ಚುನಾವಣಾ ಪೂರ್ವ ಸಮೀಕ್ಷೆ : ಸಿದ್ದರಾಮಯ್ಯ ಸರ್ಕಾರಕ್ಕೆ 7 ಅಂಕ!
ಬೆಂಗಳೂರು, ಏಪ್ರಿಲ್ 08 : ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರಕ್ಕೆ ಜನರು 10ರಲ್ಲಿ 7 ಅಂಕಗಳನ್ನು ನೀಡಿದ್ದಾರೆ. ಕರ್ನಾಟಕ ಸರ್ಕಾರದ ಸಾಧನೆ ಕುರಿತ ಚುನಾವಣಾ ಪೂರ್ವ ಸಮೀಕ್ಷೆ ಕಳೆದ ವಾರ ಬಿಡುಗಡೆಯಾಗಿದೆ.
ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ (ಎಡಿಆರ್) ಮತ್ತು ದಕ್ಷ ಸಂಸ್ಥೆಗಳು ಜಂಟಿಯಾಗಿ ಕರ್ನಾಟಕ ಸರ್ಕಾರದ ಬಗ್ಗೆ ನಡೆಸಿದ 2ನೇ ಸಮೀಕ್ಷೆ ಇದಾಗಿದೆ. ಮೇ 12ರಂದು ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲಿದೆ. ಅದಕ್ಕೂ ಮೊದಲು ಈ ಸಮೀಕ್ಷೆ ಹೊರಬಂದಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
ಶಿಕ್ಷಣ, ವಿದ್ಯುತ್ ಮತ್ತು ನೀರು ನಿರ್ವಹಣೆ ವಿಚಾರದಲ್ಲಿ ರಾಜ್ಯದ ಜನರು ಸರ್ಕಾರವನ್ನು ಬೆಂಬಲಿಸಿದ್ದಾರೆ. ಶೇ 79ರಷ್ಟು ಜನರು ಸರ್ಕಾರದ ಜನಪ್ರಿಯ ಯೋಜನೆ ಅನ್ನಭಾಗ್ಯ ಯೋಜನೆಗೆ ಮೆಚ್ಚುಗೆ ಸೂಚಿಸಿದ್ದಾರೆ.
ರಾಜ್ಯದ 224 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 13,224 ಜನರನ್ನು ಸಂದರ್ಶನ ನಡೆಸಿ ಸಮೀಕ್ಷೆಯ ವರದಿಯನ್ನು ತಯಾರಿಸಲಾಗಿದೆ. ಡಿಸೆಂಬರ್ 2017 ರಿಂದ ಫೆಬ್ರವರಿ 2018ರ ತನಕ ಈ ಸಮೀಕ್ಷೆಯನ್ನು ನಡೆಸಲಾಗಿದೆ. ನಗರದ ಪ್ರದೇಶದಲ್ಲಿ 10ಕ್ಕೆ ಕಾಂಗ್ರೆಸ್ 7.13, ಗ್ರಾಮೀಣ ಪ್ರದೇಶದಲ್ಲಿ 7.05ರಷ್ಟು ಅಂಕಗಳನ್ನು ಪಡೆದಿದೆ.

ಹೇಗೆ ನಡೆಯಿತು ಸಮೀಕ್ಷೆ?
ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ (ಎಡಿಆರ್) ಮತ್ತು ದಕ್ಷ ಸಂಸ್ಥೆಗಳು ರಾಜ್ಯದ 224 ಕ್ಷೇತ್ರಗಳಲ್ಲಿ ಕರ್ನಾಟಕ ಸರ್ಕಾರದ ಕುರಿತು ಸಮೀಕ್ಷೆ ನಡೆಸಿವೆ. ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ 67ರಷ್ಟು ಜನರು ಉತ್ತರ ನೀಡುವಾಗ ಅಭ್ಯರ್ಥಿಯ ಜಾತಿ, ಶೇ 42ರಷ್ಟು ಜನರು ಸಿಎಂ ಅಭ್ಯರ್ಥಿ ಯಾರು ಎಂಬುದನ್ನು ಆಧರಿಸಿ ಉತ್ತರ ನೀಡಿದ್ದಾರೆ.
ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಿದ್ಯುತ್, ನೀರಿನ ಸರಬರಾಜು, ಆಹಾರ ಸರಬರಾಬು ವಿಚಾರದಲ್ಲಿ ಸರ್ಕಾರ ಉತ್ತ ಕೆಲಸ ಮಾಡಿದೆ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ. 10 ಅಂಕಗಳಲ್ಲಿ ಸಿದ್ದರಾಮಯ್ಯ ಸರ್ಕಾರಕ್ಕೆ 7 ಅಂಕಗಳನ್ನು ನೀಡಿದ್ದಾರೆ.

ಸರ್ಕಾರದ ಯೋಜನೆಗಳಿಗೆ ಮೆಚ್ಚುಗೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಅನ್ನಭಾಗ್ಯ, ಕೃಷಿಭಾಗ್ಯ, ಸೈಕಲ್ ಭಾಗ್ಯ ಮತ್ತು ಕ್ಷೀರಭಾಗ್ಯ ಯೋಜನೆಗಳಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶೇ 79 ರಷ್ಟು ಜನರು ಅನ್ನಭಾಗ್ಯ ಯೋಜನೆಯನ್ನು ಮೆಚ್ಚಿದ್ದಾರೆ. ಶೇ 58ರಷ್ಟು ಜನರು ಕ್ಷೀರಭಾಗ್ಯ ಯೋಜನೆಗೆ ಮೆಚ್ಚುಗೆ ಸೂಚಿಸಿದ್ದಾರೆ. ಶೇ 64ರಷ್ಟು ಜನರು ಅನಿಲ ಭಾಗ್ಯ ಯೋಜನೆಯನ್ನು ಬೆಂಬಲಿಸಿದ್ದಾರೆ.
ನೀರು ಪೂರೈಕೆ ವಿಚಾರದಲ್ಲಿ ಸರ್ಕಾರ ಉತ್ತಮವಾಗಿ ಕೆಲಸ ಮಾಡಿದೆ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ. ಗ್ರಾಮೀಣ ಭಾಗದಲ್ಲಿ 8.06 ಮತ್ತು ನಗರ ಪ್ರದೇಶದಲ್ಲಿ 8.02 ರಷ್ಟು ಜನರು ನೀರಿನ ಪೂರೈಕೆಗೆ ಸರ್ಕಾರ ಆದ್ಯತೆ ನೀಡಿದೆ ಎಂದು ಹೇಳಿದ್ದಾರೆ.

ರಸ್ತೆ, ವಿದ್ಯುತ್, ಶಿಕ್ಷಣ ಕ್ಷೇತ್ರಗಳು
ಸರ್ಕಾರ ಉತ್ತಮ ವಿದ್ಯುತ್ ಸೌಕರ್ಯ ಒದಗಿಸಲು ಪ್ರಯತ್ನ ನಡೆಸಿದೆ ಎಂದು ಜನರು 7.97 ಅಂಕಗಳನ್ನು ನೀಡಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ 7.94 ಅಂಕಗಳನ್ನು ಕೊಟ್ಟಿದ್ದಾರೆ.
ಬೆಂಗಳೂರಿನ ರಸ್ತೆಗಳ ಬಗ್ಗೆ ಕರ್ನಾಟಕ ಸರ್ಕಾರ ಭಾರೀ ಟೀಕೆಗೆ ಒಳಗಾಗಿತ್ತು. ಆದರೆ, ಜನರು ರಸ್ತೆಗಳ ಗುಣಮಟ್ಟ ಸುಧಾರಣೆಯಲ್ಲಿ ಸರ್ಕಾರ ಉತ್ತಮ ಕೆಲಸ ಮಾಡಿದೆ ಎಂದು 7.81 ರಷ್ಟು ಅಂಕಗಳನ್ನು ನೀಡಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಶಾಲೆ, ಆಸ್ಪತ್ರೆ, ರಸ್ತೆ, ಆರೋಗ್ಯ ಕೇಂದ್ರ ಮುಂತಾದ ಕ್ಷೇತ್ರಗಳಲ್ಲಿ ಸರ್ಕಾರಕ್ಕೆ 10ರಲ್ಲಿ 7 ರಿಂದ 8 ಅಂಕಗಳನ್ನು ನೀಡಿದ್ದಾರೆ.
ನಗರ ಪ್ರದೇಶಗಳಲ್ಲಿ ಮೂಲ ಸೌಕರ್ಯವನ್ನು ಒದಗಿಸುವಲ್ಲಿ ಸರ್ಕಾರಕ್ಕೆ 6.79, ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ 6.77 ಮತ್ತು ಉದ್ಯೋಗ ತರಬೇತಿ ವಿಚಾರದಲ್ಲಿ 6.40 ಅಂಕಗಳನ್ನು ನೀಡಿದ್ದಾರೆ.

ಯಾವ ಕ್ಷೇತ್ರದಲ್ಲಿ ಸರ್ಕಾರಕ್ಕೆ ಕಡಿಮೆ ಅಂಕ?
ಕರ್ನಾಟಕ ಸರ್ಕಾರ ಕೆಲವು ಕ್ಷೇತ್ರಗಳಲ್ಲಿ ಮಾಡಿದ ಕೆಲಸ ತೃಪ್ತಿ ತಂದಿಲ್ಲ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ.
ಉದ್ಯೋಗ ತರಬೇತಿ ವಿಚಾರದಲ್ಲಿ ನಗರದ ಪ್ರದೇಶದಲ್ಲಿ 6.4, ಗ್ರಾಮೀಣ ಪ್ರದೇಶದಲ್ಲಿ 6.6 ರಷ್ಟು ಅಂಕಗಳನ್ನು ನೀಡಲಾಗಿದೆ. ಭ್ರಷ್ಟಾಚಾರದ ವಿಚಾರದಲ್ಲಿ ನಗರ ಪ್ರದೇಶಗಳಲ್ಲಿ 6.77 ಮತ್ತು ಗ್ರಾಮೀಣ ಪ್ರದೇಶದಲ್ಲಿ 6.67 ಅಂಕಗಳನ್ನು ನೀಡಲಾಗಿದೆ.
ಉದ್ಯೋಗ ಸೃಷ್ಟಿ ವಿಚಾರದಲ್ಲಿ ನಗರದ ಪ್ರದೇಶದಲ್ಲಿ 6.87, ಗ್ರಾಮೀಣ ಪ್ರದೇಶದಲ್ಲಿ 6.67 ಅಂಕಗಳನ್ನು ನೀಡಲಾಗಿದೆ. ಮೂಲ ಸೌಕರ್ಯಗಳ ವಿಚಾರದಲ್ಲಿ ನಗರದ ಪ್ರದೇಶದಲ್ಲಿ 6.79 ಅಂಕಗಳನ್ನು ಸರ್ಕಾರಕ್ಕೆ ನೀಡಲಾಗಿದೆ.












Click it and Unblock the Notifications