ಮಧ್ಯಂತರ ಚುನಾವಣೆಯ ಬಗ್ಗೆ ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಗಂಭೀರ ಹೇಳಿಕೆ
Recommended Video
ರಾಮನಗರ, ಸೆ 11: ಚನ್ನಪಟ್ಟಣದ ನಂತರ ರಾಮನಗರದಲ್ಲೂ ಇನ್ನೊಂದು ಸುತ್ತು, ಬಿಜೆಪಿ ವಿರುದ್ದ ಹರಿಹಾಯ್ದಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಧ್ಯಂತರ ಚುನಾವಣೆಯ ಬಗ್ಗೆ ಗಂಭೀರ ಹೇಳಿಕೆಯನ್ನು ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಎಚ್ಡಿಕೆ, "ಮುಂದೆ ಕುಮಾರಸ್ವಾಮಿಯನ್ನು ಬಂಧಿಸುತ್ತಾರೆಂದು ಹೇಳುತ್ತಿದ್ದಾರೆ. ಆದರೆ ಈ ಕುಮಾರಸ್ವಾಮಿಯನ್ನ ಯಾರು ಏನು ಮಾಡೋಕಾಗಲ್ಲ" ಎಂದು ಬಿಜೆಪಿ ನಾಯಕರಿಗೆ ಪರೋಕ್ಷ ಎಚ್ಚರಿಕೆಯನ್ನು ನೀಡಿದ್ದಾರೆ.
" ಬಿಜೆಪಿಯವರಿಗೆ ಗೊತ್ತುಗುರಿಯಿಲ್ಲ. ಅದ್ಯಾವುದೋ ಕೇಸ್ ಇಟ್ಕೊಂಡು ಅದರ ಹಿಂದೆ ಹೋಗುತ್ತಾರೆ" ಎಂದು ಲೇವಡಿ ಮಾಡಿರುವ ಕುಮಾರಸ್ವಾಮಿ, " ಚನ್ನಪಟ್ಟಣದಲ್ಲಿನ ಕಾರ್ಯಕ್ರಮ ಈ ಮೊದಲೇ ನಿಗದಿಯಾಗಿದ್ದರಿಂದ, ಪ್ರತಿಭಟನಾ ಕಾರ್ಯಕ್ರಮಕ್ಕೆ ಹೋಗಲಾಗಲಿಲ್ಲ " ಎಂದು ಸಮಜಾಯಿಷಿ ನೀಡಿದ್ದಾರೆ.
ಮಧ್ಯಂತರ ಚುನಾವಣೆ ನಿಶ್ಚಿತ ಎನ್ನುವ ದಾಟಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, " ಮುಂದಿನ ದಿನಗಳಲ್ಲಿ ಹಲವು ರಾಜಕೀಯ ಬೆಳವಣಿಗೆಗಳಿಗೆ ರಾಜ್ಯ ಸಾಕ್ಷಿಯಾಗಲಿದೆ" ಎಂದು ಭವಿಷ್ಯ ನುಡಿದಿದ್ದಾರೆ.

ಈಗ ನನ್ನ ಕೈಯಲ್ಲಿ ಅಧಿಕಾರವಿಲ್ಲ. ಅವರೇನು ಮಾಡುತ್ತಾರೆಂದು ಕಾಯೋಣ
"ಈಗಿನ ಸರ್ಕಾರ ಜನಸಾಮಾನ್ಯರಿಗೆ ಅನುಕೂಲವಾಗುವ ತೀರ್ಮಾನವನ್ನ ಮಾಡಬೇಕು. ಈಗ ನನ್ನ ಕೈಯಲ್ಲಿ ಅಧಿಕಾರವಿಲ್ಲ. ಅವರೇನು ಮಾಡುತ್ತಾರೆಂದು ಕಾಯೋಣ. ಬಿಜೆಪಿಯವರಿಗೆ ಗೊತ್ತುಗುರಿಯಿಲ್ಲ. ಅವರು ಅಧಿಕಾರ ಮಾಡುತ್ತಿರುವ ವಿಧಾನ ನಿಮಗೇ ಗೊತ್ತಿದೆ.
ನಾನು ಈ ಬಗ್ಗೆ ಚರ್ಚೆ ಮಾಡಲ್ಲ, ಜನರಿಗೆ ಈ ಸರ್ಕಾರದ ಪೆಟ್ಟು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ" - ಎಂದು ನೂತನ ಮೋಟಾರ್ ವಾಹನ ಕಾಯ್ದೆ ವಿಚಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾಗುವ ವಿಚಾರದಲ್ಲಿ ನಿಮಗೆ ಅನುಮಾನವೇ?
" ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾಗುವ ವಿಚಾರದಲ್ಲಿ ನಿಮಗೆ ಅನುಮಾನವೇ, ಮುಂದೆ ಗೊತ್ತಾಗಲಿದೆ" ಎಂದು ಮಾಜಿ ಸಿಎಂ ಹೆಚ್ಡಿಕೆ, ಚನ್ನಪಟ್ಟಣದಲ್ಲಿ ಕೆಡಿಪಿ ಸಭೆ ನಡೆಸಿದ ನಂತರ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ್ದಾರೆ. ಅವರ ಹೇಳಿಕೆಯಲ್ಲಿ, ಬಿಜೆಪಿ ಸರಕಾರ ಪೂರ್ಣಾವಧಿ ಅಧಿಕಾರ ನಡೆಸುವುದಿಲ್ಲ, ಮಧ್ಯಂತರ ಚುನಾವಣೆ ಖಂಡಿತ ಎನ್ನುವುದು ಸೂಚ್ಯವಾಗಿ ಹೇಳುವಂತಿತ್ತು.

ಡಿ.ಕೆ. ಶಿವಕುಮಾರ್ ಬಂಧನ ಖಂಡಿಸಿ ಪ್ರತಿಭಟನೆ
ಡಿ.ಕೆ. ಶಿವಕುಮಾರ್ ಬಂಧನ ಖಂಡಿಸಿ ಪ್ರತಿಭಟನೆ ಕುರಿತು ಚನ್ನಪಟ್ಟಣದಲ್ಲಿ ಇಂದು (ಸೆ 11) ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, "ಚನ್ನಪಟ್ಟಣದಲ್ಲಿನ ಕಾರ್ಯಕ್ರಮ ಈ ಮೊದಲೇ ನಿಗದಿಯಾಗಿತ್ತು. ಹಾಗಾಗಿ ಬೆಂಗಳೂರಿನ ಪ್ರತಿಭಟನೆಗೆ ನನಗೆ ಆಹ್ವಾನವಿರಲಿಲ್ಲ. ಆದರೂ ಕೂಡ ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ" ಎಂದು ಹೇಳಿದರು.

ನನ್ನ ಫೋಟೋ ಹಾಕಿದ್ದಾರಂತೆ. ಮುಂದೆ ಕುಮಾರಸ್ವಾಮಿಯನ್ನು ಬಂಧಿಸುತ್ತಾರಂತೆ
"ನನಗೆ ಮೊದಲೇ ಆಹ್ವಾನ ನೀಡಿದ್ದರೆ ನಾನು ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದೆ. ಕಾರ್ಯಕ್ರಮದ ಜಾಹಿರಾತಿನಲ್ಲಿ ನನ್ನ ಫೋಟೋ ಕೂಡ ಹಾಕಿದ್ದಾರಂತೆ. ಮುಂದೆ ಕುಮಾರಸ್ವಾಮಿಯನ್ನು ಬಂಧಿಸುತ್ತಾರೆಂದು. ಆದರೆ ಈ ಕುಮಾರಸ್ವಾಮಿಯನ್ನ ಯಾರು ಏನು ಮಾಡೋಕಾಗಲ್ಲ. ನನ್ನನ್ನ ಪ್ರಕರಣದಲ್ಲಿ ಸಿಲುಕಿಸಲು ಆಗಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ" ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ನುಡಿದರು.

ಡಿಕೆಶಿ ಮಗಳಿಗೂ ಇಡಿ ಸಮನ್ಸ್ ನೀಡಿರುವ ವಿಚಾರ
"ಇದ್ಯಾವುದೋ ಕೇಸ್ ಇಟ್ಕೊಂಡು ಅವರ ವಿರುದ್ಧ ಹೊರಟ್ಟಿದ್ದಾರೆ. ಇದರಲ್ಲಿ ಕೇಂದ್ರದ ಅಧಿಕಾರಿಗಳಿದ್ದಾರೋ, ಬೇರೆಯವರಿದ್ದಾರೋ ಗೊತ್ತಿಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ, ಆದರೆ, ದ್ವೇಷದ ರಾಜಕಾರಣ ಮಾಡಬಾರದು" ಎಂದು ಕುಮಾರಸ್ವಾಮಿ,
ಡಿಕೆಶಿ ಮಗಳಿಗೂ ಇಡಿ ಸಮನ್ಸ್ ನೀಡಿರುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.











Click it and Unblock the Notifications