'ಎಲ್ಲಯ್ಯಾ ನಿಮ್ ಅಧ್ಯಕ್ಷ ಹಿಂಗ್ ಮಾಡ್ಬಿಟ್ಟ': ಮೇಕೆದಾಟು ಯಾತ್ರೆ ಕ್ಲೈಮ್ಯಾಕ್ಸ್ ನಲ್ಲಿ ಸಿದ್ದರಾಮಯ್ಯ ಬೇಸರ?
ಕರ್ನಾಟಕ ಕಾಂಗ್ರೆಸ್ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಭರ್ಜರಿ ಮೈಲೇಜ್ ತಂದುಕೊಟ್ಟ ಮೇಕೆದಾಟು ಪಾದಯಾತ್ರೆಯ ಸಮಾರೋಪದಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮದೇ ಮುಖಂಡರ ಮೇಲೆ ಬೇಸರ ವ್ಯಕ್ತ ಪಡಿಸಿಕೊಂಡರಾ?
ಪಾದಯಾತ್ರೆಯ ಪೋಸ್ಟ್ ಎಫೆಕ್ಟ್ ಚರ್ಚೆಗಳು ಕೆಪಿಸಿಸಿ ಪಡಶಾಲೆಯಲ್ಲಿ ಜೋರಾಗಿ ನಡೆಯುತ್ತಿರುವ ಸಂದರ್ಭದಲ್ಲಿ ಇಂತಹ ಮಾತುಗಳು ಕೇಳಿ ಬರುತ್ತಿವೆ. ಮೊದಲೇ, ರಾಜ್ಯ ಕಾಂಗ್ರೆಸ್ಸಿನಲ್ಲಿ ಎರಡು ಬಣಗಳು ಎನ್ನುವ ಸುದ್ದಿಗೆ ಈ ವಿದ್ಯಮಾನ ಇನ್ನಷ್ಟು ಪುಷ್ಠಿ ನೀಡಿದೆ.
ಫೆಬ್ರವರಿ 27ರಂದು ಆರಂಭವಾದ ಎರಡನೇ ಹಂತದ ಪಾದಯಾತ್ರೆಗೆ ಜನಸ್ಪಂದನೆ ಉತ್ತಮವಾಗಿತ್ತು. ಸಿದ್ದರಾಮಯ್ಯನವರಿಗಿಂತಲೂ ಡಿ.ಕೆ.ಶಿವಕುಮಾರ್ ಅವರಿಗೆ ಮುಖಂಡರ ಮತ್ತು ಕಾರ್ಯಕರ್ತರ ಪ್ರೀತಿ ತುಸು ಹೆಚ್ಚಾಗಿಯೇ ಕಾಣಿಸುತ್ತಿತ್ತು.
ಪಾದಯಾತ್ರೆ ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಹಾದು ಬಂದಾಗಲೂ, ಅಲ್ಲಲ್ಲಿ ಹಬ್ಬದ ವಾತಾವರಣವಿದ್ದದ್ದಂತೂ ಹೌದು. ಜನರು, ಟ್ರಾಫಿಕ್ ಜಾಂನಿಂದ ಹಿಡಿಶಾಪ ಹಾಕಿದ್ದೂ ಗೊತ್ತಿರುವ ವಿಚಾರ. ಆದರೆ, ಸಮಾರೋಪದಂದು ಡಿಕೆಶಿ ಮೇಲೆ ಸಿದ್ದರಾಮಯ್ಯ ಬೇಸರಿಸಿಕೊಂಡರು ಎನ್ನುವ ಸುದ್ದಿ ಹರಿದಾಡುತ್ತಿದೆ.

2022ರ ಸಾಲಿನ ಆಯವ್ಯಯ ಮಂಡನೆ ಇದ್ದಿದ್ದರಿಂದ ಎರಡು ದಿನ ಮುಂದೆ
ಮೇಕೆದಾಟು ಪಾದಯಾತ್ರೆ 2022ರ ಸಾಲಿನ ಆಯವ್ಯಯ ಮಂಡನೆ ಇದ್ದಿದ್ದರಿಂದ ಎರಡು ದಿನ ಮುಂದೆ ಅಂದರೆ ಮಾರ್ಚ್ ಮೂರಕ್ಕೆ ಸಮಾರೋಪಗೊಂಡಿತ್ತು. ಬೆಂಗಳೂರು ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆಯ ಮೂಲಕ ಯಾತ್ರೆ ಮುಕ್ತಾಯಗೊಂಡಿತ್ತು. ಸಮಾರೋಪ ಸಭೆಯನ್ನು ಕೆಪಿಸಿಸಿ ಆಯೋಜಿಸಿದ ರೀತಿಗೆ ಸಿದ್ದರಾಮಯ್ಯ ತಮ್ಮಾಪ್ತರು ಮತ್ತು ಡಿಕೆಶಿ ಬಣದಲ್ಲಿ ಗುರುತಿಸಿಕೊಂಡವರ ಜೊತೆ ಅಸಮಾಧಾನ ಹೊರಹಾಕಿದರು ಎನ್ನುವ ಸುದ್ದಿ ಹರಿದಾಡುತ್ತಿದೆ.

ನ್ಯಾಷನಲ್ ಕಾಲೇಜು ಮೈದಾನದ ವೇದಿಕೆಯಲ್ಲಿ ಕೆಪಿಸಿಸಿ ಪ್ರಮುಖರ ದಂಡೇ ಕೂತಿತ್ತು
ನ್ಯಾಷನಲ್ ಕಾಲೇಜು ಮೈದಾನದ ವೇದಿಕೆಯಲ್ಲಿ ಕೆಪಿಸಿಸಿ ಪ್ರಮುಖರ ದಂಡೇ ಕೂತಿತ್ತು. ಸಭೆ ಆರಂಭವಾದ ಸ್ವಲ್ಪ ಹೊತ್ತಿನಲ್ಲೇ ಡಿ.ಕೆ.ಶಿವಕುಮಾರ್ ಭಾಷಣ ಮಾಡಿದ್ದರು. ಸಭೆ ಆರಂಭವಾದ ಸಮಯವಾಗಿದ್ದರಿಂದ ಕಾರ್ಯಕರ್ತರ ಮತ್ತು ಮುಖಂಡರ ಭರ್ಜರಿ ಪ್ರತಿಕ್ರಿಯೆಯೂ ಡಿಕೆಶಿಗೆ ಸಿಕ್ಕಿತ್ತು. ಜೊತೆಗೆ, ಕನ್ನಡ ವಾಹಿನಿಗಳು ಡಿಕೆಶಿ ಭಾಷಣವನ್ನು ನೇರ ಪ್ರಸಾರವನ್ನೂ ಮಾಡಿತ್ತು. ಆದರೆ ಸಿದ್ದರಾಮಯ್ಯನವರ ವಿಚಾರದಲ್ಲಿ ಹಾಗಾಗಿರಲಿಲ್ಲ.

ಕೊನೆಯಲ್ಲಿ ಸಿದ್ದರಾಮಯ್ಯನವರಿಗೆ ಮಾತನಾಡಲು ಅವಕಾಶ ನೀಡಲಾಯಿತು
ಕೆಪಿಸಿಸಿಯ ಎಲ್ಲಾ ಪ್ರಮುಖ ನಾಯಕರು ಮಾತನಾಡಿದ ನಂತರ ಕೊನೆಯಲ್ಲಿ ಸಿದ್ದರಾಮಯ್ಯನವರಿಗೆ ಮಾತನಾಡಲು ಅವಕಾಶ ನೀಡಲಾಯಿತು. ಅಷ್ಟೊತ್ತಿಗೆ, ಕನ್ನಡ ವಾಹಿನಿಗಳು ನೇರ ಪ್ರಸಾರ ಬಿಟ್ಟು ಉಕ್ರೇನ್ ಹಿಂದೆ ಬಿದ್ದಿದ್ದವು. ಸಿದ್ದರಾಮಯ್ಯನವರು ಬಜೆಟ್ ಅಧಿವೇಶನಕ್ಕೆ ಪೂರ್ವಭಾವಿ ಎನ್ನುವಂತೆ ಸಭೆಯಲ್ಲಿ ಮಾತನಾಡಲು ತಯಾರಿ ಮಾಡಿಕೊಂಡು ಬಂದಿದ್ದರು. ಸಮಾರಂಭ ತಡವಾಗಿ ಆರಂಭವಾಗಿದ್ದರಿಂದ, ನೆರೆದಿದ್ದ ಜನರೂ ಊರು ಸೇರುವ ತರಾತುರಿಯಲ್ಲಿದ್ದರು. ಇದು ಸಿದ್ದರಾಮಯ್ಯನವರ ಕೋಪಕ್ಕೆ ಕಾರಣವಾಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ.

ಎಲ್ಲಯ್ಯಾ ನಿಮ್ ಅಧ್ಯಕ್ಷ, ಕೊನೆಗೆ ನನಗೆ ಮಾತನಾಡಲು ಬಿಟ್ಟಿದ್ದಾನಲ್ಲಾ
"ಎಲ್ಲಯ್ಯಾ ನಿಮ್ ಅಧ್ಯಕ್ಷ, ಕೊನೆಗೆ ನನಗೆ ಮಾತನಾಡಲು ಬಿಟ್ಟಿದ್ದಾನಲ್ಲಾ.. ಅವನು ಮೊದಲೇ ಮಾತನಾಡಿ, ನಮ್ಮ ಭಾಷಣಕ್ಕೆ ಕಿಮ್ಮತ್ತಿಲ್ಲದ ಹಾಗೇ ಮಾಡಿದ್ದಾನಲ್ಲಪ್ಪಾ"ಎಂದು ಸಿದ್ದರಾಮಯ್ಯನವರು ಡಿ.ಕೆ.ಶಿವಕುಮಾರ್ ಅವರ ಆಪ್ತರೊಬ್ಬರ ಬಳಿ ಹೇಳಿದ್ದಾರೆ ಎಂದು ವಿಜಯವಾಣಿ ಪತ್ರಿಕೆ ವರದಿ ಮಾಡಿದೆ. ಸಿದ್ದರಾಮಯ್ಯನವರಿಗೆ ಕೊನೆಯಲ್ಲಿ ಮಾತನಾಡಲು ಅವಕಾಶ ನೀಡಿದ್ದರ ಹಿಂದೆ ಯಾವುದೇ ರಾಜಕೀಯವಿಲ್ಲ ಎಂದು ಸ್ವಾಭಾವಿಕವಾಗಿ ಡಿಕೆಶಿ ಬಣ ಹೇಳಿಕೊಂಡಿದೆ.












Click it and Unblock the Notifications