Arjun Tendulkar: ಕೊನೆಗೂ ತಂದೆ ಕ್ರಿಕೆಟ್ ದೇವರು ಸಚಿನ್ ಆಸೆ ನೆರವೇರಿಸಿದ ಮಗ ಅರ್ಜುನ್ ತೆಂಡೂಲ್ಕರ್
Arjun Tendulkar: ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮನಸ್ಸು ಮಾಡಿದ್ದಿದ್ದರೆ ತಮಗಿದ್ದ ಪ್ರಭಾವವನ್ನು ಬಳಸಿ ಮಗ ಅರ್ಜುನ್ ತೆಂಡೂಲ್ಕರ್ಗೆ ರಾಷ್ಟ್ರೀಯ ತಂಡ ಪರ ಆಡಲು ಸುಲಭವಾಗಿ ಅವಕಾಶ ಸಿಗುವಂತೆ ಮಾಡಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ, ಬದಲಾಗಿ ದೇಶಿಯ ಟೂರ್ನಿಗಳಲ್ಲಿ ಕಠಿಣ ಸವಾಲುಗಳನ್ನು ಎದುರಿಸಿ ಸ್ವಂತವಾಗಿ ಮೇಲೆ ಬರಬೇಕೆಂದು ಬಯಸಿದ್ದರು. ಅದರಂತೆಯೇ ಅರ್ಜುನ್ ನಡೆದುಕೊಂಡು ಇದೀಗ ಉತ್ತಮ ಲಯಕ್ಕೆ ಮರಳಿದ್ದು, ಮುಂಬೈ ಲೀಗ್ ಪಂದ್ಯದಲ್ಲಿ ಮಾರಕ ಬೌಲಿಂಗ್ ದಾಳಿ ಜೊತೆಗೆ ಆಕ್ರಮಣಕಾರಿ ಬ್ಯಾಟಿಂಗ್ ಆಡಿ ಗಮನ ಸೆಳೆದಿದ್ದಾರೆ. ಇದು ಇದೀಗ ಸಖತ್ ಸದ್ದು ಮಾಡುತ್ತಿದೆ.
ತಮ್ಮ ಮಗ ಅರ್ಜುನ್ ಪ್ರತಿಯೊಬ್ಬ ಆಟಗಾರನಂತೆ ಕಠಿಣ ಪರಿಶ್ರಮ, ದೇಶಿ ಕ್ರಿಕೆಟ್ನ ತಳಮಟ್ಟದ ಸವಾಲುಗಳನ್ನು ಎದುರಿಸಿ ಸ್ವಂತ ಬಲದಿಂದ ಮೇಲೆ ಬರಬೇಕು ಎಂಬುದು ಸಚಿನ್ ತೆಂಡೂಲ್ಕರ್ ಅವರ ದೃಢ ನಂಬಿಕೆಯಾಗಿತ್ತು. ತಂದೆಯ ಆಸೆಯಂತೆಯೇ ಅರ್ಜುನ್ ಕೂಡ ಯಾವುದೇ ವಿಶೇಷ ಸವಲತ್ತುಗಳನ್ನು ನಿರೀಕ್ಷಿಸದೆ, ದೇಶಿ ಟೂರ್ನಿಗಳಲ್ಲಿ ಬೆವರು ಹರಿಸಿ ಸತತ ಪ್ರಯತ್ನಗಳ ಮೂಲಕ ತಮ್ಮ ಕ್ರಿಕೆಟ್ ಪಯಣವನ್ನು ರೂಪಿಸಿಕೊಳ್ಳುತ್ತಿದ್ದಾರೆ. ಇತ್ತೀಚಷ್ಟೇ ನಡೆದ ಮುಂಬೈ ಲೀಗ್ ಪಂದ್ಯದಲ್ಲಿ ಅರ್ಜುನ್ ಪ್ರದರ್ಶಿಸಿದ ಅಮೋಘ ಆಲ್ರೌಂಡ್ ಆಟವೇ ಇದಕ್ಕೆ ಸಾಕ್ಷಿ.

ವಾಂಖೆಡೆಯಲ್ಲಿ ಮಿಂಚಿದ ಕ್ರಿಕೆಟ್ ದೇವರ ಮಗ
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಟಿ20 ಮುಂಬೈ ಲೀಗ್ 2026ರ ಪಂದ್ಯದಲ್ಲಿ ಅರ್ಜುನ್ ತೆಂಡೂಲ್ಕರ್ ಭರ್ಜರಿ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದಾರೆ. 'ನಮೋ ಬಂದ್ರಾ ಬ್ಲಾಸ್ಟರ್ಸ್' ವಿರುದ್ಧದ ಪಂದ್ಯದಲ್ಲಿ ಶಿವಂ ದುಬೆ ನೇತೃತ್ವದ ಎಆರ್ಸಿಎಸ್ ಅಂಧೇರಿ ತಂಡದ ಪರ ಕಣಕ್ಕಿಳಿದ ಅರ್ಜುನ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಪ್ರಮುಖ ಪಾತ್ರ ವಹಿಸಿದರು.
ಎದುರಾಳಿ ತಂಡಕ್ಕೆ ಸಿಂಹಸ್ವಪ್ನವಾದ ಅರ್ಜುನ್
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನಮೋ ಬಾಂದ್ರಾ ಬ್ಲಾಸ್ಟರ್ಸ್ ತಂಡವನ್ನು ಅಂಧೇರಿ ತಂಡದ ಬೌಲರ್ಗಳು ರನ್ ಗಳಿಸಲು ಪರದಾಡುವಂತೆ ಮಾಡಿದರು. ಆರಂಭದಲ್ಲೇ ಎದುರಾಳಿ ಬ್ಯಾಟರ್ಗಳಿಗೆ ಎಡಗೈ ವೇಗಿ ಅರ್ಜುನ್ ತೆಂಡೂಲ್ಕರ್ ಮಾರಕವಾಗಿ ಕಾಣಿಸಿಕೊಂಡರು. ತಾವು ಎಸೆದ 3 ಓವರ್ಗಳಲ್ಲಿ ಒಂದು ಮೇಡನ್ ಓವರ್ ಸೇರಿದಂತೆ ಕೇವಲ 11 ರನ್ ನೀಡಿ 3 ಪ್ರಮುಖ ವಿಕೆಟ್ಗಳನ್ನು ಕಬಳಿಸಿದರು.
ಅರ್ಜುನ್ ಆಕ್ರಮಣಕಾರಿ ಬೌಲಿಂಗ್ ಪ್ರದರ್ಶನ
ಅರ್ಜುನ್ ಅವರ ಈ ಆಕ್ರಮಣಕಾರಿ ಬೌಲಿಂಗ್ ನೆರವಿನಿಂದ ಬಾಂದ್ರಾ ಬ್ಲಾಸ್ಟರ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 144 ರನ್ ಗಳಿಸಲಷ್ಟೇ ಶಕ್ತವಾಯಿತು. ಬಾಂದ್ರಾ ತಂಡದ ಪರ ಓಮ್ ಕೇಶಕಾಮತ್ 49 ರನ್ ಹಾಗೂ ಸಾಗರ್ ಛಾಬ್ರಿಯಾ 44 ರನ್ ಗಳಿಸಿದ್ದನ್ನು ಹೊರತುಪಡಿಸಿದರೆ ಉಳಿದಾವ ಬ್ಯಾಟರ್ಗಳೂ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಬಾಂದ್ರಾ ಬ್ಲಾಸ್ಟರ್ಸ್ಗೆ ಸಾಲು ವಿಕೆಟ್ ಪತನಕ್ಕೆ ಪ್ರಮುಖ ಕಾರಣವೇ ಅರ್ಜುನ್.
66 ರನ್ ಚಚ್ಚಿ ತಂಡ ಗೆಲ್ಲಿಸಿದ ಅರ್ಜುನ್
ಅರ್ಜುನ್ ಆಟ ಅಷ್ಟಕ್ಕೇ ನಿಲ್ಲಲಿಲ್ಲ. ಬಾಂದ್ರಾ ಬ್ಲಾಸ್ಟರ್ಸ್ ನೀಡಿದ 145 ರನ್ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಎಆರ್ಸಿಎಸ್ ಅಂಧೇರಿ ತಂಡಕ್ಕೆ ಆರಂಭದಲ್ಲೇ ದಿವ್ಯಾಂಶ್ ಸಕ್ಸೇನಾ (26 ರನ್) ವಿಕೆಟ್ ಪತನದ ಮೂಲಕ ಆರಂಭಿಕ ಆಘಾತ ಎದುರಾಯಿತು. ಬಳಿಕ ಮೂರನೇ ಕ್ರಮಾಂಕದಲ್ಲಿ ಕ್ರೀಸ್ಗೆ ಬಂದ ಅರ್ಜುನ್ ತೆಂಡೂಲ್ಕರ್ ಪಂದ್ಯದ ಚಿತ್ರಣವನ್ನೇ ಬದಲಾಯಿಸಿದರು. ಸಿಕ್ಸರ್, ಬೌಂಡರಿಗಳ ಮಳೆ ಹರಿಸಿದ ಅವರು ಕೇವಲ 25 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ಅಂತಿಮವಾಗಿ ಅವರು 34 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್ಗಳ ನೆರವಿನಿಂದ ಅಜೇಯ 66 ರನ್ ಚಚ್ಚಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಅರ್ಜುನ್ ಆಟಕ್ಕೆ ಪ್ರಶಂಸೆಗಳ ಸುರಿಮಳೆ
ಅರ್ಜುನ್ಗೆ ಉತ್ತಮ ಸಾಥ್ ನೀಡಿದ ಮುಶೀರ್ ಖಾನ್ ಕೂಡ 38 ಎಸೆತಗಳಲ್ಲಿ ಅಜೇಯ 54 ರನ್ ಗಳಿಸಿದರು. ಇವರಿಬ್ಬರ 116 ರನ್ಗಳ ಅತ್ಯುತ್ತಮ ಜೊತೆಯಾಟದ ನೆರವಿನಿಂದ ಎಆರ್ಸಿಎಸ್ ಅಂಧೇರಿ ತಂಡ ಕೇವಲ 13.5 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು 148 ರನ್ ಗಳಿಸಿ ಸುಲಭ ಜಯ ದಾಖಲಿಸಿತು. ಇನ್ನು 37 ಎಸೆತಗಳು ಬಾಕಿ ಇರುವಂತೆಯೇ ಅಂಧೇರಿ ತಂಡ ಗೆಲುವಿನ ನಗೆ ಬೀರಲು ಕಾರಣರಾದ ಅರ್ಜುನ್ ತೆಂಡೂಲ್ಕರ್ ಅವರಿಗೆ 'ಪಂದ್ಯ ಶ್ರೇಷ್ಠ' ಪ್ರಶಸ್ತಿ ಒಲಿಯಿತು. ಅತ್ಯುತ್ತಮ ಲಯಕ್ಕೆ ಮರಳಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮುತ್ತಿರುವ ಅರ್ಜುನ್ ಅವರ ಈ ಆಕ್ರಮಣಕಾರಿ ಆಟ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.












Click it and Unblock the Notifications