ಚಂಪಾ ಸಂದರ್ಶನ: ಕನ್ನಡ ಸಾಹಿತ್ಯಕ್ಕಿಂತ ಬದುಕುಗಳ ಬಗ್ಗೆ ಧ್ವನಿ ಎತ್ತಬೇಕಿದೆ
"ಈ ಬಾರಿಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡದ ಜನರ ಸಮಸ್ಯೆಗಳ ಪ್ರಸ್ತಾವ ಮಾಡುತ್ತೇನೆ. ಸಾಹಿತ್ಯದ ಬಗೆಗಿನ ಚರ್ಚೆಗಿಂತ ಹೆಚ್ಚಾಗಿ ಕನ್ನಡಿಗರ ಸ್ಥಿತಿ ಗತಿ, ಸವಾಲಿನ ಬಗ್ಗೆ ನನಗೆ ಕಾಳಜಿ ಇದೆ. ಕರ್ನಾಟಕ ಪ್ರತ್ಯೇಕ ಧ್ವಜ, ಹಿಂದಿ ಹೇರಿಕೆ, ಖಾಸಗಿ ಉದ್ಯೋಗ ವಲಯದಲ್ಲಿ ಕನ್ನಡಿಗರ ಮೀಸಲಾತಿ, ನೀರಿಗಾಗಿನ ಹೋರಾಟ, ಗೋವಾದಲ್ಲಿ ಕನ್ನಡಿಗರ ಸ್ಥಿತಿ ಬಗ್ಗೆ ಮಾತನಾಡಲು ವೇದಿಕೆಯನ್ನು ಬಳಸಿಕೊಳ್ಳುತ್ತೇನೆ"
-ಹೀಗೆಂದವರು 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರಾದ ಸಾಹಿತಿ ಚಂಪಾ (ಚಂದ್ರಶೇಖರ ಪಾಟೀಲ). ಒನ್ಇಂಡಿಯಾ ಕನ್ನಡಕ್ಕೆ ಸಂದರ್ಶನ ನೀಡಿದ ಅವರು, ಸಾಹಿತ್ಯಕ್ಕಿಂತ ಹೆಚ್ಚಾಗಿ ಹೋರಾಟ, ಚಳವಳಿ, ಸಾಮಾಜಿಕ ಸ್ಥಿತಿ-ಗತಿ, ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ...ಇತ್ಯಾದಿ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ನೇರ-ನಿಷ್ಠುರ, ಚಳವಳಿಗಳಲ್ಲಿ ಸಕ್ರಿಯವಾಗಿ ಕಾಣಿಸಿಕೊಂಡಂಥ, ಯಾವ- ಯಾರ ಮುಲಾಜು ಇಲ್ಲದೆ ಮಾತನಾಡುವಂತಹ ವ್ಯಕ್ತಿತ್ವ ಚಂಪಾ ಅವರದು. ಅಂದಹಾಗೆ ಚಂಪಾ ಮೊದಲ ಕವನ ಬರೆದು 2017ಕ್ಕೆ 60 ವರ್ಷ ಸಂಪೂರ್ಣವಾಗಿದೆ. ಇನ್ನು ಚಳವಳಿ-ಹೋರಾಟದ ಐವತ್ತೆರಡು ವರ್ಷವನ್ನು ನಡೆಸಿದ್ದಾರೆ. ಅವರ ಸಂದರ್ಶನದ ಪೂರ್ಣ ಪಾಠ ಇಲ್ಲಿದೆ.

ಪ್ರಶ್ನೆ: ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರ ಭಾಷಣದ ಬಗ್ಗೆ ಬಹಳ ನಿರೀಕ್ಷೆಗಳಿರುತ್ತವೆ, ನಿಮ್ಮಿಂದ ಏನು ನಿರೀಕ್ಷೆ ಮಾಡಬಹುದು?
ಚಂಪಾ: ಸಮ್ಮೇಳನವು ಕನ್ನಡದ ವೇದಿಕೆ. ಅದು ಕನ್ನಡದ ಬದುಕುಗಳಿಗೆ ಸಂಬಂಧಿಸಿದಂತೆ ಸ್ಪಂದನೆ- ಪ್ರತಿಕ್ರಿಯೆ ನೀಡಲು ಇರುವ ವೇದಿಕೆ. ಸಾಹಿತ್ಯ ಲೋಕದಲ್ಲಿನ ಬಿಕ್ಕಟ್ಟುಗಳ ಬಗ್ಗೆ ಹೆಚ್ಚು ಚರ್ಚೆ ಮಾಡಲು ಹೋಗುವುದಿಲ್ಲ. ಆದರೆ ಕನ್ನಡಿಗರ- ಕನ್ನಡದ ಬದುಕುಗಳು ಸಂಕಷ್ಟದಲ್ಲಿವೆ.
ಶಿಕ್ಷಣ ಮಾಧ್ಯಮ ಸವಾಲು, ಕನ್ನಡ ಶಾಲೆಗಳನ್ನು ಮುಚ್ಚುತ್ತಿರೋದು, ಹಿಂದಿ ಹೇರಿಕೆ, ನಾಡಧ್ವಜದ ಪ್ರಸ್ತಾವ, ನೀರಿನ ಜಗಳ, ಗೋವಾದಲ್ಲಿ ಕನ್ನಡಿಗರಿಗೆ ಕಿರುಕುಳ...ಹೀಗೆ ನಾನಾ ಸವಾಲು- ಸಮಸ್ಯೆಗಳಿವೆ. ಸಂಬಂಧಪಟ್ಟ ಸರಕಾರಗಳ ಮೇಲೆ ಒತ್ತಡ ಹೇರುವಂತಾಗಬೇಕು. ಆ ಕೆಲಸವನ್ನು ಸಾಹಿತಿಗಳು-ಪತ್ರಕರ್ತರು ಎಲ್ಲರೂ ಮಾಡಬೇಕು. ಈ ಬಾರಿ ಸಮ್ಮೇಳನದಲ್ಲಿ ಇವುಗಳ ಬಗ್ಗೆ ಕ್ರಿಯೆಯ ಹಂತದಲ್ಲಿ ಏನು ಮಾಡಬಹುದು ಎಂಬ ಚಿಂತನೆ ನಡೆಸಬೇಕಿದೆ.

ಪ್ರಶ್ನೆ: ಕರ್ನಾಟಕದಲ್ಲಿನ ಇಂದಿನ ಸನ್ನಿವೇಶವನ್ನು ನಾವು ಹೇಗೆ ಅರ್ಥ ಮಾಡಿಕೊಳ್ಳಬೇಕು?
ಚಂಪಾ: ಕಲಬುರ್ಗಿ, ಗೌರಿ ಲಂಕೇಶ್ ಅವರಿಗೆ ಬಂದಂಥ ಸ್ಥಿತಿ ಯಾರಿಗೂ ಬರಬಾರದು. ಈಗ ನಾವು ಬರೀ ಚಿಂತನೆ ಮಾಡುತ್ತಾ ಕುಂತರೆ ಪ್ರಯೋಜನವಿಲ್ಲ. ಅದು ಕ್ರಿಯೆಯಾಗಿ ಬದಲಾಗಬೇಕು. ನಾನು ಸಾಹಿತ್ಯದ ವಿದ್ಯಾರ್ಥಿ. ನಾನು ಬೇಂದ್ರೆ ಕೂಡ ಜಗಳ ಆಡಿದ್ದೀನಿ. ಎಸ್.ಎಲ್.ಭೈರಪ್ಪ ಅವರ ಜತೆಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯವಿದೆ. ಅನಂತಮೂರ್ತಿ, ಲಂಕೇಶ್ ಸೇರಿದಂತೆ ಹಲವರ ಜತೆಗೆ ಜಗಳ ಮಾಡಿದ್ದೀನಿ.
ಅವೆಲ್ಲ ಸೈದ್ಧಾಂತಿಕ ಮಟ್ಟದ ಜಗಳ. ನಾನು ಪ್ರೀತಿ ಇಲ್ಲದೆ ದ್ವೇಷ ಕೂಡ ಮಾಡುವುದಿಲ್ಲ. ನಾನು ಬದುಕುತ್ತಿದ್ದೀನಿ ಅಂದರೆ ಪ್ರೀತಿ ಇರುವುದಕ್ಕೆ ಅಷ್ಟೇ. ಬೇಂದ್ರೆ, ಭೈರಪ್ಪ, ಲಂಕೇಶ್ ಇವೆರಲ್ಲರೂ ನನ್ನ ಮಿದುಳಿನಲ್ಲಿ ಕೂತಿದ್ದಾರೆ. ಆದರೆ ಇಂದಿನ ಸ್ಥಿತಿ ಭಿನ್ನವಾಗಿದೆ, ಕಳವಳಕಾರಿಯಾಗಿದೆ.

ಪ್ರಶ್ನೆ: ನಮಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅನ್ನೋದು ಬೇಕೆ?
ಚಂಪಾ: ಮರಾಠಿ, ತಮಿಳು, ತೆಲುಗು ಈ ಯಾವ ಭಾಷೆಗೂ ಅಭಿವೃದ್ಧಿ ಪ್ರಾಧಿಕಾರ ಅನ್ನೋದು ಇಲ್ಲ. ಮಹಾರಾಷ್ಟ್ರ, ತಮಿಳುನಾಡು, ಆಂಧ್ರ ಅಲ್ಲೆಲ್ಲ ಆಯಾ ಭಾಷೆಗೆ ಕನ್ನಡಕ್ಕೆ ಇರುವಂಥ ಆತಂಕಗಳಿಲ್ಲ. ಏಕೀಕರಣದ ನಂತರ ಕನ್ನಡಕ್ಕೆ ಬಹಳ ಪೆಟ್ಟುಗಳು ಬಿದ್ದಿವೆ. ಅದನ್ನು ರಿಪೇರಿ ಮಾಡಲಿಕ್ಕೆ ಅಂತಲೇ ಅಕಾಡೆಮಿ, ಪ್ರಾಧಿಕಾರಗಳು ಆರಂಭವಾದವು.
ಜನ-ಸರಕಾರ ಕೂಡಿಯೇ ಕನ್ನಡದ ವಾತಾವರಣ ನಿರ್ಮಿಸಬೇಕು. ಅದಕ್ಕೆ ಮನಸ್ಸಿನಲ್ಲಿ ಬಯಕೆ ಮೂಡಬೇಕು. ನಿಧಾನವಾಗಿ ಅದು ಕ್ರಿಯೆಯೆ ಮಟ್ಟದಲ್ಲಿ ಇಳಿಯಬೇಕು. ಅಭಿವೃದ್ಧಿ ಪ್ರಾಧಿಕಾರವೂ ಸೇರಿದ ಹಾಗೆ ಎಲ್ಲ ಅಕಾಡೆಮಿಗಳು ಒಳ್ಳೆ ಕೆಲಸಗಳನ್ನು ಮಾಡುತ್ತಿವೆ ಎಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ.

ಪ್ರಶ್ನೆ: ನವೆಂಬರ್ ನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ, ಅದರ ಒಂದು ತಿಂಗಳ ಅಂತರದಲ್ಲಿ ವಿಶ್ವ ಕನ್ನಡ ಸಮ್ಮೇಳನ ಇದೆಯಲ್ಲಾ?
ಚಂಪಾ: ವಿಶ್ವ ಕನ್ನಡ ಸಮ್ಮೇಳನಕ್ಕೆ ಸರಕಾರ ಇನ್ನೂ ದಿನ ನಿಗದಿ ಮಾಡಿಲ್ಲ. ಅದರ ದಿನಾಂಕ ಇನ್ನೂ ಮುಂದೆ ಹೋಗಬಹುದು.

ಪ್ರಶ್ನೆ: ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದ ಬಗ್ಗೆ ಏನಂತೀರಿ?
ಚಂಪಾ: ಇದು ತುಂಬ ಹಳೆಯ ವಿಚಾರ. ವೀರಶೈವ ಅನ್ನೋದು ಹಿಂದೂ ಧರ್ಮದ ಅಂಗ ಅಂತ ಒಪ್ಪಿಯಾಗಿದೆ. ಈಗಾಗಲೇ ಹಿಂದೂ ಧರ್ಮದ ಭಾಗ ವೀರಶೈವ ಅಂತ ಒಪ್ಪಿಕೊಂಡಿರುವುದರಿಂದ ಅದರ ಅರ್ಜಿಯನ್ನು ಮೂರು ಸಲ ಕೋರ್ಟ್ ತಿರಸ್ಕೃತ ಮಾಡಿದೆ.
ಆದರೆ, ಲಿಂಗಾಯತ ಅನ್ನೋದು ಜಾತಿ ವ್ಯವಸ್ಥೆ ವಿರುದ್ಧ ತೊಡೆ ತಟ್ಟಿ ಹೊರಗೆ ಬಂದಂಥ ಧರ್ಮ. ಈಗ ರಾಜಕಾರಣಿಗಳು, ನನ್ನಂಥ ಸಾಹಿತಿಗಳು, ಜನ ಸಾಮಾನ್ಯರು ಎಲ್ಲ ಸೇರಿ ಲಿಂಗಾಯತ ಸ್ವತಂತ್ರ ಧರ್ಮ ಎಂಬುದು ಜನಾಂದೋಲನದ ಸ್ವರೂಪ ಪಡೆದುಕೊಳ್ಳುತ್ತಿದೆ.
ಈ ವೀರಶೈವರು ಕೂಡ ಪುರೋಹಿತಶಾಹಿಗಳು, ಬ್ರಾಹ್ಮಣರಂತೆ ಲಿಂಗಾಯತರನ್ನು ಶೋಷಣೆ ಮಾಡಿಕೊಂಡು ಬಂದಿದ್ದಾರೆ. ಲಿಂಗಾಯತ ಸ್ವತಂತ್ರ ಧರ್ಮ ಆಗಬೇಕು ಎಂಬುದನ್ನು ನಾನು ಸ್ವಾಗತಿಸುತ್ತೇನೆ. ಲಿಂಗಾಯತರಲ್ಲಿ ಎಪ್ಪತ್ತೇಳು ಜಾತಿಗಳಿವೆ. ಅವೆಲ್ಲ ಕಾಯಕ ಆಧಾರದಲ್ಲಿ ವಿಂಗಡನೆಯಾದವು. ಇವುಗಳೆಲ್ಲ ಸೇರಿ ಲಿಂಗಾಯತ ಧರ್ಮ ಅಂತ ಆಗಲೇಬೇಕು.

ಪ್ರಶ್ನೆ: ಎಷ್ಟೋ ಹೋರಾಟದ ಸಂದರ್ಭಗಳಲ್ಲಿ ನೀವು ಏಕಾಂಗಿ ಆಗಿದ್ದಿದೆ, ಆಗೆಲ್ಲ ಇದೆಲ್ಲ ಯಾಕೆ ಬೇಕಿತ್ತು ಅಂತನ್ನಿಸಿದೆಯಾ?
ಚಂಪಾ: ನಾನು ಎಂದೂ ಏಕಾಂಗಿಯಾಗಿಲ್ಲ. ಕೆಲವರು ಹೋರಾಟದ ಮಧ್ಯ್ ಡ್ರಾಪ್ ಔಟ್ ಆಗ್ತಾರೆ. ಕನ್ನಡ ಕನ್ನಡ ಬನ್ನಿ ನಮ್ಮ ಸಂಗಡ ಅಂತ ಕರೆಯುವುದು ನಮ್ಮ ಜವಾಬ್ದಾರಿ. ಆದರೆ ಮಧ್ಯ ಬಿಟ್ಟು ಹೋದರೂ ಅಂತ ಎಂದೂ ವಿಚಲಿತನಾಗಿಲ್ಲ.

ಪ್ರಶ್ನೆ: ನಿಮ್ಮ ಬದುಕಿನುದ್ದಕ್ಕೂ ಹೋರಾಟ ಮಾಡಿಕೊಂಡು ಬಂದಿದ್ದೀರಿ. ನಿಮ್ಮ ಬಂಡಾಯ, ಹೋರಾಟ- ಚಳವಳಿಗಳ ಮೌಲ್ಯ ಮಾಪನ ಮಾಡಿದರೆ ಈಗ ಹೇಗೆ ಅನ್ನಿಸುತ್ತದೆ?
ಚಂಪಾ: ಹೋರಾಟ ಅನ್ನೋದು ನಿರಂತರ. ತುರ್ತು ಪರಿಸ್ಥಿತಿ ವೇಳೆ ಜೈಲಿಗೆ ಹೋಗಿದ್ದೆ. ಗೋಕಾಕ್ ಚಳವಳಿ, ದಲಿತ ಸಾಹಿತ್ಯ ಚಳವಳಿ ಹೀಗೆ ನಾನಾ ಹೋರಾಟದಲ್ಲಿ ಪಾಲ್ಗೊಂಡಿದ್ದೀನಿ. ಈಗ ಕೋಮುವಾದದ ವಿರುದ್ಧ ಹೋರಾಟ ಮಾಡಬೇಕಿದೆ. ಹಾಗಂತ ಎಲ್ಲ ಸಮಸ್ಯೆಗೂ ನಾಳೆಯೇ ಪರಿಹಾರ ಸಿಗಬೇಕು ಎಂಬ ಹಠ ನನಗಿಲ್ಲ. ಅದು ಸಾಧ್ಯವೂ ಇಲ್ಲ ಅಂತ ನನಗೆ ಗೊತ್ತಿದೆ. ಆದರೆ ಇದು ನಿರಂತರವಾದ ಪ್ರಕ್ರಿಯೆ. ನನ್ನ ಒಂದು ಕಣ್ಣು ಭೂತ ಕಾಲದ ಕಡೆ ನೆಟ್ಟಿದ್ದರೆ, ಸಾವಿರ ಕಣ್ಣು ಭವಿಷ್ಯತ್ತಿನ ಕಡೆಗೆ ಇರುತ್ತದೆ.
ಹೋಗಿ ಬರ್ತೀನಿ ಅಜ್ಜ ಹೋಗಿ ಬರ್ತೀನಿ, ನಿನ್ನ ಪಾದದ ಧೂಳಿ ನನ್ನ ಹಣೆ ಮೇಲಿರಲಿ, ಆದರೆ ಅದು ಕಣ್ಣಿಗೆ ಬೀಳದಿರಲಿ ಎಂದು ಬರೆದ ಸಾಲು ನನಗೆ ನೆನಪಾಗುತ್ತವೆ.

ಪ್ರಶ್ನೆ: ಸಾಹಿತಿಗಳಲ್ಲಿ ಹೋರಾಟ, ಚಳವಳಿಗೆ ಅಂತ ಧುಮಿಕಿದವರು ಅದನ್ನು ತಾರ್ಕಿಕ ಅಂತ್ಯದವರೆಗೆ ತೆಗೆದುಕೊಂಡು ಹೋದ ಉದಾಹರಣೆ ಕಡಿಮೆ. ಆಗೆಲ್ಲ ನಿಮಗೆ ಏನನ್ನಿಸುತ್ತದೆ?
ಚಂಪಾ: ಬೇಂದ್ರೆ ಬೇರೆ, ಕುವೆಂಪು ಬೇರೆ, ಚಂಪಾ ಬೇರೆ. ಅದು ಅವರವರ ವ್ಯಕ್ತಿತ್ವ. ಎಲ್ಲರೂ ಒಂದೇ ಥರ ಇರೋದು ಸಾಧ್ಯವಿಲ್ಲ.

ಪ್ರಶ್ನೆ: ಈ ಹಿಂದೆ ಸಮ್ಮೇಳನಾಧ್ಯಕ್ಷರಿಗೆ ನೀಡುವ ಹಮ್ಮಿಣಿ ಬಗ್ಗೆ ವಿವಾದವಾಗಿತ್ತು. ಈ ಬಾರಿ ನಿಮಗೆ ನೀಡುವ ಹಮ್ಮಿಣಿ ಏನು ಮಾಡ್ತೀರಿ?
ಚಂಪಾ: ಕನ್ನಡ ಸಾಹಿತ್ಯ ಸಮೇಳನಕ್ಕೆ ಅಧ್ಯಕ್ಷರಾದವರಿಗೆ ಆರ್ಥಿಕವಾಗಿ ಅನುಕೂಲವಾಗಲಿ ಅನ್ನೋ ಕಾರಣಕ್ಕೆ ಹಮ್ಮಿಣಿ ಕೊಡುವ ಪರಿಪಾಠ ಇದೆ. ಈ ಹಿಂದೆ ಇದೇ ವಿಚಾರ ದೊಡ್ಡ ಗದ್ದಲ ಆಗಿತ್ತು. ಆದರೆ ಹಾಗೆ ಕೊಡುವುದು ಕಡ್ಡಾಯ ಏನಲ್ಲ. ಒಂದು ವೇಳೆ ನನಗೆ ಕೊಟ್ಟರೆ ಅದಕ್ಕೆ ಸ್ವಲ್ಪ ಹಣ ಸೇರಿಸಿ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ದತ್ತಿ ಇಡಬೇಕು ಅಂದುಕೊಂಡಿದ್ದೀನಿ.

ಪ್ರಶ್ನೆ: ಇತ್ತೀಚೆಗೆ ಸಾಹಿತಿಗಳು ತಮ್ಮ ಅಭಿಪ್ರಾಯ ಹೇಳುವುದರಲ್ಲೂ ಬಹಳ ಚೂಸಿ ಆಗಿಬಿಟ್ಟಿದ್ದಾರಲ್ಲ?
ಚಂಪಾ: ಬುದ್ಧಿಜೀವಿಗಳು ಏನು ಬರೆಯುತ್ತಾರೆ ಹಾಗೂ ಹೇಗೆ ಬದುಕುತ್ತಾರೆ ಅನ್ನೋದನ್ನು ಜನ ಸಾಮಾನ್ಯರು ಗಮನಿಸುತ್ತಾರೆ. ಮಾತು- ಕೃತಿ ಒಂದೇ ಆಗಿರಬೇಕು ಎಂಬುದು ಜನರ ನಿರೀಕ್ಷೆ ಆಗಿರುತ್ತದೆ. ಬಹಳ ಸಾಹಿತಿಗಳು ಕಡಿಮೆ ರಿಸ್ಕ್ ತಗೋತಾರೆ. ಕೆಲವರು ಲೆಕ್ಕಾಚಾರ ಹಾಕುತ್ತಾರೆ. ಕೆಲವರು ಸುಮ್ಮನಿದ್ದರೆ ಏನು ಲಾಭ, ಮಾತನಾಡಿದರೆ ಹೇಗೆ ಅಂತ ಒಂದು ಲೆಕ್ಕಾಚಾರದಲ್ಲಿರುತ್ತಾರೆ. ಬಹಳ ಸಾಹಿತಿಗಳು ಸೇಫ್ ಜೋನ್ ನಲ್ಲಿ ಇರುತ್ತಾರೆ.
-
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್












Click it and Unblock the Notifications