ರಮ್ಯಾ ಸ್ಪರ್ಧೆಗೆ ಸೋನಿಯಾ ಗ್ರೀನ್ ಸಿಗ್ನಲ್ : ಡಿಕೆ ಶಿ
ಹೊಸದಿಲ್ಲಿ, ಫೆ.14: ನಟಿ ರಮ್ಯಾ ಯಾನೆ ದಿವ್ಯ ಸ್ಪಂದನ ಅವರು ಈ ಬಾರಿಯೂ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುವುದು ಅಧಿಕೃತವಾಗಿದೆ. 15ನೆಯ ಲೋಕಸಭೆಗೆ ಕೊನೆಯ ಹಂತದಲ್ಲಿ ಆಯ್ಕೆಯಾಗಿರುವ ಕನ್ನಡದ ನಟಿ ರಮ್ಯಾ ಅವರ ಮರುಸ್ಪರ್ಧೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಈಗಾಗಲೇ ಹಸಿರು ನಿಶಾನೆ ತೋರಿದ್ದಾರೆ. ಇದು ಹೈಕಮಾಂಡ್ ಹುಕುಂ. ಇದನ್ನು ಮೀರುವ ಪ್ರಶ್ನೆಯೇ ಇಲ್ಲ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಭಾನುವಾರ (ಫೆ 16) ನಡೆಸಲಿರುವ ರೋಡ್ ಶೋ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಡಿಕೆ ಶಿ ಅವರು 'ಮುಂದಿನ ಲೋಕಸಭಾ ಚುನಾವಣೆಗೆ ಹಾಲಿ ಸಂಸದೆ ರಮ್ಯಾ ಅವರಿಗೆ ಮತ್ತೆ ಟಿಕೆಟ್ ನೀಡುವುದು ಖಚಿತವಾಗಿದೆ.
ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ, ನಟ ಅಂಬರೀಷ್ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು 'ರಮ್ಯಾ ಅಭ್ಯರ್ಥಿಯಾದರೆ ನಮ್ಮ ಅಭ್ಯಂತರವಿಲ್ಲ' ಎಂದು ಲಿಖಿತವಾಗಿಯೂ ಹೇಳಿದ್ದಾರೆ. ಹಾಗಾಗಿ, ಯಾವುದೇ ಭಿನ್ನಮತವಿಲ್ಲದೆ ರಮ್ಯಾಗೆ ಟಿಕೆಟ್ ನೀಡಲು ಪಕ್ಷ ನಿರ್ಧರಿಸಿದೆ ಎಂದು ಸ್ಪಷ್ಟಪಡಿಸಿದರು.
ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆಯ ವಿಷಯದಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನ ನಡೆದಿರುವುದು ನಿಜ. ಆದರೆ ರಮ್ಯಾ ಅವರೇ ಅಭ್ಯರ್ಥಿಯಾಗಬೇಕು ಎಂಬುದು ಪಕ್ಷದ ಅಧ್ಯಕ್ಷೆ ಸೋನಿಯಾ ಅವರ ಆದೇಶವಾಗಿದೆ. ಹೈಕಮಾಂಡ್ ಆದೇಶವನ್ನು ತಲೆಬಾಗಿ ಒಪ್ಪಿಕೊಂಡು ಎಲ್ಲರೂ ರಮ್ಯಾ ಪರ ಕೆಲಸ ಮಾಡುತ್ತಾರೆ; ಮಾಡಬೇಕು ಎಂದು ಸಚಿವ ಡಿಕೆ ಶಿ ಸೂಕ್ಷ್ಮವಾಗಿ ಹೇಳಿದರು.
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ರಾಜಕೀಯ ಮುಗಿದ ಅಧ್ಯಾಯ. ಜೆಡಿಎಸ್ ಪಕ್ಷಕ್ಕೆ ಹಾಗೂ ದೇವೇಗೌಡರಿಗೆ ಜನತೆ ಸಾಕಷ್ಟು ಅವಕಾಶ ನೀಡಿದ್ದಾರೆ. ಆದರೆ ಅದರಿಂದ ರಾಜ್ಯದ ಅಭಿವೃದ್ಧಿಯೇನೂ ಆಗಿಲ್ಲ. ಹಾಗಾಗಿ ರಾಜ್ಯದ ಅಭಿವೃದ್ಧಿಗೆ ಜೆಡಿಎಸ್ ಬಿಟ್ಟು ಕಾಂಗ್ರೆಸ್ಸನ್ನು ಬೆಂಬಲಿಸಬೇಕು ಎಂದು ರಾಜಕೀಯವಾಗಿ ದೇವೇಗೌಡರ ಕಟ್ಟಾ ವಿರೋಧೀ ಎನಿಸಿರುವ ಸಚಿವ ಡಿಕೆ ಶಿ ರಾಜ್ಯದ ಜನತೆಗೆ ಇದೇ ಸಂದರ್ಭದಲ್ಲಿ ಮನವಿ ಮಾಡಿದರು.












Click it and Unblock the Notifications