ಡಿಕೆಶಿ ಸಂಪುಟದಲ್ಲಿ ಯತೀಂದ್ರಗೆ ಮಹತ್ವದ ಖಾತೆ: ಸಿಎಂ ಪುತ್ರನ ಆಯ್ಕೆ ಹಿಂದಿದೆ ಕಾಂಗ್ರೆಸ್ ಮಾಸ್ಟರ್ ಪ್ಲ್ಯಾನ್?
ಬೆಂಗಳೂರು: ನೂತನ ಸಿಎಂ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಇದರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಅವರಿಗೆ ಯಾವ ಖಾತೆ ನೀಡಲಾಗುತ್ತದೆ? ಎಂಬ ಕುತೂಹಲ ಹೆಚ್ಚಾಗಿದೆ. ಇದರ ನಡುವೆ ಪ್ರಿಯಾಂಕ್ ಖರ್ಗೆ ಅವರಿಗೆ ಸಿಗುವ ಖಾತೆ?, ಡಿಕೆ ಶಿವಕುಮಾರ್ ನಿರ್ವಹಿಸಿದ್ದ ಬೆಂಗಳೂರು ನಗರಾಭಿವೃದ್ಧಿ ಖಾತೆ ಯಾರ ಪಾಲಾಗಲಿದೆ? ಎಂಬುದರ ಮೇಲೆ ಹೆಚ್ಚಿನ ಚರ್ಚೆಗಳು ಶುರುವಾಗಿದೆ. ಯತೀಂದ್ರ ಅವರ ಆಯ್ಕೆ ಹಿಂದೆ ಕಾಂಗ್ರೆಸ್ ಹೈಕಮಾಂಡ್ ಮಾಸ್ಟರ್ ಪ್ಲ್ಯಾನ್ ಏನೆಂಬುದು ಗೊತ್ತಾಗಿದೆ.
ಮೂರು ವರ್ಷಗಳಿಂದ ಬೆಂಗಳೂರು ನಗರಾಭಿವೃದ್ಧಿ ಜವಾಬ್ದಾರಿ ನಿಭಾಯಿಸಿದ್ದ ಡಿಕೆ ಶಿವಕುಮಾರ್ ಅವರು ಹಲವು ಮಹತ್ತರ ಯೋಜನೆಗಳನ್ನು ಘೋಷಿಸಿದ್ದರು. ಈ ಯೋಜನೆಗಳಿಂದ ಕಾಂಗ್ರೆಸ್ಗೆ ಮುಂದಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಚುನಾವಣೆ ಹಾಗೂ ಇನ್ನಿತರ ಚುನಾವಣೆಗಳಲ್ಲಿ ವರದಾನವಾಗಲಿದೆ ಎಂದು ನಂಬಲಾಗಿದೆ. ಹೀಗಾಗಿ ಆ ಖಾತೆ ಡಿಕೆಶಿ ಅವರು ತಮ್ಮ ಬಳಿ ಇಟ್ಟುಕೊಳ್ಳುವ ಸಾಧ್ಯತೆ ಅಂತಲೂ ಮಾತುಗಳು ಕೇಳಿ ಬಂದಿವೆ.

ಯತೀಂದ್ರಗೆ ನಗರಾಭಿವೃದ್ಧಿ, ಬೆಂಗಳೂರು ನಗರಾಭಿವೃದ್ಧಿ ಯಾರಿಗೆ?
ಡಿಕೆ ಶಿವಕುಮಾರ್ ಸಚಿವ ಸಂಪುಟದಲ್ಲಿ ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಗೆ ರಾಜ್ಯ ನಗರಾಭಿವೃದ್ಧಿ ಖಾತೆ ನೀಡುವ ಸಾಧ್ಯತೆ ಇದೆ. ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಈಗಾಗಲೇ ಸಚಿವರಾಗಿ ಅನುಭವ ಇರುವ ಹಿರಿಯರಾದ ರಾಮಲಿಂಗಾ ರೆಡ್ಡಿ ಅಥವಾ ಕೃಷ್ಣ ಬೈರೇಗೌಡ ಅವರಿಗೆ ನೀಡುವ ಸಾಧ್ಯತೆಗಳು ದಟ್ಟವಾಗಿದೆ. ಪ್ರಮಾಣ ವಚನ ಸ್ವೀಕರಿಸಿದ ಎಲ್ಲ ಸಚಿವರಿಗೆ ತಲಾ ಒಂದೊಂದು ಖಾತೆ ನೀಡುವುದಂತೂ ಪಕ್ಕ. ಈ ಮೂಲಕ ಯತೀಂದ್ರ ಅವರು ಮೊದಲ ಬಾರಿಗೆ ಶಾಸಕರಾಗಿರುವ ಅವರು ಸಚಿವರಾಗಿಯೂ ಈ ಬಾರಿ ಅಧಿಕಾರ ನಿರ್ವಹಿಸಲಿದ್ದಾರೆ. ಈ ಹಿಂದೆ ಯತೀಂದ್ರ ಅವರಿಗೆ ಡಿಸಿಎಂ ಸ್ಥಾನ ಸಿಗಲಿದೆ ಎಂದು ಹೇಳಲಾಗಿತ್ತು, ಅದು ಆಗಲಿಲ್ಲ. ಸಿದ್ದರಾಮಯ್ಯ ಪುತ್ರ ಎಂಬ ಕಾರಣಕ್ಕಾಗಿ ಯತೀಂದ್ರ ಅವರ ಮೇಲೆ ಅಪಾರ ನಿರೀಕ್ಷೆಗಳಿವೆ.
ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಐಟಿ ಬಿಟಿ ಖಾತೆ ಸಚಿವರಾಗಿದ್ದ ಪ್ರಿಯಾಂಕ್ ಖರ್ಗೆ ಅವರಿಗೆ ಈ ಬಾರಿ ಗೃಹ ಇಲಾಖೆ ನೀಡುವ ಸಂಭವವಿದೆ. ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈ ಹುದ್ದೆ ಅತ್ಯಂತ ಮಹತ್ವದ್ದಾಗಿರುತ್ತದೆ. ಮುಂದಿನ ಎರಡು ವರ್ಷ ಖರ್ಗೆ ಅವರು ನಿರ್ವಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಯಂತೀಂದ್ರ ಆಯ್ಕೆ ಹಿಂದಿದೆ ಮಾಸ್ಟರ್ ಪ್ಲ್ಯಾನ್
ಯತಿಂದ್ರ ಅವರನ್ನು ಡಿಸಿಎಂ ಮಾಡಲು ರಾಹುಲ್ ಗಾಂಧಿಯವರು ನೀಡಿದ್ದ ಆಫರ್ ಅನ್ನು ಸ್ವತಃ ಸಿದ್ದರಾಮಯ್ಯ ನಿರಾಕರಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಯತೀಂದ್ರ ಅವರಿಗೆ ಸಚಿವ ಸ್ಥಾನ ಧಕ್ಕಲಿದೆ. ಈ ನಡುವೆ ಸಂಪುಟಕ್ಕೆ ಯತೀಂದ್ರ ಅವರನ್ನು ಸೇರಿಸಿಕೊಂಡಿದ್ದ ಹಿಂದೆ ಕಾಂಗ್ರೆಸ್ ಹೈಕಮಾಂಡ್ ಮಾಸ್ಟರ್ ಪ್ಲ್ಯಾನ್ ಮಾಡಿದೇ ಎಂಬ ಚರ್ಚೆಗಳು ಜೋರಾಗಿವೆ.
ಮೈಸೂರು ಭಾಗದಲ್ಲಿ ಸಿದ್ದರಾಮಯ್ಯ ಅವರು ಹಿಡಿತ ಸಾಧಿಸಿದ್ದರು. ಮಂಡ್ಯ, ಚಾಮರಾಜನಗರ, ಹಾಸನದವರೆಗೂ ಸಿದ್ದರಾಮಯ್ಯ ಅವರ ಪ್ರಭಾವವಿದೆ. ಯಾವುದೇ ಪಕ್ಷವಾದರೂ ಸಹಿತ ಹಳೇ ಮೈಸೂರು ಭಾಗದಲ್ಲಿ ಹಿಡಿತ ಸಾಧಿಸಲು ಹಾತೊರೆಯುತ್ತವೆ. ಇದೀಗ ಸಿದ್ದರಾಮಯ್ಯ ಅವಧಿ ಅಂತ್ಯಗೊಂಡ ಬೆನ್ನಲ್ಲೆ ಆ ಭಾಗದಲ್ಲಿ ಪಕ್ಷದ ವರ್ಚಸ್ಸು ಕಡಿಮೆ ಆಗದಂತೆ, ಸ್ಥಳೀಯ ಪಕ್ಷ ಜೆಡಿಎಸ್ ಅಲ್ಲಿ ಗಟ್ಟಿಯಾಗಿ ಬೇರೂರುವುದನ್ನು ತಡೆಯಲು ಅಥವಾ ಮುಂದಿನ ಚುನಾವಣೆಗಳಲ್ಲಿ ಪ್ರಬಲ ಪೈಪೋಟಿ ಒಡ್ಡಲು ಪ್ರಭಾವಿ ನಾಯಕ ಬೇಕಾಗಿತ್ತು. ಈ ಕಾರಣದಿಂದಲೇ ಸಾಕಷ್ಟು ಪ್ರಭಾವ ಇರುವ ಸಿದ್ದರಾಮಯ್ಯ ಅವರ ಪುತ್ರರನ್ನು ಆಯ್ಕೆ ಮಾಡಿದರೆ ಆ ಭಾಗದಲ್ಲಿ ಹಿಡಿತ ಸಾಧಿಸಬಹುದು ಎಂಬುದು ಹೈಕಮಾಂಡ್ ಆಲೋಚನೆ.
ಯತೀಂದ್ರ ಹಳೇ ಮೈಸೂರು ಭಾಗದ ಪ್ರತಿನಿಧಿ?
ಅಲ್ಲದೇ ಪಕ್ಷ ಸಂಘಟನೆ, ಕಾರ್ಯಕರ್ತರೊಂದಿಗಿನ ಒಡನಾಟ, ಚುನಾವಣೆ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವ ಯತಿಂದ್ರ ಅವರ ನಾಯಕತ್ವ ಗುಣವನ್ನು ಹೈಕಮಾಂಡ್ ಗಮಿಸಿತ್ತು. ಇದೆಲ್ಲ ಕಾರಣಗಳಿಂದ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ಮೈಸೂರು ಭಾಗದ ನಾಯಕರಾಗಿ ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಅವರ ನಂತರ ಯತೀಂದ್ರ ಪ್ರತಿನಿಧಿಸಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.













Click it and Unblock the Notifications