Get Updates
Get notified of breaking news, exclusive insights, and must-see stories!

ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ: ಕಾಡುವ ಆ ಎರಡು ಘಟನೆಗಳು

ಬೆಂಗಳೂರು, ಸೆಪ್ಟೆಂಬರ್ 11: ಕರ್ತವ್ಯದಲ್ಲಿದ್ದಾಗ ದುಷ್ಕರ್ಮಿಗಳ ಕೃತ್ಯಕ್ಕೆ ಜೀವ ಕಳೆದುಕೊಂಡ ಸೈನಿಕರು ಮತ್ತು ಪೊಲೀಸರನ್ನು ನೆನಪಿಸಿಕೊಳ್ಳುವಂತೆಯೇ, ಅಮೂಲ್ಯ ಅರಣ್ಯ ಸಂಪತ್ತನ್ನು ರಕ್ಷಿಸುವ ಕಾಯಕದಲ್ಲಿ ನಿರತರಾಗಿದ್ದಾಗ ಹುತಾತ್ಮರಾದ ಅರಣ್ಯ ಇಲಾಖೆ ಸಿಬ್ಬಂದಿಯ ಬಲಿದಾನವನ್ನು ದೇಶ ಇಂದು (ಸೆ.11) ಸ್ಮರಿಸಿಕೊಳ್ಳುತ್ತಿದೆ.

ಮನುಕುಲದ ಅಭಿವೃದ್ಧಿಗೆ ಅರಣ್ಯ ಮತ್ತು ವನ್ಯಜೀವಿಗಳ ರಕ್ಷಣೆಯೂ ಅತಿಮುಖ್ಯ. ಅಮೂಲ್ಯ ವೃಕ್ಷ ಸಂಪತ್ತಿಗೆ ಕೊಡಲಿ ಇಡುವ, ಕಾಡುಪ್ರಾಣಿಗಳಿಗೆ ಗುಂಡಿಕ್ಕುವ ದುಷ್ಕರ್ಮಿಗಳನ್ನು ತಡೆಯಲು ಅರಣ್ಯ ಇಲಾಖೆ ಸಿಬ್ಬಂದಿ ಪಡುವ ಕಷ್ಟ ಸಾಮಾನ್ಯವಾದುದ್ದಲ್ಲ.

ದುರ್ಗಮ ಅರಣ್ಯದಲ್ಲಿ ಕಾಡು ಪ್ರಾಣಿಗಳು ಮತ್ತು ಬೇಟೆಗಾರರ ದಾಳಿಯ ಭಯದ ನಡುವೆ ಪರಿಶೀಲನೆ ನಡೆಸುತ್ತ, ಕೆಲಸ ಮಾಡುವುದು ಬಲು ಅಪಾಯಕಾರಿ. ಎಷ್ಟೋ ಸಂದರ್ಭಗಳಲ್ಲಿ ಕಾಡುಗಳ್ಳರ ದಾಳಿಗೆ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅದೆಷ್ಟೋ ಅರಣ್ಯ ರಕ್ಷಕರ ಕುಟುಂಬಗಳ ಕಣ್ಣೀರು ಈ ಮಣ್ಣಿನಲ್ಲಿ ಇಂಗಿ ಹೋಗಿವೆ.

ಅರಣ್ಯ ಹುತಾತ್ಮರ ದಿನಾಚರಣೆಯ ಹಿಂದೆ ಇರುವ ಎರಡು ಘಟನೆಗಳು ಇಂದಿಗೂ ಎಲ್ಲರ ಮನಕಲಕುತ್ತವೆ. ಈ ಎರಡು ಘಟನೆಗಳು ಇಡೀ ದೇಶವನ್ನು ಬೆಚ್ಚಿ ಬೀಳಿಸಿದ್ದವು.

ವೀರಪ್ಪನ್ ಅಟ್ಟಹಾಸಕ್ಕೆ ಬಲಿಯಾದ ಶ್ರೀನಿವಾಸ್

ವೀರಪ್ಪನ್ ಅಟ್ಟಹಾಸಕ್ಕೆ ಬಲಿಯಾದ ಶ್ರೀನಿವಾಸ್

ಕಾಡುಗಳ್ಳ ವೀರಪ್ಪನ್ ಅಟ್ಟಹಾಸ ತೀವ್ರವಾಗಿದ್ದ ಕಾಲವದು. ಆತನನ್ನು ಹಿಡಿಯಲು ಕರ್ನಾಟಕ ಮತ್ತು ತಮಿಳುನಾಡು ಪೊಲೀಸರು ಹರಸಾಹಸಪಟ್ಟರೂ ಸಾಧ್ಯವಾಗಿರಲಿಲ್ಲ. ಈಗಿನ ಕಾವೇರಿ ವನ್ಯಧಾಮದಲ್ಲಿ ಆಗಿದ್ದ ಪಿ. ಶ್ರೀನಿವಾಸ್, ವೀರಪ್ಪನ್‌ನನ್ನು ಹಿಡಿದೇ ಹಿಡಿಯುತ್ತೇನೆ ಎಂಬ ವಿಶ್ವಾಸದಲ್ಲಿದ್ದರು.

ಚಿಕ್ಕಮಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಶ್ರೀನಿವಾಸ್, ವೀರಪ್ಪನ್ ಕಾರ್ಯಾಚರಣೆಯಲ್ಲಿ ಭಾಗವಹಿಸಲೆಂದೇ ಮಲೆಮಹದೇಶ್ವರ ಬೆಟ್ಟಕ್ಕೆ ವರ್ಗಾವಣೆ ಮಾಡಿಸಿಕೊಂಡಿದ್ದರು. ಅಲ್ಲಿ ಜನರೊಂದಿಗೆ ಬೆರೆಯುತ್ತಿದ್ದ ಅವರು ಎಲ್ಲರ ಸ್ನೇಹ, ಗೌರವ ಸಂಪಾದಿಸಿದ್ದರು.

ತಾನು ಶರಣಾಗುವುದಾಗಿ ಎಂದು ಶ್ರೀನಿವಾಸ್ ಅವರನ್ನು ನಂಬಿಸಿದ್ದ ವೀರಪ್ಪನ್ ಅವರನ್ನು ತನ್ನ ಬಳಿಗೆ ಕರೆಸಿಕೊಂಡಿದ್ದ. ಅಂದು 1991ರ ನವೆಂಬರ್ 10. ವೀರಪ್ಪನ್ ಮಾತನ್ನು ನಂಬಬೇಡಿ ಎಂಬ ಹಿತೈಷಿಗಳ ಮಾತಿಗೆ ಕಿವಿಗೊಡದೆ ಆತನ ಮನವೊಲಿಸಲು ಹೋಗಿದ್ದ ಶ್ರೀನಿವಾಸ್‌ ತಲೆಯನ್ನೇ ಆತ ಕತ್ತರಿಸಿದ್ದ. ಅವರ ರುಂಡ ಸಿಕ್ಕಿದ್ದು ಮೂರು ವರ್ಷಗಳ ಬಳಿಕ. ಈ ಭೀಕರ ಘಟನೆ ಇಂದಿಗೂ ಹಸಿಯಾಗಿದೆ.

ಅರಣ್ಯ ಹುತಾತ್ಮರ ದಿನಾಚರಣೆ

ಅರಣ್ಯ ಹುತಾತ್ಮರ ದಿನಾಚರಣೆ

ವೀರಪ್ಪನ್ ಕೃತ್ಯಕ್ಕೆ ನೂರಾರು ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅರಣ್ಯ ರಕ್ಷಕ ಬಿ.ಸಿ. ಮೋಹನಯ್ಯ ಅವರು ವೀರಪ್ಪನ್ ಗುಂಡಿಗೆ ಬಲಿಯಾದ ಮೊದಲ ಸಿಬ್ಬಂದಿ ಎನ್ನಲಾಗಿದೆ. 1989ರ ಆಗಸ್ಟ್ 4ರಂದು ಪಾಲಾರ್‌ನಲ್ಲಿ ವೀರಪ್ಪನ್ ಹತ್ಯೆ ನಡೆಸಿದ್ದ. ಶ್ರೀನಿವಾಸ್ ಅವರ ಹತ್ಯೆಯ ದಿನವಾದ ನವೆಂಬರ್ 10ರಂದು ಪ್ರತಿ ವರ್ಷ ಅರಣ್ಯ ಹುತಾತ್ಮರ ದಿನ ಎಂದು ಆಚರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿತು.

ಈಗ ರಾಷ್ಟ್ರೀಯ ಹುತಾತ್ಮರ ದಿನವನ್ನು ಸೆ. 11ರಂದು ರಾಷ್ಟ್ರಮಟ್ಟದಲ್ಲಿ ಆಚರಿಸಲಾಗುತ್ತಿದ್ದರೂ ನವೆಂಬರ್ 10ರಂದು ರಾಜ್ಯದಾದ್ಯಂತ ಶ್ರೀನಿವಾಸ್ ಅವರ ಸ್ಮರಣಾರ್ಥ ಹುತಾತ್ಮರ ದಿನಾಚರಣೆ ಆಚರಿಸಲಾಗುತ್ತದೆ. ಶ್ರೀನಿವಾಸ್ ಅವರನ್ನು ಹತ್ಯೆ ಮಾಡಲಾದ ಎರಕೆಯಂ ಪ್ರದೇಶದಲ್ಲಿ ಅವರ ಸ್ಮಾರಕ ನಿರ್ಮಿಸಲಾಗಿದೆ. ಪ್ರತಿ ವರ್ಷ ಅವರ ಸ್ಮಾರಕಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ, ಶ್ರೀನಿವಾಸ್ ಅವರ ಕುಟುಂಬದವರು ಮತ್ತು ಗ್ರಾಮಸ್ಥರು ಪುಷ್ಪ ನಮನ ಸಲ್ಲಿಸುತ್ತಾರೆ.

ಬಿಷ್ಣೋಯಿಗಳ ಹತ್ಯಾಕಾಂಡ

ಬಿಷ್ಣೋಯಿಗಳ ಹತ್ಯಾಕಾಂಡ

ದೇಶವನ್ನು ನಲುಗಿಸಿದ್ದ ಮತ್ತೊಂದು ಘಟನೆ ಸುಮಾರು 280 ವರ್ಷ ಹಿಂದೆ ನಡೆದದ್ದು. ರಾಜಸ್ಥಾನದ ಜೋಧಪುರದ ಮಹಾರಾಜ ಗುರು ಜಂಬಾಜಿ ಹೊಸ ಅರಮನೆ ಕಟ್ಟಲು ಬಯಸಿದ್ದ. ಅದಕ್ಕಾಗಿ ಅರಣ್ಯದಿಂದ ಮರಗಳನ್ನು ಕಡಿದು ತರುವಂತೆ ಸೈನಿಕರಿಗೆ ಸೂಚಿಸಿದ್ದ. ಈ ಸೈನಿಕರು ಕಾಲಿಟ್ಟಿದ್ದು, ಕೇಜರ್ಲಿ ಮರಗಳನ್ನು ಜತನದಿಂದ ಕಾಪಾಡಿಕೊಂಡಿದ್ದ ಬಿಷ್ಣೋಯಿ ಎಂಬ ಗ್ರಾಮಕ್ಕೆ.

ಸೈನಿಕರಿಗೆ ಅಡ್ಡಲಾಗಿ ನಿಂತು ಮರಗಳನ್ನು ಅಪ್ಪಿಕೊಂಡ ಬಿಷ್ಣೋಯಿಗಳು ಮರ ಕಡಿಯಲು ಬಿಡುವುದಿಲ್ಲ ಎಂದು ಪ್ರತಿಭಟನೆ ನಡೆಸಿದರು. ಆದರೆ, ಮಜಾರಾಜನ ಆದೇಶಕ್ಕೆ ಬದ್ಧರಾಗಿದ್ದ ಸೈನಿಕರು, ಗ್ರಾಮಸ್ಥರ ಮೇಲೆ ಕರುಣೆ ತೋರಿಸದೆ ಮಹಿಳೆಯರು, ಮಕ್ಕಳೆನ್ನದೆ ಅಡ್ಡ ಬಂದವರನ್ನು ಕೊಂದು ಹಾಕಿದರು. ಆ ಹತ್ಯಾಕಾಂಡಕ್ಕೆ ಬಲಿಯಾಗಿದ್ದು, 363 ಮುಗ್ಧ ಪರಿಸರ ಪ್ರೇಮಿಗಳು. ಘಟನೆ ನಡೆದಿದ್ದು 1730ರ ಸೆಪ್ಟೆಂಬರ್ 11ರಂದು.

ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ

ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ

ಬಿಷ್ಣೋಯಿಗಳನ್ನು ಅಮಾನುಷವಾಗಿ ಕೊಂದು ಹಾಕಿದ ಸೆಪ್ಟೆಂಬರ್ 11ರ ದಿನವನ್ನು ಅವರ ತ್ಯಾಗ ಬಲಿದಾನದ ಸ್ಮರಣಾರ್ಥ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವನ್ನಾಗಿ ದೇಶದಾದ್ಯಂತ ಆಚರಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿತು. 2012ರಿಂದ ರಾಷ್ಟ್ರಮಟ್ಟದಲ್ಲಿ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಪ್ರತಿ ರಾಜ್ಯದ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿಯೂ ಈ ದಿನದಂದು ಅರಣ್ಯ ರಕ್ಷಣೆಯ ಕಾರ್ಯದ ವೇಳೆ ಬಲಿಯಾದ ಸಿಬ್ಬಂದಿಯ ಹೆಸರನ್ನು ಹೇಳುವ ಮೂಲಕ ಅವರನ್ನು ಸ್ಮರಿಸಿಕೊಳ್ಳಲಾಗುತ್ತಿದೆ.

ಬಲಿಯಾಗುತ್ತಲೇ ಇದ್ದಾರೆ ಸಿಬ್ಬಂದಿ

ಬಲಿಯಾಗುತ್ತಲೇ ಇದ್ದಾರೆ ಸಿಬ್ಬಂದಿ

ಕಠಿಣ ಕಾನೂನುಗಳನ್ನು ಜಾರಿಗೆ ತಂದ ಬಳಿಕ ಮತ್ತು ಅರಣ್ಯ ಇಲಾಖೆ ಸಿಬ್ಬಂದಿಯ ಸತತ ಪ್ರಯತ್ನದಿಂದ ಎಗ್ಗಿಲ್ಲದೆ ನಡೆಯುತ್ತಿದ್ದ ಅರಣ್ಯ ನಾಶ ಮತ್ತು ಕಾಡುಪ್ರಾಣಿಗಳ ಬೇಟೆ ಚಟುವಟಿಕೆಗಳು ನಿಯಂತ್ರಣಕ್ಕೆ ಬಂದಿವೆ. ಆದರೂ ಅವುಗಳನ್ನು ಸಂಪೂರ್ಣವಾಗಿ ತಡೆಯುವುದು ಸಾಧ್ಯವಾಗಿಲ್ಲ. ವೀರಪ್ಪನ್ ಹತ್ಯೆಯ ನಂತರ ಕರ್ನಾಟಕದಲ್ಲಿ ಆನೆಗಳ ಹತ್ಯೆಯಂತಹ ಕೃತ್ಯಗಳು ಕಡಿಮೆಯಾದರೂ, ಚರ್ಮ, ಹಲ್ಲು ಮತ್ತು ಉಗುರು ಹಾಗೂ ಮಾಂಸಕ್ಕಾಗಿ ಪ್ರಾಣಿಗಳನ್ನು ಕೊಲ್ಲುವುದು ಮುಂದುವರಿದಿದೆ.

ಹಾಗೆಯೇ, ಅರಣ್ಯ ರಕ್ಷಕರು ಜೀವಕಳೆದುಕೊಳ್ಳುವುದು ಕೂಡ ನಿಂತಿಲ್ಲ. ಈ ವರ್ಷದ ಮಾರ್ಚ್‌ ತಿಂಗಳಿನಲ್ಲಿ ಅರಣ್ಯದೊಳಗೆ ಜೀಪಿನಲ್ಲಿ ತೆರಳುತ್ತಿದ್ದ ನಾಗರಹೊಳೆ ಹುಲಿಯೋಜನೆ ನಿರ್ದೇಶಕ ಮಣಿಕಂಠನ್ ಅವರು ಒಂಟಿ ಸಲಗದ ದಾಳಿಗೆ ತುತ್ತಾಗಿ ಜೀವ ಕಳೆದುಕೊಂಡಿದ್ದರು.

ಕಳೆದ ವರ್ಷ ಬಂಡೀಪುರ ಅರಣ್ಯದಲ್ಲಿ ಕಾಳ್ಗಿಚ್ಚನ್ನು ನಂದಿಸುವ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಮುರುಗಪ್ಪ ಎಂಬುವವರು ಬೆಂಕಿ ತಗುಲಿ ಮೃತಪಟ್ಟಿದ್ದರು. ಇಂತಹ ಘಟನೆಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಕಾಡಿನ ತೀವ್ರ ನಾಶದ ನಡುವೆಯೂ ಇಷ್ಟು ಪ್ರಮಾಣದ ಅರಣ್ಯ ಮತ್ತು ವನ್ಯಮೃಗಗಳು ಉಳಿದುಕೊಳ್ಳಲು ಇಂತಹ ಸಾವಿರಾರು ಮಂದಿಯ ಬಲಿದಾನ ಕಾರಣ ಎನ್ನುವುದನ್ನು ಮರೆಯುವಂತಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+