ಹಾಗಿದ್ದರೆ ಇಷ್ಟುದಿನ ಡಿಕೆ ಶಿವಕುಮಾರ್ ಮಾಧ್ಯಮದ ಮುಂದೆ ಹೇಳಿದ್ದೆಲ್ಲಾ ಸುಳ್ಳಾ?
Recommended Video
"ನನ್ನನ್ನು ಬಂಧಿಸುವಲ್ಲಿ ಕೊನೆಗೂ ಬಿಜೆಪಿಯವರು ಯಶಸ್ವಿಯಾಗಿದ್ದಾರೆ, ಅವರಿಗೆ ಒಳಿತಾಗಲಿ", ಇದು ಕಾಂಗ್ರೆಸ್ಸಿನ ಹಿರಿಯ ಮುಖಂಡ ಡಿ ಕೆ ಶಿವಕುಮಾರ್, ಬಂಧನಕ್ಕೊಳಗಾಗುವ ಮುನ್ನ ನೀಡಿದ ಹೇಳಿಕೆ.
ಸತತ ವಿಚಾರಣೆಯಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಡಿ ಕೆ ಶಿವಕುಮಾರ್ ಅವರಿಗೆ ತನ್ನ ಬಂಧನದ ಸುಳಿವು, ಮಂಗಳವಾರ (ಸೆ 3) ಮಧ್ಯಾಹ್ನದ ಹೊತ್ತಿಗೇ ಸಿಕ್ಕಿತ್ತು.
ಡಿಕೆಶಿ ಹೇಳುವಂತೆ, ಗುಜರಾತಿನ ಕಾಂಗ್ರೆಸ್ ಶಾಸಕರನ್ನು ರಕ್ಷಿಸಿದ ನಂತರ, ನನಗೆ ಐಟಿ, ಇಡಿ ಸಂಕಷ್ಟ ಆರಂಭವಾಯಿತು ಎಂದು. ಡಿಕೆಶಿ ತಾಯಿ, ಸಹೋದರ ಮತ್ತು ಅವರ ಆಪ್ತರನ್ನೂ ತನಿಖಾ ಸಂಸ್ಥೆಗಳು ಹಲವು ಬಾರಿ ವಿಚಾರಣೆಗೊಳಪಡಿಸಿದ್ದವು.
ಅಧಿಕಾರಿಗಳು ಕರೆದಾಗಲೆಲ್ಲಾ ಡಿಕೆಶಿ ವಿಚಾರಣೆಗೆ ಹೋಗುತ್ತಿದ್ದರು. ಆದರೂ, ಬುಧವಾರ ಅವರ ಬಂಧನಕ್ಕೆ ಕಾರಣ, ಅವರು ವಿಚಾರಣೆಗೆ ಸಹಕರಿಸುತ್ತಿಲ್ಲ ಎನ್ನುವುದು. ಹಾಗಿದ್ದರೆ, ಇಷ್ಟು ದಿನ ಡಿ ಕೆ ಶಿವಕುಮಾರ್, ಮಾಧ್ಯಮದವರ ಮುಂದೆ ತಪ್ಪು ಹೇಳಿಕೆಯನ್ನು ನೀಡುತ್ತಿದ್ರಾ ಎನ್ನುವುದು ಪ್ರಶ್ನೆ.

ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆಲ್ಲಾ ಉತ್ತರಿಸಿದ್ದೇನೆ, ನಾನೇನು ತಪ್ಪು ಮಾಡಿಲ್ಲ
ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿಯಲ್ಲಿ, ನಾಲ್ಕು ದಿನಗಳ ವಿಚಾರಣೆಯ ನಂತರ ಡಿಕೆಶಿ ಬಂಧನವಾಗಿದೆ. ಮಧ್ಯಾಹ್ನ ಊಟಕ್ಕೆ ಹೊರಗೂ ಬಿಡದೇ ಇದ್ದಾಗಲೇ, ಅವರಿಗೆ, ಬಂಧನದ ಸುಳಿವು ಸಿಕ್ಕಿದೆ. ಇದುವರೆಗೆ, ಪ್ರತೀ ವಿಚಾರಣೆ ಎದುರಿಸಿ ಹೊರಬರುವಾಗ ಡಿಕೆಶಿ ಹೇಳುತ್ತಿದ್ದದ್ದು ಒಂದೇ ಮಾತು, ' ನಾನು ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆಲ್ಲಾ ಉತ್ತರಿಸಿದ್ದೇನೆ, ನಾನೇನು ತಪ್ಪು ಮಾಡಿಲ್ಲ " ಎಂದು. (ಚಿತ್ರ: ಪಿಟಿಐ)

ಡಿ ಕೆ ಶಿವಕುಮಾರ್ ವಿಚಾರಣೆಗೆ ಸಹಕರಿಸುತ್ತಿಲ್ಲ
ಆದರೆ, ನಾಲ್ಕು ದಿನಗಳ ವಿಚಾರಣೆಯ ನಂತರ, ಇಡಿ ಅಧಿಕಾರಿಗಳು, ಡಿ ಕೆ ಶಿವಕುಮಾರ್ ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದು ಬಂಧಿಸಿದ್ದಾರೆ. ಈ ಬಂಧನದ ಹಿಂದೆ, ಹಲವು ಪ್ರಶ್ನೆಗಳು ಉದ್ಬವಿಸುವುದು ಸಹಜ. ಒಂದು ವೇಳೆ, ಡಿಕೆಶಿ ವಿಚಾರಣೆಗೆ ಸಹಕರಿಸದೇ ಇದ್ದಿದ್ದರೆ, ಮೊದಲ ದಿನವೇ ಯಾಕೆ ಅವರ ಬಂಧನವಾಗಿಲ್ಲ ಎನ್ನುವುದು. (ಚಿತ್ರ: ಪಿಟಿಐ)

ವಿಚಾರಣೆಗೆ ಸಹಕರಿಸುತ್ತಿದ್ದೇನೆ ಎಂದು ಹೇಳುತ್ತಾ ಬರುತ್ತಿದ್ದದ್ದು ಸತ್ಯನಾ ಅಥವಾ ಸುಳ್ಳಾ
ಅಥವಾ, ಇಡಿ ಅಧಿಕಾರಿಗಳು ಕೇಳಿದ ಕೆಲವೊಂದು ಪ್ರಶ್ನೆಗಳಿಗೆ ಡಿ ಕೆ ಶಿವಕುಮಾರ್ ತಡವರಿಸಿದ್ರಾ ಎನ್ನುವುದು ಇನ್ನೊಂದು ಪ್ರಶ್ನೆ. ಇಡಿ ವಿಚಾರಣೆಯ ವೇಳೆ ಏನೆಲ್ಲಾ ಪ್ರಶ್ನೆಗಳು ಡಿಕೆಶಿಗೆ ಎದುರಾದವು, ಅದಕ್ಕೆ ಅವರು ಯಾವ ರೀತಿ ಉತ್ತರ ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗುವುದಿಲ್ಲ. ಹಾಗಾಗಿ, ಡಿಕೆಶಿ, ವಿಚಾರಣೆಗೆ ಸಹಕರಿಸುತ್ತಿದ್ದೇನೆ ಎಂದು ಹೇಳುತ್ತಾ ಬರುತ್ತಿದ್ದದ್ದು ಸತ್ಯನಾ ಅಥವಾ ಸುಳ್ಳಾ ಎನ್ನುವುದು ಪ್ರಶ್ನೆಯಾಗಿಯೇ ಉಳಿಯುತ್ತದೆ. (ಚಿತ್ರ: ಪಿಟಿಐ)

ನನಗೆ ಯಾವ ಭಯವೂ ಇಲ್ಲ
"ನಾನೇನು ತಪ್ಪು ಮಾಡಿಲ್ಲ, ಹಲವು ಉದ್ಯಮಗಳನ್ನು ನಡೆಸಿಕೊಂಡು ಬರುತ್ತಿದ್ದೇನೆ. ಕಾನೂನಾತ್ಮಕವಾಗಿ ಏನೇನು ತೆರಿಗೆಯನ್ನು ಪಾವತಿಸಬೇಕೋ, ಒಬ್ಬ ಭಾರತದ ಪ್ರಜೆಯಾಗಿ ಸರಿಯಾಗಿ ಟ್ಯಾಕ್ಸ್ ಕಟ್ಟುತ್ತಿದ್ದೇನೆ. ನನಗೆ ಯಾವ ಭಯವೂ ಇಲ್ಲ, ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆಲ್ಲಾ ಉತ್ತರಿಸಿದ್ದೇನೆ" ಎಂದು ಡಿಕೆಶಿ ಹಲವು ಬಾರಿ ಹೇಳಿದ್ದರು.

ಉಪ್ಪು ತಿಂದರೆ, ನೀರು ಕುಡಿಯೋಕೆ ಸಿದ್ದನಿದ್ದೇನೆ
" ಉಪ್ಪು ತಿಂದರೆ, ನೀರು ಕುಡಿಯೋಕೆ ಸಿದ್ದನಿದ್ದೇನೆ. ತಪ್ಪು ಮಾಡಿದರೆ ತಾನೇ, ಭಯ ಪಡೋಕೆ. ಅಧಿಕಾರಿಗಳು ಅವರ ಕೆಲಸವನ್ನು ಮಾಡುತ್ತಿದ್ದಾರೆ. ವಿಚಾರಣೆಗೆ ಗೈರಾಗುವ ಅಥವಾ ಹೆದರುವ ಪ್ರಶ್ನೆಯೇ ಇಲ್ಲ. ನಾನು ಹುಟ್ಟು ಕಾಂಗ್ರೆಸ್ಸಿಗ, ಕಾಂಗ್ರೆಸ್ಸಿಗನಾಗಿಯೇ ಮುಂದುವರಿಯುತ್ತೇನೆ" ಎಂದು ಡಿಕೆಶಿ ಹೇಳಿದ್ದರು. ಹಾಗಿದ್ದರೆ, ವಿಚಾರಣೆಗೆ ಸಹಕರಿಸುತ್ತಿಲ್ಲ ಎನ್ನುವ ಇಡಿ ಇಲಾಖೆಯ ಹೇಳಿಕೆಯಲ್ಲಿ ಸತ್ಯವಿದೆಯೋ, ಅಥವಾ ಡಿಕೆಶಿ ಜನರ ಮುಂದೆ ತಪ್ಪು ಮಾಹಿತಿ ನೀಡುತ್ತಿದ್ದಾರೋ, ಕಬ್ಬಾಳಮ್ಮನೇ ಬಲ್ಲ...












Click it and Unblock the Notifications