ಮಾಸ್ತಿಗುಡಿ ಪ್ರಕರಣ: ಐವರು ಆರೋಪಿಗಳಿಗೆ ಜೈಲುವಾಸ
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಇನ್ನಷ್ಟು ಕಾಲ ಜೈಲುವಾಸ ಅನುಭವಿಸಬೇಕಿದೆ.
ರಾಮನಗರ, ನವೆಂಬರ್ 21: ದುನಿಯಾ ವಿಜಯ್ ನಟನೆಯ ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯ ಚಿತ್ರೀಕರಣ ವೇಳೆ ಇಬ್ಬರು ನಟರು ಸಾವನ್ನಪ್ಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಇನ್ನಷ್ಟು ಕಾಲ ಜೈಲುವಾಸ ಅನುಭವಿಸಬೇಕಿದೆ.
ಐವರು ಆರೋಪಿಗಳಾದ ನಿರ್ದೇಶಕ ನಾಗಶೇಖರ್, ನಿರ್ಮಾಪಕ ಸುಂದರ್ ಗೌಡ, ಸ್ಟಂಟ್ ಮಾಸ್ಟರ್ ರವಿವರ್ಮ ಹಾಗೂ ಸಹಾಯಕ ಮತ್ತು ಪ್ರೊಡೆಕ್ಷನ್ ಮ್ಯಾನೇಜರ್ ಭರತ್ ಅವರ ನ್ಯಾಯಾಂಗ ಬಂಧನವನ್ನು ಡಿಸೆಂಬರ್ 4ರ ತನಕ ರಾಮನಗರದ ಜೆಎಂಎಫ್ ಸಿ ನ್ಯಾಯಾಲಯ ವಿಸ್ತರಿಸಿದೆ. [ಖಳನಟರ ಸಾವು: ಮಾಸ್ತಿಗುಡಿ ಚಿತ್ರ ತಂಡದ ವಿರುದ್ಧ ಎಫ್ ಐಆರ್]

ಉದಯ್ ಹಾಗೂ ಅನಿಲ್ ಅವರು ಕ್ಲೈಮ್ಯಾಕ್ಸ್ ಹಂತದ ಚಿತ್ರೀಕರಣದ ವೇಳೆ ಹೆಲಿಕಾಪ್ಟರ್ ನಿಂದ ತಿಪ್ಪಗೊಂಡನಹಳ್ಳಿ ಕೆರೆಗೆ ಜಿಗಿದಿದ್ದರು. ಇಬ್ಬರಿಗೂ ಸರಿಯಾಗಿ ಈಜಲು ಗೊತ್ತಿರಲಿಲ್ಲ. ಸರಿಯಾದ ಸುರಕ್ಷತಾ ಕ್ರಮಗಳನ್ನು ಪಾಲಿಸಿರಲಿಲ್ಲ. ಹೀಗಾಗಿ ಇಬ್ಬರು ದುರ್ಮರಣಕ್ಕೀಡಾಗಿದ್ದರು. [ಶವ ಹುಡುಕಿಕೊಟ್ಟ ಮಂಗಳೂರು ಈಜುತಜ್ಞರು]
ಸೋಮವಾರ(ನವೆಂಬರ್ 21) ದಂದು ಉದಯ್ ಹಾಗೂ ಅನಿಲ್ ಕುಟುಂಬಸ್ಥರು ತಿಪ್ಪಗೊಂಡನಹಳ್ಳಿ ಕೆರೆಗೆ ಗಂಗಾಪೂಜೆಯನ್ನು ಸಲ್ಲಿಸಿದ ಘಟನೆಯೂ ವರದಿಯಾಗಿದೆ.
ಮಾಸ್ತಿಗುಡಿ ಚಿತ್ರ ತಂಡದ ಐವರ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಐಪಿಸಿ ಸೆಕ್ಷನ್ 304(A) ಹಾಗೂ 308 ಅನ್ವಯ ಕೇಸು ದಾಖಲಾಗಿದೆ. ಆರೋಪ ಸಾಬೀತಾದರೆ ಕನಿಷ್ಠ 10 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಚಿತ್ರದ ನಿರ್ಮಾಪಕ ಸುಂದರ್ ಗೌಡ ಅವರನ್ನು ಎ-1 ಆರೋಪಿಯಾಗಿದ್ದು, ನಿರ್ದೇಶಕ ನಾಗಶೇಖರ್ ಅವರು ಎ-2 ಆರೋಪಿ, ಸಹ ನಿರ್ದೇಶಕ ಎ-3 ಆರೋಪಿ, ಸಾಹಸ ನಿರ್ದೇಶಕ ರವಿವರ್ಮ ಅವರನ್ನು ಎ-4 ಆರೋಪಿಯನ್ನಾಗಿ ಪ್ರಕರಣ ದಾಖಲಿಸಲಾಗಿದೆ. ಸಾಹಸ ಸಹ ನಿರ್ದೇಶಕ ಎ-5 ಆರೋಪಿಯಾಗಿದ್ದಾರೆ.












Click it and Unblock the Notifications