ಕಾನೂನು ಹೋರಾಟ: ಯಡಿಯೂರಪ್ಪ ವಿರುದ್ಧ ಕೈ ತೆನೆ ಕೂಟಕ್ಕೆ ಹಿನ್ನಡೆ
Recommended Video

ನವದೆಹಲಿ, ಮೇ 17: 'ಕರ್ನಾಟಕದ ಮುಖ್ಯಮಂತ್ರಿ ಯಾರಾಗಲಿದ್ದಾರೆ?' ಎಂಬ ಭಾರಿ ಕುತೂಹಲದ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಬಿಜೆಪಿಯ ಬಿ.ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಇದ್ದ ಆಡ್ಡಿ ಆತಂಕ, ಸದ್ಯಕ್ಕೆ ದೂರಾಗಿದೆ.
ಯಡಿಯೂರಪ್ಪ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸುಪ್ರೀಂಕೋರ್ಟಿನ ಜಸ್ಟೀಸ್ ಎಕೆ ಸಿಕ್ರಿ, ಎ ಬೋಬ್ಡೆ ಹಾಗೂ ಅಶೋಕ್ ಭೂಷಣ್ ಅವರಿರುವ ತ್ರಿಸದಸ್ಯ ಪೀಠ ಇದೀಗ ಹಸಿರು ನಿಶಾನೆ ತೋರಿದ್ದಾರೆ. ಆದರೆ, ವಿಚಾರಣೆ ಇನ್ನೂ ಬಾಕಿಯಿದೆ.
ಯಡಿಯೂರಪ್ಪ ಅವರ ಬಳಿ ಬಹುಮತ ಸಾಬೀತುಪಡಿಸಲು ಬೇಕಾದಷ್ಟು ಶಾಸಕರ ಸಂಖ್ಯಾಬಲವಿಲ್ಲ, ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವಂತೆ ರಾಜ್ಯಪಾಲ ವಜುಭಾಯಿ ವಾಲ ಅವರು ನೀಡಿರುವ ನಿರ್ದೇಶನಕ್ಕೆ ತಡೆ ನೀಡಬೇಕು ಎಂದು ಕೋರಿ ಸುಪ್ರೀಂಕೋರ್ಟಿಗೆ ಕಾಂಗ್ರೆಸ್ ಅರ್ಜಿ ಹಾಕಿತ್ತು.
ಮಧ್ಯರಾತ್ರಿ 2.10ರ ಸುಮಾರಿಗೆ ಆರಂಭವಾದ ಅರ್ಜಿ ವಿಚಾರಣೆ ಬೆಳಗ್ಗೆ 5.20ರ ತನಕ ನಡೆಯಿತು. ಕಾಂಗ್ರೆಸ್ ಪರ ಅಭಿಷೇಕ್ ಮನು ಸಿಂಘ್ವಿ ಹಾಗೂ ಬಿಜೆಪಿ ಶಾಸಕರ ಪರ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ವಾದ ಮಂಡಿಸಿದ್ದಾರೆ.
* ಬಿಜೆಪಿಯ ಬಿಎಸ್ ಯಡಿಯೂರಪ್ಪ ಪ್ರಮಾಣ ವಚನಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ.
* ಗುರುವಾರ ಮಧ್ಯಾಹ್ನ 2 ಗಂಟೆಯೊಳಗೆ ಬೆಂಬಲಿತ ಶಾಸಕರ ಪಟ್ಟಿ ಇರುವ ಪತ್ರ(ಮೇ 15/16ರಂದು ನೀಡಿದ್ದು) ವನ್ನು ಸಲ್ಲಿಸುವಂತೆ ಯಡಿಯೂರಪ್ಪ/ಬಿಜೆಪಿಗೆ ಸುಪ್ರೀಂಕೋರ್ಟ್ ಸೂಚಿಸಿದೆ,
* ಈ ಕುರಿತಂತೆ ಕೇಂದ್ರ ಹಾಗೂ ಕರ್ನಾಟಕ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ, ಶುಕ್ರವಾರ ಬೆಳಗ್ಗೆ 10.30ಕ್ಕೆ ಅರ್ಜಿ ವಿಚಾರಣೆ ಮುಂದೂಡಿದ ತ್ರಿಸದಸ್ಯ ಪೀಠ.
ಪ್ರಕರಣದ ಇನ್ನಷ್ಟು ಮುಖ್ಯಾಂಶಗಳು ಮುಂದಿವೆ...

ಪ್ರಮಾಣ ವಚನಕ್ಕೆ ಗ್ರೀನ್ ಸಿಗ್ನಲ್
ಮೂವರು ಸುಪ್ರೀಂಕೋರ್ಟಿನ ನ್ಯಾಯಮೂರ್ತಿಗಳಿಂದ ಮಹತ್ವದ ಆದೇಶ ಕೆಲ ಕ್ಷಣಗಳ ಮುಂಚೆ ಹೊರ ಬಂದಿದ್ದು, ಗುರುವಾರ(ಮೇ 17) ಬೆಳಗ್ಗೆ ನಿಗದಿಯಾಗಿರುವ ಪ್ರಮಾಣ ವಚನ ಕಾರ್ಯಕ್ರಮಕ್ಕೆ ತಡೆ ನೀಡಲ್ಲ ಸಾಧ್ಯವಿಲ್ಲ ಎಂದು ಅಭಿಷೇಕ್ ಮನು ಸಿಂಘ್ವಿ ವಾದವನ್ನು ತಳ್ಳಿ ಹಾಕಿದ್ದಾರೆ. ಈ ಮೂಲಕ ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ ತೀವ್ರ ಹಿನ್ನಡೆ ಉಂಟಾಗಿದೆ.
ಆದರೆ, ಕಾಂಗ್ರೆಸ್ -ಜೆಡಿಎಸ್ ಸಲ್ಲಿಸಿರುವ ಅರ್ಜಿ ತಿರಸ್ಕೃತಗೊಂಡಿಲ್ಲ. ವಾದ- ಪ್ರತಿವಾದ ಮುಂದುವರಿದಿದೆ. ರಾಜ್ಯಪಾಲರಿಗೆ ಉಭಯ ಪಕ್ಷಗಳು ನೀಡಿರುವ ಶಾಸಕರ ಬೆಂಬಲವಿರುವ ಪತ್ರದ ಪ್ರತಿಯನ್ನು ಸಲ್ಲಿಸುವಂತೆ ತ್ರಿಸದಸ್ಯ ಪೀಠ ಸೂಚಿಸಿದೆ.

ಮಧ್ಯರಾತ್ರಿ ಸುಪ್ರೀಂಕೋರ್ಟ್ ಕದ ತಟ್ಟಿದ ಕಾಂಗ್ರೆಸ್
ಕಾಂಗ್ರೆಸ್ ಮಾಡಿದ ಮನವಿಯನ್ನು ಪುರಸ್ಕರಿಸಿದ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಜಸ್ಟೀಸ್ ಎಕೆ ಸಿಕ್ರಿ, ಎ ಬೋಬ್ಡೆ ಹಾಗೂ ಅಶೋಕ್ ಭೂಷಣ್ ಅವರಿರುವ ತ್ರಿಸದಸ್ಯ ಪೀಠ ರಚಿಸಿ, ತುರ್ತು ಅರ್ಜಿ ವಿಚಾರಣೆಗೆ ಅನುವು ಮಾಡಿಕೊಟ್ಟರು.
ಬಿಜೆಪಿ ಪರ ಕೆಕೆ ವೇಣುಗೋಪಾಲ್ ಹಾಗೂ ತುಷಾರ್ ಮೆಹ್ತಾ, ಮಣೀಂದರ್ ಸಿಂಗ್ ವಾದಿಸಿದರು. ಬಿಜೆಪಿಯ ಇಬ್ಬರು ಶಾಸಕರ ಪರವಾಗಿ ವಾದ ಮಂಡಿಸಲು ಮಾಜಿ ಅಟರ್ನಿ ಜನರಲ್ ಮುಕುಲ್ ರೋಹ್ಟಗಿ ನಂತರ ಸೇರಿಕೊಂಡರು. ಕಾಂಗ್ರೆಸ್ ಪರ ಅಭಿಷೇಕ್ ಮನು ಸಿಂಘ್ವಿ (ಚಿತ್ರದಲ್ಲಿ) ವಾದ ಮುಂದಿಟ್ಟರು.

ತ್ರಿಸದಸ್ಯ ಪೀಠದ ತೀರ್ಪಿನಲ್ಲಿ ಏನಿದೆ?
* ರಾಷ್ಟ್ರಪತಿಗಳು ಹಾಗೂ ರಾಜ್ಯಪಾಲರ ಆದೇಶವನ್ನು ಪ್ರಶ್ನಿಸಬಹುದೇ ಹೊರತೂ, ತಡೆ ನೀಡುವ ಅಧಿಕಾರ ಸುಪ್ರೀಂಕೋರ್ಟಿಗೆ ಇಲ್ಲ.
* ರಾಜ್ಯಪಾಲರು ನೀಡಿರುವ ಸೂಚನೆಯಂತೆ ಬಿ.ಎಸ್ ಯಡಿಯೂರಪ್ಪ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಯಾವುದೇ ರೀತಿ ತಡೆ ನೀಡಲು ಸಾಧ್ಯವಿಲ್ಲ.
* ಬಿ.ಎಸ್ ಯಡಿಯೂರಪ್ಪ ಹಾಗೂ ಬಿಜೆಪಿಯಿಂದ ರಾಜ್ಯಪಾಲ ವಜುಭಾಯಿ ವಾಲ ಅವರಿಗೆ ಸಲ್ಲಿಕೆಯಾಗಿರುವ ಶಾಸಕರ ಬೆಂಬಲ ಪತ್ರ(ಮೇ 15 ಹಾಗೂ 16ರಂದು ನೀಡಿದ್ದು) ವನ್ನು ಗುರುವಾರ ಮಧ್ಯಾಹ್ನ 2ಗಂಟೆಯೊಳಗೆ ಸಲ್ಲಿಸುವಂತೆ ಸೂಚಿಸಿದ ತ್ರಿಸದಸ್ಯ ಪೀಠ.

ಅಭಿಷೇಕ್ ಮನು ಸಿಂಘ್ವಿ ವಾದವೇನು?
ಸಂವಿಧಾನದ ಪರಿಚ್ಛೇದ 14ರನ್ನು ಉಲ್ಲಂಘಿಸಿರುವ ರಾಜ್ಯಪಾಲ ವಜುಭಾಯಿವಾಲ ಅವರು ನ್ಯಾಯಯುತವಾದ, ಪಕ್ಷಾತೀತವಾದ ಸೂಚನೆಯನ್ನು ನೀಡುವಲ್ಲಿ ವಿಫಲರಾಗಿದ್ದಾರೆ. ಸಂವಿಧಾನದ ಗೌರವ ಉಳಿಸಲು, ಬಿಜೆಪಿಗೆ ಅಧಿಕಾರ ಸ್ಥಾಪಿಸಲು ನೀಡಿರುವ ಸೂಚನೆಗೆ ತಡೆ ನೀಡಬೇಕು. ಸಂಖ್ಯಾಬಲವಿಲ್ಲದ ಬಿಎಸ್ ಯಡಿಯೂರಪ್ಪ ಅವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ತಡೆ ನೀಡಿ ಎಂದು ಕೋರಿದರು.
* ಕಾಂಗ್ರೆಸ್ ಹಾಗೂ ಜೆಡಿಎಸ್ ಚುನಾವಣೋತ್ತರ ಮೈತ್ರಿ ಮಾಡಿಕೊಂಡಿದ್ದು, ಒಟ್ಟು 116 ಸ್ಥಾನಗಳನ್ನು ಹೊಂದಿವೆ. ಇಬ್ಬರು ಪಕ್ಷೇತರರು ಬೆಂಬಲ ಸೂಚಿಸಿದ್ದಾರೆ. ಸರ್ಕಾರ ರಚನೆಗೆ ಬೇಕಾದ ಅಗತ್ಯ ಶಾಸಕರ ಬೆಂಬಲ ಕಾಂಗ್ರೆಸ್- ಜೆಡಿಎಸ್ ಬಳಿ ಇದೆ.












Click it and Unblock the Notifications