ಮಳೆಗಾಲ ಅಧಿವೇಶನ: ಬಿಜೆಪಿ ಮೇಲೆ ಮುಗಿಬೀಳಲು ವಿಪಕ್ಷಗಳು ಸಜ್ಜು, ಬಿಜೆಪಿ ತಿರುಗೇಟು ಏನು?
ಬೆಂಗಳೂರು, ಸೆಪ್ಟಂಬರ್ 11: ರಾಜ್ಯದಲ್ಲಿ ಸೋಮವಾರ ಸೆಪ್ಟಂಬರ್ 12ರಿಂದ ಹತ್ತು ದಿನಗಳ ಕಾಲ ಮಳೆಗಾಲದ ವಿಧಾನಮಂಡಲ ಅಧಿವೇಶನ ಆರಂಭಗೊಳ್ಳಲಿದೆ. ಪ್ರತಿ ಪಕ್ಷಗಳು ಮತ್ತು ಆಡಳಿತ ಪಕ್ಷಗಳ ನಾಯಕರ ಮಧ್ಯೆ ನಡೆಯುವ ಬಿಸಿ ಬಿಸಿ ಚರ್ಚೆಗೆ ಸದನ ಸಾಕ್ಷಿಯಾಗಲಿದೆ. ಆಡಳಿತ ಪಕ್ಷದ ವಿರುದ್ಧ ಮುಗಿಬೀಳಲು ಪ್ರತಿಪಕ್ಷಗಳು ಸಜ್ಜಾಗಿವೆ.
ಅಧಿವೇಶನದ ಮೊದಲ ದಿನವಾದ ಸೋಮವಾರ ದಿ.ಉಮೇಶ್ ಕತ್ತಿ ಸೇರಿದಂತೆ ಇತ್ತೀಚೆಗೆ ಅಗಲಿದ ಗಣ್ಯರಿಗೆ ಎಲ್ಲ ಪಕ್ಷಗಳ ನಾಯಕರು ಸದನದಲ್ಲಿ ಸಂತಾಪ ಸಲ್ಲಿಸಲಿದ್ದಾರೆ. ನಂತರ ಮಹತ್ತರ ವಿಷಯಗಳು ಒಂದೊಂದಾಗೇ ಪ್ರಸ್ತಾಪಗೊಳ್ಳಲಿವೆ. ಮಂಗಳವಾರದಿಂದ ಮುಂದುವರಿಯಲಿರುವ ಸದನದಲ್ಲಿ ಕಾವೇರಿದ ಚರ್ಚೆಗಳು ನಡೆಯಲಿವೆ.
ಮಳೆಹಾನಿ, ಕಮಿಷನ್ ಸರ್ಕಾರ ಮುಖ್ಯ ಚರ್ಚಾ ವಿಷಯಗಳು?
ಮುಖ್ಯವಾಗಿ ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಕಡೆ ಮಳೆಯಿಂದಾಗಿ ಪ್ರವಾಹ, ಅತೀವೃಷ್ಟಿ ನಿರ್ಮಾಣವಾಗಿವೆ. ಅಪಾರ ಪ್ರಮಾಣದಲ್ಲಿ ಬೆಳಹಾನಿ ಉಂಟಾಗಿದೆ. ರೈತರು, ತಗ್ಗು ಪ್ರದೇಶದ ನಿವಾಸಿಗಳು ಸಂಕಷ್ಟ ಅನುಭವಿಸಿದ್ದಾರೆ. ನಗರ ಪ್ರದೇಶಗಳು ದ್ವೀಪವಾಗಿವೆ. ಇದನ್ನು ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಸರ್ಕಾರದ ಆಡಳಿತ ವೈಪಲ್ಯದಿಂದ ಇಷ್ಟೊಂದು ಸಮಸ್ಯೆ ಆಗಿದೆ ಎಂದೆಲ್ಲ ಪ್ರತಿಪಕ್ಷಗಳು ಟೀಕಿಸಿದ್ದವು. ಸದನದಲ್ಲಿ ಈದೇ ವಿಷಯವಾಗಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆಯೂ ಇದೆ.
ಅಲ್ಲದೇ ಇತ್ತೀಚೆಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ರಾಜ್ಯ ಬಿಜೆಪಿ ಸರ್ಕಾರದ ಮೇಲೆ ಇದು 40ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಗಂಭೀರವಾಗಿ ಆರೋಪಿಸಿದ್ದರು. ಈ ಕುರಿತು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷ ಪ್ರಶ್ನೆಗಳ ಸುರಿಮಳೆ ಸುರಿಸಲಿದೆ. ಅಲ್ಲದೇ ಪಿಎಸ್ಐ ಸೇರಿದಂತೆ ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿನ ಹಗರಣ ಕುರಿತು ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ ನಡೆಸಿವೆ.
ಈ ಸಂಬಂಧ ಸೋಮವಾರ ಬೆಳಗ್ಗೆ ಕಾಂಗ್ರೆಸ್ ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರು ಸಭೆ ಕರೆದಿದ್ದಾರೆ. ಜೆಡಿಎಸ್ ಮುಖಂಡರು ಸಹ ಸಭೆ ಸೇರಲಿದ್ದಾರೆ. ಈ ಹಿಂದೆ ಸರ್ಕಾರದ ಭ್ರಷ್ಟಾಚಾರವನ್ನು ಸದನದಲ್ಲಿ ಬಯಲಿಗೆ ಎಳೆಯುತ್ತೇವೆ ಎಂದು ಕಾಂಗ್ರೆಸ್ ನಾಯಕರು ಎಚ್ಚರಿಕೆ ನೀಡಿದ್ದರು.
ಕಾಂಗ್ರೆಸ್ ಅವಧಿಯ ಹಗರಣ ಚರ್ಚೆಗೆ ಬಿಜೆಪಿ ಸಜ್ಜು
ಸದನದಲ್ಲಿ ಪ್ರತಿಪಕ್ಷಗಳು ಯಾವೆಲ್ಲ ವಿಷಯಗಳನ್ನು ಪ್ರಸ್ತಾಪಿಸಬಹುದು. ಏನೇಲ್ಲ ಪ್ರಶ್ನೆಗಳನ್ನು ಕೇಳಿ ತಮ್ಮ ಮೇಲೆ ಮುಗಿಬೀಳಬಹುದು ಎಂದು ಈಗಾಗಲೇ ಊಹಿಸಿರುವ ಆಡಳಿತ ಬಿಜೆಪಿ ಪಕ್ಷ ಸದನದಲ್ಲಿ ಸಮರ್ಪಕ ಉತ್ತರದ ಮೂಲಕ ತಿರುಗೇಟು ನೀಡಲು ಅಣಿಯಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದಿಯಾಗಿ, ಸಂಪುಟ ಸಚಿವರು, ಶಾಸಕರು ಸಜ್ಜಾಗಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳು ವಿಪಕ್ಷಗಳಿಗೆ ತಿರುಗೇಟು ನೀಡುವಂತೆ ತಮ್ಮ ನಾಯಕರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಅಲ್ಲದೇ ಕಾನೂನುಸ ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಸೇರಿದಂತೆ ಹಲವು ಬಿಜೆಪಿ ನಾಯಕರು ಕಾಂಗ್ರೆಸ್ ಅವಧಿಯಲ್ಲಿ ನಡೆದ ಹಗರಣ, ಭ್ರಷ್ಟಚಾರ ಕುರಿತು ಪ್ರಸ್ತಾಪಿಸಲಿದ್ದಾರೆ. ಜತೆಗೆ ಸರ್ಕಾರದ ಜನಪರ ಯೋಜನೆಗಳು, ಸಾಧನೆಗಳನ್ನು ಮುಂದಿಡಲು ನಿರ್ಧರಿಸಿದ್ದಾರೆ. ಒಟ್ಟಾರೆ ಹತ್ತು ದಿನದ ಮಳೆಗಾಲದ ಅಧಿವೇಶನವು ಆಡಳಿತ ಮತ್ತು ಪ್ರತಿಪಕ್ಷಗಳ ಮುಖಂಡರ ರಂಗೇರಿದ ಚರ್ಚೆಗಳ ವೇದಿಕೆಯಾಗುವುದಂತೂ ಖಂಡಿತ ಎನ್ನಲಾಗುತ್ತಿದೆ.