ಶಿರಾ, ಆರ್ ಆರ್ ನಗರದಲ್ಲಿ ಕಾಂಗ್ರೆಸ್ ಸೋಲಿಸಲು ಡಿಕೆಶಿ, ಸಿದ್ದರಾಮಯ್ಯ ಪ್ರಯತ್ನ?
ಬೆಂಗಳೂರು, ಅ. 28: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇತ್ತೀಚೆಗೆ ಒಂದು ಹೇಳಿಕೆ ಕೊಟ್ಟಿದ್ದರು. ಬಿಜೆಪಿಯಲ್ಲಿನ ಒಂದು ಸಮುದಾಯದ ನಾಯಕರು ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆಂದು ಅವರು ಹೇಳಿದ್ದರು. ಅದಕ್ಕೆ ಇದೀಗ ಬಿಜೆಪಿ ನಾಯಕರು ತಿರುಗೇಟು ನೀಡಿದ್ದಾರೆ. ಜೊತೆಗೆ ಆರ್ ಆರ್ ನಗರ ಹಾಗೂ ಶಿರಾ ಉಪಚುನಾವಣೆ ಕುರಿತು ಕಂದಾಯ ಸಚಿವ ಆರ್. ಅಶೋಕ್ ಅವರು ಮಹತ್ವದ ವಿಷಯ ಬಹಿರಂಪಡಿಸಿದ್ದಾರೆ.
ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಬೇರೆ ಪಕ್ಷಗಳು ಬೇಕಿಲ್ಲ ಎಂಬ ಸ್ಪೋಟಕ ಮಾಹಿತಿಯನ್ನು ಆರ್. ಅಶೊಕ್ ಹಂಚಿಕೊಂಡಿದ್ದಾರೆ. ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಾತನಾಡಿರುವ ಕಂದಾಯ ಸಚಿವ ಆರ್. ಅಶೋಕ್ ಅವರು ಡಿಕೆ ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ರಾಜಕೀಯ ನಡೆಯ ಬಗ್ಗೆ ವಿವರಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ನಾಯಕರೇ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಲು ಪ್ರಯತ್ನಿಸುತ್ತಿದ್ದಾರೆಂದು ಬಿಜೆಪಿ ನಾಯಕರು ಗಂಭೀರ ಆರೋಪ ಮಾಡಿದ್ದಾರೆ.

ಒಬ್ಬರನ್ನೊಬ್ಬರು ಸೋಲಿಸಲು ಕಾಂಗ್ರೆಸ್ ನಾಯಕರ ತಂತ್ರ?
ಶಿರಾದಲ್ಲಿ ಕಾಂಗ್ರೆಸ್ ಸೋಲಬೇಕು ಎಂದು ಡಿ.ಕೆ. ಶಿವಕುಮಾರ್ ಅವರು, ಆರ್.ಆರ್. ನಗರದಲ್ಲಿ ಕಾಂಗ್ರೆಸ್ ಸೋಲಬೇಕು ಎಂದು ಸಿದ್ದರಾಮಯ್ಯ ಅವರು ಒಳತಂತ್ರ ಮಾಡಿದ್ದಾರೆ. ಇದು ಮ್ಯಾಚ್ ಫಿಕ್ಸಿಂಗ್ ಆಗಿದೆ. ಅದಕ್ಕಾಗಿಯೇ ಮೈತ್ರಿ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣ ಅಂತ ಕುಮಾರಸ್ವಾಮಿ ಪದೇ ಪದೇ ಹೇಳುತ್ತಿದ್ದರೂ ಡಿ.ಕೆ. ಶಿವಕುಮಾರ್ ಅದನ್ನು ನಿರಾಕರಿಸಲು ಹೋಗಿಲ್ಲ ಎಂಬ ಗಂಭೀರ ಆರೋಪವನ್ನು ಆರ್. ಅಶೋಕ್ ಮಾಡಿದ್ದಾರೆ.

ಜಾತಿ ಕಾರ್ಡ್ ಬಳಕೆ ಮಾಡುತ್ತಿರುವ ಡಿಕೆಶಿ
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಈಗ ಜಾತಿ ಕಾರ್ಡ್ ಬಳಕೆ ಮಾಡುತ್ತಿದ್ದಾರೆ. ತಮ್ಮನ್ನು ಒಕ್ಕಲಿಗ ಅಂತಾ ಹೇಳಿಕೊಳ್ಳುತ್ತಿದ್ದಾರೆ. ಆದರೆ ಬೈರವೇಶ್ವರ ಬೆಟ್ಟವನ್ನು ವ್ಯಾಟಿಕನ್ ಸಿಟಿ ಮಾಡಲು ಹೊರಟಿದ್ದಿರಲ್ಲಾ? ಹಾಗಾದರೆ ವ್ಯಾಟಿಕನ್ ಸಿಟಿಯಲ್ಲಿ ನೂರು ಅಡಿ ಬೇಡ ಮೂರು ಅಡಿ ಎತ್ತರದ ಬಾಲಗಂಗಾಧರನಾಥ ಸ್ವಾಮೀಜಿ ಅವರ ಪ್ರತಿಮೆ ಸ್ಥಾಪನೆ ಮಾಡಿ.

ಕಪಾಲಿ ಬೆಟ್ಟದಲ್ಲಿ ಏನು ಸ್ವಾಮಿ ಯಾಕೆ?
ಕಪಾಲಿ ಬೆಟ್ಟವನ್ನು ಏಸು ಬೆಟ್ಟ ಮಾಡಲು ಹೊರಟಿದ್ದೀರಲ್ಲ? ಯಾವುದಾದರೂ ಪ್ರದೇಶದಲ್ಲಿ ನೀವು ಕಾಲಬೈರವೇಶ್ವರ ಸ್ವಾಮಿಯ ಒಂದು ವಿಗ್ರಹ ಪ್ರತಿಷ್ಠಾಪನೆ ಮಾಡಿದ್ದೀರಾ ತೋರಿಸಿ. ಹೋಗಲಿ ಅದು ಕಪಾಲಿ ಬೆಟ್ಟವೋ, ಏಸು ಬೆಟ್ಟವೋ ಸ್ಪಷ್ಟವಾಗಿ ಹೇಳಿ ಬಿಡಿ. ಅದೇ ನಿಮಗೆ ಸವಾಲು.
Recommended Video

ಡಿ.ಕೆ. ಶಿವಕುಮಾರ್ ಶಸ್ತ್ರತ್ಯಾಗ
ಆರ್.ಆರ್. ನಗರ ಕುರುಕ್ಷೇತ್ರದಲ್ಲಿ ಚುನಾವಣೆಗೆ ಮೊದಲೇ ಕಾಂಗ್ರೆಸ್ ಸೋಲೊಪ್ಪಿಕೊಂಡಿದೆ. ಪ್ರತಿಭಟನೆ ರಾಜಕಾರಣ ಮಾಡುತ್ತಿದೆ. ಡಿ.ಕೆ. ಶಿವಕುಮಾರ್ ಶಸ್ತ್ರತ್ಯಾಗ ಮಾಡಿ ಚುನಾವಣಾ ರಂಗದಿಂದ ಪಲಾಯನ ಮಾಡಿದ್ದಾರೆ. ಸಿದ್ದರಾಮಯ್ಯ ಪದೇಪದೇ ಬಿಜೆಪಿಯವರಿಗೆ ಧಮ್ ಇದೆಯಾ ಎಂದು ಪ್ರಶ್ನಿಸುತ್ತಿದ್ದಾರೆ.
ಇಡೀ ದೇಶದಲ್ಲಿ ಬಿಜೆಪಿ ತನ್ನ ಸಾಮರ್ಥ್ಯ ಏನು ಎಂದು ತೋರಿಸಿದೆ. ನಿಮಗೆ ದಮ್ ಇದ್ದರೆ ನಿಮ್ಮ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಡಾಕ್ ಅಧ್ಯಕ್ಷರನ್ನು ಬದಲಾವಣೆ ಮಾಡಿ ಪರ್ಮನೆಂಟ್ ಅಧ್ಯಕ್ಷರ ನೇಮಕ ಮಾಡಿ ಎಂದು ಒಂದು ಪತ್ರ ಬರೆದು ಒತ್ತಾಯ ಮಾಡಿ ನೋಡೋಣ ಎಂದು ಅಶೋಕ್ ಸವಾಲು ಹಾಕಿದ್ದಾರೆ.












Click it and Unblock the Notifications