ ಪ್ರಮುಖವಾಗಿದೆ.
ಮುಂಬೈನಿಂದ ಮಂಗಳೂರಿನವರೆಗೆ ಸರಿ ಸುಮಾರು 740 ಕಿಲೋಮೀಟರ್ ದೂರ ಚಲಿಸುವ ಈ ರೈಲು ಮಾರ್ಗವು ಗೋವಾ ಹಾಗೂ ಮಹಾರಾಷ್ಟ್ರದ ಕೊಂಕಣ ಕರಾವಳಿಯನ್ನು ಮೂಲಕ ಸಾಗುತ್ತದೆ. ಪಶ್ಚಿಮ ಘಟ್ಟಗಳ ನಡುವೆ, ನದಿಗಳು, ಸುರಂಗಗಳು, ಹಸಿರು ಕಣಿವೆಗಳು ಮತ್ತು ಸಮುದ್ರ ತೀರದ ಮನಮೋಹಕ ದೃಶ್ಯಗಳನ್ನು ಈ ಪ್ರಯಾಣದಲ್ಲಿ ಕಣ್ತುಂಬಿಕೊಳ್ಳಬಹುದು.

ಭಾರತದ ಎಂಜಿನಿಯರಿಂಗ್ ಮೈಲಿಗಲ್ಲು: 11 ವರ್ಷಗಳ ಶ್ರಮದ ಫಲ ಈ ಕೊಂಕಣ ರೈಲ್ವೆ!
ಕೊಂಕಣ ರೈಲ್ವೆ ನಿರ್ಮಾಣ ಕಾರ್ಯ 1998ರಲ್ಲಿ ಪೂರ್ಣಗೊಂಡಿತು. ಪಶ್ಚಿಮ ಘಟ್ಟದ ಕಠಿಣ ಭೂಪ್ರದೇಶದಲ್ಲಿ ನಿರ್ಮಿಸಲಾದ ಈ ರೈಲು ಮಾರ್ಗದಲ್ಲಿ ಸುಮಾರು 2,000ಕ್ಕೂ ಹೆಚ್ಚು ಸೇತುವೆಗಳು ಮತ್ತು 91 ಸುರಂಗ ಮಾರ್ಗಗಳನ್ನು ನಿರ್ಮಿಸಲಾಗಿದೆ. ಇದು ಭಾರತದ ಅತ್ಯಂತ ದೊಡ್ಡ ಎಂಜನಿಯರಿಂಗ್ ಸಾಧನೆಗಳಲ್ಲಿ ಒಂದಾಗಿದೆ.
ಪ್ರತಿ ಕ್ಷಣವೂ ಹೊಸ ದೃಶ್ಯ
ಕೊಂಕಣ ರೈಲ್ವೆಯ ಪ್ರಯಾಣದ ವಿಶೇಷತೆ ಎಂದರೆ ಕಿಟಕಿಯಿಂದ ಕಾಣುವ ದೃಶ್ಯಗಳು ಕ್ಷಣಕ್ಷಣಕ್ಕೂ ಬದಲಾಗುತ್ತವೆ. ಕೆಲವೇ ನಿಮಿಷಗಳಲ್ಲಿ ಎತ್ತರದ ಸೇತುವೆ, ದಟ್ಟ ಹಸಿರು ಕಾಡು, ಹಚ್ಚಹಸಿರಿನ ಬತ್ತದ ಗದ್ದೆ, ತೆಂಗಿನ ತೋಟ, ನದಿ, ಪುಟ್ಟ ಹಳ್ಳಿ ಹಾಗೂ ಸಮುದ್ರದ ನೋಟಗಳು ಒಂದರ ಹಿಂದೆ ಒಂದರಂತೆ ಪ್ರಯಾಣಿಕರ ಕಣ್ಮನ ಸೆಳೆಯುತ್ತವೆ.
ವಿಮಾನಕ್ಕಿಂತ ರೈಲು ಪ್ರಯಾಣವೇ ಅನನ್ಯ: ಮುಂಬೈ-ಗೋವಾ ಕೊಂಕಣ ಹಳಿಗಳ ಸೌಂದರ್ಯ
ಮುಂಬೈನಿಂದ ಗೋವಾಕ್ಕೆ ವಿಮಾನದಲ್ಲಿ ಕೇವಲ ಒಂದು ಗಂಟೆಯೊಳಗೆ ತಲುಪಬಹುದು ನಿಜ. ಆದರೆ ಕೊಂಕಣ ರೈಲ್ವೆಯಲ್ಲಿ ಸುಮಾರು 9 ರಿಂದ 12 ಗಂಟೆಗಳ ಪ್ರಯಾಣ ಮಾಡಬೇಕಾಗುತ್ತದೆ. ಆದರೂ ಈ ಪ್ರಯಾಣ ಬೇಸರ ತರಿಸುವುದಿಲ್ಲ. ಏಕೆಂದರೆ ಪ್ರತಿಯೊಂದು ಗಂಟೆಯಲ್ಲೂ ಹೊಸ ಹೊಸ ಪ್ರಕೃತಿ ಸೌಂದರ್ಯ ಕಣ್ಮುಂದೆ ಬರುತ್ತದೆ. ವೇಗದ ಪ್ರಯಾಣಕ್ಕಿಂತ, ಪ್ರಕೃತಿ ಸವಿಯುವ ಪ್ರಯಾಣವೇ ಚಂದ.
ಮಳೆಗಾಲದಲ್ಲಿ ಮತ್ತಷ್ಟು ಮನಮೋಹಕ
ಅಕ್ಟೋಬರ್ನಿಂದ ಫೆಬ್ರವರಿವರೆಗೆ ಕೊಂಕಣ ರೈಲು ಮಾರ್ಗದಲ್ಲಿ ಪ್ರಯಾಣ ಸದಾ ಸುಂದರ. ಮುಂಗಾರಿನ ಮಳೆಗಾಲದಲ್ಲಿ ಈ ಪ್ರಕೃತಿ ಸೌಂದರ್ಯ ಇನ್ನಷ್ಟು ಹೆಚ್ಚಾಗುತ್ತದೆ. ಈ ಮಾರ್ಗದಲ್ಲಿ ಪ್ರಯಾಣಿಸುವುದು ಎಂದರೆ ಪ್ರಕೃತಿ ಅತಿ ಸುಂದರ ಕಾವ್ಯಕ್ಕೆ ಸಾಕ್ಷಿಯಾಗುವುದೇ ಸರಿ.
ಪಶ್ಚಿಮ ಘಟ್ಟವು ಮಳೆಗಾಲದಲ್ಲಿ ಹಚ್ಚಹಸಿರಿನಿಂದ ಕಂಗೊಳಿಸುತ್ತವೆ. ಬೆಟ್ಟಗಳಿಂದ ಧುಮ್ಮಿಕ್ಕುವ ಜಲಪಾತಗಳು, ತುಂಬಿ ಹರಿಯುವ ನದಿಗಳು ಮತ್ತು ಮಂಜಿನಿಂದ ಆವೃತವಾದ ಪ್ರಕೃತಿ ಸೌಂದರ್ಯ ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ.
ಪ್ರವಾಸಿಗರಿಗಿಂತ ಸ್ಥಳೀಯರೇ ಹೆಚ್ಚು
ಮಳೆಗಾಲದಲ್ಲಿ ಈ ದಾರಿಯಲ್ಲಿ ಪ್ರವಾಸಿಗರ ಹಾವಳಿ ಕಡಿಮೆಯಿರುತ್ತದೆ. ಹೆಚ್ಚಿನವರು ತಮ್ಮ ಊರುಗಳಿಗೆ ತೆರಳುವ ಸ್ಥಳೀಯ ಪ್ರಯಾಣಿಕರಾಗಿರುತ್ತಾರೆ. ಇದರಿಂದ ಪ್ರಯಾಣ ಮತ್ತಷ್ಟು ಶಾಂತ ಮತ್ತು ನೈಸರ್ಗಿಕ ಅನುಭವ ನೀಡುತ್ತದೆ.
ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಸಾಧ್ಯವಿಲ್ಲದ ಸೌಂದರ್ಯ
ಕೊಂಕಣ ರೈಲ್ವೆಯ ಅದ್ಬುತವಾದ ದೃಶ್ಯಗಳನ್ನು ಎಷ್ಟೇ ಫೋಟೋ ಅಥವಾ ವಿಡಿಯೋದಲ್ಲಿ ಸೆರೆಹಿಡಿದರೂ ಅದು ನಾವು ಕಣ್ಣಾರೆ ಕಾಣುವಂತೆ ನೈಜ ಅನುಭವವನ್ನು ನೀಡಲು ಸಾಧ್ಯವಿಲ್ಲ. ರೈಲು ಕತ್ತಲಿನ ಸುರಂಗದಿಂದ ಹೊರಬರುವ ಕ್ಷಣ, ಸೇತುವೆ ಮೇಲಿನ ಸಂಚಾರ, ಜಲಪಾತದ ಸದ್ದು ಹಾಗೂ ಕಿಟಕಿಗೆ ತಾಗುವ ಮಳೆಯ ಹನಿಗಳನ್ನು ನೇರವಾಗಿ ಅನುಭವಿಸಿದಾಗ ಮಾತ್ರ ಅದರ ನಿಜವಾದ ಸೌಂದರ್ಯ ಅರಿವಾಗುತ್ತದೆ.














Click it and Unblock the Notifications